ಇನ್ನಾದರೂ ಶಿಕ್ಶಕರ ಹೊರೆ ಕಡಿಮೆಯಾಗಲಿ

– ಅಮುಬಾವಜೀವಿ.

ಕಲಿಸುಗ, ಶಿಕ್ಶಕ, Teacher, responsibilities, ಹೊಣೆಗಾರಿಕೆ

( ಬರಹಗಾರರ ಮಾತು: ಶಿಕ್ಶಕರ ದಿನಾಚರಣೆಯ ಸಂದರ‍್ಬದಲ್ಲಿ ಶಿಕ್ಶಕನಾಗಿ ನನ್ನ ಅನುಬವವನ್ನು, ಕೆಲ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ  )

ಶಿಕ್ಶಕ ವ್ರುತ್ತಿ ಅತ್ಯಂತ ಪವಿತ್ರವಾದದ್ದು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಶಕ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ಔಪಚಾರಿಕ ಶಿಕ್ಶಣ ಹಾಗೂ ಮಗುವಿನ ನಡುವಿನ ಕೊಂಡಿಯಾಗಿ ಶಿಕ್ಶಕ ಕಾರ‍್ಯನಿರ‍್ವಹಿಸುತ್ತಾನೆ. ಶಾಲೆ ದೇವಾಲಯವಾದರೆ ಬಕ್ತನಾಗಿ ಬರುವ ವಿದ್ಯಾರ‍್ತಿಗೆ ಶಿಕ್ಶಕ ಪೂಜಾರಿಯಂತೆ ಇರುತ್ತಾನೆ. ಶಿಕ್ಶಕ ಸಚ್ಚಾರಿತ್ರ್ಯ ಉಳ್ಳವನಾಗಿ, ಪ್ರಾಮಾಣಿಕ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಅವೆಲ್ಲವನ್ನೂ ತನ್ನ ವಿದ್ಯಾರ‍್ತಿಗಳಿಗೆ ವರ‍್ಗಾಯಿಸುವ ಗುರುತರ ಜವಾಬ್ದಾರಿಯನ್ನು ಹೊಂದಿದವನಾಗಿರುತ್ತಾನೆ.

ಶಾಲೆಯ ಅಬ್ಯುದಯ ಹಾಗೂ ವಿದ್ಯಾರ‍್ತಿಯ ಬವಿಶ್ಯ ಒಳ್ಳೆಯ ಶಿಕ್ಶಕನಿಂದ ಮಾತ್ರ ಸಾದ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಶಿಕ್ಶಕ ದಾಕಲೆಗಳ ನಿರ‍್ವಣೆಯ ಕಾರಕೂನನಾಗಿ ಬದಲಾಗಿ ಹೋಗಿದ್ದಾನೆ. ಸರ‍್ಕಾರ ಹಾಗೂ ಇಲಾಕೆಯ ಅನ್ಯ ಕಾರ‍್ಯಗಳ ಹೊರೆ ಹಾಗೂ ದಾಕಲೆಗಳನ್ನು ನಿಗದಿತ ಸಮಯದಲ್ಲಿ ಕೊಡುವ ಕಾರ‍್ಯದಲ್ಲಿ ಹೈರಾಣಾಗಿ ಹೋಗಿದ್ದಾನೆ. ಪ್ರತಿನಿತ್ಯ ಹೊಸ ಹೊಸ ಯೋಜನೆ, ಅದಕ್ಕೆ ಬೇಕಾದ ನಿರ‍್ವಹಣೆಯನ್ನು ಮಾಡುವ ಅನಿವಾರ‍್ಯ ಇಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿದ್ದಾನೆ . ಚುನಾವಣಾ ಕರ‍್ತವ್ಯ ಹಾಗೂ ಗಣತಿಯಂತಹ ಕಾರ‍್ಯಗಳು ಶಿಕ್ಶಕನಿಂದಲ್ಲದೆ ಬೇರೆಯವರಿಂದ ನಿಕರವಾಗಿ ನೀಡುವುದು ಅಸಾದ್ಯವೆಂಬ ಮಾತು ಕೇಳಿಬರುತ್ತಿದೆ. ಶಿಕ್ಶಕ ಇಂದು ಶಿಕ್ಶಕನಾಗಿ ಉಳಿದಿಲ್ಲ, ಇಲಾಕೆ ಕೇಳುವ ಎಲ್ಲಾ ದಾಕಲೆಗಳನ್ನು ನಿರ‍್ವಹಿಸಿ ಅವುಗಳನ್ನು ಸೂಕ್ತ ಸಮಯದಲ್ಲಿ ಇಲಾಕೆಗೆ ಕಳುಹಿಸುವ ವಾಹಕನಾಗಿದ್ದಾನೆ.

ಇಂದು ಶಿಕ್ಶಕ ಕಾಣೆಯಾಗಿ ಹೋಗಿದ್ದಾನೆ. ಬದಲಾಗಿ ಅವನು ಮಕ್ಕಳನ್ನು ಶಾಲೆಗೆ ದಾಕಲು ಮಾಡಿಕೊಳ್ಳಬೇಕು, ನಂತರ ಅವರ ದಾಕಲೆಗಳನ್ನು ಸವಿವರವಾಗಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ಅದಾದ ಮೇಲೆ ಮಕ್ಕಳ ವಿದ್ಯಾರ‍್ತಿ ವೇತನಕ್ಕಾಗಿ ಅಗತ್ಯ ದಾಕಲೆಗಳನ್ನು ಪೋಶಕರಿಂದ ಪಡೆದು ಮತ್ತೆ ಆನ್ಲೈನ್ನಲ್ಲಿ ಅರ‍್ಜಿ ಸಲ್ಲಿಸಿ, ಅದರ ಅಡಕಮುದ್ರಿಕೆ ಮಾಡಿಸಿ ಸಂಬಂದಪಟ್ಟ ಇಲಾಕೆಗೆ ನೀಡಬೇಕು. ಈ ಮದ್ಯೆ ನೆಟ್ವರ‍್ಕ್ ಸಮಸ್ಯೆಯಿಂದಾಗಿ ಹಗಲು ರಾತ್ರಿಯೆನ್ನದೆ ಸೈಬರ್ ಕೆಪೆಗಳ ಎದುರು ಕಾದು ಕುಳಿತು, ಈ ಕೆಲಸವನ್ನು ಮಾಡಿ ಮುಗಿಸುವ ಅನಿವಾರ‍್ಯತೆ ಶಿಕ್ಶಕರದ್ದು. ಹಿಂದೆ ಶಿಕ್ಶಕ ಶಾಲೆಗೆ ಬರುವ ಮುಂಚೆ ಅಂದಿನ ಪಾಟ ತಯಾರಿ ಮಾಡಿಕೊಂಡು ಬರಬೇಕಾಗಿತ್ತು. ಆದರೆ ಇಂದು ಶಿಕ್ಶಕ ಶಾಲೆಗೆ ಬರುವಾಗ ಬಿಸಿಯೂಟಕ್ಕೆ ತರಕಾರಿ, ಹಾಲಿಗೆ ಸಕ್ಕರೆ ತೆಗೆದುಕೊಂಡು, ಅಂದಿನ ದಿನ ಇಲಾಕೆಗೆ ನೀಡಬೇಕಾದ ದಾಕಲೆ ಪತ್ರಗಳನ್ನು ಸಂಗ್ರಹಿಸಿಕೊಂಡು ಬರಬೇಕಾಗಿದೆ. ಅಲ್ಲದೆ ಅಡುಗೆ ಮಾಡಲು ಗ್ಯಾಸ್ ಬಂದಿದೆಯೋ ಇಲ್ಲವೋ ಪರಿಶೀಲಿಸಿ, ಬರದಿದ್ದರೆ ಗ್ಯಾಸ್ ವಿತರಕರಿಗೆ ಪೋನಾಯಿಸಿ, ಇಲ್ಲವೇ ತಾನೇ ಕುದ್ದು ಹೋಗಿ ತಂದು ಕೊಡಬೇಕಿದೆ. ಇಶ್ಟೆಲ್ಲದರ ನಡುವೆ ತರಗತಿಯಲ್ಲಿ ತನ್ನನ್ನು ನಂಬಿದ ವಿದ್ಯಾರ‍್ತಿಗಳಿದ್ದಾರೆ, ಅವರಿಗೆ ಪಾಟ ಬೋದನೆ ಮಾಡಬೇಕೆಂಬ ಮುಕ್ಯ ಹೊಣೆಗಾರಿಕೆ ಅವನ ಮನಸ್ಸಿನಲ್ಲಿ ಕುಟುಕುತ್ತಿರುತ್ತದೆ. ಇನ್ನೇನು ಪಾಟ ಮಾಡಲು ಪ್ರಾರಂಬಿಸಬೇಕು ಎನ್ನುವಶ್ಟರಲ್ಲಿ ಇಲಾಕೆಯವರಿಂದ ಕರೆ ಬರುತ್ತದೆ. ತುರ‍್ತಾಗಿ ಯಾವುದೋ ಮಾಹಿತಿ ಬೇಕು ಎಂದಾಗ ಪಾಟ ಬೋದನೆಯನ್ನು ಮುಂದುವರಿಸಲಾಗದೆ ದಾಕಲೆ ಕೊಡುವತ್ತ ದಾವಿಸಬೇಕಾಗುತ್ತದೆ. ಈ ಮದ್ಯೆ ಪೋಶಕರಿಂದ ದೂರು ಬರುತ್ತದೆ “ನಮ್ಮ ಮಕ್ಕಳಿಗೆ ಓದಲು ಬರೆಯಲು ಬರುತ್ತಿಲ್ಲ, ನೀವೇನು ಮಾಡುತ್ತಿದ್ದೀರಿ?” ಎಂದು ಕೆಲವರಾದರೆ ಮತ್ತೆ ಕೆಲವರು “ನನ್ನ ಮಗ/ಮಗಳಿಗೆ ವಿದ್ಯಾರ‍್ತಿ ವೇತನ ಬಿಡುಗಡೆಯಾಗಿಲ್ಲ, ಎಲ್ಲಾ ದಾಕಲೆಗಳನ್ನು ಕೊಟ್ಟಿದ್ದರೂ ನೀವು ಸರಿಯಾಗಿ ನಿರ‍್ವಹಿಸಿಲ್ಲ. ಹಾಗಾಗಿ ನಮ್ಮ ಮಕ್ಕಳಿಗೆ ಬರಬೇಕಾದ ಹಣವನ್ನು ನೀವು ಕೊಡಿ. ಇಲ್ಲ ಸಂಬಂದಪಟ್ಟವರ ಬಳಿ ಹೋಗಿ ಹಣ ಕಾತೆಗೆ ಜಮಾ ಮಾಡಿಸಿ. ಇಲ್ಲವೆಂದರೆ ಮೇಲಾದಿಕಾರಿಗಳಿಗೆ, ಮಾದ್ಯಮದವರಿಗೆ ಹೇಳಬೇಕಾಗುತ್ತದೆ” ಎಂಬ ಮಾತುಗಳಿಂದ ಅಕ್ಶರಶಹ ನಲುಗಿ ಹೋಗುತ್ತಾನೆ. ಅಶ್ಟರೊಳಗೆ ಇಲಾಕೆಯ ಅದಿಕಾರಿಗಳು ಬಂದು ಬಿಸಿಯೂಟ ನಡೀತಿದೆ, ತರಕಾರಿ ಸಾಕಶ್ಟು ಹಾಕುತ್ತಿಲ್ಲ, ರೇಶನ್ ಎಶ್ಟಿದೆ? ಉಳಿದರೆ ಏಕೆ ಉಳಿಯಿತು, ಕಾಲಿಯಾದರೆ ಏಕೆ ಕಾಲಿ ಆಯಿತು ಎಂಬ ತನಿಕೆ ಮಾಡುತ್ತಾರೆ, ಅದರ ಜೊತೆಗೆ ಸಿ.ಆರ್.ಪಿ. ಬಂದು, “ದಾಕಲಾತಿ ಕೊಡಿ, ಪ್ರತಿಬಾ ಕಾರಂಜಿ ಕಲೋತ್ಸವ ಕ್ರೀಡಾಕೂಟಗಳಿಗೆ ಮಕ್ಕಳನ್ನು ತಯಾರು ಮಾಡಿ, ಪಟ್ಯಪುಸ್ತಕ ಸಮವಸ್ತ್ರದ ಮಾಹಿತಿ ಕೊಡಿ, ಎಸ್.ಡಿ.ಎಂ.ಸಿ. ಯವರಿಂದ ಅನುಮೋದನೆ ಪಡೆದುಕೊಳ್ಳಿ, ಸಂಬಂದಪಟ್ಟ ಹಣಕಾಸಿಗೆ ಚೆಕ್ ವಿತರಣೆ ಮಾಡಿ” ಎನ್ನುತ್ತಾ ಸಲಹೆಗಳ ಜೊತೆಗೆ ಶೈಕ್ಶಣಿಕವಾಗಿ ಮಕ್ಕಳ ಅಬಿವ್ರುದ್ದಿಗೆ ಶ್ರಮವಹಿಸುವಂತೆ ಮಾರ‍್ಗದರ‍್ಶನ ನೀಡಿ ಹೋಗುತ್ತಾರೆ.

ಶಿಕ್ಶಕ ಇಶ್ಟೆಲ್ಲ ಕೆಲಸಗಳನ್ನು ಮಾಡುತ್ತಾ ಬೋದನೆಗೆ ಸಮಯಾವಕಾಶವಾಗದೆ ಮಕ್ಕಳ ಕಲಿಕೆ ಕುಂಟಿತವಾಗಿ ಪೋಶಕರು ಕಾಸಗಿ ಶಾಲೆಗಳತ್ತ ಮುಕ ಮಾಡಿದಾಗ ಇನ್ನೊಂದು ಸಮಸ್ಯೆ ಎದುರಾಗುತ್ತದೆ. ಮಕ್ಕಳ ದಾಕಲಾತಿ ಕಡಿಮೆ ಇರುವುದರಿಂದ ‘ಹೆಚ್ಚುವರಿ’ ಎಂಬ ಅಸ್ತ್ರ ಪ್ರಯೋಗಿಸಿ ಮತ್ತೆಲ್ಲಿಗೋ ವರ್ಗಮಾಡಿ ಬಿಸಾಕುವರೆಂಬ ಆತಂಕ ಅವನನ್ನು ನಲುಗಿಸಿಬಿಡುತ್ತದೆ. ಇಂತಹ ಪರಿಸ್ತಿತಿಯಲ್ಲಿ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿ, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಹೊಣೆಗಾರಿಕೆಯನ್ನು ಹೊರಬೇಕು. ಇಶ್ಟೆಲ್ಲದರ ನಡುವೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು, ಅಂಗವಿಕಲ ಮಕ್ಕಳಿಗೆ ಸರ‍್ಕಾರದ ಸೌಲಬ್ಯಗಳನ್ನು ಕೊಡಿಸಬೇಕು, ಅದಕ್ಕಾಗಿ ಆಸ್ಪತ್ರೆ ಕಚೇರಿಗಳನ್ನು ಅಲೆಯಬೇಕಾದ ಕಾರ‍್ಯದೊತ್ತಡದಲ್ಲಿ ಸಿಲುಕಿದ್ದಾನೆ. ಆಗಾಗ ಚುನಾವಣೆಗಳು ಎದುರಾಗುತ್ತಿರುವುದರಿಂದ ಮತಪಟ್ಟಿ ಪರಿಶ್ಕರಣೆ ಮಾಡಬೇಕು. ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಬಿಡುವುದು ಹೀಗೆ ಸಂಬಂದಪಟ್ಟ ಕಾರ‍್ಯ ಮಾಡುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಮತದಾರರಿಂದ ಮತ್ತು ಪ್ರಬಾವಿಗಳಿಂದ ದೌರ‍್ಜನ್ಯಕ್ಕೊಳಗಾಗಬೇಕಾಗುತ್ತದೆ.

ಹಿಂದೆ ಶಿಕ್ಶಕರ ಕೆಲಸ ಕೇವಲ ಪಾಟ ಬೋದನೆಗಶ್ಟೇ ಸೀಮಿತವಾಗಿತ್ತು. ಆದರೆ ಇಂದು ಪಾಟ ಬೋದನೆ ಒಂದನ್ನು ಬಿಟ್ಟು ಉಳಿದೆಲ್ಲ ಕೆಲಸಗಳಿಗೆ ನಿಯೋಜನೆಗೊಂಡಿದ್ದಾನೆ. ಪ್ರತಿಹಂತದಲ್ಲೂ ಶಿಕ್ಶಕರನ್ನೇ ನೇರ ಹೊಣೆ ಮಾಡಲಾಗುತ್ತಿದೆ. ಶಿಕ್ಶಣ ಇಲಾಕೆಯ ತಳಮಟ್ಟದಲ್ಲಿರುವ ಶಿಕ್ಶಕ ತನ್ನ ಮೇಲಾದಿಕಾರಿಗಳಿಗೂ, ಇತರೆ ಇಲಾಕೆಯ ಅದಿಕಾರಿಗಳಿಗೂ, ಚುನಾಯಿತ ಪ್ರತಿನಿದಿಗಳಿಗೂ, ಪೋಶಕರಿಗೂ ಉತ್ತರಿಸಬೇಕಾದ ಉಪದ್ರವಕ್ಕೆ ತುತ್ತಾಗಿದ್ದಾನೆ ಮಕ್ಕಳಿಗೆ ಹಾಲು ಕುಡಿಸಬೇಕು, ಊಟ ಮಾಡಿಸಬೇಕು, ಅವರಿಗೆ ಯೂನಿಪಾರ‍್ಮ್ ತರಬೇಕು, ಶೂ-ಸಾಕ್ಸ್ ತಂದುಕೊಡಬೇಕು, ಈ ಹಂತದಲ್ಲಿ ಅಳತೆಯಲ್ಲಿ ವ್ಯತ್ಯಾಸವಾದರೆ ಪೋಶಕರಿಂದ ಇಲ್ಲಸಲ್ಲದ ಮಾತುಗಳನ್ನು ಕೇಳಬೇಕಾಗಿದೆ. ಇದರ ಜೊತೆಗೆ ಶಾಲಾ ಕಟ್ಟಡದ ನಿರ‍್ಮಾಣ, ಸುಣ್ಣ-ಬಣ್ಣ ಮಾಡಿಸಬೇಕು, ಎಸ್.ಡಿ.ಎಂ.ಸಿ. ರಚಿಸಬೇಕು, ವಿಪತ್ತು ನಿರ‍್ವಹಣಾ ತಂಡ ರಚಿಸಬೇಕು, ಮೀನಾ ತಂಡ , ಸ್ಕೌಟ್ಸ್ ಗೈಡ್ಸ್ ತರಬೇತಿ ನೀಡಬೇಕು. ಇಲಾಕೆ ನೀಡುವ ತರಬೇತಿಗಳಗೆ ಹಾಜರಾಗಬೇಕು, ಕಾಲಕಾಲಕ್ಕೆ ಪರೀಕ್ಶೆ ಅಂಕಗಳನ್ನು ದಾಕಲಿಸಿ, ಅದನ್ನು ಆನ್ಲೈನ್ನಲ್ಲಿ ಎಂಟ್ರಿ ಮಾಡಬೇಕು.

ಇದಿಶ್ಟು ಶಿಕ್ಶಕನ ಕಾರ‍್ಯ ಚಟುವಟಿಕೆಯಾದರೆ ಅವನಿಗೂ ಒಂದು ವೈಯಕ್ತಿಕ ಬದುಕಿದೆ. ತನ್ನ ಸಂಸಾರ ಮಕ್ಕಳ ಓದು ಬರಹ ಮನೆಪಾಟ, ನನ್ನ ವೈಯಕ್ತಿಕ ಸಮಸ್ಯೆಗಳಿಗೆ ಗಮನ ಕೊಡಲಾಗಿದೆ ತೊಳಲಾಡುತ್ತಿದ್ದಾನೆ. ಮನೆ ಬಾಡಿಗೆ ಕಟ್ಟಬೇಕು. ಮನೆಗೆ ದಿನಸಿ ತರಬೇಕು, ಹಬ್ಬ-ಹರಿದಿನಗಳಿಗೆ ಮಡದಿ ಮಕ್ಕಳಿಗೆ ಬಟ್ಟೆ ತರಬೇಕು, ಬಂದು-ಬಾಂದವರನ್ನು ಸಲಹಬೇಕು. ಇಶ್ಟೆಲ್ಲವನ್ನು ಅವನು ತನ್ನ ಸಂಬಳದಲ್ಲಿಯೇ ನಿಬಾಯಿಸಬೇಕು. ತಿಂಗಳ ಸಂಬಳ ಆದರಂತೆ ಅವನ ಪರಿಸ್ತಿತಿ ಹೇಳತೀರದು. ಆ ಸಮಯದಲ್ಲಿ ಅವನ ಒದ್ದಾಟ ಯಾವ ಶತ್ರುವಿಗೂ ಬೇಡವೆನಿಸುತ್ತದೆ. ಮನೆ ಮತ್ತು ಶಾಲೆ ಎರಡಕ್ಕೂ ಕೈಯಿಂದ ಕರ‍್ಚು ಮಾಡಿ ತಿಂಗಳಾಗುವುದರೊಳಗೆ ಬರೀ ಕೈಯಲ್ಲಿ ಸಂಬಳಕ್ಕಾಗಿ ಚಾತಕ ಪಕ್ಶಿಯಂತೆ ಕಾದು ಕುಳಿತಿರುತ್ತಾನೆ. ಇನ್ನೂ ಅವನು ತನ್ನ ಕುಟುಂಬಕ್ಕೆ ಸಮಯ ಕೊಡುವ ಮಾತು ದೂರವೇ ಉಳಿಯಿತು.

“ಗುರು ಬ್ರಹ್ಮ ಗುರು ವಿಶ್ಣು ಗುರು ದೇವೋ ಮಹೇಶ್ವರಹ ಗುರುಸಾಕ್ಶಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಹ” ಎಂಬ ಮಾತು ಶಿಕ್ಶಕನ ಶ್ರೇಶ್ಟತೆಯನ್ನು ಹೇಳಿದರೆ, ಇಂದಿನ ಪರಿಸ್ತಿತಿ ಅವನನ್ನು ಆ ಶ್ರೇಶ್ಟತೆಯಿಂದ ನಿಕ್ರುಶ್ಟತೆಯಡೆಗೆ ಕೊಂಡೊಯ್ದಿದೆ. ಇಂದಿನ ಶಿಕ್ಶಕ ಸಮಸ್ಯೆಗಳ ಚಕ್ರವ್ಯೂಹದಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿದ್ದಾನೆ. ಸಮುದಾಯ ಮತ್ತು ಇಲಾಕೆಯ ನಡುವೆ ಕೊಂಡಿಯಾಗಿರುವ ಬದಲು ಅವುಗಳ ಒತ್ತಡಕ್ಕೆ ಸಿಲುಕಿ ನಲುಗಿ ಹೋಗುತ್ತಿದ್ದಾನೆ. ಶಿಕ್ಶಕ ಕೇವಲ ಬೋದನೆಗಶ್ಟೇ ಸೀಮಿತವಾಗಿದ್ದರೆ ಇಂದು ಸರ‍್ಕಾರಿ ಶಾಲೆಯ ಮಕ್ಕಳು ನೂರಕ್ಕೆ ನೂರು ಅಂಕಗಳಿಸಿ ಎಲ್ಲ ರಂಗಗಳಲ್ಲೂ ಅದ್ವಿತೀಯ ಸಾದನೆಗಳನ್ನು ಮಾಡುತ್ತಿದ್ದರು. ಹಾಗಾಗದೆ ಕೇವಲ ಕೆಲವು ಮಕ್ಕಳು ವಿದ್ಯಾವಂತರಾಗಿ ಉಳಿದವರೆಲ್ಲ ಹಿಂದುಳಿದಿರುವುದು ಶಿಕ್ಶಣ ಎಂತಹ ದುಸ್ತಿತಿಗೆ ತಲುಪುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಇದೆಲ್ಲದಕ್ಕೂ ಶಿಕ್ಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತಿರುವುದು ಕೂಡ ಶಿಕ್ಶಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಮುಂದಾದರೂ ಶಿಕ್ಶಕರಿಗೆ ಅನ್ಯ ಕಾರ‍್ಯದ ಹೊಣೆಯನ್ನು ಕಡಿಮೆ ಮಾಡಿ ಅವನಿಗೆ ಮಕ್ಕಳ ಬಳಿ ಹೋಗಿ ಬೋದನೆ ಕಲಿಕಾ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಒತ್ತಡ ರಹಿತವಾದ ಕೆಲಸದಲ್ಲಿ ಅವನು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಆ ಮೂಲಕ ವಿದ್ಯಾರ‍್ತಿಗಳ ಬವಿಶ್ಯವನ್ನು ಕಟ್ಟುವ ಗುರುತರ ಜವಾಬ್ದಾರಿಯನ್ನು ನಿಬಾಯಿಸುವಲ್ಲಿ ಯಶಸ್ವಿಯಾಗುತ್ತಾನೆ. ಅದರಿಂದ ಸಮಾಜದಲ್ಲಿ ಅವನು ಕಳೆದುಕೊಂಡಿರುವ ಗನತೆಯನ್ನು ಮತ್ತೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮನ್ನು ಆಳುವವರು, ಅದಿಕಾರಿಗಳು , ಶಿಕ್ಶಣ ತಜ್ನರು, ಸಮುದಾಯ ಎಲ್ಲವೂ ಶಿಕ್ಶಕನ ವ್ರುತ್ತಿಯ ಹೊರೆಯನ್ನು ಕಡಿಮೆ ಮಾಡಲು ಮಾರ‍್ಗೋಪಾಯಗಳನ್ನು ಕಂಡುಕೊಂಡು ಶಿಕ್ಶಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಶಕರೊಂದಿಗೆ ಕೈಜೋಡಿಸಬೇಕು. ಹಾಗಾದಾಗ ಮಾತ್ರ ಶಿಕ್ಶಕರ ವ್ರುತ್ತಿ ತನ್ನ ಪಾವಿತ್ರತೆಯನ್ನು ಉಳಿಸಿ ಕೊಂಡು ಸದ್ರುಡ ಸಮಾಜ ಕಟ್ಟಲು ಸಹಾಯಕವಾಗುತ್ತದೆ.

(ಚಿತ್ರ ಸೆಲೆ: scoopwhoop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks