ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 7ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 7: ದ್ರುತರಾಶ್ಟ್ರನ ಕೋರಿಕೆ ***
ತೀ.ನಂ .ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಧೃತರಾಷ್ಟ್ರ ವಚನಂ’ ಎಂಬ ಹೆಸರಿನ 4ನೆಯ ಅದ್ಯಾಯದ 1ನೆಯ ಪದ್ಯದಿಂದ 20ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.
ಪಾತ್ರಗಳು:
ಗಾಂಧಾರಿ: ದ್ರುತರಾಶ್ಟ್ರನ ಹೆಂಡತಿ. ದುರ್ಯೋದನನ ತಾಯಿ.
ಧೃತರಾಷ್ಟ್ರ: ಹಸ್ತಿನಾವತಿಯ ರಾಜನಾಗಿದ್ದವನು. ದುರ್ಯೋದನನ ತಂದೆ.
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು
*** ಧೃತರಾಷ್ಟ್ರನ ಕೋರಿಕೆ ***
ಅಂತು ಮೂರ್ಛಾಪ್ರಸಂಗನಾದ ಪನ್ನಗಪತಾಕಂಗೆ ಶಿಶಿರೋಪಚಾರ ಕ್ರಿಯೆಗಳಮ್ ಮಾಳ್ಪ ಸಂಜಯನ ಇರವಮ್ ತತ್ ಪರಿಜನಮ್ ಕಂಡು ಪೇಳೆ, ಗಾಂಧಾರಿ ಮನದೊಳ್ ಅಳ್ಕಿ ಬಳ್ಕಿ ನನೆಕೊನೆವೋಗಿ…
ಗಾಂಧಾರಿ: ಮಗನೆ… ಮೃಗಧರಕುಲ ಲಕ್ಷ್ಮೀವಲ್ಲಿಗೆ ಪೆರರಾರ್… ನೀನೆ ಮುನ್ನಡರ್ಪು ಎನಲ್ ಇರ್ದಯ್… ಲಯಕಾಲ ಭೀಮೋರಗನ್ ಉರಗಪತಾಕ ನಿನ್ನುಮನ್ ನುಂಗಿದನೇ… ಎಮಗೆ ಅಂಧಯಷ್ಟಿಯಾಗಿರ್ದೆ ಮಗನೆ… ನೀನ್ ಉಳ್ಳೊಡೆ ಎಲ್ಲಮ್ ಒಳವು ಎಂದಿರೆ… ನಿನ್ನುಮನ್ ಇರಿಸದೆ… ಕುರುವಂಶ ಅನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ… ಕುರುಕುಲತಿಲಕಾ, ಗುರುಚರಣಂಗಳ್ಗೆ ಎರಗದೆ… ಪರಕೆಯನ್ ಆದರದಿನ್ ಆಂತುಕೊಳ್ಳದೆ… ಮೋನಮ್ ಬೆರಸಿರ್ಪುದು ನಿನಗೆ ಉಚಿತಮೆ… ಕುರುನರೇಂದ್ರ, ಗುರು ವಿನಯಮನ್ ಏಕೆ ಮರೆದೆ … ಮಡಿದ ಈ ದುಶ್ಶಾಸನನ್ ಏನ್ ನುಡಿಯಿಸುವನೊ… ದುರ್ಮರ್ಷಣನ್ ಏನ್ ನುಡಿಯಿಸುವನೊ… ದುಷ್ಕರ್ಣನ್ ನುಡಿಯಿಸುವನೊ… ನೀನುಮ್ ಉಸಿರದಿರ್ಪುದೆ ಮಗನೇ…
(ಎಂದು ಗಾಂಧಾರಿ ವಿಪ್ರಲಾಪಮ್ ಗೆಯ್ಯೆ… ಧೃತರಾಷ್ಟ್ರನ್ ತನ್ನ ನಂದನನ ಕಾಲ ಮೇಲೆ ಕವಿದು ಬಿಳ್ದು…)
ಧೃತರಾಷ್ಟ್ರ: ಹಾ… ಕುರುಕುಲ ಚೂಡಾಮಣಿ… .ಹಾ… ಕುರುಕುಲ ಚಕ್ರವರ್ತಿ… .ಹಾ… ಸಕಲಧರಿತ್ರೀಕಾಂತ… ಮಾಯ್ದ ವಿಧಾತ್ರನ್ ಕಾಯ್ದು ನಿನ್ನುಮನ್ ಪರಲೋಕಕ್ಕೆ
ಅಟ್ಟಿದನೆ … .
(ಎಂದು ಕರುಣಾಕ್ರಂದನಮ್ ಗೆಯ್ದ ಗುರುಜನಂಗಳ ಸರಮಮ್ ಸಂಜಯನ್ ಮಾಣಿಸಿ… )
ಸಂಜಯ: ಕರ್ಣ ದುಶ್ಶಾಸನಾದಿಗಳ ಸಾವಿನೊಳ್ ಶೋಕೋದ್ರೇಕದಿಮ್ ಮೂರ್ಛಾಗತನಾಗಿರ್ದಪನ್… ಈಗಳೆ ಚೇತರಿಸುಗುಮ್… ಅನ್ನೆಗಮ್ ವಿಪ್ರಲಾಪಮನ್ ಉಪಸಂಹರಿಪುದು.
(ಎನೆ ಸಮಾಹಿತ ಅಂತಃಕರಣರುಮಾಗಿ… ನಿಜ ಗುರುಗಳ ನಯನಾಂಬು ತಳಿವ ಜಲಮಾಗಿರೆ… ತದ್ಗುರು ಜನದೀರ್ಘ ಉಚ್ಛ್ವಾಸಮೆ ಪರಿವೀಜನಮಾಗೆ… ಕುರುಕುಲ ಚೂಡಾಮಣಿ ಮೂರ್ಛೆಯಿಂದ ಎಳ್ಚತ್ತನ್… ಅಂತು ಮೂರ್ಛೆಯಿಂದ ಎಳ್ಚತ್ತು… ನಿಜ ಜನನೀ ಜನಕರಮ್ ಕಂಡು… ಲಜ್ಜಾಭರದಿಮ್ ಶಿರಮನ್ ಆನತಮ್ ಮಾಡೆ… ಸಂಜಯನ್ ಧೃತರಾಷ್ಟ್ರಂಗಮ್ ಗಾಂಧಾರಿಗಮ್… )
ಸಂಜಯ: ಅವಧರಿಸುವುದು, ನಿಜ ತನೂಜನಪ್ಪ ರಾಜರಾಜನ್ ನಿಮಗೆ ವಿನಯ ವಿನಮಿತ ಉತ್ತಮಾಂಗನಾದನ್
(ಎನೆ… ತದೀಯವಚನಾಮೃತ ಸ್ಪರ್ಶನದಿಂದೆ ಆನಂದಿತಚಿತ್ತರಾಗಿ… ತಡವರಿಸಿಯುಮ್… ತೆಬ್ಬರಿಸಿಯುಮ್… ತೆಗೆದಪ್ಪಿಯುಮ್… ಮನಃಕ್ಷತ ಶರೀರನಮ್ ಪರಮಾಶೀರ್ವಚನ ಶತಸಹಸ್ರಂಗಳಿಮ್ ಪರಸಿ… ಪುನಃ ಪುನರಾಲಿಂಗನಮ್ ಗೆಯ್ದು… ಕಿರಿದಾನುಮ್ ಬೇಗದಿಮ್… ವಿಗತಪರಿಜನಮ್ ಮಾಡಿ… )
ಧೃತರಾಷ್ಟ್ರ: ಯಮಸುತನ್ ಇನ್ನುಮ್ ಎಮಗೆ ಇಂಬುಕೆಯ್ವನ್… ಕಂದ , ಸಂಧಿಯಮ್ ಸಮಗೊಳಿಸಲ್ಕೆ ಒಡಂಬಡು… ಸಂಜಯನನ್ ಅಟ್ಟುವೆ… ಭೀಮನೊಳಾದ ಬದ್ಧವೈರಮನ್ ಉಳಿ… ಸುತಸಹೋದರ ದುಃಖಮಮ್ ನೋಡದಿರ್… ಅವರ್ಗೆ ಅರ್ಧರಾಜ್ಯಮನ್ ಈವುದು.
(ಎಂದು ಅಂಧನೃಪಾಲ ಪುತ್ರನನ್ ಕಾಲ್ವಿಡಿದು ಬೇಡಿದನ್ … ..ಅಂತು ಕುರು ನರೇಂದ್ರನನ್ ಅಂಧ ನರೇಂದ್ರನ್ ಅಭ್ಯರ್ಥಿಸಿ… )
ಧೃತರಾಷ್ಟ್ರ: ಶ್ರೀವನಿತೆಗೆ ನಿಜವಿಜಯ ಶ್ರೀವನಿತೆಯೆ ಸವತಿಯಾಗೆ… ರಿಪುನೃಪರಮ್ ಶೌರ್ಯಾವಷ್ಟಂಭದೆ ಗೆಲ್ದ ಸಾಹಸಭೀಮನ್ ಜಯಾವಸಥನ್ ಅಸಾಧ್ಯನಲ್ತೆ … ಅದರಿನ್ ಆತನೊಳಪ್ಪ ಸಮರಾನುಬಂಧಮಮ್ ಮಾಣ್ಬುದು… ಎನ್ನ ಎಂಬುದನ್ ಇಂಬುಕೆಯ್ವುದು.
(ಎಂದ ಧೃತರಾಷ್ಟ್ರನ ನುಡಿಯಮ್ ಗಾಂಧಾರಿ ಸಮಭ್ಯರ್ಥಿಸಿ ತಾನುಮ್ ಪ್ರಾರ್ಥಿಸಿ… )
ಗಾಂಧಾರಿ: ಮಗನೇ… ಪರಿಣತ ವಯಸರೆಮ್… ಇರ್ಕಣ್ ಕುರುಡರೆಮ್… ಎಮಗೆ ಇಂಬುಕೆಯ್ವುದು ಉಚಿತಮ್… ನಿನ್ನ ಈ ಗುರು ನುಡಿದ ನುಡಿಗೆ ಒಡಂಬಡು… ಗುರುವಚನಮ್ ಅಲಂಘನೀಯಮ್ ಎಂಬುದು… ಮಗನೆ, ಸಮರ ವ್ಯಾಪಾರಮ್ ಮಾಣ್ದು… ನಿಜಶಿಬಿರದತ್ತ ಬಿಜಯಂಗೆಯ್… ಸತ್ತ ಮಗಂದಿರ್ ಸತ್ತರ್… ಅವರನ್ ಇನ್ ತಂದಪೆವೇ… ನೀನ್ ಎಮಗೆ ಉಳ್ಳೊಡೆ ಸಾಲ್ವುದು
(ಎಂದು ಗಾಂಧಾರಿ ತನ್ನ ಮತ್ತಿನ ಮಕ್ಕಳಮ್ ನೆನೆದು ದುಃಖಂಗೆಯ್ಯೆ ಸಂಜಯನ್ ಜಡಿದು…)
ಸಂಜಯ: ಬಂದುಮ್… ಪ್ರಿಯಸುತನನ್ ಸಂತಯಿಸುವುದು… ಅದುಗೆಟ್ಟು… ನೀನೆ ಗಳ ಶೋಕಾಕ್ರಾಂತೆಯುಮಾಗಿ ಶೋಕಿಸಲ್ ಅಂಧನೃಪತಿಯನ್ ನೃಪತಿಯುಮನ್ ಸಂತಯಿಸುವರಾರ್ .
(ಎಂಬುದುಮ್ ವೃದ್ಧರಾಜನ್ ಕುರುರಾಜಂಗೆ ಅಭಿಮುಖನಾಗಿ…)
ಧೃತರಾಷ್ಟ್ರ: ವೀರಶತ ಜನನಿಗೆ ಈ ಗಾಂಧಾರಿಗೆ… ಈಗಳ್ ಕೌರವಪತಿ ದುಃಖ ಮಹಾಭಾರಮನ್ ಆಂತ ಆಯಾಸಕ್ಕೆ ಗುರಿಯಾದುದರಿಮ್… ಶತದುಃಖ ಜನನಿ ಪೆಸರಾಯ್ತು…
ಧಾತ್ರಿವಲಭಾ, ಭವತ್ ಅನುಜಕ್ಷಯಮನ್ ಧರ್ಮಜನ್ ಕಂಡು… ಶೋಕಾನಿವಹಮ್ ಸಂಧಿ ಮಾಡಲ್ ಬಗೆವನ್ … ಅವನಾ ಕೃತಕ ಪ್ರತಿಜ್ಞೆಯಮ್ ಕೇಳ್ದರಿಯಾ…
ಸಮರದೊಳ್ ಸಮವಾಯಮ್ ಅದೃಷ್ಟವಶದಿಮ್ ನಾಲ್ವರ್ ಅನುಜರೊಳ್ ಒರ್ವನ್ ಸಾಯೆ ಯಮಭರನ್ ಯಮನಂದನನ್ ಅತೀತನಪ್ಪನ್ ಅದರಿಮ್ ಆ ನೃಪಂಗಮ್ ಜಯಮೇ.
(ಎಂದು ನುಡಿದ ನರೇಂದ್ರನ ನುಡಿಗೆ ಸಂಜಯನ್ ಒಡಂಬಟ್ಟು…)
ಸಂಜಯ: ನೃಪ, ನಿನ್ನ ತಂದೆ ಎಂದುದನ್. ಉಪಪತ್ತಿಯುಕ್ತಮ್ ಇದಮ್ ಇನ್ ಕಯ್ಕೊಳ್
(ಎನೆ ಭೂಮಿಪನ್…)
ದುರ್ಯೋಧನ: ನಿಮ್ಮಯ ಪೂರ್ವಪಕ್ಷಮ್ ಎಮಗೆ ವಲಮ್ ಸಿದ್ಧಾಂತಮ್ ಆದುದೇ
(ಎಂದನ್.)
ತನ್ನ ಒಡವುಟ್ಟಿದರ್ ಪೆಸರ ನಾಲ್ವರೊಳ್ … ಒರ್ವರುಮ್ ಇಲ್ಲದಿರ್ದೊಡಮ್… ಧರ್ಮತನೂಜನ್ ಅಗ್ನಿಗೆ ತನ್ನ ಅಸುವಮ್ ನಿವೇದಿಸುವನ್ ಎಂದೊಡೆ… ಆನ್ ಎನ್ನ ಒಡವುಟ್ಟಿದರ್ ಪೆಸರ ನೂರ್ವರೊಳ್… ಒರ್ವರುಮ್ ಇಲ್ಲ… ಬಾಳ್ವೆನ್ ಎಂಬ ಎನ್ನ ಅಳಿಯಾಸೆಯಮ್ ಬಿಸುಟೆನ್. ಇನ್ ಅವರ್ ಆದುದನ್ ಆಗದಿರ್ಪೆನೇ… . ಹಾ ಕರ್ಣಾ ಸಾಧಿಸುವೆನ್ ಫಲ್ಗುಣನನ್… ಸಾಧಿಸುವೆನ್ ಪವನಸುತನ ಬಸಿರಿಮ್ ದುಶ್ಶಾಸನ ತೆಗೆವೆನ್ … ಬಳಿಕೆ ನಿರ್ದೋಷಿ ಯಮಜನೊಳ್ ಪುದುವಾಳ್ವೆನ್ … ಪಾಂಡುರಾಜನುಮ್ ನೀನುಮ್ ಧರೆಯಮ್ ಪಚ್ಚಾಳ್ದಿರ್. ಅದನೆ ಕೈತವದಿಂದೆ ಅಯ್ವರ ಕೆಯ್ಯೊಳ್ ಎಳೆದುಕೊಂಡು… ಈ ಕುರುರಾಜನ್ ಮತ್ತಮ್ ಅವರ್ಗೆ ಪುದುವಿತ್ತಪನೇ… .ಆನ್ ಮಗನೆನ್ ಆಗೆ… ಧರ್ಮಜನ್ ಏನ್ ಮಗನಲ್ಲನೆ… ಬಳಿಕ್ಕೆ ನೀಮುಮ್ ತಾಮುಮ್… ನಿಮ್ಮೊಳ್ ನೇರ್ಪಡುಗಿಡದೆ ಮುನ್ನಿನ ತೆರದೆ ಸುಖಮ್ ಬಾಳ್ವುದು… ಆನ್ ಬೆಸಕೆಯ್ವೆನ್… ..ಬಿಡಿಮ್ ಎನ್ನನ್.
(ಎಂದು ಮುಂದಿರ್ದು ಅಡಿಗೆರಗಿದ ಮಗನನ್ ಅಪ್ಪಿಕೊಂಡು… ಅಶ್ರುಜಲಮ್ ಗುಡುಗುಡನೆ ಸುರಿಯೆ… ನಾಲಗೆ ತಡತಡವರೆ… ಅಂಧನೃಪನ್ ಆ ನೃಪನನ್ ನುಡಿದನ್.)
ಧೃತರಾಷ್ಟ್ರ: ನೀನ್ ಎಂತುಮ್ ಎಮ್ಮ ಪೇಳ್ವುದಮ್ ಕೈಕೊಳ್ಳದೆ… ಛಲಮನೆ ಕಯ್ ಕೊಂಡು… ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನ್ ಒಡಂಬಡೆಯಪ್ಪಿನಮ್… ನೀನ್ ಎಮಗೆ ಇನಿತನ್ ಒಳ್ಳಿಕಯ್ಯಲ್ವೇಳ್ವುದು… ನೆಗಳ್ವ ಕಜ್ಜಮ್ ಆವುದುಮಮ್ ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು… ಅಲ್ಲಿಗೆ ಬಿಜಯಮ್ ಗೆಯ್ವುದು.
(ಎನೆ…)
ದುರ್ಯೋಧನ: ಮಹಾಪ್ರಸಾದಮ್.
(ಎಂದು ಅದನ್ ಒಡಂಬಟ್ಟು…)
ದುರ್ಯೋಧನ: ಅಂತೆ ಗೆಯ್ವೆನ್.
(ಎಂದು ಗುರುಜನಮಮ್ ಬೀಳ್ಕೊಂಡು… ಅವರಮ್ ಬೀಡಿಂಗೆ ಪೋಗಳ್ವೇಳ್ದು… ಕಿರಿದು ಪೊಲ್ತು ಶೋಕಾನುಬಂಧದೊಳ್… ಕೋಪಾನುಬಂಧಮಮ್… ಸಮರಾನುಬಂಧಮಮ್ ಅಂತರಿಸಿರ್ದು… ಸಂಜಯ ದ್ವಿತೀಯನುಮ್ ನಿಜಭುಜಗದಾಸಹಾಯನುಮ್ ಆಗಿ ಸಂಗ್ರಾಮ ಭೂಮಿಯೊಳಗನೆ ಬರುತುಮ್ ಇರ್ದನ್.)
ತಿರುಳು: ದ್ರುತರಾಶ್ಟ್ರನ ಕೋರಿಕೆ
ಪನ್ನಗ=ಹಾವು; ಪತಾಕೆ=ಬಾವುಟ; ಪನ್ನಗಪತಾಕ=ಹಾವಿನ ಚಿತ್ರವನ್ನು ತನ್ನ ಬಾವುಟದಲ್ಲಿ ರಾಜಲಾಂಚನವಾಗುಳ್ಳ ದುರ್ಯೋದನ;
ಅಂತು ಮೂರ್ಛಾಪ್ರಸಂಗನಾದ ಪನ್ನಗಪತಾಕಂಗೆ=ಆ ರೀತಿ ಪ್ರಜ್ನೆತಪ್ಪಿ ಬಿದ್ದಿದ್ದ ದುರ್ಯೋದನನಿಗೆ;
ಶಿಶಿರ+ಉಪಚಾರ; ಶಿಶಿರ=ತಂಪಾದ/ತಂಪಾಗಿರುವ; ಇರವು=ಇರುವಿಕೆ; ಪರಿಜನ=ಸೇವಕರು/ಪರಿವಾರದವರು;
ಶಿಶಿರೋಪಚಾರ ಕ್ರಿಯೆಗಳಮ್ ಮಾಳ್ಪ ಸಂಜಯನ ಇರವಮ್ ತತ್ ಪರಿಜನಮ್ ಕಂಡು ಪೇಳೆ=ತಣ್ಣನೆಯ ನೀರನ್ನು ಚಿಮುಕಿಸಿ, ಪ್ರಜ್ನೆಯು ಮರುಕಳಿಸುವಂತೆ ಉಪಚಾರವನ್ನು ಮಾಡುತ್ತಿರುವ ಸಂಜಯನ ಇರುವಿಕೆಯನ್ನು ಕಂಡು, ರಾಜ ಪರಿವಾರದವರು ದ್ರುತರಾಶ್ಟ್ರ ಮತ್ತು ಗಾಂದಾರಿಗೆ ಹೇಳಲು;
ಅಳ್ಕು=ಹೆದರು; ಬಳ್ಕು=ಬಾಗು/ಬಗ್ಗು; ನನೆಕೊನೆವೋಗು=ಮಯ್ ನವಿರೇಳುವುದು;
ಗಾಂಧಾರಿ ಮನದೊಳ್ ಅಳ್ಕಿ ಬಳ್ಕಿ ನನೆಕೊನೆವೋಗಿ=ಗಾಂದಾರಿಯು ಮನದಲ್ಲಿ ಉಂಟಾದ ಹೆದರಿಕೆಯಿಂದ ನಡುಗುತ್ತ ಮಯ್ ನವಿರೆದ್ದು; ಮೃಗಧರ=ಚಂದ್ರ; ವಲ್ಲಿ=ಬಳ್ಳಿ;
ಮಗನೆ… ಮೃಗಧರಕುಲ ಲಕ್ಷ್ಮೀವಲ್ಲಿಗೆ ಪೆರರಾರ್=ಮಗನೇ, ಚಂದ್ರವಂಶದ ರಾಜ್ಯಸಂಪತ್ತೆಂಬ ಬಳ್ಳಿಗೆ ಇನ್ನು ಯಾರಿದ್ದಾರೆ;
ಮುನ್+ಅಡರ್ಪು; ಅಡರ್ಪು=ಆಸರೆ/ಆದಾರ/ಊರೆ;
ನೀನೆ ಮುನ್ನಡರ್ಪು ಎನಲ್ ಇರ್ದಯ್=ನೀನೇ ಆಸರೆ ಎನ್ನುವಂತೆ ಇದ್ದೆ;
ಭೀಮ+ಉರಗ=ಬಯಂಕರವಾದ ಸರ್ಪ; ಉರಗಪತಾಕ=ದುರ್ಯೋದನ;
ಲಯಕಾಲ ಭೀಮೋರಗನ್ ಉರಗಪತಾಕ ನಿನ್ನುಮನ್ ನುಂಗಿದನೇ= ಪ್ರಳಯಕಾಲದ ಬಯಂಕರ ಸರ್ಪದಂತಿರುವ ಬೀಮನು ಉರಗಪತಾಕನಾದ ನಿನ್ನನ್ನೂ ಬಲಿತೆಗೆದುಕೊಂಡನೇ;
ಯಷ್ಟಿ=ಕೋಲು; ಅಂಧಯಷ್ಟಿ=ಕುರುಡರು ನಡೆಯುವುದಕ್ಕೆ ಆಸರೆಯಾಗಿರುವ ಕೋಲು;
ಎಮಗೆ ಅಂಧಯಷ್ಟಿಯಾಗಿರ್ದೆ ಮಗನೆ=ಕುರುಡರಾದ ನಮ್ಮ ಪಾಲಿಗೆ ನೀನು ಆಸರೆಯ ಕೋಲಾಗಿದ್ದೆ;
ನೀನ್ ಉಳ್ಳೊಡೆ ಎಲ್ಲಮ್ ಒಳವು ಎಂದಿರೆ=ನೀನು ಇದ್ದರೆ ನಮ್ಮ ಪಾಲಿಗೆ ಎಲ್ಲವೂ ಇದೆ ಎಂದುಕೊಂಡಿದ್ದರೆ;
ನಿನ್ನುಮನ್ ಇರಿಸದೆ=ನಿನ್ನನ್ನು ಜೀವಂತವಾಗಿರಲು ಬಿಡದೆ; ಅನಿಮಿತ್ತ=ವಿನಾಕಾರಣ/ಕಾರಣವೇ ಇಲ್ಲದೆ; ರಿಪು=ಶತ್ರು; ಪಾಶಪಾಣಿ=ಸಾವಿನ ಕುಣಿಕೆಯನ್ನು ಹಿಡಿದಿರುವವನು/ಯಮ;
ಕುರುವಂಶ ಅನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ=ಕುರುವಂಶಕ್ಕೆ ವಿನಾಕಾರಣ ಹಗೆಯಾಗಿ ಯಮನಂತಿರುವ ಬೀಮನು ನಿನ್ನನ್ನು ಬಲಿತೆಗೆದುಕೊಂಡನೇ; ತನ್ನ ಮಗ ದುರ್ಯೋದನನು ಚಿಕ್ಕಂದಿನಿಂದಲೂ ಮಾಡುತ್ತಿರುವ ದಾಯಾದಿ ಹಗೆತನದಿಂದ ಬೀಮನು ಕುರುಕುಲಕ್ಕೆ ಶತ್ರುವಾಗಿದ್ದಾನೆ ಎಂಬ ವಾಸ್ತವದ ಅರಿವು ಗಾಂದಾರಿಗೆ ಇದ್ದರೂ, ಹೆತ್ತತಾಯಿಯ ಕರುಳು ತನ್ನ ಮಗನ ತಪ್ಪನ್ನು ಮುಚ್ಚಿಕೊಂಡು, ಬೀಮನನ್ನೇ ನಿಂದಿಸುತ್ತಿದೆ;
ತಿಲಕ=ಹಣೆಯ ಬೊಟ್ಟು/ಉತ್ತಮ ವ್ಯಕ್ತಿ;
ಕುರುಕುಲತಿಲಕಾ, ಗುರುಚರಣಂಗಳ್ಗೆ ಎರಗದೆ=ಕುರುವಂಶಕ್ಕೆ ತಿಲಕಪ್ರಾಯನಾಗಿರುವ ದುರ್ಯೋದನನೇ, ಗುರುಹಿರಿಯರಿಗೆ ನಮಸ್ಕಾರವನ್ನು ಮಾಡದೆ;
ಪರಕೆಯನ್ ಆದರದಿನ್ ಆಂತುಕೊಳ್ಳದೆ=ಗುರುಹಿರಿಯರ ತಂದೆತಾಯಿಯ ಆಶೀರ್ವಾದವನ್ನು ಪ್ರೀತಿಯಿಂದ ಪಡೆದುಕೊಳ್ಳದೆ;
ಮೋನಮ್ ಬೆರಸಿರ್ಪುದು ನಿನಗೆ ಉಚಿತಮೆ=ಮಾತನಾಡದೆ ಸುಮ್ಮನಿರುವುದು ನಿನಗೆ ಸರಿಯೇ;
ಗುರು ಕುರುನರೇಂದ್ರ, ವಿನಯಮನ್ ಏಕೆ ಮರೆದೆ=ಕುರುಕುಲದ ಚಕ್ರವರ್ತಿಯೇ, ಗುರುಹಿರಿಯರನ್ನು ಮತ್ತು ತಂದೆತಾಯಿಯನ್ನು ಕಂಡಕೂಡಲೇ ಅವರಿಗೆ ತೋರಿಸಬೇಕಾದ ಒಲವು ನಲಿವಿನ ನಡೆನುಡಿಯನ್ನೇಕೆ ಮರೆತೆ;
ದುಶ್ಶಾಸನ – ದುರ್ಮರ್ಷಣ – ದುರ್ಷರ್ಣ=ಈ ಮೂರು ಮಂದಿಯು ಗಾಂದಾರಿ ಮತ್ತು ದ್ರುತರಾಶ್ಟ್ರನ ಮಕ್ಕಳು;
ಮಡಿದ ಈ ದುಶ್ಶಾಸನನ್ ಏನ್ ನುಡಿಯಿಸುವನೊ=ಕುರುಕ್ಶೇತ್ರ ರಣರಂಗದಲ್ಲಿ ಈಗಾಗಲೇ ಸಾವನ್ನಪ್ಪಿರುವ ದುಶ್ಶಾಸನನು ನಮ್ಮನ್ನು ಮಾತನಾಡಿಸುವನೇನು;
ದುರ್ಮರ್ಷಣನ್ ಏನ್ ನುಡಿಯಿಸುವನೊ=ದುರ್ಮರ್ಶಣನು ನಮ್ಮನ್ನು ಮಾತನಾಡಿಸುವನೋ;
ದುಷ್ಕರ್ಣನ್ ನುಡಿಯಿಸುವನೊ=ದುಶ್ಕರ್ಣನು ನಮ್ಮನ್ನು ಮಾತನಾಡಿಸುವನೋ;
ನೀನುಮ್ ಉಸಿರದಿರ್ಪುದೆ ಮಗನೇ ಎಂದು ಗಾಂಧಾರಿ ವಿಪ್ರಲಾಪಮ್ ಗೆಯ್ಯೆ=ನೀನೂ ಕೂಡ ಮಾತನಾಡದೆ ಸುಮ್ಮನಿರುವುದೇ ಮಗನೇ ಎಂದು ಗಾಂದಾರಿಯು ಹೆತ್ತಕರುಳಿನ ಸಂಕಟದಿಂದ ಗೋಳಾಡುತ್ತಿರಲು;
ಧೃತರಾಷ್ಟ್ರನ್ ತನ್ನ ನಂದನನ ಕಾಲ ಮೇಲೆ ಕವಿದು ಬಿಳ್ದು=ತಂದೆಯಾದ ದ್ರುತರಾಶ್ಟ್ರನು ತನ್ನ ಮಗನಾದ ದುರ್ಯೋದನನ ಕಾಲ ಮೇಲೆ ಮಗುಚಿಕೊಂಡು ಬಿದ್ದು; ಚೂಡಾಮಣಿ=ತಲೆಯಲ್ಲಿ ತೊಡುವ ರತ್ನದ ಒಡವೆ. ಉತ್ತಮ ವ್ಯಕ್ತಿ ಎಂಬುದು ರೂಪಕದ ತಿರುಳು;
ಹಾ… ಕುರುಕುಲ ಚೂಡಾಮಣಿ… . ಹಾ… ಕುರುಕುಲ ಚಕ್ರವರ್ತಿ… .ಹಾ… ಸಕಲ ಧರಿತ್ರೀಕಾಂತ=ಹಾ… ಕುರುಕುಲ ಚೂಡಾಮಣಿ… ಹಾ… ಕುರುಕುಲ ಚಕ್ರವರ್ತಿ… ಹಾ… ಇಡೀ ಬೂಮಂಡಳದ ಒಡೆಯನೇ;
ಮಾಯ್=ಕೆಟ್ಟತನವನ್ನು ಹೊಂದಿರು; ವಿಧಾತ್ರ=ಬ್ರಹ್ಮ; ಕಾಯ್=ಕೆರಳು/ಮುನಿದು; ಸರ=ದನಿ;
ಮಾಯ್ದ ವಿಧಾತ್ರನ್ ಕಾಯ್ದು ನಿನ್ನುಮನ್ ಪರಲೋಕಕ್ಕೆ ಅಟ್ಟಿದನೆ ಎಂದು ಕರುಣಾಕ್ರಂದನಮ್ ಗೆಯ್ದ ಗುರುಜನಂಗಳ ಸರಮಮ್ ಸಂಜಯನ್ ಮಾಣಿಸಿ=ಕ್ರೂರಿಯಾದ ಬ್ರಹ್ಮನು ಕೋಪಗೊಂಡು ನಿನ್ನನ್ನೂ ಪರಲೋಕಕ್ಕೆ ಕಳುಹಿಸಿದನೇ ಎಂದು ಕರುಳನ್ನು ಹಿಂಡುವಂತೆ ಗೋಳಾಡುತ್ತಿರುವ ಗುರುಹಿರಿಯರ ಸಂಕಟದ ದನಿಯನ್ನು ಆಲಿಸಿದ ಸಂಜಯನು ಅವರನ್ನು ಸುಮ್ಮನಿರುವಂತೆ ಸೂಚಿಸಿ, ದುರ್ಯೋದನನು ಪ್ರಜ್ನೆತಪ್ಪಿರುವುದಕ್ಕೆ ಕಾರಣವೇನೆಂಬುದನ್ನು ಹೇಳುತ್ತಾನೆ;
ಕರ್ಣ ದುಶ್ಶಾಸನಾದಿಗಳ ಸಾವಿನೊಳ್ ಶೋಕೋದ್ರೇಕದಿಮ್ ಮೂರ್ಛಾಗತನಾಗಿರ್ದಪನ್=ಕರ್ಣ, ದುಶ್ಶಾಸನ ಮತ್ತು ಇತರರ ಸಾವಿನಿಂದ ಉಂಟಾದ ಸಂಕಟವನ್ನು ತಡೆಯಲಾರದೆ ದುರ್ಯೋದನನು ಪ್ರಜ್ನೆತಪ್ಪಿದ್ದಾನೆ;
ಈಗಳೆ ಚೇತರಿಸುಗುಮ್=ಇನ್ನೇನು ಕೆಲವೇ ಗಳಿಗೆಯಲ್ಲಿ ಚೇತರಿಸಿಕೊಳ್ಳುತ್ತಾನೆ;
ಅನ್ನೆಗಮ್ ವಿಪ್ರಲಾಪಮನ್ ಉಪಸಂಹರಿಪುದು ಎನೆ=ಅಲ್ಲಿಯವರೆಗೂ ಈ ರೀತಿ ಗೋಳಾಡುವುದನ್ನು ನಿಲ್ಲಿಸಿರಿ ಎಂದು ಹೇಳಲು;
ಸಮಾಹಿತ ಅಂತಃಕರಣರುಮಾಗಿ=ಅಳುತ್ತಿದ್ದವರೆಲ್ಲರೂ ಈಗ ಸಮಾದಾನ ಚಿತ್ತರಾಗಿ;
ನಿಜ ಗುರುಗಳ ನಯನಾಂಬು ತಳಿವ ಜಲಮಾಗಿರೆ=ತಂದೆತಾಯಿಯ ಕಣ್ಣುಗಳಿಂದ ಹರಿಯುತ್ತಿರುವ ಕಣ್ಣೀರು ದುರ್ಯೋದನನ ಮಯ್ ಮೇಲೆ ಚಿಮುಕಿಸುತ್ತಿರುವ ನೀರಾಗಿರಲು;
ತದ್ಗುರು ಜನ ದೀರ್ಘೋಚ್ಛ್ವಾಸಮೆ ಪರಿವೀಜನಮಾಗೆ=ತಂದೆತಾಯಿಯ ಸಂಕಟದ ನಿಟ್ಟುಸಿರು ಬೀಸಣಿಗೆಯ ಗಾಳಿಯಾಗಿರಲು;
ಕುರುಕುಲ ಚೂಡಾಮಣಿ ಮೂರ್ಛೆಯಿಂದ ಎಳ್ಚತ್ತನ್=ಪ್ರಜ್ನೆತಪ್ಪಿದ್ದ ದುರ್ಯೋದನನು ಎಚ್ಚರಗೊಂಡನು;
ಅಂತು ಮೂರ್ಛೆಯಿಂದ ಎಳ್ಚತ್ತು=ಆ ರೀತಿ ಪ್ರಜ್ನೆಯನ್ನು ಕಳೆದುಕೊಂಡಿದ್ದ ದುರ್ಯೋದನನು ಎಚ್ಚರಗೊಂಡು;
ನಿಜ ಜನನೀ ಜನಕರಮ್ ಕಂಡು=ತನ್ನ ತಾಯಿತಂದೆಯನ್ನು ನೋಡಿ;
ಲಜ್ಜಾಭರದಿಮ್ ಶಿರಮನ್ ಆನತಮ್ ಮಾಡೆ=ತೀವ್ರವಾದ ನಾಚಿಕೆಯಿಂದ ತಲೆಯನ್ನು ತಗ್ಗಿಸಲು;
ಸಂಜಯನ್ ಧೃತರಾಷ್ಟ್ರಂಗಮ್ ಗಾಂಧಾರಿಗಮ್=ಸಂಜಯನು ದ್ರುತರಾಶ್ಟ್ರ ಮತ್ತು ಗಾಂದಾರಿಯನ್ನು ಕುರಿತು;
ಅವಧರಿಸುವುದು, ನಿಜ ತನೂಜನಪ್ಪ ರಾಜರಾಜನ್ ನಿಮಗೆ ವಿನಯ ವಿನಮಿತ ಉತ್ತಮಾಂಗನಾದನ್ ಎನೆ=ಕೇಳಿರಿ, ನಿಮ್ಮ ಮಗನಾದ ದುರ್ಯೋದನನು ನಿಮಗೆ ವಿನಯದಿಂದ ತಲೆಬಾಗಿ ನಮಿಸುತ್ತಿದ್ದಾನೆ ಎಂದು ಹೇಳಲು;
ತದೀಯವಚನಾಮೃತ ಸ್ಪರ್ಶನದಿಂದೆ ಆನಂದಿತಚಿತ್ತರಾಗಿ=ಸಂಜಯನ ನುಡಿಗಳನ್ನು ಕೇಳಿ ದ್ರುತರಾಶ್ಟ್ರ ಗಾಂದಾರಿಯರ ಪಾಲಿಗೆ ಅಮ್ರುತ ದೊರಕಿದಂತಾಗಿ ಆನಂದಗೊಂಡು;
ತಡವರಿಸಿಯುಮ್… ತೆಬ್ಬರಿಸಿಯುಮ್… ತೆಗೆದಪ್ಪಿಯುಮ್=ಪಾದಗಳ ಮೇಲೆ ತಲೆಯನ್ನಿಟ್ಟು ನಮಿಸುತ್ತಿರುವ ದುರ್ಯೋದನನ್ನು ತಮ್ಮ ಕಯ್ಗಳಿಂದ ತಡಕಾಡುತ್ತ… ಉತ್ಸಾಹದಿಂದ ಮುಟ್ಟಿಮುಟ್ಟಿ ನೋಡುತ್ತ… ಮೇಲಕ್ಕೆ ಏಳುತ್ತಿರುವ ದುರ್ಯೋದನನನ್ನು ತಬ್ಬಿಕೊಂಡು;
ಮನಃಕ್ಷತ ಶರೀರನಮ್ ಪರಮಾಶೀರ್ವಚನ ಶತಸಹಸ್ರಂಗಳಿಮ್ ಪರಸಿ=ಮಾನಸಿಕವಾಗಿ ಬಹುನೊಂದಿರುವ ದುರ್ಯೋದನನ್ನು ಒಳ್ಳೆಯ ಆಶೀರ್ವಾದದ ಅತಿಹೆಚ್ಚಿನ ನುಡಿಗಳಿಂದ ಹರಸಿ;
ಪುನಃ ಪುನರಾಲಿಂಗನಮ್ ಗೆಯ್ದು=ಮತ್ತೆ ಮತ್ತೆ ತಬ್ಬಿಮುದ್ದಾಡುತ್ತಿದ್ದು;
ಕಿರಿದಾನುಮ್ ಬೇಗದಿಮ್… ವಿಗತಪರಿಜನಮ್ ಮಾಡಿ=ಕೆಲವೇ ಸಮಯದಲ್ಲಿ ತಮ್ಮ ಉದ್ವೇಗವನ್ನು ಕಡಿಮೆಮಾಡಿಕೊಂಡು, ಮಗನ ಜತೆಯಲ್ಲಿ ಏಕಾಂತವಾಗಿ ಮಾತನಾಡಬೇಕೆಂದು ತಮ್ಮ ಜತೆಯಲ್ಲಿ ಬಂದಿದ್ದ ಪರಿವಾರದವರನ್ನು ದೂರ ಕಳುಹಿಸಿ;
ಯಮಸುತನ್ ಇನ್ನುಮ್ ಎಮಗೆ ಇಂಬುಕೆಯ್ವನ್=ದರ್ಮರಾಯನು ಈಗಲೂ ನಮ್ಮೊಡನೆ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ;
ಕಂದ, ಸಂಧಿಯಮ್ ಸಮಗೊಳಿಸಲ್ಕೆ ಒಡಂಬಡು=ಕಂದ, ಸಂದಿಯನ್ನು ಮಾಡಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡು;
ಸಂಜಯನನ್ ಅಟ್ಟುವೆ=ಸಂಜಯನನ್ನು ದರ್ಮರಾಯನ ಬಳಿಗೆ ಸಂದಾನಕ್ಕಾಗಿ ಕಳುಹಿಸುತ್ತೇನೆ;
ಭೀಮನೊಳಾದ ಬದ್ಧವೈರಮನ್ ಉಳಿ=ಬೀಮನ ಜತೆಯಲ್ಲಿ ಹುಟ್ಟಿನಿಂದಲೇ ಹೊಂದಿರುವ ಹಗೆತನವನ್ನು ಬಿಡು;
ಸುತಸಹೋದರ ದುಃಖಮಮ್ ನೋಡದಿರ್=ಕುರುಕ್ಶೇತ್ರ ರಣರಂಗದಲ್ಲಿ ಸತ್ತಿರುವ ನಿನ್ನ ಮಕ್ಕಳ ಮತ್ತು ತಮ್ಮಂದಿರ ಸಂಕಟವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಡ;
ಅವರ್ಗೆ ಅರ್ಧರಾಜ್ಯಮನ್ ಈವುದು ಎಂದು ಅಂಧನೃಪಾಲ ಪುತ್ರನನ್ ಕಾಲ್ವಿಡಿದು ಬೇಡಿದನ್=ಪಾಂಡವರಿಗೆ ಅರ್ದ ರಾಜ್ಯವನ್ನು ಕೊಡುವುದು ಎಂದು ತಂದೆಯಾದ ದ್ರುತರಾಶ್ಟ್ರನು ಮಗನಾದ ದುರ್ಯೋದನನ ಕಾಲುಗಳನ್ನು ಹಿಡಿದುಕೊಂಡು ಬೇಡಿದನು;
ಅಂತು ಕುರು ನರೇಂದ್ರನನ್ ಅಂಧ ನರೇಂದ್ರನ್ ಅಭ್ಯರ್ಥಿಸಿ=ಆ ರೀತಿ ದುರ್ಯೋದನನ್ನು ದ್ರುತರಾಶ್ಟನು ಕಳಕಳಿಯಿಂದ ಕೇಳಿಕೊಂಡು;
ಶ್ರೀವನಿತೆಗೆ ನಿಜವಿಜಯ ಶ್ರೀವನಿತೆಯೆ ಸವತಿಯಾಗೆ=ರಾಜ್ಯಲಕುಮಿಗೆ ತನ್ನ ಪರಾಕ್ರಮದಿಂದ ವಶಪಡಿಸಿಕೊಂಡ ವಿಜಯಲಕುಮಿಯೇ ಸವತಿಯಾಗಿರಲು; ಬೀಮನೊಡನೆ ಇಬ್ಬರೂ ಲಕುಮಿಯರೂ ಇದ್ದಾರೆ ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ;
ರಿಪುನೃಪರಮ್ ಶೌರ್ಯಾವಷ್ಟಂಭದೆ ಗೆಲ್ದ ಸಾಹಸಭೀಮನ್=ಹಗೆಗಳಾದ ರಾಜರನ್ನು ತನ್ನ ಶೂರತನದ ಉನ್ನತಿಯಿಂದ ಗೆದ್ದಿರುವ ಸಾಹಸಬೀಮನು;
ಜಯಾವಸಥನ್ ಅಸಾಧ್ಯನಲ್ತೆ=ಜಯಕ್ಕೆ ನೆಲೆಯಾದ ಬೀಮನನ್ನು ಸೋಲಿಸಲು ಯಾರಿಂದಲೂ ಆಗದಲ್ಲವೇ;
ಅದರಿನ್ ಆತನೊಳಪ್ಪ ಸಮರಾನುಬಂಧಮಮ್ ಮಾಣ್ಬುದು=ಆದ್ದರಿಂದ ಆತನೊಡನೆ ಯುದ್ದದಲ್ಲಿ ತೊಡಗುವ ಉದ್ದೇಶವನ್ನು ಬಿಡುವುದು;
ಎನ್ನ ಎಂಬುದನ್ ಇಂಬುಕೆಯ್ವುದು ಎಂದ ಧೃತರಾಷ್ಟ್ರನ ನುಡಿಯಮ್=ನಾನು ಹೇಳಿದ್ದನ್ನು ನೀನು ನಡೆಸಿಕೊಡುವುದು ಎಂದ ದ್ರುತರಾಶ್ಟ್ರನ ಮಾತುಗಳನ್ನು;
ಗಾಂಧಾರಿ ಸಮಭ್ಯರ್ಥಿಸಿ ತಾನುಮ್ ಪ್ರಾರ್ಥಿಸಿ=ಗಾಂದಾರಿಯು ಬೆಂಬಲಿಸುತ್ತ, ತಾನೂ ಈ ರೀತಿ ಮಗನನ್ನು ಕೋರಿಕೊಂಡಳು;
ಮಗನೇ… ಪರಿಣತ ವಯಸರೆಮ್… ಇರ್ಕಣ್ ಕುರುಡರೆಮ್… ಎಮಗೆ ಇಂಬುಕೆಯ್ವುದು ಉಚಿತಮ್=ಮಗನೇ ನಮ್ಮಿಬ್ಬರಿಗೂ ವಯಸ್ಸಾಗಿದೆ… ನಾವು ಎರಡು ಕಣ್ಣುಗಳು ಕಾಣದ ಕುರುಡರು… ಇಂತಹ ಸ್ತಿತಿಯಲ್ಲಿರುವ ನಮ್ಮ ಮಾತನ್ನು ನೀನು ನಡೆಸಿಕೊಡುವುದು ಎಲ್ಲ ರೀತಿಯಿಂದಲೂ ಸರಿಯಾದುದು;
ನಿನ್ನ ಈ ಗುರು ನುಡಿದ ನುಡಿಗೆ ಒಡಂಬಡು=ಹಿರಿಯನಾದ ನಿನ್ನ ತಂದೆಯ ಮಾತಿಗೆ ಒಪ್ಪಿಗೆಯನ್ನು ನೀಡು;
ಗುರುವಚನಮ್ ಅಲಂಘನೀಯಮ್ ಎಂಬುದು= ಗುರುಹಿರಿಯರ ಹಿತನುಡಿಯನ್ನು ಎಂದಿಗೂ ಮೀರಬಾರದು ಎನ್ನುತ್ತಾರೆ;
ಮಗನೆ, ಸಮರ ವ್ಯಾಪಾರಮ್ ಮಾಣ್ದು=ಮಗನೆ, ಯುದ್ದವನ್ನು ಮಾಡಿ ಹಗೆಗಳನ್ನು ಕೊಲ್ಲುತ್ತೇನೆ ಎಂಬ ನಿನ್ನ ಉದ್ದೇಶವನ್ನು ತೊರೆದು; ಶಿಬಿರ=ಸೇನಾ ಪಡೆಗಳು ಇಳಿದುಕೊಳ್ಳುವುದಕ್ಕೆ ತಾತ್ಕಾಲಿಕವಾಗಿ ಹಾಕಿರುವ ಡೇರೆಗಳು ಇರುವ ನೆಲೆ;
ನಿಜಶಿಬಿರದತ್ತ ಬಿಜಯಂಗೆಯ್=ರಣರಂಗದ ಕಡೆಗೆ ಹೋಗದೆ, ನಿನ್ನ ಬೀಡಿನತ್ತ ಬರುವುದು;
ಸತ್ತ ಮಗಂದಿರ್ ಸತ್ತರ್… ಅವರನ್ ಇನ್ ತಂದಪೆವೇ= ರಣರಂಗದಲ್ಲಿ ಸಾವನ್ನಪ್ಪಿರುವ ನಮ್ಮ ನೂರು ಮಕ್ಕಳು ಈಗಾಗಲೇ ನಮ್ಮನ್ನು ಬಿಟ್ಟುಹೋಗಿದ್ದಾರೆ. ಮತ್ತೆ ಅವರನ್ನು ಕರೆತರಲು ನಮಗೆ ಆಗುತ್ತದೆಯೇ;
ನೀನ್ ಎಮಗೆ ಉಳ್ಳೊಡೆ ಸಾಲ್ವುದು ಎಂದು ಗಾಂಧಾರಿ ತನ್ನ ಮತ್ತಿನ ಮಕ್ಕಳಮ್ ನೆನೆದು ದುಃಖಂಗೆಯ್ಯೆ=ನೀನು ನಮ್ಮ ಪಾಲಿಗೆ ಇದ್ದರೆ ಸಾಕು ಎಂದು ಗಾಂದಾರಿಯು ತನ್ನ ಉಳಿದ ಮಕ್ಕಳನ್ನು ಅಂದರೆ ಸಾವನ್ನಪ್ಪಿರುವ ಮಕ್ಕಳನ್ನು ನೆನೆದು ಸಂಕಟಪಡುತ್ತಿರಲು;
ಸಂಜಯನ್ ಜಡಿದು=ಸಂಜಯನ್ನು ಗೋಳಾಡುತ್ತಿರುವ ಗಾಂದಾರಿಯರನ್ನು ಗದರಿಸಿ;
ಬಂದುಮ್… ಪ್ರಿಯಸುತನನ್ ಸಂತಯಿಸುವುದು… ಅದುಗೆಟ್ಟು… ನೀನೆ ಗಳ ಶೋಕಾಕ್ರಾಂತೆಯುಮಾಗಿ ಶೋಕಿಸಲ್ ಅಂಧನೃಪತಿಯನ್ ನೃಪತಿಯುಮನ್ ಸಂತಯಿಸುವರಾರ್ ಎಂಬುದುಮ್=ಮಗನನ್ನು ಹುಡುಕಿಕೊಂಡು ಬಂದಿರುವ ನೀನು… ನಿನ್ನ ಪ್ರೀತಿಯ ಮಗನನ್ನು ಸಮಾದಾನಗೊಳಿಸುವುದನ್ನು ಬಿಟ್ಟು… ನೀನೇ ಈ ರೀತಿ ಸಂಕಟಕ್ಕೆ ಒಳಗಾಗಿ ಗೋಳಾಡತೊಡಗಿದರೆ ದ್ರುತರಾಶ್ಟ್ರನನ್ನು ಮತ್ತು ನಿನ್ನ ಮಗನನ್ನು ಸಮಾದಾನ ಪಡಿಸುವವರು ಯಾರು ಎಂದು ಸಂಜಯನು ಗಾಂದಾರಿಗೆ ಹೇಳಲು;
ವೃದ್ಧರಾಜನ್ ಕುರುರಾಜಂಗೆ ಅಭಿಮುಖನಾಗಿ=ದ್ರುತರಾಶ್ಟ್ರನು ದುರ್ಯೋದನನ ಮುಂದೆ ಬಂದು ನಿಂತು;
ವೀರಶತ ಜನನಿಗೆ ಈ ಗಾಂಧಾರಿಗೆ=ವೀರರಾದ ನೂರು ಮಕ್ಕಳನ್ನು ಹೆತ್ತ ಈ ಗಾಂದಾರಿಗೆ;
ಈಗಳ್ ಕೌರವಪತಿ ದುಃಖ ಮಹಾಭಾರಮನ್ ಆಂತ ಆಯಾಸಕ್ಕೆ ಗುರಿಯಾದುದರಿಮ್=ಈಗ ದುರ್ಯೋದನನು ಕುರುಕ್ಶೇತ್ರ ರಣರಂಗದಲ್ಲಿ ತನ್ನ ಮಕ್ಕಳನ್ನು ಮತ್ತು ನೂರು ಮಂದಿ ತಮ್ಮಂದಿರನ್ನು ಕಳೆದುಕೊಂಡಿದ್ದರಿಂದ ಉಂಟಾದ ಸಂಕಟದ ದೊಡ್ಡಹೊರೆಯನ್ನು ಹೊತ್ತ ಬಳಲಿಕೆಗೆ ಗುರಿಯಾದುದರಿಂದ;
ಶತದುಃಖ ಜನನಿ ಪೆಸರಾಯ್ತು=ನೂರು ದುಕ್ಕವನ್ನು ಹೆತ್ತತಾಯಿ ಎಂಬ ಹೆಸರಾಯಿತು; ಈಗ ಗಾಂದಾರಿಯು “ ವೀರಶತ ಜನನಿಯಲ್ಲ; ಶತದುಃಖ ಜನನಿ” ಎಂಬ ಹೆಸರನ್ನು ಪಡೆದಳು;
ಧಾತ್ರಿವಲಭಾ, ಭವತ್ ಅನುಜಕ್ಷಯಮನ್ ಧರ್ಮಜನ್ ಕಂಡು=ರಾಜನಾದ ದುರ್ಯೋದನನೇ, ನಿನ್ನ ನೂರು ಮಂದಿ ತಮ್ಮಂದಿರು ಕುರುಕ್ಶೇತ್ರ ರಣರಂಗದಲ್ಲಿ ಸಾವನ್ನಪ್ಪಿದ್ದನ್ನು ದರ್ಮರಾಯನು ನೋಡಿ;
ಶೋಕಾನಿವಹಮ್ ಸಂಧಿ ಮಾಡಲ್ ಬಗೆವನ್=ಯುದ್ದದಿಂದ ಉಂಟಾಗುತ್ತಿರುವ ಸಾವು ನೋವುಗಳನ್ನು ಗಮನಿಸಿ, ಸಂದಿಯನ್ನು ಮಾಡಿಕೊಳ್ಳಲು ಆಲೋಚಿಸುತ್ತಿದ್ದಾನೆ;
ಅವನಾ ಕೃತಕ ಪ್ರತಿಜ್ಞೆಯಮ್ ಕೇಳ್ದರಿಯಾ=ಕುರುಕ್ಶೇತ್ರ ಯುದ್ದಕ್ಕೆ ಮುನ್ನವೇ ದರ್ಮರಾಯನು ಮಾಡಿರುವ ಪ್ರತಿಜ್ನೆಯನ್ನು ನೀನು ಕೇಳಿ ತಿಳಿದಿಲ್ಲವೇ;
ಸಮರದೊಳ್ ಸಮವಾಯಮ್=ಯುದ್ದದಲ್ಲಿ ಸೋದರರಾದ ನಾವು ಅಯ್ವರು ಜೊತೆಯಲ್ಲಿಯೇ ಇರಬೇಕು;
ಅದೃಷ್ಟವಶದಿಮ್ ನಾಲ್ವರ್ ಅನುಜರೊಳ್ ಒರ್ವನ್ ಸಾಯೆ=ಜೀವನದಲ್ಲಿ ನಮ್ಮ ಹತೋಟಿಯನ್ನು ಮೀರಿ ಒಳಿತು ಕೆಡುಕು ಉಂಟಾಗುವಂತೆ ಯುದ್ದದಲ್ಲಿ ನನ್ನ ತಮ್ಮಂದಿರಲ್ಲಿ ಒಬ್ಬನು ಸತ್ತರೆ; ಯಮಭರ=ಸಂಯಮಶೀಲ; ಅತೀತ=ಸತ್ತುಹೋದ/ಗತಿಸಿದ;
ಯಮಭರನ್ ಯಮನಂದನನ್ ಅತೀತನಪ್ಪನ್= ಸಂಯಮಶೀಲನಾದ ದರ್ಮರಾಯನು ಸಾವನ್ನಪ್ಪುತ್ತಾನೆ;
ಅದರಿಮ್ ಆ ನೃಪಂಗಮ್ ಜಯಮೇ=ಆದ್ದರಿಂದ ಆ ದರ್ಮರಾಯನಿಗೂ ಕುರುಕ್ಶೇತ್ರ ಯುದ್ದದಲ್ಲಿ ತನಗೇ ಜಯ ದೊರಕುತ್ತದೆ ಎಂಬ ನಿಶ್ಚಯವಿಲ್ಲ. ಏಕೆಂದರೆ ಯುದ್ದದಲ್ಲಿ ಎಂತಹ ವೀರನಿಗಾದರೂ ಆಪತ್ತು ಬರಬಹುದು;
ಎಂದು ನುಡಿದ ನರೇಂದ್ರನ ನುಡಿಗೆ ಸಂಜಯನ್ ಒಡಂಬಟ್ಟು=ಎಂದು ನುಡಿದ ದ್ರುತರಾಶ್ಟ್ರನ ಸಂದಾನದ ಮಾತುಗಳಿಗೆ ಸಂಜಯನು ತನ್ನ ಸಹಮತವನ್ನು ವ್ಯಕ್ತಪಡಿಸುತ್ತ; ಉಪಪತ್ತಿ=ಒಂದು ಸಂಗತಿಯನ್ನು ನಿರೂಪಿಸುವುದಕ್ಕೆ ನೀಡುವ ಕಾರ್ಯಕಾರಣ ಸಂಬಂದ/ಆದಾರ;
ನೃಪ, ನಿನ್ನ ತಂದೆ ಎಂದುದನ್. ಉಪಪತ್ತಿಯುಕ್ತಮ್ ಇದಮ್ ಇನ್ ಕಯ್ಕೊಳ್ ಎನೆ=ರಾಜನೇ, ನಿಮ್ಮ ತಂದೆ ಹೇಳಿರುವುದು ಸಕಾರಣವಾಗಿದೆ ಮತ್ತು ಯೋಗ್ಯವಾಗಿದೆ. ಇದನ್ನು ಇನ್ನು ನೀನು ಒಪ್ಪಿಕೊಂಡು, ಅದರಂತೆ ಸಂದಾನವನ್ನು ಮಾಡಿಕೊಳ್ಳುವುದು ಎಂದು ಸಂಜಯನು ನುಡಿಯಲು;
ಭೂಮಿಪನ್=ಆಗ ದುರ್ಯೋದನನು ಸಂದಾನದ ಪ್ರಸ್ತಾಪವನ್ನು ಮಾಡಿದ ದ್ರುತರಾಶ್ಟ್ರನಿಗೂ ಮತ್ತು ಸಂಜಯನಿಗೂ ಉತ್ತರವನ್ನು ನೀಡುವ ರೀತಿಯಲ್ಲಿ ಮಾತನಾಡತೊಡಗುತ್ತಾನೆ;
ಪೂರ್ವಪಕ್ಷ=ತರ್ಕದಲ್ಲಿ ತೊಡಗಿ ಯಾವುದೇ ಒಂದು ವಿಚಾರವನ್ನು ಒಪ್ಪುವ ಇಲ್ಲವೇ ನಿರಾಕರಿಸುವ ಮಾತಿನ ಸನ್ನಿವೇಶದಲ್ಲಿ ಮೊದಲು ಮಂಡಿಸುವ ಸಂಗತಿ; ಸಿದ್ಧಾಂತ=ಮೊದಲು ಮಂಡಿಸಿದ ಸಂಗತಿಯನ್ನು ಆದಾರ ಸಮೇತ ಒಪ್ಪಿ ಇಲ್ಲವೇ ನಿರಾಕರಿಸಿ, ಅಂತಿಮವಾಗಿ ತಳೆಯುವ ನಿಲುವು;
ನಿಮ್ಮಯ ಪೂರ್ವಪಕ್ಷಮ್ ಎಮಗೆ ವಲಮ್ ಸಿದ್ಧಾಂತಮ್ ಆದುದೇ ಎಂದನ್=ನೀವು ಹೇಳಿದ ಮೊದಲ ಸಂಗತಿಯೇ ನಮಗೆ ನಿಶ್ಚಯವಾಗಿಯೂ ಸಿದ್ದಾಂತವಾಯಿತು ಎಂದು ನುಡಿದನು;
ತನ್ನ ಒಡವುಟ್ಟಿದರ್ ಪೆಸರ ನಾಲ್ವರೊಳ್ … ಒರ್ವರುಮ್ ಇಲ್ಲದಿರ್ದೊಡಮ್… ಧರ್ಮತನೂಜನ್ ಅಗ್ನಿಗೆ ತನ್ನ ಅಸುವಮ್ ನಿವೇದಿಸುವನ್ ಎಂದೊಡೆ=ತನ್ನ ಒಡಹುಟ್ಟಿದ ನಾಲ್ವರಲ್ಲಿ ಒಬ್ಬರು ರಣರಂಗದಲ್ಲಿ ಸಾವನ್ನಪ್ಪಿದರೂ ತನ್ನ ದೇಹವನ್ನು ಬೆಂಕಿಗೆ ಒಡ್ಡಿ ಪ್ರಾಣವನ್ನು ಬಿಡುತ್ತೇನೆ ಎಂದು ದರ್ಮರಾಯನು ಪ್ರತಿಜ್ನೆಯನ್ನು ಮಾಡಿರುವನು ಎಂದ ಮೇಲೆ;
ಆನ್ ಎನ್ನ ಒಡವುಟ್ಟಿದರ್ ಪೆಸರ ನೂರ್ವರೊಳ್… ಒರ್ವರುಮ್ ಇಲ್ಲ=ನಾನು… ನನ್ನ ಒಡಹುಟ್ಟಿದ ನೂರು ಮಂದಿ ತಮ್ಮಂದಿರಲ್ಲಿ ಒಬ್ಬನೂ ಇಲ್ಲದಿರುವಾಗ;
ಬಾಳ್ವೆನ್ ಎಂಬ ಎನ್ನ ಅಳಿಯಾಸೆಯಮ್ ಬಿಸುಟೆನ್=ಜೀವಂತವಾಗಿರಬೇಕು ಎಂಬ ಚಿಕ್ಕ ಆಸೆಯನ್ನು ತೊರೆದೆನು;
ಇನ್ ಅವರ್ ಆದುದನ್ ಆಗದಿರ್ಪೆನೇ=ಇನ್ನು ನನ್ನ ತಮ್ಮಂದಿರೆಲ್ಲರೂ ಆದುದನ್ನು ನಾನು ಆಗಿದೆ ಇರುವೆನೆ/ನನ್ನ ತಮ್ಮಂದಿರಂತೆಯೇ ನಾನು ಕೂಡ ರಣರಂಗದಲ್ಲಿ ಹಗೆಗಳ ಎದುರು ಹೋರಾಡುತ್ತ ಸಾಯುತ್ತೇನೆ;
ಹಾ ಕರ್ಣಾ=ಹಾ… ಕರ್ಣನೇ;
ಫಲ್ಗುಣನನ್ ಸಾಧಿಸುವೆನ್=ಅರ್ಜುನನನ್ನು ಸದೆಬಡಿಯುತ್ತೇನೆ;
ಸಾಧಿಸುವೆನ್ ಪವನಸುತನ ಬಸಿರಿಮ್ ದುಶ್ಶಾಸನ ತೆಗೆವೆನ್=ಸದೆಬಡಿದು ಬೀಮನ ಹೊಟ್ಟೆಯಿಂದ ದುಶ್ಶಾಸನನನ್ನು ಹೊರತೆಗೆಯುತ್ತೇನೆ; ಬೀಮನು ದುಶ್ಶಾಸನನ ಕರುಳನ್ನು ಬಗೆದು ರಕ್ತಮಾಂಸಗಳನ್ನು ಉಂಡಿದ್ದನು. ಅದೆಲ್ಲವನ್ನೂ ಕಕ್ಕಿಸುತ್ತೇನೆ;
ಬಳಿಕೆ ನಿರ್ದೋಷಿ ಯಮಜನೊಳ್ ಪುದುವಾಳ್ವೆನ್=ಅನಂತರ ಯಾವ ತಪ್ಪನ್ನು ಮಾಡದ ದರ್ಮರಾಯನೊಡನೆ ಕೂಡಿ ಬಾಳುತ್ತೇನೆ;
ಪಾಂಡುರಾಜನುಮ್ ನೀನುಮ್ ಧರೆಯಮ್ ಪಚ್ಚಾಳ್ದಿರ್=ಪಾಂಡುರಾಜನು ಮತ್ತು ನೀನು ರಾಜ್ಯವನ್ನು ಪಾಲುಮಾಡಿಕೊಂಡು ಆಳ್ವಿಕೆಯನ್ನು ಮಾಡಿದಿರಿ;
ಅದನೆ ಕೈತವದಿಂದೆ ಅಯ್ವರ ಕೆಯ್ಯೊಳ್ ಎಳೆದುಕೊಂಡು ಈ ಕುರುರಾಜನ್ ಮತ್ತಮ್ ಅವರ್ಗೆ ಪುದುವಿತ್ತಪನೇ =ಆ ರಾಜ್ಯವನ್ನೇ ಪಗಡೆಯಾಟದ ಜೂಜಿನ ಪಂದ್ಯದಲ್ಲಿ ಅಯ್ದು ಮಂದಿ ಪಾಂಡವರ ಕಯ್ಯಿಂದ ಕಿತ್ತುಕೊಂಡು ಇಡೀ ಕುರುರಾಜ್ಯಕ್ಕೆ ಒಡೆಯನಾಗಿರುವ ನಾನು, ಮತ್ತೆ ಅವರಿಗೆ
ನೀಡಿ, ಅವರೊಂದಿಗೆ ಹೊಂದಿಕೊಂಡು ಬಾಳುತ್ತೇನೆಯೇ;
ಆನ್ ಮಗನೆನ್ ಆಗೆ… ಧರ್ಮಜನ್ ಏನ್ ಮಗನಲ್ಲನೆ=ನಾನು ನಿಮಗೆ ಮಗನಾಗಿರುವಂತೆಯೇ ದರ್ಮರಾಯನೇನು ನಿಮಗೆ ಮಗನಲ್ಲವೇ;
ಬಳಿಕ್ಕೆ ನೀಮುಮ್ ತಾಮುಮ್… ನಿಮ್ಮೊಳ್ ನೇರ್ಪಡುಗಿಡದೆ ಮುನ್ನಿನ ತೆರದೆ ಸುಖಮ್ ಬಾಳ್ವುದು=ನನ್ನ ಕೊನೆಯಾದ ನಂತರ ನೀವು ಅವರು… ನಿಮ್ಮನಿಮ್ಮಲ್ಲಿ ಸಾಮರಸ್ಯ ಕೆಡದಂತೆ ಮೊದಲು ಹೇಗೆ ನೀವು ಮತ್ತು ಪಾಂಡುರಾಜನು ಒಲವು ನಲಿವು ನೆಮ್ಮದಿಯಿಂದ ಬಾಳುವುದು;
ಆನ್ ಬೆಸಕೆಯ್ಯೆನ್=ನೀವು ಹೇಳಿದಂತೆ ಸಂದಿಯನ್ನು ಮಾಡಿಕೊಳ್ಳುವುದಿಲ್ಲ;
ಬಿಡಿಮ್ ಎನ್ನನ್=ನನ್ನ ಪಾಡಿಗೆ ನನ್ನನ್ನು ಬಿಡಿರಿ;
ಎಂದು ಮುಂದಿರ್ದು ಅಡಿಗೆರಗಿದ ಮಗನನ್ ಅಪ್ಪಿಕೊಂಡು=ಎಂದು ಹೇಳಿ ಮುಂದೆ ಬಂದು ಪಾದಗಳಿಗೆ ನಮಿಸಿದ ಮಗನನ್ನು ತಬ್ಬಿಕೊಂಡು;
ಅಶ್ರುಜಲಮ್ ಗುಡುಗುಡನೆ ಸುರಿಯೆ= ಕಣ್ಣೀರು ಒಂದೇ ಸಮನೆ ಸುರಿಯುತ್ತಿರಲು;
ನಾಲಗೆ ತಡತಡವರೆ=ಮಾತನಾಡಲಾಗದೆ ನಾಲಗೆಯು ತೊದಲುತ್ತಿರಲು;
ಅಂಧನೃಪನ್ ಆ ನೃಪನನ್ ನುಡಿದನ್=ಕುರುಡನಾದ ದ್ರುತರಾಶ್ಟ್ರನು ದುರ್ಯೋದನನಿಗೆ ಹೇಳಿದನು;
ನೀನ್ ಎಂತುಮ್ ಎಮ್ಮ ಪೇಳ್ವುದಮ್ ಕೈಕೊಳ್ಳದೆ… ಛಲಮನೆ ಕಯ್ ಕೊಂಡು… ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನ್ ಒಡಂಬಡೆಯಪ್ಪಿನಮ್=ನೀನು ಹೇಗಿದ್ದರೂ ನಾವು ಹೇಳುವುದನ್ನು ಒಪ್ಪಿಕೊಳ್ಳದೆ… ಚಲವನ್ನೇ ಸಾದಿಸಲು ಹಟತೊಟ್ಟು, ಪಾಂಡುವಿನ ಮಕ್ಕಳ ಜತೆಯಲ್ಲಿ ಕಾದಾಡುವುದಲ್ಲದೆ ಸಂದಾನಕ್ಕೆ ಒಪ್ಪುತ್ತಿಲ್ಲವಾದ್ದರಿಂದ;
ನೀನ್ ಎಮಗೆ ಇನಿತನ್ ಒಳ್ಳಿಕಯ್ಯಲ್ವೇಳ್ವುದು=ನೀನು ನಮಗೆ ಇಶ್ಟನ್ನಾದರೂ ಒಳ್ಳೆಯದನ್ನು ಮಾಡುವುದು;
ನೆಗಳ್ವ ಕಜ್ಜಮ್ ಆವುದುಮಮ್ ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು=ನೀನು ಮಾಡಬೇಕೆಂದಿರುವ ಕಾರ್ಯ ಯಾವುದೇ ಇರಲಿ, ಅದನ್ನು ನಿಮ್ಮ ಅಜ್ಜನಾದ ಬೀಶ್ಮನೊಡನೆ ಸಮಾಲೋಚಿಸಿ, ಅನಂತರ ಕಯ್ಗೊಳ್ಳುವುದು;
ಅಲ್ಲಿಗೆ ಬಿಜಯಮ್ ಗೆಯ್ವುದು ಎನೆ=ಈಗ ಶರಮಂಚದ ಮೇಲೆ ಮಲಗಿರುವ ಬೀಶ್ಮರ ಬಳಿಗೆ ಹೋಗುವುದು ಎಂದು ಹೇಳಲು;
ಮಹಾಪ್ರಸಾದಮ್ ಎಂದು ಅದನ್ ಒಡಂಬಟ್ಟು=ಹಾಗೆಯೇ ಆಗಲಿ ಎಂದು ದ್ರುತರಾಶ್ಟ್ರನ ಮಾತಿನಂತೆ ನಡೆಯಲು ಒಪ್ಪಿಕೊಂಡು;
ಅಂತೆ ಗೆಯ್ವೆನ್ ಎಂದು ಗುರುಜನಮಮ್ ಬೀಳ್ಕೊಂಡು=ನೀವು ಹೇಳಿದಂತೆಯೇ ಮಾಡುತ್ತೇನೆ ಎಂದು ನುಡಿದು, ತಂದೆತಾಯಿಯರಿಂದ ಬೀಳ್ಕೊಂಡು;
ಅವರಮ್ ಬೀಡಿಂಗೆ ಪೋಗಳ್ವೇಳ್ದು=ಅವರನ್ನು ಹಸ್ತಿನಾವತಿಗೆ ಹೋಗಲು ಹೇಳಿ;
ಕಿರಿದು ಪೊಲ್ತು ಶೋಕಾನುಬಂಧದೊಳ್… ಕೋಪಾನುಬಂಧಮುಮ್… ಸಮರಾನುಬಂಧಮುಮ್ ಅಂತರಿಸಿರ್ದು=ಸ್ವಲ್ಪ ಸಮಯ ತೀವ್ರವಾದ ಸಂಕಟಕ್ಕೆ ಸಿಲುಕಿದಾಗ, ಹಗೆಗಳ ಮೇಲಣ ಕೋಪದ ಉದ್ರೇಕ ಮತ್ತು ಯುದ್ದದ ಉನ್ಮಾದವು ತಗ್ಗಿ;
ಸಂಜಯ ದ್ವಿತೀಯನುಮ್ ನಿಜಭುಜಗದಾಸಹಾಯನುಮ್ ಆಗಿ ಸಂಗ್ರಾಮ ಭೂಮಿಯೊಳಗನೆ ಬರುತುಮ್ ಇರ್ದನ್=ಸಂಜಯನ ಜತೆಗೂಡಿ, ತನ್ನ ಬುಜದಲ್ಲಿ ಹೊತ್ತಿರುವ ಗದೆಯ ನೆರವನ್ನೇ ನಂಬಿರುವ ಅಂದರೆ ತನ್ನ ತೋಳ್ಬಲ ಮತ್ತು ಪರಾಕ್ರಮವನ್ನೇ ನಂಬಿರುವ ದುರ್ಯೋದನನು ಕುರುಕ್ಶೇತ್ರ ರಣರಂಗದಲ್ಲಿ ಬರುತ್ತಿದ್ದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು