ಕೋಲ ಶಾಂತಯ್ಯ ವಚನದ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಕೋಲ ಶಾಂತಯ್ಯ
ಕಸುಬು: ಕಟ್ಟಿಗೆ ಇಲ್ಲವೇ ಕೋಲನ್ನು ಹಿಡಿದು ಕಾಯಕವನ್ನು ಮಾಡುವುದು
ದೊರೆತಿರುವ ವಚನಗಳು: 103
ವಚನಗಳ ಅಂಕಿತನಾಮ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

ಜಡೆ ಮುಡಿ ಬೋಳು
ಹೇಗಿದ್ದರೇನೊ
ನಡೆ ನುಡಿ
ಸಿದ್ಧಾಂತವಾದಡೆ ಸಾಕು
ಆತ ಪರಂಜ್ಯೋತಿ ಗುರುವಹ
ಆ ಇರವ ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

ವ್ಯಕ್ತಿಯು ಜಗತ್ತಿನಲ್ಲಿರುವ ಯಾವುದೇ ಜಾತಿ, ಮತ, ದೇವರ ಬಗೆಗಿನ ಸಂಪ್ರದಾಯದ ಆಚರಣೆಯಲ್ಲಿ ತೊಡಗಿದ್ದರೂ, ತನ್ನ ನಿತ್ಯ ಜೀವನದಲ್ಲಿ ಸಾಮಾಜಿಕವಾಗಿ ಒಳ್ಳೆಯ ನಡೆನುಡಿಯಿಂದ ಬಾಳುವುದು ಎಲ್ಲಕ್ಕಿಂತ ದೊಡ್ಡದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನ ಮತ್ತು ಅವನ ಕುಟುಂಬದ ಹಿತವನ್ನು ಕಾಪಾಡುವಂತೆಯೇ ಸಹಮಾನವರ ಮತ್ತು ಸಮಾಜದ ಹಿತವನ್ನು ಕಾಪಾಡುವುದು.

ಜಡೆ=ತಲೆಯ ಕೂದಲನ್ನು ಹೆಣೆದು ಕಟ್ಟಿ ಬೆನ್ನಿನ ಮೇಲೆ ಉದ್ದಕ್ಕೆ ಬಿಡುವುದು; ಮುಡಿ=ತಲೆಯ ಕೂದಲನ್ನು ಗಂಟುಹಾಕಿ ತಲೆಯ ಮೇಲೆ ಉದ್ದಕ್ಕೆ ಎತ್ತಿಕಟ್ಟುವುದು; ಬೋಳು=ತಲೆಯ ಕೂದಲನ್ನು ತೆಗೆಸಿ, ಬೋಳುಮಂಡೆಯನ್ನು ಬಿಡುವುದು; ಹೇಗೆ+ಇದ್ದರೆ+ಏನೋ; ಹೇಗೆ=ಯಾವ ಬಗೆಯಲ್ಲಿ/ಯಾವ ರೀತಿಯಲ್ಲಿ;

ಜಡೆ ಮುಡಿ ಬೋಳು ಹೇಗಿದ್ದರೇನೋ=ಜನರು ತಾವು ಎಲ್ಲಾ ಬಗೆಯ ಕಾಮನೆಗಳನ್ನು/ಬಯಕೆಗಳನ್ನು/ಆಸೆಗಳನ್ನು ತೊರೆದವರು ಎಂಬುದರ ಸಂಕೇತವಾಗಿ ಬಹುಬಗೆಯ ಆಚರಣೆಗಳಲ್ಲಿ ತೊಡಗಿ, ಅದಕ್ಕೆ ತಕ್ಕಂತೆ ಉಡುಗೆ ತೊಡುಗೆಗಳನ್ನು ತೊಡುತ್ತಾರೆ. ಕೆಲವರು ತಲೆಗೂದಲನ್ನು ಹೆಣೆದು ಉದ್ದನೆಯ ಜಡೆಯನ್ನಾಗಿ ಬಿಟ್ಟಿರುತ್ತಾರೆ; ಮತ್ತೆ ಕೆಲವರು ತಲೆಗೂದಲನ್ನು ಗಂಟುಹಾಕಿ, ತಲೆಯ ಮೇಲೆ ಉದ್ದಕ್ಕೆ ಎತ್ತಿಕಟ್ಟಿರುತ್ತಾರೆ; ಇನ್ನು ಕೆಲವರು ತಲೆಗೂದಲನ್ನು ತೆಗೆಸಿ, ಮಂಡೆಬೋಳಾಗಿರುತ್ತಾರೆ. ಈ ರೀತಿ ತಲೆಗೂದಲನ್ನು ಗಂಟುಕಟ್ಟುವ ಇಲ್ಲವೇ ತಲೆಗೂದಲನ್ನು ತೆಗೆಸುವ ರೀತಿಯು ಸಂಪ್ರದಾಯದ ಆಚರಣೆಯೇ ಹೊರತು, ಇದಕ್ಕೂ ವ್ಯಕ್ತಿಯ ಒಳ್ಳೆಯ ನಡೆನುಡಿಗೂ ಯಾವುದೇ ನಂಟಿಲ್ಲ;

ನಡೆ=ಮಾಡುವ ಕೆಲಸ; ನುಡಿ=ಆಡುವ ಮಾತು; ಸಿದ್ಧಾಂತ+ಆದಡೆ; ಸಿದ್ಧಾಂತ=ತತ್ವ/ಗಟ್ಟಿಯಾದ ನಿಲುವು; ಆದಡೆ=ಆದರೆ/ಆಗಿದ್ದರೆ;

ನಡೆ ನುಡಿ ಸಿದ್ಧಾಂತವಾದಡೆ ಸಾಕು=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ತನ್ನ ಮತ್ತು ತನ್ನ ಕುಟುಂಬದ ಒಲವು, ನಲಿವು, ನೆಮ್ಮದಿಗಾಗಿ ಬಾಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳಬೇಕು ಎಂಬ ಗಟ್ಟಿಯಾದ ನಿಲುವನ್ನು ತಳೆದು, ಅದರಂತೆಯೇ ಬಾಳುತ್ತಿದ್ದರೆ, ಅದು ಬಹು ದೊಡ್ಡದು . ಮಾನವ ಸಮುದಾಯದ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಜನರ ಒಳ್ಳೆಯ ನಡೆನುಡಿಗಳೇ ಹೊರತು, ಸಂಪ್ರದಾಯದ ಆಚರಣೆಗಳಲ್ಲವೆಂಬ ವಾಸ್ತವವನ್ನು ಈ ನುಡಿಗಳು ಸೂಚಿಸುತ್ತಿವೆ;

ಆತ=ಅವನು; ಪರಂಜ್ಯೋತಿ=ದಿವ್ಯವಾದ ತೇಜಸ್ಸು/ಕಾಂತಿ/ಬೆಳಕು; ಗುರು+ಅಹ; ಗುರು=ತನ್ನ ಬಳಿ ವಿದ್ಯೆಯನ್ನು ಕಲಿಯಲು ಬಂದವರ ವ್ಯಕ್ತಿತ್ವವನ್ನು ಒಳ್ಳೆಯ ನಡೆನುಡಿಗಳಿಂದ ರೂಪಿಸುವವನು; ಅಹ=ಆಗುವನು;

ಆತ ಪರಂಜ್ಯೋತಿ ಗುರುವಹ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಯಾವ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಜಗತ್ತಿನಲ್ಲಿರುವ ಎಲ್ಲರಿಗೂ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯವನ್ನು ನೀಡುವುದಕ್ಕೆ ನೆರವಾಗುತ್ತದೆಯೋ, ಅಂತಹ ವ್ಯಕ್ತಿಯ ನಡೆನುಡಿಗಳೇ ಲೋಕಕ್ಕೆ ಒಳಿತಿನ ದಾರಿದೀಪವಾಗುತ್ತವೆ;

ಇರವು=ರೀತಿ/ಬಗೆ; ನೀನ್+ಅರಿ; ಅರಿ=ತಿಳಿ;

ಆ ಇರವ ನಿನ್ನ ನೀನರಿ=ಆ ರೀತಿಯ ಸತ್ಯವನ್ನು ನೀನು ತಿಳಿ. ಅಂದರೆ ಬಹಿರಂಗದ ಉಡುಗೆ ತೊಡುಗೆ ಮತ್ತು ಸಂಪ್ರದಾಯದ ಆಚರಣೆಗಳನ್ನು ಕಂಡು ಯಾವುದೇ ವ್ಯಕ್ತಿಯನ್ನು ಒಳ್ಳೆಯವನೆಂದು ತಿಳಿಯಬೇಡ. ಜೀವನದಲ್ಲಿ ಜಾತಿ ಮತ ದೇವರ ಸಂಪ್ರದಾಯದ ಆಚರಣೆಗಳನ್ನು ಪಾಲಿಸುವುದು ದೊಡ್ಡದಲ್ಲ, ಒಳ್ಳೆಯ ನಡೆನುಡಿಗಳಿಂದ ಬಾಳುವುದು ದೊಡ್ಡದು ಎಂಬ ದಿಟವನ್ನು ಮನಗಂಡು, ಅದರಂತೆ ನಿನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊ;

ಭೀಮೇಶ್ವರಲಿಂಗ=ಶಿವನ ಮತ್ತೊಂದು ಹೆಸರು;

ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ=ಕೋಲಶಾಂತಯ್ಯನ ವಚನಗಳ ಅಂಕಿತನಾಮ;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: