ಕಲಬುರಗಿ ನಗರ – ನಾಡಿನ ಆಡಳಿತ ಕೇಂದ್ರಗಳಲ್ಲೊಂದು

– ನಾಗರಾಜ್ ಬದ್ರಾ.

ರಾಜ್ಯ ಸರಕಾರವು ತನ್ನ ಕಾರ‍್ಯಾಚರಣೆಯ ಸಾಮರ‍್ತ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವುದಕ್ಕಾಗಿ ಕರ‍್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಲಯಗಳನ್ನಾಗಿ ಮಾಡಿದೆ. ಅವು ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಲಯಗಳು. ಕಲಬುರಗಿ ನಗರವು ಕಲಬುರಗಿ ವಲಯದ ಕೇಂದ್ರವಾಗಿದೆ. ಇಂದು ಈ ನಗರವು ಕಲ್ಯಾಣ ಕರ‍್ನಾಟಕ ಬಾಗದ ವಿಬಾಗೀಯ ಕೇಂದ್ರವಾಗಿ ಬೆಳೆದಿದೆ. ಈ ನಗರದಲ್ಲಿ ಹಲವಾರು ಸರಕಾರಿ ಆಡಳಿತದ ಕೇಂದ್ರ ಕಚೇರಿಗಳಿವೆ.

ಮಿನಿ ವಿದಾನಸೌದ:

Kalaburagi_1

ನಗರದ ಬೇರೆಬೇರೆ ಕಡೆಗೆ ಇರುವ ಸರಕಾರಿ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಸ್ತಾಪಿಸಿ ಜನರ ಅಲೆದಾಟವನ್ನು ತಪ್ಪಿಸಲು, ಬೆಂಗಳೂರು ನಗರದಲ್ಲಿರುವ ರಾಜ್ಯ ಸರಕಾರದ ಶಕ್ತಿ ಕೇಂದ್ರ ವಿದಾನಸೌದದ ಮಾದರಿಯಲ್ಲಿಯೇ ಕಲಬುರಗಿಯಲ್ಲಿಯು ಮಿನಿ ವಿದಾನಸೌದ ಕಟ್ಟಡವನ್ನು ಕಟ್ಟಲಾಗಿದೆ. ನಂತರ ಕಲಬುರಗಿ ನಗರದಲ್ಲಿನ ಹಲವಾರು ಸರಕಾರಿ ಕಚೇರಿಗಳನ್ನು ಈ ಕಟ್ಟಡಕ್ಕೆ ಸ್ತಳಾಂತರಿಸಲಾಯಿತು. ಇಲ್ಲಿ ರಾಜ್ಯ ಸರಕಾರವು ಮೂರು ಬಾರಿ ಸಚಿವ ಸಂಪುಟ ಸಬೆಯನ್ನು ನಡೆಸಿದೆ.

ಈ ಕಟ್ಟಡದಲ್ಲಿರುವ ಪ್ರಮುಕ ಸರಕಾರಿ ಕಚೇರಿಗಳೆಂದರೆ;
ಪ್ರಾದೇಶಿಕ ಆಯುಕ್ತರ ಕಚೇರಿ: ಕಲ್ಯಾಣ ಕರ‍್ನಾಟಕ ಬಾಗದ 6 ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ಪ್ರಾದೇಶಿಕ ವಿಬಾಗವನ್ನು ರೂಪಿಸಿ, ಈ ಪ್ರಾದೇಶಿಕ ವಿಬಾಗಕ್ಕೆ ಒಬ್ಬ ಆಯುಕ್ತರನ್ನು ನೇಮಕಮಾಡಲಾಗಿದೆ. ಈ ಆಯುಕ್ತರ ಕಚೇರಿಯು ಕಲಬುರಗಿ ನಗರದಲ್ಲಿದೆ.

ಕರ‍್ನಾಟಕ ಲೋಕಸೇವಾ ಆಯೋಗದ ಪ್ರಾದೇಶಿಕ ಕಚೇರಿ: ಕರ‍್ನಾಟಕದ ಲೋಕಸೇವಾ ಆಯೋಗದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಇದರ ನಾಲ್ಕು ಪ್ರಾದೇಶಿಕ ಕಚೇರಿಗಳು ಕಲಬುರಗಿ, ಮೈಸೂರು, ಬೆಳಗಾವಿ ಹಾಗು ಶಿವಮೊಗ್ಗ ನಗರಗಳಲ್ಲಿ ಸ್ತಾಪಿಸಲಾಗಿದೆ. ಕಲಬುರಗಿಯ ಕಚೇರಿಯು ಈ ಮಿನಿ ವಿದಾನಸೌದದ ಕಟ್ಟಡದಲ್ಲಿದೆ.

ಈ ಕಟ್ಟಡದಲ್ಲಿರುವ ಇತರೆ ಕಚೇರಿಗಳು, ಜಿಲ್ಲಾದಿಕಾರಿಗಳ ಕಾರ‍್ಯಾಲಯ ಹಾಗೂ ಇನ್ನೂ ಹಲವಾರು ಇಲಾಕೆಯ ಕಚೇರಿಗಳು.

ಕರ‍್ನಾಟಕ ಹೈಕೋರ‍್ಟಿನ ಕಾಯಂ ವಿಬಾಗೀಯ ಪೀಟ:

Kalaburagi_2

ಕಲ್ಯಾಣ ಕರ‍್ನಾಟಕ ಬಾಗದಲ್ಲಿ ಕರ‍್ನಾಟಕ ಹೈಕೋರ‍್ಟಿನ ಕಾಯಂ ವಿಬಾಗೀಯ ಪೀಟ ಸ್ತಾಪನೆಯಾಗಬೇಕು ಎನ್ನುವುದು ಈ ಬಾಗದ ಜನರ ಬಹಳ ವರ‍್ಶಗಳ ಬೇಡಿಕೆಯಾಗಿತ್ತು. ಯಾಕೆಂದರೆ ಬೆಂಗಳೂರು ನಗರವು ಈ ಬಾಗದಿಂದ ತುಂಬಾ ದೂರದಲ್ಲಿರುವುದರಿಂದ ಇಲ್ಲಿಯ ಜನರ ಹೈಕೋರ‍್ಟು ಕಲಾಪಗಳಿಗೆ ಹಾಜರಾಗಲು ತುಂಬಾ ಹಣವು ಕರ‍್ಚುವಾಗುವುದರ ಜೊತೆಯಲ್ಲಿ ಬಹಳ ಹೊತ್ತು ಬೇಕಾಗುತ್ತಿತ್ತು. ಇದರಿಂದ ಜನರಿಗೆ ತುಂಬಾ ಕಶ್ಟವಾಗುತ್ತಿತ್ತು. ಅದಕ್ಕಾಗಿ ಈ ಬಾಗದ ವಕೀಲರು, ಜನಸಾಮಾನ್ಯರು ಹಾಗೂ ವಿವಿದ ಸಂಗಟನೆಗಳಿಂದ ಉಗ್ರವಾದ ಹೋರಾಟಗಳು ನಡೆದವು. ಕಡೆಗೂ ಈ ಬಾಗದ ಜನರ ಆಸೆ ಈಡೇರುವ ಕಾಲಬಂತು, 2006 ರಲ್ಲಿ ರಾಜ್ಯ ಸರಕಾರವು ಕಲಬುರಗಿ ಹಾಗೂ ದಾರವಾಡ ನಗರಗಳಲ್ಲಿ ಕರ‍್ನಾಟಕ ಹೈಕೋರ‍್ಟಿನ ಸಂಚಾರಿ ಪೀಟವನ್ನು ಸ್ತಾಪಿಸಲು ಅನುಮೋದನೆ ನೀಡಿತು. ಅದರಂತೆ ಜುಲೈ 5, 2008 ರಂದು ಕಲಬುರಗಿ ನಗರದಲ್ಲಿ ಕರ‍್ನಾಟಕ ಹೈಕೋರ‍್ಟಿನ ಸಂಚಾರಿ ಪೀಟದ ಉದ್ಗಾಟನೆಯನ್ನು ನೇರವೇರಿಸಲಾಯಿತು. ಮುಂದೆ ಈ ಸಂಚಾರಿ ಪೀಟಗಳನ್ನು ಕಾಯಂಗೊಳಿಸುವ ಬೇಡಿಕೆ ಕೇಳಿಬಂತು, ಬಳಿಕ 31 ಆಗಸ್ಟ್ 2013 ರಂದು ಕಲಬುರಗಿಯಲ್ಲಿನ ಕರ‍್ನಾಟಕ ಹೈಕೋರ‍್ಟಿನ ಸಂಚಾರಿ ಪೀಟವನ್ನು ಕಾಯಂ ಪೀಟವನ್ನಾಗಿ ಮತ್ತು 25 ಆಗಸ್ಟ್ 2013 ರಂದು ದಾರವಾಡ ಸಂಚಾರಿ ಪೀಟವನ್ನು ಕಾಯಂ ಪೀಟವನ್ನಾಗಿ ಪರಿವರ‍್ತಿಸಲಾಯಿತು.

ಇನ್‍ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್ (Inspector General of Police) ಕಚೇರಿ:

kalbaraha 3

ನಮ್ಮ ರಾಜ್ಯ ಸರಕಾರದ ಗ್ರುಹ ಇಲಾಕೆಯು ನಾಲ್ಕು ಆಯುಕ್ತರನ್ನು ಹಾಗೂ ಆರು ಇನ್‍ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್ ವಲಯಗಳನ್ನು ಹೊಂದಿದೆ. ಈ ಇಲಾಕೆಯು ರಾಜ್ಯವನ್ನು ಆರು ವ್ಯಾಪ್ತಿಗಳಲ್ಲಿ ವಿಂಗಡಿಸಿದೆ, ಅವುಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

Kalaburagi4ಈಶಾನ್ಯ ವ್ಯಾಪ್ತಿಯ ಇನ್‍ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್ ಕಚೇರಿಯು ಕಲಬುರಗಿ ನಗರದಲ್ಲಿದ್ದು, ಇದರ ವ್ಯಾಪ್ತಿಯಲ್ಲಿ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಕಲಬುರಗಿ ಜಿಲ್ಲೆಗಳನ್ನು ಸೇರಿಸಲಾಗಿದೆ. ಈ ಕಚೇರಿಯ ಕಟ್ಟಡವು ಹಸಿರು ಕಟ್ಟಡದ ಪರಿಕಲ್ಪನೆಯಲ್ಲಿ ನಿರ‍್ಮಿಸಲಾದ ನಮ್ಮ ದೇಶದ ಮೊದಲ ಸರಕಾರಿ ಕಟ್ಟಡವಾಗಿದೆ. ಈ ಕಟ್ಟಡವನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಪರಿಸರ ಚಳಕವನ್ನು ಉಪಯೋಗಿಸಿ 2004 ರಲ್ಲಿ ಕರ‍್ನಾಟಕ ಪೊಲೀಸ್ ಹೌಸಿಂಗ್ ಕಾರ‍್ಪೋರೇಶನ್ ಅವರು ನಿರ‍್ಮಿಸಿದರು.

ಗುಲಬರ‍್ಗಾ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕೇಂದ್ರ ಕಚೇರಿ: 1999 ರಲ್ಲಿ ಆಡಳಿತ ಸುದಾರಣೆಗಾಗಿ ಇಂದನ ಇಲಾಕೆಯಲ್ಲಿ ಪ್ರಮುಕ ಬದಲಾವಣೆಗಳನ್ನು ಮಾಡಲಾಯಿತು. ಮೊದಲಿಗೆ ಕರ‍್ನಾಟಕ ವಿದ್ಯುಚ್ಚಕ್ತಿ ಸಂಸ್ತೆಯನ್ನು, ಕರ‍್ನಾಟಕ ವಿದ್ಯುತ ಪ್ರಸರಣ ನಿಗಮ ನಿಯಮಿತ ಹಾಗೂ ಕರ‍್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಎಂದು ಎರಡು ವಿಬಾಗಗಳಾಗಿ ಒಡೆಯಲಾಯಿತು. ನಂತರ ಜೂನ್ 2002 ರಲ್ಲಿ ಕರ‍್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವನ್ನು ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಪ್ರಸರಣ ನಿಗಮ ನಿಯಮಿತ ಎಂದು ನಾಲ್ಕು ವಲಯಗಳಾಗಿ ಒಡೆಯಲಾಯಿತು. ಇದಾದ ನಂತರ ಗುಲಬರ‍್ಗಾ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಕಲ್ಯಾಣ ಕರ‍್ನಾಟಕ ಬಾಗದ ಆರು ಜಿಲ್ಲೆಗಳಿಗೆ ವಿದ್ಯುತ್ ಹಂಚುವ ಜವಾಬ್ದಾರಿಯನ್ನು ನೀಡಲಾಗಿದೆ. ಇದರ ಕೇಂದ್ರ ಕಚೇರಿಯನ್ನು ಕಲಬುರಗಿ ನಗರದಲ್ಲಿ ಸ್ತಾಪಿಸಲಾಗಿದೆ.

ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ:
ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆಯು ತನ್ನ ಕಾರ‍್ಯಾಚರಣೆಯ ಸಾಮರ‍್ತ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ, ಕ.ರಾ.ರ.ಸಾ.ಸಂ ಅನ್ನು ಕರ‍್ನಾಟಕ ಸರಕಾರವು 22, ಪ್ರೇಬವರಿ, 1997 ರಲ್ಲಿ 4 ವಿಬಾಗಗಳಾಗಿ ಒಡೆಯಿತು. ಅವುಗಳೆಂದರೆ
1) ವಾಯವ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ, ಹುಬ್ಬಳ್ಳಿ
2) ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ, ಕಲಬುರಗಿ
3) ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ, ಬೆಂಗಳೂರು.
4) ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ, ಕೇಂದ್ರ ಕಚೇರಿ, ಬೆಂಗಳೂರು.

ಈಶಾನ್ಯ ಕರ‍್ನಾಟಕ ರಸ್ತೆ ಸಾರಿಗೆ ಸಂಸ್ತೆ ಅದೀನದಲ್ಲಿ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯನ್ನು ಸೇರಿಸಲಾಗಿದೆ. ಈ ಸಂಸ್ತೆಯ ಕೇಂದ್ರ ಕಚೇರಿಯು ಕಲಬುರಗಿ ನಗರದಲ್ಲಿದೆ.

ಸಾರ‍್ವಜನಿಕ ಶಿಕ್ಶಣ ಇಲಾಕೆಯ ಆಯುಕ್ತರ ಕಾರ‍್ಯಾಲಯ: ರಾಜ್ಯದ ಸಾರ‍್ವಜನಿಕ ಶಿಕ್ಶಣ ಇಲಾಕೆಯನ್ನು ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಎಂದು ನಾಲ್ಕು ವಿಬಾಗಗಳಾಗಿ ವಿಂಗಡಿಸಲಾಗಿದೆ. ಹಾಗೆಯೇ ಬೆಂಗಳೂರು, ಕಲಬುರಗಿ, ದಾರವಾಡ ವಿಬಾಗಗಳಲ್ಲಿ ತನ್ನ ಆಯುಕ್ತರ ಕಚೇರಿಯನ್ನು ಸ್ತಾಪಿಸಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿನ ಶಾಲೆಗಳನ್ನು ಕಲಬುರಗಿ ಆಯುಕ್ತರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

ಪದವಿ ಪೂರ‍್ವ ಶಿಕ್ಶಣ ಇಲಾಕೆಯ ಪ್ರಾದೇಶಿಕ ಕಚೇರಿ: ಈ ಇಲಾಕೆಯನ್ನು ಕೂಡ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಎಂದು ನಾಲ್ಕು ಪ್ರಾದೇಶಿಕ ವಿಬಾಗಗಳಾಗಿ ವಿಂಗಡಿಸಲಾಗಿದೆ. ಕಲಬುರಗಿ ವಿಬಾಗದಲ್ಲಿ ಕಲ್ಯಾಣ ಕರ‍್ನಾಟಕದ ಆರು ಜಿಲ್ಲೆಗಳಲ್ಲಿನ ಪದವಿ ಪೂರ‍್ವ ಕಾಲೇಜುಗಳನ್ನು ಸೇರಿಸಿ, ಈ ವಿಬಾಗದ ಪ್ರಾದೇಶಿಕ ಕಚೇರಿಯನ್ನು ಕಲಬುರಗಿ ನಗರದಲ್ಲಿ ಸ್ತಾಪಿಸಲಾಗಿದೆ.

ಹೈದ್ರಾಬಾದ್ ಕರ‍್ನಾಟಕ ಅಬಿವ್ರುದ್ದಿ ಮಂಡಳಿ ಕಚೇರಿ: ಕಲ್ಯಾಣ ಕರ‍್ನಾಟಕದ ಜಿಲ್ಲೆಗಳ ಅಬಿವ್ರುದ್ದಿ ಯೋಜನೆಗಾಗಿ 2009 ರಲ್ಲಿ ಈ ಮಂಡಳಿಯನ್ನು ಸ್ತಾಪಿಸಲಾಯಿತು. 2013 ರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಈ ಮಂಡಳಿಯನ್ನು ಪುನರ್ ರಚಿಸಲಾಯಿತು. ಈ ಮಂಡಳಿಯ ಕಚೇರಿಯು ಕಲಬುರಗಿ ನಗರದಲ್ಲಿದೆ.

ವಿ.ಟಿ.ಯು ವಿಬಾಗೀಯ ಕೇಂದ್ರ: 15 ಎಕರೆ ಬೂಮಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಲಬುರಗಿ ನಗರದಲ್ಲಿ ತನ್ನ ವಿಬಾಗೀಯ ಕೇಂದ್ರವನ್ನು ಸ್ತಾಪಿಸಿದೆ. ಈ ವಿಶ್ವವಿದ್ಯಾಲಯವು ಕಲಬುರಗಿ, ಮೈಸೂರು ಹಾಗು ಬೆಂಗಳೂರಿನಲ್ಲಿ ತನ್ನ ವಿಬಾಗೀಯ ಕೇಂದ್ರಗಳನ್ನು ಹೊಂದಿದೆ.

ಕೇಂದ್ರ ಕಾರಾಗ್ರುಹ: ರಾಜ್ಯದಲ್ಲಿ ಬೆಂಗಳೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಕಲಬುರಗಿ, ತುಮಕೂರು ಹೀಗೆ ಒಟ್ಟು 6 ಕೇಂದ್ರ ಕಾರಾಗ್ರುಹಗಳಿವೆ. ಕಲಬುರಗಿಯಲ್ಲಿನ ಕೇಂದ್ರ ಕಾರಾಗ್ರುಹವು ನಗರದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದ್ದು, ಅಂದಾಜು 1000 ಕೈದಿಗಳು ಇರುವ ಜಾಗವನ್ನು ಹೊಂದಿದೆ.

ಜಿಲ್ಲಾ ವಿಜ್ನಾನ ಕೇಂದ್ರ:

Kalburagi5ಕಲಬುರಗಿಯ ಜಿಲ್ಲಾ ವಿಜ್ನಾನ ಕೇಂದ್ರವು ಒಂದು ನ್ಯಾಶನಲ್ ಕೌನ್ಸಿಲ್ ಆಪ್ ಸೈನ್ಸ್ ಮ್ಯೂಸಿಯಂನ ಗಟಕ ಹಾಗೂ ಸ್ವಾಯತ್ತ ಸಂಸ್ತೆ. ಇದು ಬಾರತ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕ್ರುತಿ ಸಚಿವಾಲಯದ ಅದೀನದಲ್ಲಿ ಬರುತ್ತದೆ. ಇದರ ಕೇಂದ್ರ ಕಚೇರಿಯು ಕೋಲ್ಕತ್ತಾದಲ್ಲಿದ್ದು. ಇದರ ಅದೀನದಲ್ಲಿ ಒಟ್ಟು 27 ವಿಜ್ನಾನ ಕೇಂದ್ರಗಳಿವೆ. ರಾಶ್ಟ್ರೀಯ ವಿಜ್ನಾನ ಕೇಂದ್ರಗಳು ಬೆಂಗಳೂರು, ಮುಂಬಯಿ, ದೆಹಲಿ, ಕೋಲ್ಕತ್ತಾ ನಗರಗಳಲ್ಲಿವೆ. ಇವುಗಳ ಅದೀನದಲ್ಲಿ ಪ್ರಾದೇಶಿಕ, ಸಹ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ವಿಜ್ನಾನ ಕೇಂದ್ರಗಳಿವೆ. ಕಲಬುರಗಿಯ ಜಿಲ್ಲಾ ವಿಜ್ನಾನ ಕೇಂದ್ರವು ನಮ್ಮ ರಾಜ್ಯದಲ್ಲಿರುವ ಒಂದೇ ಜಿಲ್ಲಾ ಮಟ್ಟದ ವಿಜ್ನಾನ ಕೇಂದ್ರವಾಗಿದ್ದು, ಜನವರಿ 6, 1984 ರಲ್ಲಿ ಇದನ್ನು ಸ್ತಾಪಿಸಲಾಗಿದೆ.

ಇಲ್ಲಿ ಸಿಗುವ ಸೌಲಬ್ಯಗಳು: ಪನ್ ಸೈನ್ಸ್ (Fun Science), ಎಲೆಟ್ರಾನಿಕ್ಸ್ ಗ್ಯಾಲರಿ (Electronics Gallery), ವಿಜ್ನಾನ ಉದ್ಯಾನ( Science Park), 3ಡಿ ತೇಟರ್ (3D Theater), ಡಿಜಿಟಲ್ ಪ್ಲಾನೆಟೋರಿಯಂ (Digital Planetarium) ಹಾಗೂ ರಾತ್ರಿಯ ಸಮಯದಲ್ಲಿ ಬಾನನ್ನು ನೋಡಲು ದೂರತೋರುಕ (Telescope). ಹಿನ್ನಡವಳಿ ಹಿಂದಿನ (Prehistoric Park) ಉದ್ಯಾನ ನಿರ‍್ಮಾಣದ ಕಾರ‍್ಯ ಈಗ ಚಾಲ್ತಿಯಲ್ಲಿದೆ.

ಚಂದ್ರಶೇಕರ ಪಾಟೀಲ ಜಿಲ್ಲಾ ಕ್ರೀಡಾಂಗಣ:
ಜಿಲ್ಲಾ ಕ್ರೀಡಾಂಗಣವು ಕ್ರಿಕೆಟ್, ಹಾಕಿ, ವಾಲಿಬಾಲ್, ಬಾಸ್ಕೆಟ್ ಬಾಲ್ ಕೀಡ್ರಾಂಗಣಗಳನ್ನು ಒಳಗೊಂಡಿದೆ. ಈ ಕ್ರೀಡಾಂಗಣದಲ್ಲಿ ಅಂತರರಾಶ್ಟ್ರೀಯ ಮಟ್ಟದ ಟೆನಿಸ್ ಕೋರ‍್ಟ್ ಇದ್ದು ಕೆಲವು ಅಂತರರಾಶ್ಟ್ರೀಯ ಟೆನಿಸ್ ಪಂದ್ಯಾವಳಿಗಳು ಕೂಡ ನಡೆದಿವೆ. ಇನ್ನು ರಾಶ್ಟ್ರೀಯ ಮಟ್ಟದ ಈಜು ಕೊಳವಿದ್ದು, ಇಲ್ಲಿಯೂ ಹಲವಾರು ರಾಶ್ಟ್ರೀಯ ಈಜು ಪಂದ್ಯಾವಳಿಗಳು ನಡೆದಿವೆ.

(ಮಾಹಿತಿ ಸೆಲೆ  : wikiHighCourt, wikiKarnatakaPolice, gescom.in, thehindu, ksrtc.in, pueducaiton, pukar.nic.in,  gulbarga.nic.in)

(ಚಿತ್ರಸೆಲೆ : gulbarga.nic.inksphc.orgkarnatakajudicairy.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: