‘ಪ್ರಕ್ರುತಿ ಮಾನವನ ಆಸೆಗಳನ್ನು ಪೂರೈಸಬಹುದು, ದುರಾಸೆಗಳನ್ನಲ್ಲ’

– ಶಿವಮೂರ‍್ತಿ. ಹೆಚ್. ದಾವಣಗೆರೆ.

nature-damage

ಜಗದ ಜೀವರಾಶಿಗಳ ಪೊರೆಯುವ ಶಕ್ತಿಯಿರುವುದು ಪ್ರಕ್ರುತಿಗೆ ಮಾತ್ರ. ಪ್ರತಿಯೊಂದು ಜೀವಿಯ ಸ್ರುಶ್ಟಿಯ ಮೂಲವೇ ಪಂಚಬೂತಗಳು. ಈ ಪಂಚಬೂತಗಳ ಪ್ರತಿರೂಪವೇ ಪ್ರಕ್ರುತಿಯು. ಜಗತ್ತಿನ ಜೀವರಾಶಿಗಳಲ್ಲಿಯೇ ಬುದ್ದಿವಂತ ಜೀವಿಯಾದ ಮಾನವನು ತಾನು ಬದುಕಿ ಬಾಳಲು ಪ್ರಕ್ರುತಿಯಲ್ಲಿ ದೊರೆಯುವ ಗಾಳಿ, ನೀರು, ಮಣ್ಣು, ಕನಿಜಗಳು, ಗಿಡ ಮರಗಳು, ಪ್ರಾಣಿಪಕ್ಶಿಗಳು, ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ.

ಮಹಾತ್ಮ ಗಾಂದೀಜಿಯವರು ಹೇಳುವಂತೆ “ಪ್ರಕ್ರುತಿಯು ಮಾನವನ ಆಸೆಗಳನ್ನು ಪೂರೈಸಬಹುದೇ ವಿನಹ ಅವನ ದುರಾಸೆಗಳನ್ನಲ್ಲ”. ಈ ತತ್ವವನ್ನು ಅರಿಯದ ಬುದ್ದಿವಂತ ಮಾನವನು ಅನಾಗರಿಕತನದಿಂದ ವರ‍್ತಿಸುತ್ತ, ಪ್ರಕ್ರುತಿಯ ಸಿರಿ ಸಂಪತ್ತನ್ನು ಲೂಟಿ ಮಾಡಿ ವಿಕ್ರುತಿಗೊಳಿಸಿ, ದುರಂತಗಳಿಗೆ ಎಡೆಮಾಡಿಕೊಟ್ಟಿದ್ದಾನೆ. ಹೆಚ್ಚುತ್ತಿರುವ ಜನಸಂಕ್ಯೆ ಮತ್ತು ವಿವೇಕರಹಿತವಾದ ನೈಸರ‍್ಗಿಕ ಸಂಪನ್ಮೂಲಗಳ ಬಳಕೆಯಿಂದ ಪ್ರಕ್ರುತಿಯ ಮೇಲೆ ಒತ್ತಡವನ್ನು ಹೆಚ್ಚಿಸಿ, ಬೂಕಂಪ, ಜ್ವಾಲಾಮುಕಿ, ಸುನಾಮಿ, ಕಾಡ್ಗಿಚ್ಚು, ಚಂಡಮಾರುತ, ಸಾಂಕ್ರಾಮಿಕ ರೋಗಗಳಿಗೆ ಬಲಿಪಶುವಾಗಿದ್ದಾನೆ.

ಇಂತಹ ಜ್ವಲಂತ ಸಮಸ್ಯೆಗಳಿಂದ ಪಾರಾಗಲು, ಜನರಲ್ಲಿ ಜಾಗ್ರುತಿ ಮೂಡಿಸಲು, ಪ್ರತಿ ವರ‍್ಶ ಜೂನ್ 05 ರಂದು ವಿಶ್ವ ಪರಿಸರ ದಿನಾಚರಣೆ, ಜುಲೈ 28 ರಂದು ವಿಶ್ವ ಪ್ರಕ್ರುತಿ ಸಂರಕ್ಶಣಾ ದಿನಗಳನ್ನು ಆಚರಿಸಲಾಗುತ್ತದೆ. ಆದರೆ ಈ ಆಚರಣೆಗಳು ಆಚರಣೆಗಳಾಗಿ ಉಳಿಯದೇ ಕಾರ‍್ಯಗತವಾಗಬೇಕು.

ಸಕಲ ಜೀವರಾಶಿಗಳ ಪೊರೆಯುವ ಪ್ರಕ್ರುತಿಯನು ವಿಕ್ರುತಿಯಾಗದಂತೆ ನಾವು ನೋಡಿಕೊಳ್ಳಬೇಕಾದರೆ ಆರ್(R)-ಪಂಚಸೂತ್ರ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ಅವುಗಳೆಂದರೆ

1. REFUSE (ನಿರಾಕರಣೆ) – ಪರಿಸರಕ್ಕೆ ಹಾನಿಕಾರಕವಾದ ಅನಗತ್ಯ ವಸ್ತುಗಳ ಬಳಕೆಯನ್ನು ನಿರಾಕರಿಸುವುದು.

2. REDUCE (ಮಿತಬಳಕೆ) – ನೈಸರ‍್ಗಿಕ ಸಂಪನ್ಮೂಲಗಳ ಮಿತಬಳಕೆ ಮಾಡುವುದು.

3. REUSE (ಮರುಬಳಕೆ) – ಬಳಸಿದ ವಸ್ತುಗಳನ್ನೇ ಮತ್ತೆ ಮತ್ತೆ ಬಳಸುವುದು.

4. REPURPOSE (ಬದಲಿ ಉದ್ದೇಶ‌) – ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾದ್ಯವಾಗದೇ ಇದ್ದಾಗ, ಅದರ ಬದಲಾಗಿ ಬೇರೆಯ ಉದ್ದೇಶಕ್ಕೆ ಬಳಸುವುದು.

5. RECYCLE (ಮರುಸಂಸ್ಕರಣೆ) – ಸಂಪನ್ಮೂಲಗಳ ತ್ಯಾಜ್ಯವನ್ನು ಮರುಸಂಸ್ಕರಣೆ ಮಾಡಿ ಬಳಸುವುದು.

ಈ ಐದು ಸೂತ್ರಗಳ ಮೂಲಕ ನಾವು ಪ್ರಕ್ರುತಿಯನ್ನು ರಕ್ಶಿಸಬಹುದು. ಇದರ ಜೊತೆಗೆ ಅರಣ್ಯ ನಾಶ ಮಾಡದೇ, ನೆಲ-ಜಲ-ಗಾಳಿಯ ಮಲಿನಗೊಳಿಸದೇ, ಕೈಗಾರೀಕರಣ, ನಗರೀಕರಣ, ಆದುನೀಕರಣಗಳ ಬರಾಟೆಯಲ್ಲಿ ಯಾಂತ್ರಿಕ ಜೀವನಕ್ಕೆ ಮಾರುಹೋಗಿ, ವಿಲಾಸಿ ಜಾಹೀರಾತುಗಳಿಗೆ ಮರುಳಾಗದೇ ಪ್ರಕ್ರುತಿಯ ರಕ್ಶಣೆಯ ಮಾಡಿದಾಗ ಮಾತ್ರ, ನಮ್ಮ ಮುಂದಿನ ಪೀಳಿಗೆಯು ನೆಮ್ಮದಿಯ ಜೀವನವನ್ನು ಕಾಣಬಹುದು.

(ಚಿತ್ರ ಸೆಲೆ: wallpapers-fenix.eu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: