ನಮ್ಮ ಊರಲ್ಲಿನ ಗಣಪತಿ ಹಬ್ಬ

ಸುನಿಲ್ ಮಲ್ಲೇನಹಳ್ಳಿ.

ganapa

ನಾಳೆ ಗಣೇಶ ಹಬ್ಬ. ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು, ಬಾಲ್ಯದ ಗಟನಾವಳಿಯ ಕೋಣೆಯೊಳಗೆ ಹೊಕ್ಕು, ಅಲ್ಲಿ ನಮ್ಮೂರ ಜನರು ಪ್ರತಿವರ‍್ಶವು ಅಪರಿಮಿತ ಉತ್ಸಾಹ, ಅನನ್ಯ ಬಕ್ತಿ, ಶ್ರದ್ದೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದ್ರುಶ್ಯಾವಳಿಯ ಎಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ, ಹಿರಿಮೆಯುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿಯಿರುವ ಮಲ್ಲೇನಹಳ್ಳಿ ನಮ್ಮೂರು. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ‍್ತಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿ ರಚಿಸಿ, ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ತಕ್ಕ ಕಾರ‍್ಯ-ಯೋಜನೆಗಳನ್ನು ಕೈಗೆತ್ತಿಕೊಂಡು, ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕ್ರುತಿಕ ಅಬ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ‍್ಜಿಯಿಂದ ಮಾಡಿಬಿಡುತ್ತಿದ್ದರು.

ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕ್ರುತಿಕ ಕಾರ‍್ಯಕ್ರಮಗಳ ಅಬ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಹಿಂದೆಂದು ನೋಡಿರದ ಹಾವಬಾವ ತೋರಿಸುವ ಅಬ್ಯಾಸಿಗರು, ಅರ‍್ತ-ದ್ವಂದ್ವಾರ‍್ತಗಳಿಂದಾಗಿ ಒಮ್ಮೊಮ್ಮೆ ಒಡೆದು ಮೂಡುತ್ತಿದ್ದ ನಗೆ ಚಟಾಕಿ, ನಾಟಕದ ಮಾಸ್ತರರು ಹಾರ‍್ಮೊನಿಯಂ ನುಡಿಸುವುದು, ಅಬ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, ವೀರಗಾಸೆ ಅಬ್ಯಾಸಿಗರ ರಣಗರ‍್ಜನೆ – ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು. ಒಂದೊಂದು ದಿನ ಕಾರ‍್ಯಕ್ರಮಗಳ ಅಬ್ಯಾಸವನ್ನು ನೋಡುತ್ತಾ, ಅಲ್ಲೇ ಮಲಗಿ ಬಿಟ್ಟಿರುತ್ತಿದ್ದೆವು. ಕೊನೆಯಲ್ಲಿ ಅಬ್ಯಾಸಿಗರು ನಮ್ಮನ್ನು ಎದ್ದೇಳಿಸಿ, ನಮ್ಮ ನಮ್ಮ ಮನೆಯವರೆಗೂ ಬಂದು ನಮ್ಮನ್ನು ಬಿಟ್ಟುಹೋಗುತ್ತಿದ್ದರು.

ಚಿಕ್ಕವರಾದ್ದರಿಂದ ಆಚರಣೆಗೆ ಸಂಬಂದಿಸಿದ ಯಾವುದೇ ಜವಾಬ್ದಾರಿಯಿಲ್ಲದೆ ಮುಕ್ತರಾಗಿ ಇರುತ್ತಿದ್ದ ನಾನು ಮತ್ತು ನನ್ನ ಸಂಗಡಿಗರೆಲ್ಲ ಮಂಟಪ-ಚಪ್ಪರ ಕಟ್ಟುವುದನ್ನು, ನಾಟಕ ಅಬ್ಯಾಸ ಮಾಡುವುದನ್ನು ಮತ್ತು ಮಾಡುವವರನ್ನು ನೆಟ್ಟ ಮನಸ್ಸಿನಿಂದ ನೋಡುತ್ತಾ ನಿಲ್ಲುವುದೇ ನಮ್ಮ ಕಾಯಕವಾಗಿ ಬಿಟ್ಟಿತ್ತು. ಕೆಲವೊಮ್ಮೆ ನಿಯೋಜಿತ ಸದಸ್ಯರುಗಳು ಕೊಡುತ್ತಿದ್ದ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾದ್ಯವಾದಶ್ಟೂ ಪ್ರಯತ್ನಿಸಿ, ಕೊನೆಯಲ್ಲಿ ಅವರು ಸಂದಾಯ ಮಾಡುತ್ತಿದ್ದ ಹೊಗಳಿಕೆ, ತೆಗಳಿಕೆ ಎಲ್ಲವನ್ನು ಯಾವುದೇ ಪ್ರತ್ಯುತ್ತರ ನೀಡದೆ ಸ್ವೀಕರಿಸುತ್ತಿದ್ದೆವು. ಏಕೆಂದರೆ ಮನದೊಳಗೆ ಪಸರಿಸಿದ ಹಬ್ಬದ ವಾತಾವರಣ ತಂದುಕೊಡುತ್ತಿದ್ದ ಸಂಬ್ರಮ-ಸಡಗರದ ಮುಂದೆ ಇನ್ಯಾವ ವಿಚಾರವೂ ನಮ್ಮ ಪರಿಗಣನೆಗೆ ಎಳ್ಳಶ್ಟು ಬರುತ್ತಿರಲಿಲ್ಲ! ಪ್ರತಿವರ‍್ಶವೂ ಮಂಟಪ ಹಾಗೂ ಚಪ್ಪರವನ್ನು ಬಿನ್ನ-ವಿಬಿನ್ನ ರೀತಿಯಲ್ಲಿ ಸಿದ್ದಪಡಿಸುತ್ತಿದ್ದ ನಿಯೋಜಿತ ಸದಸ್ಯರು ಮತ್ತು ಅವರಲ್ಲಿ ಒಬ್ಬೊಬ್ಬರಲ್ಲೂ ಇದ್ದ ಒಂದೊಂದು ವಿಶಿಶ್ಟತೆ, ಚಾಣಕ್ಶತೆ ಮತ್ತು ಕೈಚಳಕ ಇವೆಲ್ಲವೂ ಸಮಪ್ರಮಾಣದಲ್ಲಿ ಕೂಡಿ ಒಂದು ಸುಂದರ ಮಂಟಪವಾಗಿ ಸ್ರುಶ್ಟಿ ಪಡೆದು ಗಣೇಶನ ಪೀಟಾರೋಹಣಕ್ಕೆ ಕಾಯುತ್ತಾ ಇರುತ್ತಿತ್ತು. ಆದರೆ ಒಂದು ಸ್ವಲ್ಪವೂ ಹೇಳದೇ-ಕೇಳದೆ ಬರುತ್ತಿದ್ದ ಮಳೆ, ಎರಡು-ಮೂರು ದಿನಗಳಾದರೂ ಬಾರದೆ ಇರುತ್ತಿದ್ದ ವಿದ್ಯುತ್ -ಇವೆರಡು ಆ ಸಮಯದಲ್ಲಿ ನಮಗೆ ದೊಡ್ಡ ಶತ್ರುಗಳಂತೆ ತೋರುತಿದ್ದವು.

ಗಣೇಶಮೂರ‍್ತಿಯ ಮಂಟಪದಲ್ಲಿ ಕೂರಿಸುವ ದಿನದಿಂದ ಆರಂಬಿಸಿ ಗಣೇಶ ಮೂರ‍್ತಿಯನ್ನು ಬಿಡುವ ದಿನದವರೆಗೂ, ಅಂದರೆ ಸುಮಾರು ಹದಿನೈದು ದಿನಗಳ ಕಾಲ ಮಿತಿಯಿಲ್ಲದ ಪುಳಕ, ನಿತ್ಯ ನವನವೀನ ಉತ್ಸಾಹ ನಮ್ಮ ಪಾಲಿಗೆ ಜಮವಾಗುತ್ತಿತ್ತು . ಊರಲ್ಲಿ ದೊಡ್ಡ ಗಣೇಶನನ್ನು ಕೂರಿಸುವುದರ ಜೊತೆಗೆ ನಾನು, ನನ್ನ ಸಹಪಾಟಿಗಳು ಸೇರಿದಂತೆ ಬಹುತೇಕ ಹುಡುಗರು ತಮ್ಮ ತಮ್ಮ ಮನೆಗಳಲ್ಲಿ ಚಿಕ್ಕದಾದ ಮಂಟಪವನ್ನು ಕಟ್ಟಿ, ಚಿಕ್ಕ ಗಣೇಶಮೂರ‍್ತಿಯನ್ನು ಕೂರಿಸುತ್ತಿದ್ದೆವು. ಒಂದುಸಾರಿ ಗಣೇಶಮೂರ‍್ತಿ ಅಕ್ಕಪಕ್ಕದ ಊರಲ್ಲಿ ಎಲ್ಲೂ ಸಿಗದೇ, ನಮ್ಮೂರಿಂದ 12 ಕಿಲೋಮೀಟರ್ ದೂರದಲ್ಲಿರುವ ಊರಿಗೆ ಸೈಕಲ್ಲಿನಲ್ಲಿ ಪ್ರಯಾಣಿಸಿ ಗಣೇಶಮೂರ‍್ತಿಯನ್ನು ಕರೀದಿಸಿ ಬಂದದ್ದುಂಟು! ಎಲ್ಲಿ ಗಣೇಶನಿರುವನೋ ಅಲ್ಲಿ ತಾಯಿ ಗೌರಮ್ಮ ಇರಲೇ ಬೇಕಲ್ಲವೇ? ಹಾಗಾಗಿ ದೊಡ್ಡ ಗಾತ್ರದ ಗಣೇಶಮೂರ‍್ತಿಯ ಪಕ್ಕದಲ್ಲಿ ಅಂಗೈ ಉದ್ದದ ಗೌರಮ್ಮನ ಮೂರ‍್ತಿಯುನ್ನು ಸಹ ಕೂರಿಸುತ್ತಿದ್ದರು.

ಪ್ರತಿದಿನ ಬೆಳಗ್ಗೆ ಎದ್ದು ಮನೆಯಲ್ಲಿನ ಚಿಕ್ಕ ಗಣೇಶನಿಗೆ ಪೂಜೆ- ಪುನಸ್ಕಾರ ಮಾಡಿ, ಶಾಲೆಗೆ ಹೋಗುವ ವೇಳೆಯವರೆಗೂ ದೊಡ್ಡ ಗಣಪತಿಯ ಪೆಂಡಾಲ್ ನಲ್ಲೇ ಕಾಲ ಕಳೆಯುತ್ತಿದೆವು. ಸಂಜೆ ಶಾಲೆಯನ್ನು ಮುಗಿಸಿಕೊಂಡು ಬಂದ ನಂತರವೂ ಓಡೋಡಿ ಹೋಗಿ ಪೆಂಡಾಲನ್ನು ಸೇರಿ ಅಲ್ಲಿ ಆಟವಾಡುತ್ತಿದ್ದೆವು, ಕುಣಿಯುತ್ತಿದೆವು, ಪೂಜೆಯ ವೇಳೆಯಲ್ಲಿ ಕೈಮುಗಿದು ನಿಲ್ಲುತ್ತಿದ್ದೆವು ಮತ್ತು ಸಂಜೆ ಮಹಮಂಗಳಾರತಿಯ ನಂತರ ಕೊಡುವ ಪಲಾಹಾರಕ್ಕೆ ಮುಗಿಬೀಳುತ್ತಿದ್ದೆವು. ಇಶ್ಟೇ ಅಲ್ಲದೇ ಬೆಳಗ್ಗೆ ಹಾಗೂ ಸಂಜೆ ಊರಿನ ಎಲ್ಲ ಮನೆಗಳಿಗೆ ಕೇಳುಸುವಂತೆ ದ್ವನಿವರ‍್ದಕದಿಂದ ಮೂಡಿಬರುತ್ತಿದ್ದ ಬಕ್ತಿಗೀತೆಗಳನ್ನೂ ದಿನಾ ಆಲಿಸುತ್ತಾ ಇದ್ದೆವು. ಕಾಲಕ್ರಮೇಣ ಕೆಲವು ಬಕ್ತಿಗೀತೆಗಳು ನಮಗೆ ಕಂಟಪಾಟವಾದವು. ದಿನಂಪ್ರತಿ ಏನಾದರೂ ಒಂದು ಮನೋರಂಜನೀಯ ಕಾರ‍್ಯಕ್ರಮವಿರುತ್ತಿತ್ತು. ಚಿಕ್ಕ-ಪುಟ್ಟ ನಾಟಕ, ಬಕ್ತಿ ಪ್ರದಾನ ಚಲನಚಿತ್ರಗಳನ್ನು ಹಾಕುವುದು, ಹೀಗೆ ಇತ್ಯಾದಿ ಕಾರ‍್ಯಕ್ರಮಗಳು ಇರುತ್ತಿದ್ದವು.

ಹೀಗೆ ವಿಜ್ರುಂಬಣೆಯಿಂದ ನಡೆಯುತ್ತಿತ್ತು ಹಬ್ಬದ ಆಚರಣೆ ನಮ್ಮ ಊರಿನಲ್ಲಿ ಎಂದು ಹೇಳಲು ಕುಶಿಯಾಗುತ್ತದೆ. ಆ ಸಡಗರ ಈಗ ನೆನೆಸಿಕಂಡರೂ ಮನಸ್ಸಿಗೆ ಮುದನೀಡುತ್ತದೆ. ಹಬ್ಬದ ಈ ಸಂಬ್ರಮ-ಸಡಗರ ನಾಡಿನಲ್ಲಿ ಯಾವಾಗಲೂ ಹೀಗೆ ಇರಲಿ.  ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿ ಹಾರೈಕೆಗಳು!

(ಚಿತ್ರಸೆಲೆ: bhupsa2007.blogspot.in

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: