ಕವಿತೆ : ನಾನು ದಾರಿ

ದ್ವಾರನಕುಂಟೆ ಪಿ. ಚಿತ್ತನಾಯಕ.

ದಾರಿ, path

ಮರಬಿದ್ದಂತೆ ಮೂಲೆ ಮೂಲೆಗೂ
ಕೈ ಕಾಲು ಚಾಚಿ ಬಿದ್ದ ದಾರಿ ನಾನು
ನನ್ನ ಮೈತುಂಬ ಹರಿದಾಡುವ ನೆತ್ತರು
ಹೆಪ್ಪುಗಟ್ಟಿದೆ ಅಲ್ಲಲ್ಲಿ ರೋಸಿ ಕುಂತು

ಕಾಲಿಗೆ ಜೋಡಿಲ್ಲದೆ ಬಣಬಣದ
ಅರಳು ಮರಳಿನ ಬೆನ್ನೇರಿ
ನಡೆದು ನಡೆದು ಸಾಯುವವರಿಗೆ
ನಾನು ಮಡಿಲಾದೆನೆ ವಿನಹ
ಸಾಂತ್ವನದ ಮಾತಾಡಲಿಲ್ಲ

ಮತ ಕೇಳುವವರ ಕಾಲ್ನಡಿಗೆಯ
ಬೂಟಾಟಗಳ ಕಂಡಿದ್ದೇನೆ
ಬಿರಿಯುವಂತೆ ತಿಂದು
ತೂಗಾಡಿ ಮಲಗಿದವರ ಕಂಡಿದ್ದೇನೆ
ತನ್ನ ತವರೂರಿಗೆ ಹಸಿವಿನ ಅಸ್ತಿಪಂಜರದಲ್ಲಿ
ನಡೆವವರನ್ನು ಕಂಡು ಕೊರಗಿದೆನು ಇಂದು

ತಲೆ ತುಂಬ ಬಾಳಿನ ಗಂಟುಗಳು
ಕಂಕುಳಲ್ಲಿ ಜೀವನಕೆ ಕಣ್ಣು ಬಿಡದ ಕಂದಮ್ಮಗಳು
ಎಂದೂ ಸಾಯುವುದಿಲ್ಲ ಈ ದಿನದ
ಹಾದಿಯಲಿ ಬರೆದ ಜೀವನದ ಕವಿತೆ
ರಾಚುವ ಕಂಗಳಲ್ಲಿ ಎದುರು ನೋಡುತ್ತಿವೆ
ನನ್ನ ಎದೆಯ ಮೇಲೆ ಕುಳಿತು

ನಾನು ದಾರಿ, ದಾರಿ ಹೋಕನ ಗುರಿ
ಆಗಾಗ ಬಿರಿಯುತ್ತೇನೆ ಇಂತವರ ನೋವುಗಳ
ನನ್ನ ಮಡಿಲಿಗೆ ತುಂಬಿಕೊಂಡು
ಹೆಗಲಿಡಿದು ನಡೆಸುತ್ತೇನೆ ಬಡಬಗ್ಗರ ಕೈಹಿಡಿದು
ನನ್ನ ಮಾತುಗಳೆಲ್ಲ ಕವಿತೆಯಾಗುತ್ತವೆ
ಸಾಯುವುದಿಲ್ಲ, ಮುಂದೊಂದು ದಿನ ನೆನಪಿಸಿ
ಪ್ರಶ್ನಿಸುತ್ತವೆ

( ಚಿತ್ರಸೆಲೆ : medium.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: