‘ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ’ – ಆಲೂರ ವೆಂಕಟರಾಯರು

ಕಿರಣ್ ಬಾಟ್ನಿ.

avr

ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು (ಎಡದಿಂದ ನಾಲ್ಕನೆಯವರು)

ಎಲ್ಲರಕನ್ನಡ‘ ಯಾವ ಯಾವ ಕಾರಣಗಳಿಗಾಗಿ ಹುಟ್ಟಿಕೊಂಡಿದೆಯೋ ಅವುಗಳನ್ನು ನಮ್ಮ ಹಿಂದಿನ ಹಲವರು ಕಂಡುಕೊಂಡಿದ್ದರು. ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ಕನ್ನಡದಲ್ಲಿ ಸಂಸ್ಕ್ರುತದ ಪದಗಳ ಬಳಕೆಯ ಬಗ್ಗೆ ಏನು ಹೇಳಿದ್ದರೆಂದು ಇತ್ತೀಚೆಗೆ ಬರತ್ ಕುಮಾರ್ ಅವರು ತಮ್ಮ ಬರಹವೊಂದರಲ್ಲಿ ತಿಳಿಸಿಕೊಟ್ಟಿದ್ದರು. ಈಗ ಮತ್ತೊಬ್ಬ ಹಿರಿಯರು ಇದೇ ವಿಶಯದ ಬಗ್ಗೆ ಏನು ಹೇಳಿದ್ದರೆಂದು ನೋಡೋಣ.

ಅವರು ಬೇರೆ ಯಾರೂ ಅಲ್ಲ, ಕರ‍್ನಾಟಕದ ಏಕೀಕರಣಕ್ಕಾಗಿ ದುಡಿದವರಲ್ಲಿ ಮುಂಚೂಣಿಯಲ್ಲಿದ್ದು ಕನ್ನಡ ಕುಲಪುರೋಹಿತರೆನಿಸಿದ ಆಲೂರ ವೆಂಕಟರಾಯರು. ಇವರು ತಮ್ಮ “ನನ್ನ ಜೀವನ ಸ್ಮ್ರುತಿಗಳು” ಎಂಬ ಹೆಸರಿನ ಹೊತ್ತಗೆಯಲ್ಲಿ ಬಹಳ ಸ್ಪಶ್ಟವಾಗಿ ಹೇಳುತ್ತಾರೆ:

ನನಗೆ ಕಂಡುಬಂದ ಮತ್ತೊಂದು ಸಂಗತಿಯೆಂದರೆ, ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ. ಕನ್ನಡದಲ್ಲಿ ಒತ್ತಕ್ಶರಗಳಿಂದ ಅದರ ಕಾರ‍್ಯವಾಗುತ್ತಿತ್ತು. ಹೀಗೆ ಮಹಾಪ್ರಾಣವನ್ನು ವರ‍್ಜ್ಯಮಾಡುವುದಕ್ಕೆ ಕಾರಣವೆಂದರೆ, ಕ್ಲಿಶ್ಟವಾದ ಸಂಸ್ಕ್ರುತವನ್ನು ನೋಡಿ ತಮ್ಮ ಬಾಶೆಯನ್ನು ಮಿದುವಾಗಿ ಮಾಡುವ ನಮ್ಮ ಕನ್ನಡಿಗರ ಹವಣಿಕೆ, ಸಂಸ್ಕ್ರುತದ ಶಬ್ದಗಳನ್ನು ಕನ್ನಡಕ್ಕೆ ಇಳಿಸುವಾಗಲೂ ಇದೇ ಪ್ರವ್ರುತ್ತಿ. ಉದಾ: ಚಂದ್ರ-ಚಂದಿರ, ಸಹಸ್ರ-ಸಾಸಿರ. ಈ ರೀತಿಯಾಗಿ ಪ್ರಯತ್ನಿಸಿದರೆ, ಒಂದೂ ಗಡಚಾದ ಶಬ್ದವಿಲ್ಲದೆ ಕನ್ನಡ ಗದ್ಯವನ್ನು ಸರಸವಾಗಿ ಬರೆಯಬಹುದು…

ಅದೇ ಹೊತ್ತಗೆಯಲ್ಲಿ ಹೊಸ ಪದಗಳನ್ನು ಕಟ್ಟುವಾಗ ಕನ್ನಡದ್ದೇ ಆಗಿದ್ದರೆ ಒಳ್ಳೆಯದು ಎಂದು ಕೂಡ ಅಲೂರರು ಹೇಳಿದ್ದಾರೆ:

ಕೆಲವು ಸ್ವರ ಮತ್ತು ವ್ಯಂಜನಗಳ ಮತ್ತು ವಿವಿದ ವ್ಯಂಜನಗಳ ಎರಡಕ್ಶರಗಳ ಜೋಡಣೆಗಳೇ ಕನ್ನಡದ ಮೂಲ ದಾತುಗಳು. ಅವುಗಳಿಗೆ ವಿವಿದ ಪ್ರತ್ಯಯ ಹಚ್ಚಿ ಹೆಚ್ಚಿನ ದಾತುಗಳೂ ನಾಮಪದಗಳೂ ಆಗಿವೆ… ನಾವು ಮುಂದೆ ಇದೇ ರೀತಿಯಿಂದ ಹೊಸ ದಾತುಗಳನ್ನು ಹೊಸ ಶಬ್ದಗಳನ್ನು ಕೂಡ ನಿರ‍್ಮಾಣ ಮಾಡಬಹುದೆಂದು ನನಗೆ ತೋರುತ್ತದೆ. ಈ ರೀತಿಯಿಂದ ಕನ್ನಡವನ್ನು ಬೆಳಿಸುವುದೂ ಕನ್ನಡದ ಕುಲಗೋತ್ರಗಳಿಗೆ ತಕ್ಕದು ಎಂದು ನನ್ನ ಮತ.

ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ, ಈಗ ನಾವು ಎಲ್ಲರಕನ್ನಡ ಎಂದು ಏನನ್ನು ಕರೆಯುತ್ತಿರುವೆವೋ ಅದರ ಎರಡು ಕಂಬಗಳನ್ನೂ (ಮಹಾಪ್ರಾಣ ಮುಂತಾದ ಬರಿಗೆಗಳನ್ನು ಕಯ್ಬಿಟ್ಟ ಬರಿಗೆಮಣೆ ಮತ್ತು ಆದಶ್ಟೂ ಕನ್ನಡದ್ದೇ ಆದ ಪದಗಳು) ಆಲೂರ ವೆಂಕಟರಾಯರು ಕನ್ನಡಕ್ಕೆ ಬಹಳ ಮುಕ್ಯವಾದವು ಎಂದು ಕಂಡುಕೊಂಡಿದ್ದರು. ಕನ್ನಡ-ಕನ್ನಡಿಗ-ಕರ‍್ನಾಟಕಗಳಿಗೆ ಸಂಬಂದಿಸಿದ ಹಲವಾರು ವಿಶಯಗಳಲ್ಲಿ (ಇತಿಹಾಸವನ್ನು ಬರೆಯುವುದರಿಂದ ಹಿಡಿದು ರಾಜಕೀಯದ ವರೆಗೂ, ಹಣ ಕೂಡಿ ಹಾಕುವುದರಿಂದ ಹಿಡಿದು ಕಯ್ಗಾರಿಕೆಗಳನ್ನು ಶುರು ಮಾಡುವ ವರೆಗೂ, ಕರ‍್ನಾಟಕತ್ವವನ್ನು ಮದ್ವಸಿದ್ದಾಂತಕ್ಕೆ ಒರೆಹಚ್ಚಿ ನೋಡುವುದರಿಂದ ಹಿಡಿದು ಒಟ್ಟಾರೆಯಾಗಿ ಆದ್ಯಾತ್ಮಿಕವಾಗಿ ಅದಕ್ಕೆ ಸಮರ‍್ತನೆಯನ್ನು ಕೊಡುವ ವರೆಗೂ) ತಾವು ಕೆಲಸ ಮಾಡುತ್ತಿದ್ದುದರಿಂದ ಎಲ್ಲದರಲ್ಲೂ ಹೆಚ್ಚು ಆಳಕ್ಕೆ ಇಳಿಯಲಾಗಲಿಲ್ಲವೆಂದು ಆಲೂರರು ಮೇಲಿನ ಹೊತ್ತಗೆಯಲ್ಲಿ ತಿಳಿಸುತ್ತಾರೆ. ಈ ಕಾರಣದಿಂದಲೇ ಇರಬೇಕು, ಕನ್ನಡವು ಈಗ ಬೆಳೆಯುತ್ತಿರುವ ದಿಕ್ಕಿನಲ್ಲಿ ಬೆಳೆಯುವುದು ಒಳ್ಳೆಯದೆಂದು ತಿಳಿದಿದ್ದರೂ ಅವರು ಆ ಕೆಲಸದಲ್ಲಿ ಆಳವಾಗಿ ತೊಡಗಿಕೊಳ್ಳಲು ಆಗದೆ ಇದ್ದುದು… ಆದರೆ ಆ ಕೆಲಸ ಈಗ ಮುಂದುವರೆಯುತ್ತಿದೆ…!

ಆಲೂರರ ಮಾತಿನ ಸೆಲೆ: ಆಲೂರ ವೆಂಕಟರಾಯ, “ನನ್ನ ಜೀವನ ಸ್ಮ್ರುತಿಗಳು”, ಪುಟ 444-5, ಸಮಗ್ರ ಕ್ರುತಿಗಳು, ಸಂಪುಟ 1.

(ಚಿತ್ರ: www.kamat.com)

ನಿಮಗೆ ಹಿಡಿಸಬಹುದಾದ ಬರಹಗಳು

13 Responses

  1. ಬಹಳ ಜನರಿಗೆ ಈ ವಿಶಯ ತಿಳಿದಿರಲಿಕ್ಕಿಲ್ಲ. ಹಾಗೆ ಶಿಕ್ಶಣದಲ್ಲಿನ ನಮ್ಮ ಕನ್ನಡ ಕಲಿಕೆಯಲ್ಲೂ ಕೂಡ ಅಗತ್ಯ ಬದಲಾವಣೆಗಳನ್ನು ಮಾಡಿದಾಗ ಮಾತ್ರ ಎಲ್ಲರ ಕನ್ನಡಕ್ಕೆ ಉತ್ತಮ ಮನ್ನಣೆ ಗೌರವ ದೊರಕುವುದರಲಿ ಸ೦ಶಯವೇ ಇಲ್ಲ. ಒಳ್ಳೆಯ ಅ೦ಕಣ ಬರೆದಿದ್ದೀರಿ ಶ್ರೀ ಕಿರಣ್ ಬಾಟ್ನಿ ಅವರೆ. ಒಳ್ಳೇದಾಗ್ಲಿ.

  2. ಸರಿ ಮಹಾಪ್ರಾಣಗಳಿದ್ದರೆ ಏನು ತೊಂದರೆ? ನನಗೆ ಅಷ್ಟು ತಿಳಿಯಲಿಲ್ಲ

    • ಹೆಚ್ಚಿನ ಕನ್ನಡಿಗರು ಮಾತನಾಡುವಾಗ ಮಹಾಪ್ರಾಣವನ್ನು ಉಚ್ಚರಿಸುವುದಿಲ್ಲ. ಆದರೆ ಬರೆಯುವಾಗ ಬಳಸಬೇಕೆಂಬ ನಂಬಿಕೆಯಿದೆ. ಇದರಿಂದ ’ತಪ್ಪು’ಗಳು ಬಹಳ ಆಗುತ್ತವೆ. ಹಾಗೆಯೇ, ಮಹಾಪ್ರಾಣವು ಸಂಸ್ಕ್ರುತದ ಪದಗಳಲ್ಲಿ ಮಾತ್ರ ಇರುವುದರಿಂದ, ಮತ್ತು ಸಂಸ್ಕ್ರುತ ಎಂದ ಕೂಡಲೆ ಅದರ ಬಗ್ಗೆ ಕುರುಡು ಬಕ್ತಿ ಕನ್ನಡಿಗರಿಗೆ ಹುಟ್ಟುವುದರಿಂದ ಕನ್ನಡಿಗರಿಗೆ ಕನ್ನಡದ (ಮಹಾಪ್ರಾಣಗಳಿಲ್ಲದ) ಪದಗಳ ಮೇಲೆಯೇ ಕೀಳರಿಮೆ ಬಂದುಬಿಟ್ಟಿದೆ. ’ಒಳ್ಳೆಯ ಬರಹಗಾರರು’ ಎನಿಸಿಕೊಳ್ಳಲು ಸಂಸ್ಕ್ರುತದ ಪದಗಳನ್ನು ಹೆಚ್ಚು ಹೆಚ್ಚು ಬಳಸಿ ಬರೆಯಲೇ ಬೇಕೆಂಬ ಅನಿಸಿಕೆ ನಮ್ಮಲ್ಲಿ ಬೇರೂರಿದೆ. ಇದರಿಂದ ಬರವಣಿಗೆ ಕನ್ನಡಿಗರಲ್ಲಿ ಒಡಕುಂಟುಮಾಡುವ ಸಲಕರಣೆಯಾಗಿಹೋಗಿದೆ, ಮತ್ತು ಅದ್ಯಾತ್ಮೇತರ ವಿಶಯಗಳ ಬರಹಗಳಂತೂ (ಎತ್ತುಗೆಗೆ: ಅರಿಮೆ, ನಾಡಿನ ಕಾಳಜಿ…) ಸಾಮಾನ್ಯ ಕನ್ನಡಿಗರಿಗೆ ತಿಳಿಯದ ಹಾಗಿರುತ್ತವೆ (ಇನ್ನು ಬರೆಯುವುದಂತೂ ದೂರ!). ಇವೆಲ್ಲದರಿಂದ ಕನ್ನಡ-ಕನ್ನಡಿಗ-ಕರ‍್ನಾಟಕಗಳ ಬೆಳವಣಿಗೆಗೆ ತೊಡರುಂಟಾಗಿದೆ.

  3. Most of the articles refer to “like Tamil” & observe a pattern of aligning Kannada as though born out of Tamil. They seem be more comfortable being called Tamil Kannadiga rather than just Kannadiga. . My suggestion – we should not waste our time if Kannada (or words) is sourced from Sanskrit, Tamil, etc or not but popularize its daily usage amongst people especially youth & children.

    • ಅನಂತ್ ರಾವ್ ಅವರೇ ನೀವು ಹೇಳೋದು ಸರಿ. ತಮಿಳಿನಲ್ಲಿ ಕೂಡ ಮಹಾಪ್ರಾಣಗಳಿಲ್ಲ, ಆದರೆ ಬರದ್ದನ್ನು ಓದುವಾಗ ಆಗುವ ಗೊಂದಲಗಳು ಅಲ್ಲಿ ಕಮ್ಮಿ ಏನಿಲ್ಲ. ಅದರಲ್ಲೂ ಹೆಸರುಗಳು. ಇನ್ನು ಕನ್ನಡದಲ್ಲಿ ಸಂಸ್ಕೃತದ ಪದಗಳ ಬಳಕೆಯನ್ನು ಕಮ್ಮಿ ಮಾಡಬೇಕೆನ್ನುವುದು ಎಲ್ಲರು ಒಪ್ಪಬೇಕಾದಂಥ ವಿಚಾರ, ಆದರೆ ಅದಕ್ಕಾಗಿ ಲಿಪಿಯಲ್ಲಿ ಈ ರೀತಿಯಾಗಿ ಬಲಾವಣೆ ತಂದರೆ ಕನ್ನಡಕ್ಕಿರುವ ಸೂಕ್ಷ್ಮತೆಯೇ ಹೊರಟು ಹೋಗುತ್ತದೆ.

  4. Can U please tell me, where can I get his auto-biography?I searched a lot but could not find it.

    • ಆಲೂರ ವೆಂಕಟರಾವ ಪ್ರತಿಶ್ಟಾನ, ಸಾದನಕೇರಿ, ದಾರವಾಡ – ಇವರಿಗೆ ಬರೆಯಿರಿ ಇಲ್ಲವೇ ಯಾವುದೇ ಕನ್ನಡ ಹೊತ್ತಗೆ ಮಳಿಗೆಯಲ್ಲಿ ಕೇಳಿ (ಎತ್ತುಗೆಗೆ ಬೆಂಗಳೂರಿನ ಗಾಂದೀಬಜಾರಿನ ’ಅಂಕಿತ ಪುಸ್ತಕ’)

  5. ಕನ್ನಡ ಮತ್ತು ತಮಿಳು ಮುಂತಾದ ದ್ರಾವಿಡ ಭಾಷೆಗಳು ಸಂಸ್ಕೃತ ಮೂಲದ್ದಲ್ಲ ಎಂದು ಮೊದಲು ಸಾಧಿಸಿದ್ದು, ಪ್ರತಿಪಾದಿಸಿದ್ದು ರಾಬರ್ಟ್ ಕ್ಲೈವ್. ದ್ರಾವಿಡ ಭಾಷಾ ಅಧ್ಯಯನದಲ್ಲಿ ರಾಬರ್ಟ್ ಕ್ಲೈವ್ ಅವರ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡೇ ಕನ್ನಡಿಗರು ಭಾಷಾ ಸಂಶೋಧನೆಗಳನ್ನು ನಡೆಸಿದ್ದಾರೆ. ದುರಂತವೆಂದರೆ ಇತರ ಭಾಷಿಕರು ಭಾಷಾ ಅಧ್ಯಯನದಲ್ಲಿ ನಮಗಿಂತ 30-40 ವರ್ಷಗಳಷ್ಟು ಮುಂದಿದ್ದಾರೆ. ಹೀಗಾಗಿ ಇದು ಬೆನ್ನು ತಟ್ಟಿಕೊಳ್ಳುವ ವಿಚಾರವಲ್ಲ. ಭಾಷಾ ಅಧ್ಯಯನದ ವಿದ್ಯಾರ್ಥಿಯಾಗಿ ಈ ಬಗ್ಗೆ ನನಗೂ ನನ್ನ ಮೇಲೆಯೇ ಬೇಸರವಿದೆ. ತಮಿಳು ಭಾಷಾ ವಿಜ್ಞಾನಿಗಳ ಬಗ್ಗೆ ಗೌರವವಿದೆ.

  6. ಇದು ಒ೦ದು ಕನ್ನಡದ ಬಗ್ಗೆ ಅಪರೂಪದ ಪ್ರಯೋಗ ಇದಕ್ಕೆ ನನ್ನ ಅನ೦ತ ಹಾರೈಕೆಗಳು

  7. ಬಹಳ ಸಂತೋಷದ ವಿಚಾರ, ಕನ್ನದಲ್ಲಿ ವಿಚಾರ ವಿನಿಮಯ, ಸಂಕೃತಿ, ಕಲೆ, ಬಾಷಾ ವಿಮರ್ಶಸೆ ಮತ್ತು ಹತ್ತು ಹಲವಾರು ವಿಷಯಗಳನ್ನು ಹೊತ್ತು ಬಂದಿರುವ ಕನ್ನಡದ ಸೈಟ್ ಗೆ ನಮ್ಮೆಲರ ಹಾರ್ದಿಕ ಶುಭ ಕಾಮನೆಗಳು …

  1. 01/10/2015

    […] ಮೊದಲ ಬಾರಿಗೆ 2013ರ ಆಗಸ್ಟ್ ತಿಂಗಳಲ್ಲಿ “ಹೊನಲು” ಮಿಂಬಾಗಿಲಿನಲ್ಲಿ ಮೂಡಿ […]

ಅನಿಸಿಕೆ ಬರೆಯಿರಿ:

%d bloggers like this: