“ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ”

– ಬರತ್ ಕುಮಾರ್.

ವಚನಗಳು

ಮನುಶ್ಯನಾಗಿ ಹುಟ್ಟಿದ ಮೇಲೆ ಒಂದು ಕೂಡಣದಲ್ಲಿ ಬಾಳಬೇಕಾಗುತ್ತದೆ. ಅದು ಬುಡಕಟ್ಟಿನ ತಾಂಡಾ ಇರಬಹುದು, ಇಲ್ಲವೇ ಹಳ್ಳಿಯೇ ಇರಬಹುದು. ಇಲ್ಲವೆ ಪಟ್ಟಣವೇ ಇರಬಹುದು. ತನ್ನ ಸುತ್ತಿಲಿನ ಮನುಶ್ಯರ ಜೊತೆ ಒಡನಾಡಬೇಕಾಗುತ್ತದೆ; ಕೂಡಿ ಬಾಳಬೇಕಾಗುತ್ತದೆ. ಇಲ್ಲದಿದ್ದರೆ ಮನುಶ್ಯನಿಗೂ ಪ್ರಾಣಿಗಳಿಗೂ ಏನೂ ಬೇರ‍್ಮೆಯೇ ಇರುವುದಿಲ್ಲ. ಹೀಗೆ ಬಾಳಬೇಕಾಗಿ ಬಂದಾಗ ಎರಡು ತೆರನಾದ ಅಯ್ಕೆಗಳು ಅವನ ಮುಂದೆ ಬರುತ್ತದೆ.

ಒಂದು, ತನ್ನ ಇಲ್ಲವೆ ತನ್ಮೆಯ(ಆತ್ಮದ) ಏಳಿಗೆ, ಇನ್ನೊಂದು ತನ್ನ ಸುತ್ತಲಿನ ಕೂಡಣದ ಏಳಿಗೆ. ಬಹಳ ಕಾಲದವರೆಗೂ ಇವೆರಡೂ ಬೇರೆ ಬೇರೆ ಒಂದನ್ನು ಮಾಡಲು ಹೋದರೆ ಇನ್ನೊಂದನ್ನು ತೊರೆಯಬೇಕಾಗುತ್ತದೆ ಎಂಬ ಬಾವನೆ ಹಲವರಲ್ಲಿತ್ತು. ಈಗಲೂ ಇದೆ. ಇದಕ್ಕೆ ಕಾರಣಗಳೂ ಹಲವಿರಬಹುದು. ಅಂದರೆ ಮನುಶ್ಯ ತನ್ನೊಳಗೆ ತಾನು ಒಳಹೊಕ್ಕುತ್ತಾ ಹೋದರೆ ಅವನಿಗೆ ಹೊರಗಿನ ಪ್ರಪಂಚದ ವಸ್ತುಗಳು ಇಲ್ಲವೆ ಮಂದಿಯು ಬೇಕೆನಿಸುವುದಿಲ್ಲ. ಅವುಗಳ ಸಂಬಂದವನ್ನು ಕಡಿದುಕೊಳ್ಳಬೇಕಾಗುತ್ತದೆ. ಹಾಗೆ ಕಡಿದುಕೊಳ್ಳದಿದ್ದರೆ ತನ್ಮೆಯೇಳಿಗೆ ಸಾದ್ಯವೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಈ ಹಿನ್ನೆಲೆಯೊಳಗೆ ಹನ್ನೆರಡನೇ ನೂರೇಡಿನ ಶರಣರ ಚಿಂತನೆಗಳನ್ನು ನಾವು ಒರೆಗೆ ಹಚ್ಚಿ ನೋಡಬಹುದು. ಅಂತಹ ಶರಣರಲ್ಲಿ ಒಬ್ಬರಾದ ಬಸವಣ್ಣನವರ ಹೆಸರುವಾಸಿಯಾದ ವಚನ ಹೀಗಿದೆ:-

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ

ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ

ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ

ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ

 

ಈ ವಚನದಲ್ಲಿ ಮನುಶ್ಯನಾದವನು ಯಾವಯಾವ ಕೆಟ್ಟ ಕೆಲಸಗಳನ್ನು ಮಾಡಬಾರದು ಎಂಬುದನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿರುವ ಅಂದರೆ ಕೆಟ್ಟದವುಗಳನ್ನು ಮಾಡದಿದ್ದರೆ ’ತನ್ನ’ ವಲಯದಲ್ಲದೇ ’ಕೂಡಣ’ದ ವಲಯದಲ್ಲೂ ಏಳಿಗೆಯನ್ನು ಸಾದಿಸಬಹುದು ಎಂಬುದನ್ನು ’ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ’ ಎಂಬ ಸೊಲ್ಲುಗಳ ಮೂಲಕ ತಿಳಿಯಾಗಿ ತೋರಿಸಲಾಗಿದೆ. ಇಲ್ಲಿ ’ಅಂತರಂಗ ಶುದ್ದಿ’ ಎಂಬುದು ಮನುಶ್ಯನ ಒಳಗಿನ ನಡತೆಯ ಶುದ್ದಿಯನ್ನು ಗುರುತಿಸಿದರೆ, ’ಬಹಿರಂಗ ಶುದ್ದಿ’ ಎಂಬುದು ಮನುಶ್ಯನು ತನ್ನ ಕೂಡಣದೊಂದಿಗೆ ಇಟ್ಟುಕೊಂಡಿರುವ ನಡತೆಯ ಶುದ್ದಿಯನ್ನು ಗುರುತಿಸುತ್ತದೆ. ತನ್ನ ಶುದ್ದಿ ಮತ್ತು ತನ್ನ ಸುತ್ತಲಿನ ಕೂಡಣದ ಶುದ್ದಿ ಎಂಬುದು ಎರಡು ಬೇರೆ ಬೇರೆಯಲ್ಲ ಮತ್ತು ಅಂತಹ ಶುದ್ದಿಯನ್ನು ಹೊಂದಬೇಕಾದರೆ ಏನು ಮಾಡಬಾರದೆಂಬುದನ್ನು ಈ ವಚನದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಅಂತರಂಗ ಶುದ್ದಿಗೋಸ್ಕರ ಮನೆ-ಮಟ ಬಿಟ್ಟು ಕಾಡಿಗೆ ಹೋಗಬೇಕಾಗಿಲ್ಲ, ಕೂಡಣ(ಸಮಾಜ)ದಲ್ಲಿದ್ದುಕೊಂಡೇ ಅಂತರಂಗ ಶುದ್ದಿಯನ್ನು ಸಾದಿಸಬಹುದು. ಜೊತೆಜೊತೆಗೆ ಬಹಿರಂಗ ಶುದ್ದಿಯೂ ಆಗುತ್ತದೆ. ಕೂಡಣದ ನೆಲೆಯಲ್ಲಿ ಬಹಿರಂಗ ಶುದ್ದಿಯು ಹೆಚ್ಚು ತಲೆಮೆಯನ್ನು ಪಡೆದುಕೊಳ್ಳುತ್ತದೆ ಯಾಕಂದರೆ ಕೂಡಣದಲ್ಲಿ ಒಬ್ಬ ಬಹಿರಂಗ ಶುದ್ದಿಯನ್ನು ಸಾದಿಸಿದರೆ ಅದರ ಪ್ರಬಾವ ಇನ್ನೊಬ್ಬನ ಮೇಲಾಗಿ ಆತನು ಬಹಿರಂಗ ಶುದ್ದಿಯನ್ನು ಸಾದಿಸಬಹುದು. ಬಹಿರಂಗ ಶುದ್ದಿಯಾಗುವಾಗ ಅಂತರಂಗ ಶುದ್ದಿಯು ತಾನಾಗಿಯೇ ಆಗುತ್ತದೆ. ಅದೇ ಈ ವಚನದ ತಿರುಳು.

ಒಂದು ಕೂಡಣದ ಏಳಿಗೆ ಎಂದರೆ ಏನು? ಎಂದು ಕೇಳ್ವಿ ಹಾಕಿಕೊಂಡರೆ, ಪ್ರತಿಯೊಬ್ಬರ ತನ್ಮೆಯ ಏಳಿಗೆಯೇ ಕೂಡಣದ ಏಳಿಗೆ ಎಂದು ಎನಿಸದಿರದು. ಹಾಗಾಗಿ, ಮನುಶ್ಯನು ತನ್ನ ಒಳಿತು ಕೂಡಣದ ಒಳಿತಿನಲ್ಲಿ ಅಡಕವಾಗಿದೆ ಎಂದು ತಿಳಿಯಬೇಕಾಗುತ್ತದೆ. ಹಾಗೆ ತಿಳಿದಾಗ ಮಾತ್ರ ನಾವು ಈ ಕಾಲದಲ್ಲೂ ಎದುರಿಸುತ್ತಿರುವ ಹಲವು ತೊಂದರೆ( ಕಲಿಕೆಯ, ಹಣಕಾಸಿನ, ಸಾಮಾಜಿಕ, ರಾಜಕೀಯ ವಲಯಗಳಲ್ಲಿ)ಗಳಿಗೆ ನಮಗೆ ಬಗೆಹರಿಕೆ ದೊರೆಯುತ್ತದೆ. ಮಂದಿಯಾಳ್ವಿಕೆ ಇಲ್ಲವೆ ಮಂದಿಯಾಳ್ವಿಕೆಯ ಮೇಲೆ ನಿಂತ ಚಿಂತನೆಗಳು ಕೂಡ ಈ ವಿಚಾರವನ್ನು ಎತ್ತಿ ಹಿಡಿಯುತ್ತವೆ ಯಾಕಂದರೆ ಮಂದಿಯಾಳ್ವಿಕೆಯು ಒಟ್ಟಂದದಲ್ಲಿ ಮಂದಿಯ ಅಂದರೆ ಕೂಡಣದ ಒಳಿತನ್ನೇ ಬಯಸುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: