ಕಣ್ಣೆರಡು ಸಾಲದು ‘ಶಿರಸಿ ಶ್ರೀ ಮಾರಿಕಾಂಬಾ ದೇವಿ’ಯ ಜಾತ್ರೆ ನೋಡಲು

ಕಲ್ಪನಾ ಹೆಗಡೆ.

Jathre_Sirsi2.

ಶಿರಸಿ, ಕರ‍್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿಯ ಪ್ರಮುಕ ಪಟ್ಟಣ. ಶಿರಸಿಯಲ್ಲಿ ನೆಲೆನಿಂತಿರುವ ಶ್ರೀ ಮಾರಿಕಾಂಬಾದೇವಿ ಅತ್ಯಂತ ಜಾಗ್ರುತ ಶಕ್ತಿ ದೇವತೆಯೆಂದು ಪ್ರಸಿದ್ದಳು. ಕರ‍್ನಾಟಕದಲ್ಲಿರುವ ದೇವಿಯ ಪವಿತ್ರ ಪೀಟಗಳಲ್ಲಿ ಶಿರಸಿಯ ಶ್ರೀಮಾರಿಕಾಂಬೆಯೂ ಒಂದು. ನಮ್ಮ ನಾಡಿನಲ್ಲಿ ಅಶ್ಟೇ ಅಲ್ಲ, ನೆರೆ ರಾಜ್ಯಗಳಾದ ಕೇರಳ, ಆಂದ್ರ, ತಮಿಳುನಾಡು, ಗೋವಾ, ಮಹಾರಾಶ್ಟ್ರಗಳಲ್ಲಿ ಶಿರಸಿಯ ಶ್ರೀಮಾರಿಕಾಂಬೆಯ ಬಕ್ತರು ಅಪಾರ ಸಂಕ್ಯೆಯಲ್ಲಿ ಇದ್ದಾರೆ. ಅದರಲ್ಲಿಯೂ ಉತ್ತರಕನ್ನಡ, ದಕ್ಶಿಣಕನ್ನಡ, ಉಡುಪಿ ಜಿಲ್ಲೆಗಳ ಜನರಿಗಂತೂ ಶ್ರೀಮಾರಿಕಾಂಬೆ ಮುಕ್ಯ ಆರಾದ್ಯ ದೇವತೆ.

ಶಕ್ತಿ ಕ್ಶೇತ್ರಗಳನ್ನು ಹೆಚ್ಚಾಗಿ ಗಿರಿ ಪ್ರದೇಶಗಳಲ್ಲಿ ಕಾಣುತ್ತೇವೆ. ಪಾರ‍್ವತಿಯನ್ನು ಹಿಮಾಲಯದಲ್ಲಿಯೂ, ವೈಶ್ಣವಿಯನ್ನು ವಿಂದ್ಯಾಗಿರಿಯ ಮೇಲೆಯೂ, ಬ್ರಮರಾಂಬೆಯನ್ನು ಶ್ರೀಶೈಲದಲ್ಲಿಯೂ, ಶಾರದಾಂಬೆಯನ್ನು ಶ್ರಿಂಗೇರಿಯಲ್ಲಿಯೂ, ಕೊಲ್ಲೂರಿನಲ್ಲಿ ಮೂಕಾಂಬಿಕೆಯರನ್ನೂ ಉದಾಹರಿಸಬಹುದು. ಶಿರಸಿಯ ಶ್ರೀಮಾರಿಕಾಂಬೆಯು ಸಹ ಗಿರಿಶಿಕರ ನಿವಾಸಿನಿ. ಶಿರಸಿಯ ಶ್ರೀಮಾರಿಕಾಂಬೆ ಮಾರಿಯಾಗಿ, ಮಾರೆಮ್ಮಳಾಗಿ, ಮಹಾಕಾಳಿಯಾಗಿ, ಮಹಾಲಕ್ಶ್ಮಿಯಾಗಿ, ಮಹಾ ಸರಸ್ವತೀಯಾಗಿ ಸಕಲರನ್ನೂ ಕಾಯುವ ಮಹಾ ಶಕ್ತಿಯಾಗಿ ನೆಲೆಸಿರುವವಳು. ಮನುಕುಲದ ತಾಯಿಬಕ್ತಿಗೆ ಸರಿಸಾಟಿಯಾದುದು ಬೇರೆಯಾವುದೂ ಇಲ್ಲ. ನಮಗೆ ತಾಯಿಯೇ ದೇವರು. ದೇವರೇ ತಾಯಿ. ತಾಯಿ ದೇವರೆಂದು ಪೂಜಿಸುವುದು ಪ್ರಾಚೀನಕಾಲದಿಂದಲೂ ಬಂದಿರುವ ಸಂಪ್ರದಾಯ.

ನಮ್ಮ ಹಿರಿಯರು ಹೇಳುವ ಪ್ರಕಾರ ಆ ಕಾಲದಲ್ಲಿ ದೇಶದ ತುಂಬೆಲ್ಲ ತುಂಡು ಪಾಳೆಯಗಾರಿಕೆಗಳೇ ರೂಡಿಯಲ್ಲಿದ್ದುದರಿಂದ ಕಳವು, ಕೊಲೆ, ಸುಲಿಗೆಗಳು ಸಾಮಾನ್ಯವೆನಿಸಿಬಿಟ್ಟಿದ್ದವು. ಶಿರಸಿ ಆಗ ಚೆನ್ನಾಪುರ ಸೀಮೆಯಲ್ಲಿದ್ದ ಸುಮಾರು ಇನ್ನೂರು ಮನೆಗಳುಳ್ಳ ಒಂದು ಪುಟ್ಟಹಳ್ಳಿ. ಆಗ ಹಾನಗಲ್ಲಿನಲ್ಲಿ ದೇವಿಯ ಜಾತ್ರೆ ಅದ್ದೂರಿಯಾಗಿ ನಡಿತಾ ಇತ್ತಂತೆ. ಜಾತ್ರೆ ಮುಗಿದ ಮೇಲೆ ದೇವಿಯ ವಿಗ್ರಹದ ವಿವಿದ ಬಾಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಇಡಲಾಗಿತ್ತಂತೆ ಅದರ ಜೊತೆಗೆ ಆಬರಣಗಳನ್ನೂ ಇಡ್ತಾ ಇದ್ದರಂತೆ. ಕಳ್ಳರು ಹಾನಗಲ್ಲಿನಿಂದ ಈ ದೇವಿಯ ವಿಗ್ರಹದ ಪೆಟ್ಟಿಗೆಯನ್ನು ಕದ್ದುತಂದು, ಶಿರಸಿಗೆ ಸಮೀಪದ ಕೆರೆಯಿಂದ ಸ್ವಲ್ಪ ದೂರದಲ್ಲಿ ಕುಳಿತು ಪೆಟ್ಟಿಗೆಯನ್ನೊಡೆದು, ಅದರಲ್ಲಿನ ಆಬರಣಗಳನ್ನು ತಮ್ಮೊಳಗೆ ಹಂಚಿಕೊಂಡು, ವಿಗ್ರಹದ ಬಿಡಿ ಬಾಗಗಳನ್ನು ಮತ್ತದೇ ಪೆಟ್ಟಿಗೆಯಲ್ಲಿ ತುಂಬಿ ಶಿರಸಿಯ ಸಮೀಪದ ಕೋಟೆಕೆರೆಯೊಳಗೆ ಎಸೆದರು ಎಂಬುದಾಗಿ ಇತಿಹಾಸ ಇದೆ. ಬೇರೆ ಸ್ತಳದಿಂದ ಶಿರಸಿಗೆ ಬಂದು, ಕೆರೆಯಲ್ಲಿ ದೊರೆತ ವಿಗ್ರಹ ಮಾರಿಯಾಗಿ, ಮಾರೆಮ್ಮನಾಗಿ ಶಿರಸಿಯಲ್ಲಿ ಪ್ರಕಟಗೊಂಡಳು. ಆನಂತರ ಶ್ರೀ ಶಾಲಿವಾಹನ ಶಕೆ 1611 ಶುಕ್ಲ ಸಂವತ್ಸರದ ವೈಶಾಕ ಶುದ್ದ ಅಶ್ಟಮಿ ಮಂಗಳವಾರದಂದು ಈಗಿರುವ ಮಾರಿಕಾಂಬಾ ದೇವಾಲಯದ ಸ್ದಳದಲ್ಲಿ ದೇವಿಯನ್ನು ಪ್ರತಿಶ್ಟಾಪಿಸಲಾಯಿತಂತೆ. ಮಾರಿಕಾಂಬಾ ದೇವಾಲಯ ಇಂದು ಪ್ರಸಿದ್ದ ದಾರ‍್ಮಿಕ ಶಕ್ತಿ ಕೇಂದ್ರವಾಗಿರುವದರೊಂದಿಗೆ ನಾಡಿನ ಹೆಸರಾಂತ ಪ್ರೇಕ್ಶಣೀಯ ಸ್ದಳವಾಗಿ ಹೆಸರು ಗಳಿಸಿದೆ.

ಮಾರಮ್ಮನ ಜಾತ್ರೆ:

Jathre_Sirsi1
ಶಿರಸಿಯ ಶ್ರೀಮಾರಿಕಾಂಬಾ ದೇವಿಯಜಾತ್ರೆ ಕರ‍್ನಾಟಕಲ್ಲಿಯೇ ಅತಿ ಪ್ರಸಿದ್ದವಾದ ಜಾತ್ರೆಗಳಲ್ಲಿ ಒಂದು. ಮಾರಿಕಾಂಬಾದೇವಿಯ ಜಾತ್ರೆ ಈಗಿನಂತೆ ನಿಯಮಿತ ಅವದಿಗೆ ಸರಿಯಾಗಿ ಅಂದರೆ ಪ್ರತಿ ಎರಡು ವರುಶಗಳಿಗೊಮ್ಮೆ ಜಾತ್ರೆ ನಡಿಯತ್ತೆ. ಮಾರಿಜಾತ್ರೆಗೆಂದೇ ಮೀಸಲಾಗಿಟ್ಟ ಊರಮದ್ಯದ ಬೀಡಕಿ ಬೈಲಿನಲ್ಲಿ ಜಾತ್ರೆ ವೈಬವಯುತವಾಗಿ ನಡೆಯುತ್ತದೆ. ಜಾತ್ರೆ ಇನ್ನೂ ಎಂಟು ದಿನ ಇದೆ ಎನ್ನುವಾಗಲೇ ಶಿರಸಿಗೆ ಜನ ಬಂದು ಸೇರಲು ಆರಂಬವಾಗಿ ಬಿಡುತ್ತದೆ. ಒಂದು ವಾರಗಳ ಕಾಲ ನಡೆಯುವ ಈ ಇತಿಹಾಸ ಪ್ರಸಿದ್ದವಾದ ಉತ್ಸವದಲ್ಲಿ ಊರೊಂದೇ ಅಲ್ಲ ದೂರದೂರದ ಊರುಗಳಿಂದ, ನೆರೆ ರಾಜ್ಯಗಳಿಂದ ಲಕ್ಶಾಂತರ ಬಕ್ತರು, ಪ್ರವಾಸಿಗರು ಆಗಮಿಸಿ, ಶ್ರೀದೇವಿಯ ದರ‍್ಶನ ಪಡೆದು ಹರಕೆಗಳನ್ನು ಒಪ್ಪಿಸಿ, ಸುಬೀಕ್ಶೆ, ಸುಕ, ಸಂತೋಶ, ಸೌಬಾಗ್ಯ ನೀಡುವಂತೆ ಪ್ರಾರ‍್ತಿಸುವ ದ್ರಶ್ಯವನ್ನು ಬಣ್ಣಿಸಲಾಗದು.

ಕಂದಾಯ ಇಲಾಕೆ, ನಗರಸಬೆ, ಪೊಲೀಸ್ ಇಲಾಕೆ, ಆರೋಗ್ಯ ಇಲಾಕೆಗಳೇ ಮೊದಲಾದ ಸರಕಾರೀ ಇಲಾಕೆಗಳ ಪೂರ‍್ಣ ಸಹಕಾರ ಪಡೆದು ಶಾಂತಿಯುತವಾಗಿ, ಬಕ್ತಜನರಿಗೆ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಶ್ರೀ ದೇವಸ್ತಾನದ ಬಾಬದಾರರು ಹಾಗು ಸಹಾಯಕರು, ಊರ ನಾಗರಿಕರ ಸಹಕಾರದೊಂದಿಗೆ, ಸ್ವಯಂ ಸೇವಾ ಸಂಸ್ತೆಗಳ ನೆರವಿನಲ್ಲಿ, ಸ್ವಯಂ ಸೇವಕರ ಪೂರ‍್ತಿ ಸಹಕಾರದಲ್ಲಿ ಜಾತ್ರೆ ಅವಿಸ್ಮರಣೀಯವಾಗಿ ಜರುಗತ್ತದೆ. ವಿವಿದ ಬಗೆಯ ವ್ಯಾಪಾರಿ ಮಳಿಗೆಗಳು, ಮನರಂಜನೆಗಳು, ನಾಟಕ ಯಕ್ಶಗಾನಗಳೇ ಮೊದಲಾದ ಕಲಾಪ್ರಕಾರಗಳು ಜಾತ್ರೆಯಲ್ಲಿ ಬಾಗವಹಿಸಿ ಜಾತ್ರೆಯ ಸೊಬಗನ್ನು ಇಮ್ಮಡಿಸುತ್ತವೆ.

ಜಾತ್ರೆಯು ಪ್ರಾರಂಬವಾದ ಮೇಲೆ ಮೊದಲ ಮೂರು ಮಂಗಳವಾರ ಹಾಗೂ ನಡುವಿನ ಎರಡು ಶುಕ್ರವಾರಗಳಂದು ಐದು ಹೊರಬೀಡುಗಳು ನಡೆಯುತ್ತವೆ. ಹೊರಬೀಡುಗಳೆಂದರೆ ರಾತ್ರಿಗಡಿ ಗದ್ದುಗೆಗಳ ಬಳಿಗೆ ಹೋಗಿ ದೇವಿಯನ್ನು ಪೂಜಿಸಿ ತಿರುಗಿ ದೇವಸ್ತಾನಕ್ಕೆ ಬರುವುದು. ಜಾತ್ರೆಯ ನಿಯಮದಂತೆ ಹೊರಬೀಡುಗಳು ತುಂಬ ವಿಜ್ರಂಬಣೆಯಿಂದಲೇ ನಡೆಯುತ್ತವೆ. ಮೂರು ಮಂಗಳವಾರಗಳ ಹೊರಬೀಡಿನಲ್ಲಿಯೂ ಉತ್ಸವ ಮೂರ‍್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿಕೊಂಡು, ಮೆರವಣಿಗೆ ಪೂರ‍್ವ ದಿಕ್ಕಿನ ಗದ್ದಿಗೆಯ ಕಡೆಗೆ ಹೋಗುತ್ತದೆ. ಶುಕ್ರವಾರಗಳಂದು ಪಡಲಿಗೆಯೊಂದಿಗೆ ಮೆರವಣಿಗೆ ಉತ್ತರ ದಿಕ್ಕಿನ ಗಡಿಯ ನಿಶ್ಚಿತ ಗದ್ದಿಗೆಗೆ ಹೋಗುತ್ತದೆ ಹಾಗೂ ಅಲ್ಲೇ ದೇವತೆಗಳಿಗೆ ಉಡಿ ಸಮರ‍್ಪಣೆಯಾದ ನಂತರ ಮಾರಿಕಾಂಬಾ ದೇವಸ್ತಾನದಿಂದ ಮರ‍್ಕಿ-ದುರ‍್ಗಿದೇವಸ್ತಾನಕ್ಕೆ ಹೋಗುವವು.

ಐದನೇ ಹೊರಬೀಡು ಅಂದರೆ ಅಂಕೆಯ ಹೊರಬೀಡು. ಅಂದರೆ ಪಟ್ಟದಕೋಣನಿಗೆ ಕಂಕಣಕಟ್ಟುವ ಕಾರ‍್ಯಕ್ರಮ. ಹೊರಬೀಡಿನ ಮರುದಿವಸ, ಬುದವಾರ ಮಾರಿಕೋಣದ ಮೆರವಣಿಗೆ ಮರ‍್ಕಿ-ದುರ‍್ಗಿ ದೇವಸ್ತಾನಕ್ಕೆ ಹೋಗಿ ಪೂಜೆಯ ನಂತರ ಜಾತ್ರೆಯ ಗದ್ದಿಗೆಗೆ ತೆರಳಿ ನಿಲ್ಲುವುದು. ಅಲ್ಲಿ ಅಸಾದಿಯರು ಮತ್ತು ಮೇತ್ರಿಯವರು ರಂಗಮಂಟಪದ ವಿದಿ ವಿದಾನಗಳನ್ನು ಪೂರೈಸುವರು. ಇಲ್ಲಿ ಅಸಾದಿಯವರೇ ಕಂಕಣದೀಕ್ಶೆ ತೊಡುತ್ತಾರೆ. ಆ ದಿವಸ ಶ್ರೀದೇವಿಯ ಉತ್ಸವ ಮೂರ‍್ತಿಯಿದ್ದ ಪಲ್ಲಕ್ಕಿಯು ಜಾತ್ರೆ ಗದ್ದಿಗೆಯ ಮೇಲೆ ಕುಳಿತ ನಂತರ ಮೆರವಣಿಗೆಯಲ್ಲಿ ಹೋಗಿ ಮೇಟಿ ಬಾಬದಾರರಿಗೆ ಆಮಂತ್ರಣ ನೀಡಲಾಗುವುದು. ಆನಂತರ ಮೇಟಿಯವರು ಗಡಿಗೆ ಹಾಗೂ ಹಣತೆಯೊಂದಿಗೆ ಮೆರವಣಿಗೆಯಲ್ಲಿ ಜಾತ್ರೆಯ ಗದ್ದುಗೆಗೆ ಬಂದ ನಂತರ ನಾಡಿಗ ಮನೆತನದವರು ದೇವಿಗೆ ಮಂಗಳಾರತಿ ಮಾಡುತ್ತಾರೆ. ನಾಡಿಗ ಮನೆತನದವರು ದೇವಿಯ ತಂದೆಯ ಪರಂಪರೆಯವರೆಂದು ನಂಬಿಕೆಯಿದೆ. ನಾಡಿಗರು ಮಾಡಿದ ಮಂಗಳಾರತಿಯಿಂದ ಮೇಟಿ ದೀಪವನ್ನು ಹಚ್ಚುತ್ತಾರೆ. ಆ ದೀಪ ಜಾತ್ರೆ ಮುಗಿಯುವವರೆಗೂ ಆರದಂತೆ ಕಾಯ್ದುಕೊಳ್ಳಬೇಕಾದುದು ಮೇಟಿಯವರ ಕೆಲಸ.

 

ಶ್ರೀ ಮಾರಿಕಾಂಬಾದೇವಿ

ಶ್ರೀ ಮಾರಿಕಾಂಬಾದೇವಿ

ನಾಡಿನಾದ್ಯಂತ ಮನೆ ಮಾತಾಗಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಮಂಗಳವಾರ ಪ್ರಾರಂಬವಾಗುವುದು. ಅಂದು ಬೆಳಗ್ಗೆ ಕಲಶವನ್ನು ಪೂಜಿಸಿ ಅದನ್ನು ರತದ ಗೂಡಿನ ಮೇಲೆ ಸ್ತಾಪಿಸಲಾಗುವುದು. ಬೇಡರ ಜೋಗತಿಯರು ಆ ಸಂದರ‍್ಬದಲ್ಲಿ ಹಾಜರಿದ್ದು ಚವರಿ ಬೀಸುವರು. ರತವನ್ನು ತಳಿರು ತೋರಣಗಳಿಂದ ಸಿಂಗರಿಸಿ ಸರ‍್ವಾಲಂಕ್ರತಗೊಳಿಸುವರು. ಸಾಯಂಕಾಲ ಶ್ರೀಮಾರಿಕಾಂಬಾ ದೇವಿಯನ್ನು ಹಾಗೂ ಮರ‍್ಕಿ-ದುರ‍್ಗಿದೇವಿಯರನ್ನು ದೇವಸ್ತಾನದ ಸಬಾಮಂಟಪದ ಗದ್ದಿಗೆಯಲ್ಲಿ ಕೂಡಿಸುವರು. ಮಾರಿಕಾಂಬೆಗೆ ಮತ್ತು ಮರ‍್ಕಿ-ದುರ‍್ಗಿಯರಿಗೆ ಹೊಸ ಸೀರೆ ಉಡಿಸಿ ಬಂಗಾರದ ಆಬರಣಗಳನ್ನು ತೊಡಿಸಿ ಅಲಂಕರಿಸಿ ದ್ರುಶ್ಟಿಯಿಡುವರು. ಈ ವೇಳೆಯಲ್ಲಿ ಒಂದು ಬಲಿ ಸಮರ‍್ಪಿಸಲಾಗುವುದು. ಬಲಿಯೆಂದರೆ ಈಗ ಸಾತ್ವಿಕ ಬಲಿಗಳು ಮಾತ್ರ. ಜಾತ್ರೆ ಮುಗಿಯುವತನಕ ಇಂತಹ ಅನೇಕ ಬಲಿ ಸಮರ‍್ಪಣೆಯ ವಿದಿಗಳಿರುವುವಾದರೂ ಅವೆಲ್ಲವೂ ಸಾತ್ವಿಕ ಬಲಿಗಳೇ ಆಗಿವೆ. ಕರಿ ಕುಂಬಳಕಾಯಿ ಕಡಿದು ಬಲಿಯನ್ನು ಸಾಂಕೇತಿಕವಾಗಿ ಸಮರ‍್ಪಿಸುವರು. ರಕ್ತದ ಬಲಿ ದಾನಗಳು ಹಿಂದೆ ನಡಿತಾ ಇತ್ತಂತೆ. ಈಗ ರಕ್ತದ ಬಲಿ ಸಂಪೂರ‍್ಣವಾಗಿ ನಿಂತಿದೆ. ದೇವರಿಗಾಗಿ ಮಾಡಿದ ಮಂಗಳಸೂತ್ರವನ್ನು ಆ ರಾತ್ರಿ ಬಾಬದಾರರ ಮನೆಯಿಂದ ಮೆರವಣಿಗೆಯಲ್ಲಿ ತಂದು ನಂತರ ಮೊದಲ ಪ್ರತಿಶ್ಟೆಯ ಪೂಜೆಗಾಗಿ ನಾಡಿಗರಿಗೆ ಆಮಂತ್ರಣ ಕೊಡುವರು. ಅಂದು ಲಗ್ನ. ನಾಡಿಗರ ಮನೆಯಲ್ಲಿ ಅಂದು ಲಗ್ನದ ಸಿಹಿಯೂಟ ನಡೆಸುವ ಕ್ರಮವಿದೆ. ನಾಡಿಗರಿಂದ ಮೊದಲ ಪೂಜೆ ನಡೆದ ಮೇಲೆ ಮುಂದೆ ಎರಡು, ಮೂರು ಹಾಗೂ ನಾಲ್ಕನೆಯ ಪೂಜೆಗಳು ಕ್ರಮವಾಗಿ ಕುಂಬಾರ, ಕೇದಾರಿ ಹಾಗೂ ಎರಡೂ ಮನೆತನಗಳ ಪೂಜಾರಿಗಳಿಂದ ನಡೆಯುವುದು.

ಮನಮೋಹಕವಾದ ಶ್ರೀ ಮಾರಿಕಾಂಬಾದೇವಿಯ ಬವ್ಯ ವಿಗ್ರಹವನ್ನು ರತದ ಮೇಲೆ ಕೂಡಿಸಿ, ಬಲಿ ಸಮರ‍್ಪಣೆ ಮಾಡಿ, ರತದ ಗಾಲಿಗಳಿಗೆ ಪ್ರತಿಶ್ಟಿತರು ಹಾಗೂ ಬಾಬುದಾರರು ಕಾಯಿ ಒಡೆಯುತ್ತಾರೆ. ಆಮೇಲೆ ರತವನ್ನೆಳೆಯಲು ಪ್ರಾರಂಬಿಸುವರು. ಅದೊಂದು ಅಮ್ರುತ ಗಳಿಗೆ. ಬುದವಾರ ಬೆಳಗಿನ ಮಂಗಳಮಯ ವಾತಾವರಣದಲ್ಲಿ ಶುಬ ಮುಹೂರ‍್ತದಲ್ಲಿ ರತದ ಮೇಲೆ ಸುಪ್ರತಿಶ್ಟಳಾದ ಅಂಬೆ ಮಾರಿಕಾಂಬೆ ನೋಡಲು ಬಲು ಚಂದ. ಲಕ್ಶಾಂತರ ಜನರ ನಡುವೆ ಸಕಲ ವಾದ್ಯಮೇಳ, ಹಾಡು ಕುಣಿತಗಳ ವಿಶೇಶದೊಂದಿಗೆ ಗಂಬೀರವಾಗಿ ಬೀದಿಯಲ್ಲಿ ಸಾಗಿಬರುವ ದೇವಿಯ ರತವನ್ನು ನೋಡಲು ಕಂಗಳೆರಡೂ ಸಾಲದು. ಅದನ್ನು ವೀಕ್ಶಿಸುವುದೇ ಒಂದು ಮಹಾಬಾಗ್ಯ. ಶ್ರೀ ಮಾರಿಕಾಂಬಾದೇವಿಯನ್ನು ರತದ ಮೇಲಿಂದ ಇಳಿಸಿ ಜಾತ್ರೆಯ ಗದ್ದಿಗೆಯ ಮೇಲೆ ಕೂಡಿಸಲಾಗುತ್ತದೆ. ಜಾತ್ರೆ ಪ್ರಾರಂಬವಾಗಿ ಎಂಟು ದಿನಗಳ ಕಾಲ ಜಾತ್ರೆಯ ಗದ್ದಿಗೆಯಲ್ಲಿ ಕುಳಿತು ಬಕ್ತರಿಗೆ ದರ‍್ಶನ ನೀಡಿದ ಮಹಾತಾಯಿ ಮಾರೆಮ್ಮನ ಜಾತ್ರೆ ಅದೇ ಮರು ಬುದವಾರ ಮುಕ್ತಾಯಗೊಳ್ಳುತ್ತದೆ. ವಿವಿದ ಬಗೆಯ ವ್ಯಾಪಾರಿ ಮಳಿಗೆಗಳು, ಮನರಂಜನೆಗಳು, ನಾಟಕ, ಯಕ್ಶಗಾನಗಳು, ನಾನಾ ರೀತಿಯ ಮನರಂಜಿಸುವ ಆಟಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ದಿನಾಲೂ ಹೊರ ಊರುಗಳಿಂದ ಲಕ್ಶ ಲಕ್ಶಾಂತರ ಜನರು ಬಂದು ಜಾತ್ರೆಯ ಸಂಬ್ರಮದಲ್ಲಿ ತೊಡಗಿ ಆನಂದಿಸುತ್ತಾರೆ. ಎಂದಿನಂತೆ ಈ ವರ‍್ಶ (2016) ಜಾತ್ರೆ ನಡೆಯತ್ತೆ. ಇದೇ ಬರುವ ಮುಂದಿನ ತಿಂಗಳು ಮಾರ‍್ಚ 22 ರಿಂದ 29 ರವರೆಗೆ.

(ಚಿತ್ರ ಸೆಲೆ:  sirsimarikamba.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: