ಉಲಿ ಮಾರ‍್ಪಾಡಿನ ಗೆರೆಗಳು

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 26

nudi_inukuಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ ಅಲ್ಲ, ಮಯ್ಸೂರಿನಂತಹ ಒಂದೇ ಜಿಲ್ಲೆಯಲ್ಲೂ ಎಲ್ಲಾ ಕಡೆ ಒಂದೇ ರೀತಿಯ ಕನ್ನಡ ಬಳಕೆಯಲ್ಲಿಲ್ಲ. ಕೊಳ್ಳೇಗಾಲದ ಕನ್ನಡಕ್ಕೂ ನಂಜನಗೂಡಿನ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಕ್ಕೂ ಕೆ. ಆರ್. ನಗರದ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಇದಲ್ಲದೆ, ಒಂದೇ ಹಳ್ಳಿಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಆದಿಕರ‍್ನಾಟಕರ ಕನ್ನಡ ಎಂದೆಲ್ಲಾ ವ್ಯತ್ಯಾಸಗಳು ಕಾಣಿಸುತ್ತವೆ. ಆಡುಗನ್ನಡದಲ್ಲಿ ಇಂತಹ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ನಿಜಕ್ಕೂ ಎಂತಹವು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಲು ಹೋಗಿಲ್ಲ. ಹಾಗೆ ತಿಳಿಯಲು ಹೋದಲ್ಲಿ, ಅವುಗಳ ಹಿಂದೆ ಹಲವಾರು ಕಟ್ಟುನಿಟ್ಟಾದ ಕಟ್ಟಲೆಗಳೇ ಅಡಗಿವೆ ಎಂಬುದರ ಅರಿವು ನಮಗಾಗದಿರದು.

ಎತ್ತುಗೆಗಾಗಿ, ಮಯ್ಸೂರಿನವರು ಮನೆ ಎನ್ನುವರಾದರೆ, ದಾರವಾಡದವರು ಮನಿ ಎನ್ನುತ್ತಾರೆ; ಮಯ್ಸೂರಿನ ಹಣೆ ದಾರವಾಡದಲ್ಲಿ ಹಣಿಯಾಗುತ್ತದೆ; ಕೆರೆ ಎಂಬುದು ಕೆರಿಯಾಗುತ್ತದೆ, ಗೆರೆ ಎಂಬುದು ಗೆರಿಯಾಗುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಹೆಸರು(ನಾಮ)ಪದಗಳೆಲ್ಲ ದಾರವಾಡ ಕನ್ನಡದಲ್ಲಿ ಇಕಾರದಲ್ಲಿ ಕೊನೆಗೊಳ್ಳುತ್ತವೆ ಎಂಬ ಕಟ್ಟಲೆಯೊಂದು ಈ ವ್ಯತ್ಯಾಸದ ಹಿಂದೆ ಅಡಗಿದೆ. ಮಯ್ಸೂರು ಜಿಲ್ಲೆಯೊಳಗೇನೇ ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ, ಅಗೆ ಎಂಬುದು ಅಗಿಯಾಗುತ್ತದೆ, ಕರೆ ಎಂಬುದು ಕರಿಯಾಗುತ್ತದೆ, ಒಡೆ ಎಂಬುದು ಒಡಿಯಾಗುತ್ತದೆ. ಇದು ಅಂತಹದೇ ಇನ್ನೊಂದು ಮಾರ‍್ಪಾಡು.

ಆದರೆ ಈ ಮಾರ‍್ಪಾಡು ಎಕಾರದಲ್ಲಿ ಕೊನೆಗೊಳ್ಳುವ ಎಸಕ(ಕ್ರಿಯಾ)ಪದಗಳನ್ನು ಮಾತ್ರ ನಾಟುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಮಯ್ಸೂರಿನಲ್ಲಿ ಎಲ್ಲ ಕಡೆಗಳಲ್ಲೂ (ನಂಜನಗೂಡಿನಲ್ಲೂ) ಬದಲಾಗದೆ ಉಳಿದಿವೆ. ಇದಲ್ಲದೆ, ದಾರವಾಡ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಹಾಗೆ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳೂ ಇಕಾರದಲ್ಲಿ ಕೊನೆಗೊಳ್ಳುವವುಗಳಾಗಿ ಮಾರ‍್ಪಟ್ಟಿವೆ. ಎಂದರೆ, ಹೆಸರುಪದಗಳ ಮಟ್ಟಿಗೆ ಕೊಳ್ಳೇಗಾಲದೊಂದಿಗೆ ಸೇರುವ ನಂಜನಗೂಡಿನ ಕನ್ನಡ ಎಸಕಪದಗಳ ಮಟ್ಟಿಗೆ ದಾರವಾಡ ಕನ್ನಡದೊಂದಿಗೆ ಸೇರುತ್ತದೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ಕಟ್ಟಲೆಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಎತ್ತುಗೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ಕಟ್ಟಲೆಯನ್ನು ಗಮನಿಸಬಹುದು. ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಎಂಬುದು ಅಂಬು ಎಂದಾಗುತ್ತದೆ, ಹಾವು ಎಂಬುದು ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಎಂಬ ಕಟ್ಟಲೆ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ‍್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಲಿಯುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿದೆ.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ‘ಹಕಾರದ ಗೆರೆ’ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವ ದಿಕ್ಕಿಗಾಗಿ ಹಾಯ್ದೀತು.

ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಎತ್ತುಗೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ. ಆಡುನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಇಂತಹ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು.

ಯಾಕೆಂದರೆ, ಎರಡು ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ಕಟ್ಟಲೆಗಳೇ ಕಾಣಿಸುತ್ತವೆ. ಎತ್ತುಗೆಗಾಗಿ, ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ಕಟ್ಟಲೆ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ಕಟ್ಟಲೆಯ ಹಾಗೆಯೇ ಇದೆ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳು ಪದಗಳ ವ್ಯತ್ಯಾಸಗಳಲ್ಲ, ಉಲಿಗಳ ವ್ಯತ್ಯಾಸಗಳು ಎಂಬುದನ್ನು ಗಮನಿಸುವುದು ಅವಶ್ಯ. ಪದಗಳ ಮೊದಲಿನ ಪಕಾರ ಹಕಾರವಾಗುವ ಕಟ್ಟಲೆ ಹಳೆಗನ್ನಡದಲ್ಲಿ ಅಂತಹ ಪಕಾರವಿರುವ ಎಲ್ಲಾ ಎಂದರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಮಾರ‍್ಪಡಿಸಿದೆ. ಇವತ್ತು ಈ ಕಟ್ಟಲೆಗೆ ಹೊರಪಡಿಕೆಗಳಾಗಿ ಕಾಣಿಸುವ ಪಾಲು, ಪಾರೆ, ಪೂನು ಮೊದಲಾದ ಪದಗಳು ಹಿಂದಿನ ಬರಹಗಳಿಂದ ಇಲ್ಲವೇ ಮಾರ‍್ಪಡದ ಆಡುನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲದೆ ನಿಜಕ್ಕೂ ಆ ಕಟ್ಟಲೆಗೆ ಹೊರಪಡಿಕೆಗಳಲ್ಲ.

ಒಂದು ತಲೆಮಾರಿನ ಮಕ್ಕಳು ತಮ್ಮ ತಾಯ್ನುಡಿಯನ್ನು ತಮ್ಮದಾಗಿಸಿಕೊಳ್ಳುವ ಸಮಯದಲ್ಲಿ ಇಂತಹ ಮಾರ‍್ಪಾಡುಗಳು ಅವರು ಪಡೆಯುವ ಆಡುನುಡಿಯಲ್ಲಿ ನಡೆದುಹೋಗುತ್ತವೆಯೆಂದು ತೋರುತ್ತದೆ. ಈ ಮಕ್ಕಳ ನಡುವೆ ಯಾವ ರೀತಿಯ ಜಾತಿ, ಜಾಗ ಮೊದಲಾದ ಕಟ್ಟುಗಳಿದ್ದುವೋ ಅವು ಈ ಮಾರ‍್ಪಾಡುಗಳ ಹರವನ್ನು ನಿರ‍್ದರಿಸುತ್ತವೆ.

ನುಡಿಗಳಲ್ಲಿ ನಡೆಯುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳು ನುಡಿಗಳ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ. ಒಂದು ಮೂಲ ನುಡಿಯಿಂದ ಹಲವಾರು ನುಡಿಗಳು ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರಾಗಿವೆ ಎಂಬುದನ್ನು ಮುಕ್ಯವಾಗಿ ಆ ನುಡಿಗಳಲ್ಲಿ ನಡೆದಿರುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳ ನೆರವಿನಿಂದ ತೀರ‍್ಮಾನಿಸಲಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

<< ನುಡಿಯರಿಮೆಯ ಇಣುಕುನೋಟ – 25 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 05/02/2014

    […] << ನುಡಿಯರಿಮೆಯ ಇಣುಕುನೋಟ – 26 […]

ಅನಿಸಿಕೆ ಬರೆಯಿರಿ:

%d bloggers like this: