ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 31

nudi_inuku‘ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ? ಕೆಲವರು ಮೊದಲನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ, ಮತ್ತು ಬೇರೆ ಕೆಲವರು ಎರಡನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ. ಇಲ್ಲಿ ‘ಹಣ ಕೊಡುವುದು’ ಎಂಬ ಒಂದು ಎಸಕಕ್ಕೆ (ಕ್ರಿಯೆಗೆ) ‘ಕೆಲಸ ಮಾಡುವುದು’ ಎಂಬ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ಮಾಡಲಾಗಿದೆ. ಇದನ್ನೇ ‘ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ’ ಎಂಬುದಾಗಿ ಇನ್ನೊಂದು ಬಗೆಯಲ್ಲೂ ಹೇಳಲು ಬರುತ್ತದೆ.

ಈ ಎರಡನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದೆ (ಇದ್ದರೆ)’ ಎಂಬ ಪದವನ್ನೇ ಬಳಸಬೇಕಾಗುತ್ತದೆ; ಆದರೆ, ಅದರೊಂದಿಗೆ ‘ಹೊರತು’ ಎಂಬುದನ್ನು ಬಳಸಿರುವ ಮೊದಲನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದ’ ಎಂಬುದನ್ನು ಬಳಸಬೇಕೇ, ಇಲ್ಲವೇ ‘ಮಾಡಿದ’ ಎಂಬುದನ್ನು ಬಳಸಬೇಕೇ ಎಂಬುದೇ ಇಲ್ಲಿ ನಮ್ಮ ಮುಂದಿರುವ ಕೇಳ್ವಿ.

‘ಹೊರತು’ ಎಂಬ ಪದಕ್ಕೆ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಅದರೊಂದಿಗೆ ‘ಮಾಡದ’ ಎಂಬ ಇನ್ನೊಂದು ಅಲ್ಲಗಳೆಯುವ ಹುರುಳಿರುವ ಪದವನ್ನು ಬಳಸಿದಲ್ಲಿ, ಒಂದು ಅಲ್ಲಗಳೆತ ಇನ್ನೊಂದು ಅಲ್ಲಗಳೆತವನ್ನು ಹೊಡೆದು ಹಾಕುವುದರಿಂದ, ಒಟ್ಟಾರೆಯಾಗಿ ಅಲ್ಲಗಳೆಯುವ ಹುರುಳು ಇಲ್ಲವಾಗುತ್ತದೆ, ಮತ್ತು ಈ ಕಾರಣಕ್ಕಾಗಿ ‘ಮಾಡದ ಹೊರತು’ ಎಂಬುದರ ಬಳಕೆ ಸರಿಯಲ್ಲ ಎಂಬುದಾಗಿ ಮೊದಲನೆಯ ಸೊಲ್ಲೇ ಸರಿ ಎಂದು ಹೇಳುವವರು ಅದಕ್ಕೆ ಉನ್ನೋಜೆಯ (ತರ‍್ಕದ) ಬೆಂಬಲವನ್ನು ಕೊಡಬಹುದು.

ಆದರೆ, ಇಲ್ಲಿ ತೊಡಕೇನೆಂದರೆ, ಸೊಲ್ಲರಿಮೆಯ ಕಟ್ಟಲೆಗಳು ಉನ್ನೋಜೆಯ ಕಟ್ಟಲೆಗಳಿಗೆ ಬೆಲೆ ಕೊಡಲೇ ಬೇಕೆಂದೇನೂ ಇಲ್ಲ. ಒಂದು ನುಡಿಯಲ್ಲಿ ಎಂತಹ ಸೊಲ್ಲು ಸರಿ ಎಂಬುದು ಎಂತಹದು ಬಳಕೆಯಲ್ಲಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತದೆ. ಕಿಟ್ಟೆಲ್ ಡಿಕ್ಶನರಿಯಲ್ಲಿ ಈ ಎರಡು ಬಗೆಯ ಸೊಲ್ಲುಗಳನ್ನೂ ಕೊಡಲಾಗಿದೆ; ಎಂದರೆ, ಈ ಎರಡು ಬಗೆಯ ಸೊಲ್ಲುಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗಾಗಿ, ಎರಡೂ ಸರಿಯೆಂದೇ ಹೇಳಬೇಕಾಗುತ್ತದೆ.

ಉನ್ನೋಜೆಯ ಕಟ್ಟಲೆಗಳಿಗೂ ಸೊಲ್ಲರಿಮೆಯ ಕಟ್ಟಲೆಗಳಿಗೂ ನಡುವೆ ಹೊಂದಾಣಿಕೆಯಿಲ್ಲದಿರುವುದನ್ನು ಹಲವಾರು ಕಡೆಗಳಲ್ಲಿ ಕಾಣಬಹುದು. ‘ನಾನು ಅವನಿಗೆ ಹೊಡೆದಿದ್ದೇನೆ’ ಎಂಬುದೂ ‘ನಾನು ಅವನಿಗೆ ಹೊಡೆಯಲಿಲ್ಲವೆಂದಿಲ್ಲ’ ಎಂಬುದೂ ಉನ್ನೋಜೆಯ ಮಟ್ಟಿಗೆ ಒಂದೇ; ಆದರೆ, ಮಾತಿನಲ್ಲಿ ಅವು ಒಂದೇ ಅಲ್ಲ; ಯಾಕೆಂದರೆ, ಆ ಎರಡು ಸೊಲ್ಲುಗಳ ಹುರುಳಿನಲ್ಲಿ ವ್ಯತ್ಯಾಸವಿದೆ: ಅವುಗಳಲ್ಲಿ ಎರಡನೆಯ ಸೊಲ್ಲಿಗೆ ಮೊದಲನೆಯದು ತಿಳಿಸದಂತಹ ಕೆಲವು ಹೆಚ್ಚಿನ ಹುರುಳುಗಳಿವೆ; ‘ಹೊಡೆದಿದ್ದೇನೆ; ಆದರೆ, ಅದು ಅವನ ಒಳ್ಳೆಯದಕ್ಕೆ’ ಎಂಬುದು ಇಂತಹ ಒಂದು ಹೆಚ್ಚಿನ ಹುರುಳು.

ಅಲ್ಲಗಳೆತವನ್ನು ಒತ್ತಿಹೇಳುವುದಕ್ಕಾಗಿಯೂ ಎರಡು ಅಲ್ಲಗಳೆತಗಳನ್ನು ಒಟ್ಟಿಗೆ ಬಳಸಲಾಗುತ್ತದೆ; ‘ಬೇಡ ಬೇಡ’ ಇಲ್ಲವೇ ‘ಬೇಡವೇ ಬೇಡ’ ಎನ್ನುವುದಕ್ಕೆ ‘ಬೇಕು’ ಎಂಬ ಹುರುಳಿಲ್ಲ; ‘ಬೇಡ’ ಎಂಬುದನ್ನೇ ಒತ್ತಿಹೇಳುವ ಹುರುಳಿದೆ. ‘ಮಾಡದ ಹೊರತು’ ಎಂಬುದರ ಬಳಕೆಯಲ್ಲಿಯೂ ಇಂತಹದೇ ಎರಡು ಅಲ್ಲಗಳೆತಗಳ ಕೂಡಿಕೆ ನಡೆದಿರಬಹುದಲ್ಲವೇ?

ಹಿಂದೆ, ಈಗ, ಮತ್ತು ಮುಂದೆ ಎಂಬುದಾಗಿ ಮೂರು ಹೊತ್ತುಗಳನ್ನು ತಿಳಿಸುವ ಎಸಕ(ಕ್ರಿಯಾ)ರೂಪಗಳು ನುಡಿಗಳಲ್ಲಿರಬೇಕು ಎಂಬುದಾಗಿ ಹಿಂದಿನ ಸೊಲ್ಲರಿಗರು ಒಂದು ಉನ್ನೋಜೆಯ ಕಟ್ಟಲೆಯನ್ನು ತಮ್ಮ ಮುಂದಿರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ; ಆದರೆ, ಕನ್ನಡದಲ್ಲಿ ‘ಇರು’ ಎಂಬ ಒಂದು ಎಸಕಪದಕ್ಕೆ ಮಾತ್ರ ‘ಇದ್ದ’, ‘ಇದ್ದಾನೆ’, ಮತ್ತು ‘ಇರುತ್ತಾನೆ’ ಎಂಬುದಾಗಿ ಮೂರು ಬಗೆಯ ಹೊತ್ತುಗಳನ್ನು ತಿಳಿಸುವ ರೂಪಗಳಿವೆ.

ಉಳಿದ ಎಸಕಪದಗಳಿಗೆಲ್ಲ ಹಿಂದಿನ ಮತ್ತು ಮುಂದಿನ ಎಸಕಗಳನ್ನು ತಿಳಿಸಬಲ್ಲ ‘ಬಂದ’ ಮತ್ತು ‘ಬರುತ್ತಾನೆ’ ಇಲ್ಲವೇ ‘ಹೋದ’ ಮತ್ತು ‘ಹೋಗುತ್ತಾನೆ’ ಎಂಬಂತಹ ಎರಡೆರಡು ಹೊತ್ತಿನ ರೂಪಗಳು ಮಾತ್ರ ಇವೆ. ಇವುಗಳಲ್ಲಿ ಎರಡನೆಯ ರೂಪಕ್ಕೆ ಈಗಿನ ಎಸಕವನ್ನು ಮಾತ್ರವಲ್ಲದೆ ಮುಂದಿನ ಎಸಕವನ್ನು ತಿಳಿಸುವ ಹುರುಳೂ ಇದೆ; ‘ನನಗೆ ಆ ರೀತಿ ಅನಿಸುತ್ತದೆ’ ಎಂಬ ಸೊಲ್ಲಿನಲ್ಲಿ ಅದು ನನ್ನಲ್ಲಿ ಈಗ ಇರುವ ಅನಿಸಿಕೆಯನ್ನು ತಿಳಿಸುತ್ತದೆ, ಮತ್ತು ‘ಅವನು ನಾಳೆ ಬರುತ್ತಾನೆ’ ಎಂಬ ಸೊಲ್ಲಿನಲ್ಲಿ ಅದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ.

ನುಡಿಯಲ್ಲಿಲ್ಲದಿರುವ ಮೂರು ಹೊತ್ತುಗಳನ್ನು ಕನ್ನಡದ ಎಸಕಪದಗಳಲ್ಲಿ ಕಾಣಿಸುವುದಕ್ಕಾಗಿ ಸೊಲ್ಲರಿಗರು ‘ಬರುತ್ತಾನೆ’ ಎಂಬುದು ಈಗ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ‘ಬರುವನು’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ ಎಂಬಂತಹ ಕಲ್ಪನೆಗೆ ಮೊರೆಹೋಗಿದ್ದಾರೆ. ಆದರೆ, ಉನ್ನೋಜೆಯ ಕಟ್ಟಲೆಯನ್ನು ನುಡಿಯ ಮೇಲೆ ಹೊರಿಸಲು ಹೊರಟಿರುವ ಈ ಪ್ರಯತ್ನ ನಿಜಕ್ಕೂ ತಪ್ಪಾಗಿದೆ. ಯಾಕೆಂದರೆ, ‘ಬರುತ್ತಾನೆ’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸಬಲ್ಲುದು, ಮತ್ತು ‘ಬರುವನು’ ಎಂಬುದನ್ನು ಕನ್ನಡ ಬರಹಗಳಲ್ಲಿ ತುಂಬಾ ಅಪರೂಪವಾಗಿ ಬಳಸಲಾಗುತ್ತಿದ್ದು, ಅದರ ಹುರುಳಿಗೂ ‘ಬರುತ್ತಾನೆ’ ಎಂಬುದರ ಹುರುಳಿಗೂ ನಡುವಿರುವ ವ್ಯತ್ಯಾಸ ಹೊತ್ತಿನ ವ್ಯತ್ಯಾಸವೇ ಅಲ್ಲ. ಕೆಲವೆಡೆಗಳಲ್ಲಿ ಬರುವನು ಎಂಬುದಕ್ಕೆ ಬಳಕೆಯ ಹುರುಳಿದೆ.

‘ಅಕ್ಕ’ ಎಂಬ ಪದವನ್ನು ಬರಹದಲ್ಲಿ ಬಳಸುವಾಗ ‘ಅಕ್ಕಳನ್ನು’, ‘ಅಕ್ಕಳಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಇಲ್ಲವೇ ‘ಅಕ್ಕನನ್ನು’, ‘ಅಕ್ಕನಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಎಂಬ ವಿಶಯದಲ್ಲಿಯೂ ಹಲವರಿಗೆ ಗೊಂದಲವಿರುವ ಹಾಗೆ ಕಾಣಿಸುತ್ತದೆ; ‘ಅಕ್ಕ’ ಎಂಬ ಪದ ಒಬ್ಬ ಹೆಂಗುಸನ್ನು ಗುರುತಿಸುವ ಕಾರಣ, ಅದರ ಬಳಿಕ ನಕಾರದ ಬದಲು ಳಕಾರವನ್ನು ಬಳಸಬೇಕೆಂಬ ಅನಿಸಿಕೆಯೇ ಈ ಗೊಂದಲಕ್ಕೆ ಕಾರಣ. ಅಕಾರದಲ್ಲಿ ಕೊನೆಗೊಳ್ಳುವ ‘ಕಿರಣ’, ‘ರಮ್ಯ’ ಮೊದಲಾದ ಹೆಣ್ಣುಗುರ‍್ತಿನ ಇಂತಹ ಬೇರೆ ಪದಗಳನ್ನು ಬಳಸುವಲ್ಲೂ ಇಂತಹದೇ ಗೊಂದಲ ಕಾಣಿಸುತ್ತದೆ. ಆದರೆ, ‘ಅಮ್ಮ’ ಎಂಬ ಇನ್ನೊಂದು ಪದವನ್ನು ಬಳಸುವಲ್ಲಿ ಗೊಂದಲವಿರುವ ಹಾಗೆ ಕಾಣಿಸುವುದಿಲ್ಲ; ಯಾಕೆಂದರೆ, ಯಾರೂ ‘ಅಮ್ಮಳನ್ನು’ ಇಲ್ಲವೇ ‘ಅಮ್ಮಳಿಗೆ’ ಎಂಬಂತಹ ರೂಪಗಳನ್ನು ಬಳಸಿದ ಹಾಗೆ ಕಾಣಿಸುವುದಿಲ್ಲ.

ಅಕಾರದಲ್ಲಿ ಕೊನೆಗೊಳ್ಳುವ ಕೊಟ್ಟಹೆಸರುಗಳ ಬಳಕೆಯಲ್ಲಿ ಇಂತಹ ಗೊಂದಲ ಕಾಣಿಸಿಕೊಳ್ಳಲು ಬೇರೊಂದು ಕಾರಣವೂ ಇದೆ: ಇಂತಹ ಕೆಲವು ಹೆಸರುಗಳು ಹುಡುಗಿಯರನ್ನು ಮಾತ್ರವಲ್ಲದೆ ಹುಡುಗರನ್ನು ಗುರುತಿಸುವಲ್ಲೂ ಬಳಕೆಯಾಗುತ್ತಿದ್ದು, ‘ಕಿರಣನನ್ನು’ ಎಂಬುದು ಹುಡುಗರನ್ನು ಗುರುತಿಸಬಲ್ಲುದಾಗಿದ್ದು, ಹುಡುಗಿಯರನ್ನು ಗುರುತಿಸುವಲ್ಲಿ ಅದಕ್ಕಿಂತ ಬೇರಾಗಿರುವ ‘ಕಿರಣಳನ್ನು’ ಎಂಬುದನ್ನು ಬಳಸುವುದೇ ಸರಿಯೆಂದು ಕೆಲವರಿಗೆ ಅನಿಸಬಹುದು.

‘ಅವನನ್ನು’ ಮತ್ತು ‘ಅವಳನ್ನು’ ಎಂಬ ಪದಗಳ ನಡುವಿರುವ ವ್ಯತ್ಯಾಸವೇ ಇಂತಹ ಪದಗಳ ನಡುವೆಯೂ ಇರಬೇಕೆಂಬ ಅನಿಸಿಕೆಯೂ ಈ ರೀತಿ ‘ಅಕ್ಕಳನ್ನು’, ‘ರಮ್ಯಳನ್ನು’ ಎಂಬಂತಹ ರೂಪಗಳನ್ನು ಬಳಸುವುದಕ್ಕೆ ಕಾರಣವಿರಬಹುದು. ಆದರೆ, ಕನ್ನಡದಲ್ಲಿ ‘ಅನ್ನು’ ಎಂಬ ಪತ್ತುಗೆ (ವಿಬಕ್ತಿ) ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆ ಬೇರೆಯೇ ಇದೆ: ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಗಂಡುಗುರ‍್ತ(ಪುಲ್ಲಿಂಗ)ದವಾಗಲಿ, ಹೆಣ್ಣುಗುರ‍್ತ(ಸ್ತ್ರೀಲಿಂಗ)ದವಾಗಲಿ ಅವುಗಳ ಬಳಿಕ ‘ಅನ್ನು’ ಒಟ್ಟು ಸೇರುವ ಮೊದಲು ನಕಾರವೇ ಬರುತ್ತದಲ್ಲದೆ ಳಕಾರ ಬರುವುದಿಲ್ಲ.

ಹಲವೆಣಿಕೆಯ (ಬಹುವಚನದ) ‘ರು’ ಒಟ್ಟು ಮನುಶ್ಯರನ್ನು ಗುರುತಿಸುವ ಹುಡುಗ, ಹುಡುಗಿ, ಕುರುಡ, ಕುರುಡಿ, ಮುದುಕ ಮೊದಲಾದ ಪದಗಳೊಂದಿಗೆ ಬರುತ್ತದೆ, ಮತ್ತು ‘ಗಳು’ ಒಟ್ಟು ಮನುಶ್ಯರಿಗಿಂತ ಬೇರಾಗಿರುವ ಮರ, ಕಲ್ಲು, ಮನೆ, ಎಮ್ಮೆ, ಹಕ್ಕಿ ಮೊದಲಾದವುಗಳೊಂದಿಗೆ ಬರುತ್ತದೆ; ಆದರೆ, ಇಂತಹದೊಂದು ಕಟ್ಟಲೆಗೂ ಹೊರಪಡಿಕೆಗಳಿವೆ: ಇಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಗಂಡುಗುರ‍್ತದ ಪದಗಳ ಬಳಿಕ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಹೆಣ್ಣುಗುರ‍್ತದ ಪದಗಳ ಬಳಿಕ ‘ಗಳು’ ಎಂಬುದೇ ಬರುತ್ತದೆ (ಕಿಡಿಗೇಡಿಗಳು, ಎದುರಾಳಿಗಳು, ಗುರುಗಳು, ಮುಂದಾಳುಗಳು; ಹೆಣ್ಣಾಳುಗಳು, ಹೆಣ್ಣುಗಳು). ಇಲ್ಲಿಯೂ ಕೂಡ, ಉನ್ನೋಜೆಯ ಕಟ್ಟಲೆಗಳಿಗೆ ಎಡೆಯಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

<< ನುಡಿಯರಿಮೆಯ ಇಣುಕುನೋಟ – 30

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 12/03/2014

    […] << ನುಡಿಯರಿಮೆಯ ಇಣುಕುನೋಟ – 31 […]

ಅನಿಸಿಕೆ ಬರೆಯಿರಿ: