ನುಡಿಯ ಶ್ರೀಮಂತಿಕೆ ಎಂದರೇನು?

ಪ್ರಿಯಾಂಕ್ ಕತ್ತಲಗಿರಿ.

wealth_spells

ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಕಳೆದ ಬಾರಿ ಬರೆದಿದ್ದುದನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ ನಡೆಸಲಾಗಿದ್ದ ಮಾತುಕತೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ನಾಡಿನ ಹೆಸರಾಂತ ನುಡಿಯರಿಗರಾದ ಡಾ|| ಕೆ. ವಿ. ನಾರಾಯಣ ಅವರು ಚೆನ್ನಾಗಿ ಉತ್ತರಿಸಿದ್ದರು. ಮಾತುಕತೆಯಲ್ಲಿ ತೇಲಿಬಂದ ಕೆಲವು ಕೇಳ್ವಿಗಳಿಗೆ ನನ್ನ ತಿಳಿವಿನ ಮಟ್ಟದಲ್ಲಿ ಉತ್ತರಿಸುವ ಸರಣಿ ಬರಹಗಳಲ್ಲಿ ಎರಡನೆಯದು ಈ ಬರಹ.

“ಇಂಗ್ಲೀಶು ಎಲ್ಲಾ ನುಡಿಗಳಿಂದ ಪದಗಳನ್ನು ತೆಗೆದುಕೊಳ್ಳುತ್ತಾ ಶ್ರೀಮಂತವಾಗಿ ಬೆಳೆದಿದೆ. ಹಾಗಿರುವಾಗ, ಕನ್ನಡದಲ್ಲಿ ಸಂಸ್ಕ್ರುತದ ಪದಗಳನ್ನು ತೆಗೆದು ಹಾಕುವ ಕೆಲಸ ಮಾಡಿದರೆ ಕನ್ನಡವು ಬಡವಾಗುವುದಿಲ್ಲವೇ?”

ಕನ್ನಡಿಗರಿಗೆ ತಿಳಿದಿರುವ ಪದಗಳನ್ನು ಅವು ಬೇರೆ ನುಡಿಯ ಮೂಲದವೆಂದು ತೆಗೆದುಹಾಕುವ ಕೆಲಸವು ಬೇಕಾಗಿಲ್ಲ, ಹಾಗೆ ಮಾಡಿ ಎಂದು ಶಂಕರ ಬಟ್ಟರು ಹೇಳುತ್ತಿಲ್ಲ. ಸಂಸ್ಕ್ರುತ ಪದಗಳನ್ನು ಬಳಸಬಾರದು ಎಂದು ಶಂಕರ ಬಟ್ಟರು ಸಾರುತ್ತಿದ್ದಾರೆ ಎಂಬುದು ತಪ್ಪು ನಂಬಿಕೆ. ಶಂಕರ ಬಟ್ಟರು ಕನ್ನಡಿಗರಿಗೆ ಗೊತ್ತೇ ಇಲ್ಲದ ಸಂಸ್ಕ್ರುತ ಪದಗಳನ್ನು ಬಳಸುವ ಬದಲಾಗಿ, ಅದೇ ಅರ‍್ತವನ್ನು ಹೊಂದಿರುವ ಎಲ್ಲರಿಗೂ ತಿಳಿಯುವ ಕನ್ನಡದ್ದೇ ಪದಗಳನ್ನು ಬಳಸುವುದೊಳಿತು ಎಂದು ಹೇಳುತ್ತಿದ್ದಾರೆ. ಎತ್ತುಗೆಗೆ, ಕಾರು, ಬಸ್ಸು, ನಿದಾನ, ಸುಲಬ, ಕಿಟಕಿ ಪದಗಳು ಬೇರೆ ಬೇರೆ ನುಡಿಗಳಿಂದ ಕನ್ನಡಕ್ಕೆ ಬಂದವು. ಹಲವಾರು ಕನ್ನಡಿಗರಿಗೆ ಗೊತ್ತಿರುವ ಈ ಪದಗಳನ್ನು ಬರವಣಿಗೆಯಲ್ಲಿ ಬಳಸುವುದರಿಂದ ಬರಹಗಳು ಓದಲು ತೊಡಕೆನಿಸುವುದಿಲ್ಲ.

ಪದಗಳನ್ನು ಕನ್ನಡಕ್ಕೆ ಆಮದು ಮಾಡಿಕೊಳ್ಳುತ್ತಾ ಹೋಗಿ, ಕನ್ನಡವು ಶ್ರೀಮಂತವಾಯಿತು ಎಂದು ಬೀಗುವುದೇ ನಮ್ಮ ಗುರಿಯಾಗಿದ್ದರೆ ಹಾಗೆ ಮಾಡಬಹುದಿತ್ತು. ಆದರೆ, ಆಮದು ಮಾಡಿಕೊಂಡ ಪದಗಳೆಲ್ಲವೂ ಕನ್ನಡಿಗರಿಗೆ ತಿಳಿಯುತ್ತದೋ ಇಲ್ಲವೋ ಎಂದು ನೋಡಬೇಕಾಗಿದೆ. ಕನ್ನಡಿಗರಿಗೆ ತಿಳಿಯದಂತಹ ಪದಗಳನ್ನು ಆಮದು ಮಾಡಿಕೊಂಡರೆ, ಮತ್ತು ಅಂತಹ ಪದಗಳನ್ನು ಬರಹಗಳಲ್ಲಿ ಬಳಸಿದರೆ, ಆ ಬರಹಗಳು ಹೆಚ್ಚು ಕನ್ನಡಿಗರಿಗೆ ತಿಳಿಯಲಾರದಂತಹ ಬರಹವಾಗಿಬಿಡುತ್ತದೆ.

ಉದಾಹರಣೆಗೆ, ಜಪಾನಿ ನುಡಿಯಲ್ಲಿ ’ಕ್ಯೋಯಿಕುಮಾಮಾ’ ಎಂಬ ಪದವಿದೆ. ತನ್ನ ಮಕ್ಕಳನ್ನು ಓದಿನಲ್ಲಿ ಮುಂದಿರುವಂತೆ ಒತ್ತಡ ಹಾಕುವ ತಾಯಂದಿರನ್ನು ಜಪಾನಿ ನುಡಿಯಲ್ಲಿ ಹಾಗೆ ಕರೆಯುತ್ತಾರೆ. ಕನ್ನಡದಲ್ಲಿ ಈ ಅರ‍್ತವಿರುವ ಯಾವುದೇ ಪದವಿಲ್ಲವೆಂದು ಜಪಾನಿ ನುಡಿಯಿಂದ ’ಕ್ಯೋಯಿಕುಮಾಮಾ’ ಪದವನ್ನು ಆಮದು ಮಾಡಿಕೊಂಡರೆ ಕನ್ನಡ ಶ್ರೀಮಂತವಾಗಿಬಿಡುತ್ತದೆಯೇ? ಈ ಪದವನ್ನು ಬರಹಗಳಲ್ಲಿ ಬಳಸತೊಡಗಿದರೆ, ಸುದ್ದಿಹಾಳೆಗಳಲ್ಲಿ ಬಳಸತೊಡಗಿದರೆ, ಕನ್ನಡಿಗರೆಲ್ಲರಿಗೆ ಅರ‍್ತವಾಗುವುದಿಲ್ಲ.

ಸಂಸ್ಕ್ರುತ ಬೇರಿನ ಪದಗಳು ಎಂಬ ಒಂದೇ ಕಾರಣಕ್ಕೆ ಕೆಲವು ಪದಗಳು ಕನ್ನಡಿಗರಿಗೆ ಅರ‍್ತವಾಗಲಿ, ಆಗದಿರಲಿ ಬರಹಗಳಲ್ಲಿ ಬಳಕೆ ಕಾಣುತ್ತವೆ. ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ಮಕ್ಕಳ ಗಣಿತ ಪಟ್ಯಪುಸ್ತಕಗಳನ್ನು ತಿರುವಿ ಹಾಕಿದರೆ, ಈ ತೆರನಾದ ಪದಗಳು ಕಣ್ಣಿಗೆ ಬೀಳುತ್ತವೆ. “ಅನುಲೋಮಾನುಪಾತ”, “ವ್ಯುತ್ಕ್ರಮ”, “ಅಪವರ‍್ತನ”, “ಅಪವರ‍್ತ್ಯ” ಇವು ಇಂತಹ ಪದಗಳಲ್ಲಿ ಕೆಲವು ಮಾತ್ರ. ಕನ್ನಡದಲ್ಲಿ ಪದಗಳಿಲ್ಲ ಎಂದು ಹೇಳುತ್ತ ಸಂಸ್ಕ್ರುತದಿಂದ ನೇರವಾಗಿ ಇಳಿಸಿಕೊಂಡ ಪದಗಳಿವು. ಇಳಿಸಿಕೊಳ್ಳುವಾಗ, “ಇವು ಕನ್ನಡದ ಮಕ್ಕಳಿಗೆ ಅರ‍್ತವಾಗುತ್ತಾ?” ಎಂಬ ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ. ಇಶ್ಟೇ ಅಲ್ಲದೇ, ಕನ್ನಡದ್ದೇ ಆದ ಮತ್ತು ಕನ್ನಡಿಗರೆಲ್ಲರಿಗೆ ತಿಳಿಯುವ “ಕೂಡುವುದು/ಕಳೆಯುವುದು” ಪದಗಳನ್ನು ಕಯ್ ಬಿಟ್ಟು “ಸಂಕಲನ/ವ್ಯವಕಲನ” ಪದಗಳನ್ನು ಪಟ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಎಲ್ಲರಿಗೂ ಅರ‍್ತವಾಗುವ ಪದಗಳನ್ನು ಕಯ್ ಬಿಟ್ಟು ಕೆಲವರಿಗೆ ಮಾತ್ರ ಅರ‍್ತವಾಗುವ ಪದಗಳನ್ನು ಬರಹಗಳಲ್ಲಿ ಅಳವಡಿಸಿಕೊಳ್ಳುತ್ತ ಸಾಗುವುದನ್ನೇ ನುಡಿಯ ಶ್ರೀಮಂತಿಕೆ ಎಂದು ನಾವು ನಂಬಿರುವೆವಾದರೆ, ಆ ನಂಬಿಕೆಯನ್ನು ಒರೆಗೆ ಹಚ್ಚಿ ನೋಡುವ ಹೊತ್ತು ಬಂದಿದೆ.

(ಚಿತ್ರ ಸೆಲೆ: zrhaydon1.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. beeru hELike eenendare,sanskrita yaajamaana kannada adiyaalu emba baavane ide.
    idu tappu. attachments bagege kannadadaalli viikshisi atava download maadi endide
    viikshisi yaake beeku?. ‘noodi’ aagabeeku. download ge sanskrita sikkilla avarige. aaddarinda download nne balasidaru! ii niluvu tappu.

ಅನಿಸಿಕೆ ಬರೆಯಿರಿ:

%d bloggers like this: