ಕವಿತೆ: ಮಾಡದಿರಿ ಸ್ವಾರ‍್ತದ ಉಳುಮೆ

– ವೆಂಕಟೇಶ ಚಾಗಿ.

ಹಸಿರಿನ ಸೊಬಗು
ಶಾಂತಿಯ ಕಡಲು
ಎಲ್ಲೆಡೆ ನೆಮ್ಮದಿಯ ಉಸಿರು
ಹೊಸ ಬವಿಶ್ಯದ ಚಿಗುರು
ಎಲ್ಲೆಡೆಯೂ ಮೂಡಿರಲು
ಅಳಿಸದಿರಿ ಬಾಂದವ್ಯದ
ಆಸರೆಯ ಹೆಸರು

ಅಂಬರದ ರವಿಚಂದ್ರ ತಾರೆ
ನದಿ ಬೆಟ್ಟಗಳ ದೊರೆ
ಸ್ವಾತಂತ್ರ್ಯದ ಹಕ್ಕಿಗಳ ಗೂಡು
ನವ ನವೀನತೆಯ ಜಾಡು
ಎಲ್ಲೆಡೆಯೂ ಹರಡಿರಲು
ಕಸಿಯದಿರಿ ಸ್ವಾತಂತ್ರ್ಯದ
ಸ್ವರ‍್ಗದಂತ ಬದುಕು

ಹಲವು ದರ‍್ಮಗಳಿದ್ದರೇನು
ನೂರು ಕರ‍್ಮಗಳಿದ್ದರೇನು
ಕಿರುನಗೆಯು ಜೊತೆ ಜೊತೆ
ನೆಲವು ಸಂಸ್ಕ್ರುತಿಗಳ ಕಾತೆ
ಎಲ್ಲೆಡೆ ತುಂಬಿರಲು
ಕೆಡಿಸದಿರಿ ಕಲ್ಪನೆಯ
ಅತ್ಯದ್ಬುತ ಕಲೆಯ

ಇತಿಹಾಸದ ಹರವು
ಬಹುಕಾಲದ ಅನುಬವವು
ಜ್ನಾನ ವಿಜ್ನಾನ ಆಚಾರದ
ಅಬಿವ್ರುದ್ದಿಯ ತಂಗಾಳಿಯು
ಎಲ್ಲೆಡೆಯೂ ಬೀಸಿರಲು
ಮಾಡದಿರಿ ಸ್ವಾರ‍್ತದ
ವಿಶ ಮನಸ್ಸಿನ ಉಳುಮೆ
ವಿಶ ಮನಸ್ಸಿನ ಉಳುಮೆ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Amrutha P B says:

    ಚೆನ್ನಾಗಿದೆ

Amrutha P B ಗೆ ಅನಿಸಿಕೆ ನೀಡಿ Cancel reply