ಕುಮಾರವ್ಯಾಸ ಬಾರತ ಓದು – ಆದಿಪರ‍್ವ – ದ್ರೋಣನಿಗೆ ದ್ರುಪದನಿಂದ ಅಪಮಾನ – ನೋಟ – 14

– ಸಿ. ಪಿ. ನಾಗರಾಜ.

ದ್ರೋಣನಿಗೆ ದ್ರುಪದನಿಂದ ಅಪಮಾನ

(ಆದಿಪರ್ವ: ಸಂಧಿ: 6 ಪದ್ಯ: 24 ರಿಂದ 36)

ಪಾತ್ರಗಳು:

ಪರಶುರಾಮ: ಜಮದಗ್ನಿ ರಿಸಿ ಮತ್ತು ರೇಣುಕಾ ದೇವಿಯ ಮಗ.

ದ್ರೋಣ: ಭರದ್ವಾಜ ರಿಸಿಯ ಮಗ. ದ್ರೋಣನಿಗೆ ಅಶ್ವತ್ಥಾಮ ಎಂಬ ಹೆಸರಿನ ಮಗನಿದ್ದಾನೆ.

ದ್ರುಪದ: ಪಾಂಚಾಲ ದೇಶದ ಅರಸ. ಛತ್ರಾವತಿ ಪಟ್ಟಣದಲ್ಲಿ ನೆಲೆಸಿದ್ದಾನೆ.

 

*** ದ್ರೋಣನಿಗೆ ದ್ರುಪದನಿಂದ ಅಪಮಾನ ***

ಈ ದ್ರೋಣ ದ್ರುಪದರು ನೃಪವೃಂದ ಸಹಿತ ತಂದೆಯೊಳ್ ಶ್ರಮ ಮಾಡಿದರು. ಆ ದ್ರುಪದಾಖ್ಯನ ಅಯ್ಯನು ದಿವಿಜ ನಗರಿಯಲಿ ನಿಂದನು. ಅಂದು ದ್ರುಪದ ಸಖ್ಯಪ್ರೀತಿಯನು ಸಾನಂದದಲಿ ದ್ರೋಣಂಗೆ ವಿರಚಿಸಿ ಬಂದು, ನಿಜ ರಾಜ್ಯಾಭಿಷೇಕವ ಧರಿಸಿದನು.

ಇತ್ತಲು ಕೆಲವು ದಿವಸಕೆ ಈ ದ್ರೋಣನ ಪಿತನು ಸುರರತ್ತ ಸರಿದನು. ದ್ರೋಣ ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ. ಹೊತ್ತ ದಾರಿದ್ರ್ಯದಲಿ ಮನಮರುಗುತ್ತ ತನ್ನ ಮಗ ಸಹಿತ ಅಡವಿಯಲಿ ದೇಶಾಂತರದೊಳಗೆ ತೊಳಲುತ್ತ ಬಂದನು. ಪರುಶುರಾಮ ಆಶ್ರಮಕೆ ಮುನಿಯು ಐತರಲು, ಜಾಮದಗ್ನ್ಯನು ಭಾರದ್ವಾಜನನು ಸತ್ಕರಿಸಿ ಮಧುರ ವಚನದಲಿ ನುಡಿದನು.

ಪರಶುರಾಮ: ದ್ವಿಜರಿಗೆ ಧರೆಯನು ಇತ್ತೆನು.. ಈ ಅವಸರದೊಳು ಆನ್ ನಿರ್ಧನನು.. ನೀನೇ ಪರಮ

ಋಷಿ.. ನಾನು ಆತಿಥ್ಯ ಪೂಜೆಗೆ ಅಭಾಗ್ಯ.. ಧನರಹಿತ.. ನಾ ಹೊತ್ತ ಭಾರಿಯ ಧನುವಿದು 

ಒಂದಿದೆ.. ದಿವ್ಯ ಶರವಿದೆ.. ನೀನು ಮನಕೆ ಬಂದುದ ವರಿಸು.

(ಎನೆ ದ್ರೋಣ ನಸುನಗುತ…)

ದ್ರೋಣ: ಎನಗೆ ನಿಮ್ಮಡಿಗಳ ಕೃಪಾಲೋಕನವಲೇ ಪರಿಯಾಪ್ತಿ.. ಲೋಕದ ಜನ ಮನೋರಂಜನವೆ

ಬೇಹುದು.. ಶರವ ಕೊಡಿ.

ಪರಶುರಾಮ: ಇವು ಮಹಾ ನಿಸ್ಸೀಮತರ ವೈಷ್ಣವವಲೇ…

(ಅವರು ದಿವ್ಯಾಸ್ತ್ರ ನಿವಹವನು ಕೊಟ್ಟರು.. ದ್ರೋಣ ಉಚಿತ ವಿಧಾನದಲಿ ಕೊಂಡನು.)

ದ್ರೋಣ: ಇವು ಮಹಾ ರಣರಂಗದಲಿ ಶಾತ್ರವ ನಿವಾರಣವೈಸಲೆ.. ಎಮ್ಮ ಈ ವ್ಯವಹೃತಿಗೆ ತಾನೇನು

ಉಪಾಯ.

(ಎನುತ್ತ ಚಿಂತಿಸಿದ. ತನ್ನ ಮಗ ಅಶ್ವತ್ಥಾಮನೊಡನೆ ಈ ರೀತಿ ನುಡಿಯುತ್ತಾನೆ.)

ದ್ರೋಣ: ಮಗನೆ ಬಲ್ಲೈ.. ದ್ರುಪದ ಭೂಪತಿ ಮಗುವುತನದಿಂದ ಎಮ್ಮ ಸಖನು.. ನಾವು

ಓಲಗಿಸುವೆವು… ಅಲ್ಲಿ ಮಿತ್ರ ಭಾವದಲಿ ಸಲಹನೆ.. ಪಾಂಚಾಲರಾಯನ ನಗರಿಯನು ನಾವು

ಹೊಗುವ ನಡೆ.

(ಎಂದು ಮುನಿ ಮೌಳಿಗಳ ಮಣಿಯನು ರೇಣುಕಾ ಸುತನ ಬೀಳುಕೊಂಡನು. ಈತನು

ದ್ರುಪದ ರಾಯನ ಮಂದಿರಕೆ ಬಂದನು. ಆ ಬಾಗಿಲವನೊಡನೆ ಎಂದನು.)

ದ್ರೋಣ: ಎಲವೋ, ನಾವು ನಿಮ್ಮ ಅರಸಂಗೆ ಪೂರ್ವದಲಿ ಸಂದ ಮಿತ್ರರು.. ದ್ರೋಣ 

ಮುನಿಪತಿಯೆಂದು ನಮ್ಮ ಅಭಿಧಾನ.. ನೀ ಹೇಳು.

(ಎಂದು ಕಳುಹಲು.. ಬಂದು ಹದನ ಬಿನ್ನಹ ಮಾಡಿದನು.. ಸಿರಿಯ ಮದ.. ಅಧಿಕ

ಪ್ರತಾಪೋತ್ಕರದ ಮದ ಮೊದಲಾದ ಮದ ಸಂಚರಣ ರಜದಲಿ.. ಈತನ ಮನದ ಮಡಿ

ವರ್ಗ ಮಾಸಿತು.)

ದ್ರುಪದ: ತಿರಿವ ಹಾರುವರೊಡನೆ ಭೂಮೀಶ್ವರರಿಗೆ ಎತ್ತಣ ಮೈತ್ರಿ.. ಹೋಗಲಿ.. ಕರೆಯಬೇಡ.

(ಎನೆ, ಬಂದು ಬಾಗಿಲಲಿ ಅವ ನಿವಾರಿಸಿದ.)

ದ್ರೋಣ: ಮರೆದನೇ… ತಪ್ಪೇನು ನಾ ಕಂಡು ಅರುಹಿ ಮರಳುವೆವೈಸಲೆ

(ಎನುತ ಉರುಬಿದರೆ.. ಬಾಗಿಲಲಿ ಕಂಬಿಯನು ಇಕ್ಕಿ ತರುಬಿದರು.. ಒರೆಯನು

ಉಗುಳಿಚಿ ಖಡ್ಗದಲಿ ಇಕ್ಕೆಲದವರನು ಬಿಡದೆ ಅರಿದನು.. ಓಲಗಕೆ ಉರವಣಿಸಿದನು..

ದ್ರುಪದ ಭೂಪತಿಯ ಮುಂದೆ ನಿಂದನು.)

ದ್ರೋಣ: ಏನೆಲವೋ ಪಾಂಚಾಲ, ಚಿಕ್ಕಂದು ಆನು ನೀನು ಒಂದಾಗಿ ತಂದೆಯೊಳು ಏನನು 

ಅರಿದೆವು ಮರೆದು ಕಳೆದಾ.. ಹಾ ಮಹಾದೇವ.. ಏನು ಬಂದಿರಿ ಎಂಬ ಗುಣವಚನ

ಅನುರಾಗವು ಸಾಲದೇ.. ಧನವೇನು ಫಲ ಕಕ್ಕುಲಿತೆ ಎಮಗೆ ಇಲ್ಲ.

ದ್ರುಪದ: ಸೂರಿಗಳಿಗೆ ಅತಿ ಮೂರ್ಖರಿಗೆ.. ಗಂಭೀರರಿಗೆ ಭಂಡರಿಗೆ.. ವೇದಾಚಾರ ಸಂಯುಕ್ತರಿಗೆ 

ಅನಾಚಾರ ಪ್ರಸಕ್ತರಿಗೆ.. ಧೀರರಿಗೆ ಹಂದೆಗಳಿಗೆ ಎತ್ತಣ ಸೇರುವೆಗಳೈ.. ಭೂಪರಿಗೆ ಬಡ

ಹಾರುವರಿಗೆ ಎತ್ತಣದು ಸಖತನವು.

ದ್ರೋಣ: ಎಲವೋ, ನಿನ್ನ ಆಸ್ಥಾನ ಸಹಿತ ಈ ಹೊಳಲ ಸುಡುವೆನು.. ನಿನ್ನ ಸೀಳಿದು ಭೂತಗಣಕೆ 

ಬಲಿಯ ಕೊಡುವೆನು.. ನೀನು ಎನಗೆ ಇದಿರಲ್ಲ.. ಕಲಿತ ವಿದ್ಯದ ಕೋಲ ಮಕ್ಕಳ ಕಳುಹಿ

ಕಟ್ಟಿಸಿ.. ವಾಮ ಪಾದದಿ ತಲೆಯನು ಒದೆವೆನು.. ನೀನು ಮರೆಯದಿರು.

(ಎಂದನಾ ದ್ರೋಣ.. ಎಂದು ಭಾಷೆಯ ಮಾಡಿ.. ತನ್ನಯ ನಂದನನ ಒಡಗೊಂಡು

ಜನಪದ ವೃಂದ ಹಲವನು ಕಳೆದು.. ಹಸ್ತಿನಾಪುರಿಗೆ ಬಂದನು.)

ಪದ ವಿಂಗಡಣೆ ಮತ್ತು ತಿರುಳು

ನೃಪ=ರಾಜ; ವೃಂದ=ಗುಂಪು/ಸಮೂಹ; ತಂದೆ+ಒಳ್; ಶ್ರಮ=ಶಸ್ತ್ರಾಬ್ಯಾಸ/ಆಯುದಗಳನ್ನು ಪ್ರಯೋಗಿಸುವ ವಿದ್ಯೆ; ದ್ರುಪದ+ಆಖ್ಯ; ಆಖ್ಯ=ಹೆಸರು; ಅಯ್ಯ=ಅಪ್ಪ; ದ್ರುಪದಾಖ್ಯನ ಅಯ್ಯ=ರಾಜಕುಮಾರನಾದ ದ್ರುಪದನ ತಂದೆ; ದಿವಿಜ=ದೇವತೆ; ದಿವಿಜ ನಗರಿಯಲಿ ನಿಂದನು=ದೇವಲೋಕದ ನಗರವಾದ ಅಮರಾವತಿಯನ್ನು ನೆಲೆನಿಂತನು ಎಂದರೆ ಸಾವನ್ನಪ್ಪಿದನು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು; ಅಂದು=ಗುರುಕುಲದಿಂದ ದ್ರುಪದನು ಹೊರಟುಬರುವಾಗ; ಸಖ್ಯಪ್ರೀತಿ=ಗೆಳೆತನದ ಪ್ರೀತಿ; ಸಾನಂದ=ಆನಂದ/ಹಿಗ್ಗು; ವಿರಚಿಸಿ=ತೋರಿಸಿ/ವ್ಯಕ್ತಪಡಿಸಿ; ನಿಜ=ತನ್ನ; ರಾಜ್ಯ+ಅಭಿಷೇಕ; ಧರಿಸಿದನು=ಪಡೆದನು/ಹೊಂದಿದನು;

ಇತ್ತಲು=ಈ ಕಡೆ ಗುರುಕುಲದ ಆಶ್ರಮದಲ್ಲಿ; ಪಿತ=ತಂದೆ; ಸುರರ+ಅತ್ತ; ಸುರ=ದೇವತೆ; ಅತ್ತ=ಆ ಕಡೆಗೆ; ಸುರರತ್ತ ಸರಿದನು=ದೇವತೆಗಳ ಕಡೆಗೆ ಹೊರಟನು ಎಂದರೆ ಸಾವನ್ನಪ್ಪಿದನು ಎಂಬ ತಿರುಳಿನಲ್ಲಿ ಬಳಕೆಗೊಂಡಿರುವ ನುಡಿಗಟ್ಟು; ತತ್+ತಪೋವನದಲಿ; ತತ್=ಆ; ವಿಪ್ರ=ಬ್ರಾಹ್ಮಣ; ವಿಪ್ರಕ್ರಿಯೆ=ಬ್ರಾಹ್ಮಣ ಸಮುದಾಯದ ಸಂಪ್ರದಾಯದಂತೆ ವ್ಯಕ್ತಿಯು ಸತ್ತಾಗ ಮಾಡುವಂತಹ ಉತ್ತರಕ್ರಿಯೆಯ ಆಚರಣೆಗಳು;

ಹೊತ್ತ=ಹೊಂದಿದ್ದ; ಅಡವಿ=ಕಾಡು/ಅರಣ್ಯ; ದೇಶಾಂತರ=ನಾನಾ ದೇಶಗಳಲ್ಲಿ; ತೊಳಲು=ಅಲೆದಾಡು; ಜಾಮದಗ್ನ್ಯ=ಜಮದಗ್ನಿ ಎಂಬ ರಿಸಿಯ ಮಗನಾದ ಪರಶುರಾಮ; ಐತರಲು=ಆಗಮಿಸಲು; ಮಧುರ=ಒಳ್ಳೆಯ; ಮಧುರ ವಚನ=ಒಳ್ಳೆಯ ಮಾತು/ನುಡಿ; ದ್ವಿಜ=ಬ್ರಾಹ್ಮಣ; ಧರೆ=ಬೂಮಿ; ಅವಸರ=ಸಮಯ/ವೇಳೆ; ಆ/ಆನ್=ನಾನು;

ನಿರ್ಧನ=ಸಂಪತ್ತು ಇಲ್ಲದವನು/ಹಣ ಒಡವೆ ಆಸ್ತಿ ಇಲ್ಲದವನು; ಆತಿಥ್ಯ ಪೂಜೆ=ಮನೆಗೆ ಬಂದ ನೆಂಟರಿಶ್ಟರಿಗೆ ಮತ್ತು ಗುರುಹಿರಿಯರಿಗೆ ಮಾಡುವ ಉಪಚಾರ/ಸೇವೆ; ಅಭಾಗ್ಯ=ಯಾವುದೇ ಸಂಪತ್ತಿಲ್ಲದವನು/ಅನುಕೂಲವಿಲ್ಲದವನು; ಧನು=ಬಿಲ್ಲು; ದಿವ್ಯ=ಉತ್ತಮವಾದುದು; ಶರ=ಬಾಣ; ವರಿಸು=ಸ್ವೀಕರಿಸು;

ನಿಮ್ಮ+ಅಡಿಗಳ; ಅಡಿ=ಪಾದ; ಕೃಪಾ+ಅವಲೋಕನವಲೇ; ಕೃಪಾ=ದಯೆ/ಕರುಣೆ; ಅವಲೋಕನ=ನೋಟ/ದರ್ಶನ; ಪರಿಯಾಪ್ತಿ=ಸಂಪೂರ್ಣವಾದ ನೆಮ್ಮದಿ/ಸಮಾದಾನ/ತಣಿವು; ಮನೋರಂಜನ=ಮನಸ್ಸನ್ನು ಆನಂದಗೊಳಿಸುವುದು; ಬೇಹುದು=ಬೇಕಾಗಿರುವುದು/ ಅಗತ್ಯವಾಗಿರುವುದು;

ನಿಸ್ಸೀಮ=ಎಲ್ಲೆಯಿಲ್ಲದುದು/ಮಿತಿಯಿಲ್ಲಿದುದು; ನಿಸ್ಸೀಮತರ=ಅಪಾರವಾದ ಶಕ್ತಿಯುಳ್ಳದ್ದು; ವೈಷ್ಣವ=ವಿಶ್ಣುದೇವನ ಹೆಸರನ್ನು ಹೇಳಿ ಪ್ರಯೋಗಿಸುವ ಬಾಣ; ವೈಷ್ಣವವಲೇ=ವಿಶ್ಣು ಪರಮಾತ್ಮನ ಶಕ್ತಿಯನ್ನು ಒಳಗೊಂಡ ಬಾಣವಲ್ಲವೇ; ದಿವ್ಯ+ಅಸ್ತ್ರ; ನಿವಹ=ಗುಂಪು/ಸಮೂಹ; ಶಾತ್ರವ=ಹಗೆಗಳ ಗುಂಪು/ಶತ್ರುಗಳ ಸಮೂಹ; ನಿವಾರಣವೈಸಲೆ=ನಾಶಪಡಿಸುತ್ತವೆಯಲ್ಲವೇ; ವ್ಯವಹೃತಿ= ವ್ಯವಹಾರ/ ಉದ್ಯೋಗ; ಎಮ್ಮ ಈ ವ್ಯವಹೃತಿಗೆ ತಾನೇನು ಉಪಾಯ ಎನುತ್ತ ಚಿಂತಿಸಿದ=ನನ್ನ ಜೀವನವನ್ನು ನಡೆಸುವುದಕ್ಕೆ ಮುಂದಿನ ದಾರಿ ಯಾವುದು ಎಂದು ದ್ರೋಣನು ಚಿಂತಿಸತೊಡಗಿದ;

ಮಗುವುತನದಿಂದ=ಚಿಕ್ಕಂದಿನಿಂದ/ಬಾಲ್ಯ ಕಾಲದಿಂದ; ಸಖ=ಗೆಳೆಯ/ಮಿತ್ರ; ಓಲಗಿಸು=ಒಟ್ಟಿಗೆ ಸೇರು; ಸಲಹು=ಕಾಪಾಡು; ಹೊಗು=ಪ್ರವೇಶಿಸು; ಮೌಳಿ=ಕಿರೀಟ; ಮಣಿ=ರತ್ನ; ಮುನಿ ಮೌಳಿಗಳ ಮಣಿ=ಮುನಿಗಳಲ್ಲಿಯೇ ಉತ್ತಮನಾದವನು ಎಂಬ ತಿರುಳಿನಲ್ಲಿ ಬಳಕೆಯಾಗಿದೆ

ರೇಣುಕಾಸುತ=ರೇಣುಕೆಯ ಮಗನಾದ ಪರಶುರಾಮ;

ಪೂರ್ವದಲಿ=ಚಿಕ್ಕಂದಿನಲ್ಲಿ/ಬಾಲ್ಯದಲ್ಲಿ; ಅಭಿಧಾನ=ಹೆಸರು; ಹದನ=ಸುದ್ದಿ/ಸಮಾಚಾರ; ಬಿನ್ನಹ=ಅರಿಕೆ; ಸಿರಿ=ಸಂಪತ್ತು; ಮದ=ಸೊಕ್ಕು/ಗರ್‍ವ; ಪ್ರತಾಪ+ಉತ್ಕರ; ಪ್ರತಾಪ=ಶಕ್ತಿ/ಪರಾಕ್ರಮ; ಉತ್ಕರ=ರಾಶಿ/ಗುಂಪು; ಸಂಚರಣ=ಸುಳಿದಾಡುವುದು/ಆವರಿಸುವುದು/ತುಂಬಿಕೊಳ್ಳುವುದು; ರಜ=ದೂಳು/ಕಸ; ಮಡಿ=ಶುಚಿ; ಮಡಿವರ್ಗ=ಶುಚಿತನದ ಸಂಗತಿಗಳು; ಮಾಸು=ಕಳೆಗುಂದು/ಮಲಿನವಾಗು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *