ಕವಿತೆ: ಮುಕುತಿಯ ಆರ್‍ತನಾದ

– ನಿತಿನ್ ಗೌಡ.

ಕಳೆದುಕೊಳ್ಳಬೇಕಿದೆ ನನ್ನನು ನಾನು,
ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ;
ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ;

ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ,
ಅದುವೆ ನೋಡು ತೀರ್‍ತಸ್ನಾನ;
ಸಾಗಬೇಕು ಬದುಕೆಂಬ, ಪಯಣದಲಿ
ಎಲ್ಲಿಯೂ ನಿಲ್ಲದೆ, ಗುಡಿಸಲ ಕಟ್ಟದೆ..

ಆಸೆ-ಆಲೋಚನೆಗಳೆಂಬ ಮಿಂಚದು, ಕ್ಶಣಿಕ..
ಬೆಳಗಬಲ್ಲದೇನು ಅದು; ಮನದೊಳಿಗಿನ ಕತ್ತಲ;
ಸರಿಸಲು ಮನದಾಸೆಯ ಪರದೆಯ, ಗುಡುಗುವುದು
ಮುಕುತಿಯ ಆರ‌್ತನಾದ, ಕಾರ್‍ಮೋಡದಂಚಲಿ
ಸುರಿಯುವುದಾಗ ಪರಮ ಸತ್ಯದ ಮಳೆಯು
ಇಹದ ನಂಟ ತೊಳೆದು,
ಸೇರುವುದು ಆತ್ಮ ಪರಮಾತ್ಮನೆಡೆಗೆ ಸ್ವಚ್ಚಂದವಾಗಿ‌,
ಜಗವ ಬೆಳಗಲು, ಮಾಯೆಯ ಅಂದಕಾರ ಅಳಿಸುತ..

( ಚಿತ್ರಸೆಲೆ: Image generated using ChatGPT with DALL·E by OpenAI. )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *