ಹಿನ್ನಡಿಗ

ಯಶವನ್ತ ಬಾಣಸವಾಡಿ.

hinnadiga

ನಡೆಯಿತಂದು ಈಳಿಗೆಗಾಗಿ
ಅಡಿಯಾಳಿಕೆಯ ಕೊನೆಗಾಗಿ
ನಮ್ ಏಳಿಗೆಗಾಗಿ
ಹೋರಾಟವು ತನ್ನಾಳಿಕೆಗಾಗಿ

ಕೊನೆಗೂ ಬದಲಾಯಿತು ಆಳಿಕೆ
ಸಿಕ್ಕಿತ್ತೆಂದುಕೊಂಡೆವು ತನ್ನಾಳಿಕೆ
ಮನಗಾಣಲಿಲ್ಲ ಬಂದದ್ದು ಹಿಂದಿಯಾಳಿಕೆ
ಕೊನೆಯಾಗಲಿಲ್ಲ ಅಡಿಯಾಳಿಕೆ

ಇದ್ದದ್ದು ರಾಣಿಯ ಮಾರಾಳರ ಆಳಿಕೆ
ಬಯಸಿದ್ದು ಮಂದಿಯಾಳಿಕೆ
ಸಿಕ್ಕಿದ್ದು ಹಿನ್ನಡಿಗರ ಕೆಲರಾಳಿಕೆ
ನಿಲ್ಲುವುದೆಂದು ಇವರ ದಬ್ಬಾಳಿಕೆ

ಇಂದಿಗೂ ನಮ್ಮದು ಪರಕೀಯರಾಳಿಕೆ
ತೊಲಗಬೇಕಿದೆ ಮೇಟಿಯಾಳಿಕೆ
ನೆಲೆಸಬೇಕಿದೆ ಒಪ್ಪುಕೂಟದಾಳಿಕೆ
ಮೆರೆಸಬೇಕಿದೆ ತನ್ತಕ್ಕಮೆಯ ಪತಾಕೆ

ಪ್ರಶ್ಣಿಸಿದರೆ ಹಿಂದಿ ಹೇರಿಕೆ
ಸಿಗುವುದು ದೇಶಬಕ್ತಿಯ ಬುಡುಬುಡಿಕೆ
ಇನ್ನೂ ಕೆಲವರಿಗೆ ಬರುವುದು ಆಕಳಿಕೆ
ತನ್ನಾಳಿಕೆ ಇನ್ನೂ ನಮ್ಮ ಕನವರಿಕೆ

ಕೆದಕಿದರೆ ಹಿಂದಿ ಬಗೆಗಿನ ಗುಲಾಮಗಿರಿ
ಹಿನ್ನಡಿಗರಿಗೆ ಎಲ್ಲೆಲ್ಲೋ ಉರಿ
ಹೇಳುತ್ತಾರೆ ದೇಶ ಬಿಟ್ಟು ಹೋಗಿರಿ
ಕಡಲಿಗೆ ಹಾರಿ ಸಾಯಿರಿ

ಹಿನ್ನಡಿಗರೆ ಸ್ವಲ್ಪ ಕಿವಿಗೊಟ್ಟು ಕೇಳಿರಿ
ಪರಕೀಯರನ್ನು ನಾಡೊಳಗೆ ನುಗ್ಗಿಸುತ್ತಿದ್ದೀರಿ
ಕನ್ನಡವಿರಬೇಕಾದೆಡೆ ಹಿಂದಿಯನ್ನು ಮೆರೆಸುತ್ತಿದೀರಿ
ದಿಟವಾದ ನಾಡಹಗೆಗಳು ನೀವೇರಿ

ಹಿಂದಿಯಾಡಿದರೆ ಬರುವುದಂತೆ ಎರಡು ಕೊಂಬು
ಉಳಿದ ನುಡಿಗಳಿಗೆ ಕೊಡ ಹೊರಟಿದ್ದಾರೆ ಚೊಂಬು
ಹೊಂಚು ಹಾಕುತ್ತಿದ್ದಾರೆ ಕಟ್ಟಲು ಕನ್ನಡಕ್ಕೆ ಬಂಬು
ನೆನಪಿರಲಿ ನಡೆಯದು ನಿಮ್ಮ ಈ ಇಂಬು

ಹಿಂದಿಯಾಳಿಕೆಯನ್ನು ಒಪ್ಪಲೇಬೇಕಂತೆ ಏಳಿಗೆಗೆ
ಇದ ನಂಬಿದರೆ ಅಳಿಯುವುದು ಕನ್ನಡತನದ ಪೀಳಿಗೆ
ಮಣೆಯಾಕದಿರುವುದು ಒಳಿತು ಹಿನ್ನಡಿಗರ ನೆನೆಕೆಗೆ
ಮನ್ನಣೆ ಸಿಗುವುದೆಂದು ಕನ್ನಡಿಗರ ಕೂಗಿಗೆ|

(ಚಿತ್ರ: http://doblelol.com/13/funny-pictures-monkeys.htm)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. smhamaha says:

    “ಪ್ರಶ್ಣಿಸಿದರೆ ಹಿಂದಿ ಹೇರಿಕೆ
    ಸಿಗುವುದು ದೇಶಬಕ್ತಿಯ ಬುಡುಬುಡಿಕೆ…. ”
    ಸಕತ್ ಗುರುವೇ .. ಬೊಂಬಾಟ್ ಆಗಿ ಇದೆ ಈ ಕಟ್ಟೊರೆ..
    ಯಾವುದಾದರು ಸುದ್ದಿ ಹಾಳೆಗೆ ಕೊಡಿ ದ್ಯಾವ್ರು

  2. @ smhamaha..ನಿಮ್ಮ ನಲ್ಮೆಯ ಮಾತುಗಳಿಗೆ ನನ್ನಿ .
    ನಿಮ್ಮ ಸಲಹೆಯಂತೆ ಸುದ್ದಿ ಹಾಳೆಗೆ ಕಳಿಸುತ್ತೇನೆ.

ಅನಿಸಿಕೆ ಬರೆಯಿರಿ:

%d bloggers like this: