ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 6ನೆಯ ಕಂತು
– ಸಿ.ಪಿ.ನಾಗರಾಜ.
*** ಪ್ರಸಂಗ – 6: ದುರ್ಯೋದನನ ಸಂಕಟ ***
(ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಸಂಜಯ ವಚನಮ್’ ಎಂಬ ಹೆಸರಿನ 3 ನೆಯ ಅದ್ಯಾಯದ 44 ನೆಯ ಪದ್ಯದಿಂದ 59 ನೆಯ ಪದ್ಯದ ವರೆಗಿನ ಕಾವ್ಯವನ್ನು ನಾಟಕ ರೂಪಕ್ಕೆ ಅಳವಡಿಸಿದೆ.)
ಪಾತ್ರಗಳು:
ದುರ್ಯೋಧನ: ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳ ಹಿರಿಯ ಮಗ. ಹಸ್ತಿನಾವತಿಯ ರಾಜ.
ಸಂಜಯ: ದ್ರುತರಾಶ್ಟ್ರನ ಆಪ್ತ ಸೇವಕ. ಕುರುಕ್ಶೇತ್ರ ರಣರಂಗದ ಸುದ್ದಿಯನ್ನು ದ್ರುತರಾಶ್ಟ್ರನಿಗೆ ವರದಿ ಮಾಡುವ ಕೆಲಸದಲ್ಲಿ ತೊಡಗಿದ್ದವನು.
*** ದುರ್ಯೋಧನನ ಸಂಕಟ ***
ಸಂಜಯನ ನುಡಿಗೆ ದುರ್ಯೋಧನನ್ ಇಂತು ಎಂದನ್.
ದುರ್ಯೋಧನ: ಮುನ್ನೆ ತ್ರಿದಶನದೀಸುತನಿಮ್ ತೀರದ ಕಜ್ಜಮ್… ಕಳಶಸಂಭವನಿಮ್ ತೀರದ ಕಜ್ಜಮ್… ಇನಜನಿಮ್ ತೀರದ ಕಜ್ಜಮ್… ದ್ರೋಣಪುತ್ರನಿಮ್ ತೀರ್ದಪುದೇ… ದ್ರೋಣನ್ ಎಮಗೆ ಒಳ್ಳಿಕೆಯ್ದನ್… ದ್ರೋಣನ ಸುತನ್ ಒಳ್ಳಿಕೆಯ್ಯದಿರ್ಕುಮೆ… ಸಮರ ಕ್ಷೋಣಿಯೊಳ್ ಇನ್ನವನ ಆಸೆಯೆ… ಮಾಣೆ ಅಣಮ್… ಕಯ್ಪೆಸೊರೆಯ ಕುಡಿಯೇಮ್ ಮಿಡಿಯೇಮ್… ರಣಕೇಳಿ ಕುತೂಹಲಿಯಮ್ ಹಲಿಯನ್ ನಚ್ಚಿರ್ದೆನ್…ಅವನುಮ್ ಆಹವಕೋಲಾಹಲದಲ್ಲಿ ತೀರ್ಥಯಾತ್ರಾಚ್ಛಲದಿಂದಮ್ ಅಗಲ್ದು ಪೋದನ್… ಇನ್ನುಮ್ ಬಾರನ್… ಪಗೆ ಮಡಿವೊಡೆ ರವಿಸುತನಿಮ್ ಮಡಿಗುಮ್… ಮೇಣ್… ಶೌರ್ಯಶಾಳಿ ದುಶ್ಶಾಸನನಿಮ್ ಮಡಿಗುಮ್… ಮೇಣ್… ಎನ್ನಿಂದಮ್ ಮಡಿಗುಮ್… ಪೆರಪೆರರಿನ್ ಎನ್ನ ಪಗೆ ಮಡಿದಪುದೇ… ಉಕ್ಕಿನೊಳ್ ಒಡಗೂಡಿದ ಪಚ್ಚೆ ಕಡುಗೂರಿತಕ್ಕುಮ್… ಬೇರೆ ಕೂರ್ಪಿಲ್ಲ… ಅರ್ಕನಂದನನ್ ಒಡನಿಲ್ಲದೆ ಆರುಮ್ ತೊಡರ್ದು ಇರಿವರ್… ತಾಮೆ ಬೇರೆ ಕೂರಿದರ್ ಒಳರೇ. ..ಕಾನೀನನ್… ದ್ರೋಣ ನದೀಸೂನುಗಳ್ ಅಳಿದಿಮ್ ಬಳಿಕ್ಕೆ… ಪೆರರ್ ಎನಗಿಲ್ಲ ಎಂದು… ಆನೆ ಗಳಿತಾಶ್ರುಜಲದಿಮ್ ಸೇನಾಪತ್ಯಾಭಿಷೇಕಮಮ್ ಮಾಡಿದಪೆನ್. ಯುವರಾಜನುಮ್ ಅಂಗರಾಜನುಮ್ ಇರ್ವರುಮ್ ಎನಗೆ ಎರಡುಮ್ ತೋಳ್ ಎರಡು ಕಣ್ಗಳ್… ಅನ್ನರೆ ಪೋರೆನೆ… ಸಂಜಯ ಮತ್ತಮ್ ಎನಗೆ ಮಾನಸವಾಳೇ. ದಿನಕರತನಯನ್ ಕಳಿದನ್… ಯುವರಾಜನಪ್ಪ ದುಶ್ಶಾಸನನುಮ್ ಕಳಿದನ್… ತುಳಿಲಾಳ್ಗಳನ್ ಇರ್ವರುಮನ್ ಕಳಿಪಿ… ಸುಯೋಧನನ ಬಾಳ್ವುದಮ್ ನಂಬಿದಿರೇ… ಎನಗೆ ಮನಮಿಂದು ಶೂನ್ಯಮ್… ಮನೆ ಶೂನ್ಯಮ್… ಬೀಡು ಶೂನ್ಯಮಾದುದು… ಸಕಲ ಅವನಿ ಶೂನ್ಯಮಾಯ್ತು… ದುಶ್ಶಾಸನನಿಲ್ಲದೆ… ಕರ್ಣನಿಲ್ಲದೆ… ಆನ್ ಎಂತು ಇರ್ಪೆನ್. ಬಾಂಧವರಮ್… ಸರಸಿಜಬಾಂಧವತನಯನುಮನ್… ಎನ್ನ ತಮ್ಮನುಮನ್ ಇರಿಸಿ… ನಮ್ಮ ಅಂಧ ನರೇಂದ್ರನ ಮೊಗಮನ್… ಗಾಂಧಾರಿಯ ಮೊಗಮನ್… ಆವ ಮೊಗದೊಳೆ ನೋಳ್ಪೆನ್.
(ಎನೆ ಸಂಜಯನ್ ಆ ಪ್ರಸ್ತಾವದೊಳ್…)
ಸಂಜಯ: ಭೀಷ್ಮ ದ್ರೋಣ ಕರ್ಣ ದುಶ್ಶಾಸನ ಶಲ್ಯ ಶಕುನಿ ಸೈಂಧವ ಭೂರಿಶ್ರವ ಸೋಮದತ್ತ ಭಗದತ್ತ ಸೌಬಲ ಬೃಹದ್ಬಲ ಬಾಹ್ಲೀಕ ವಿಂದಾನುವಿಂದಾದಿಗಳ ಸಾವಿನೊಳ್… ಸರ್ವಾಂಗ ವಿಕಳರಾಗಿರ್ದ ಧೃತರಾಷ್ಟ್ರ ಗಾಂಧಾರಿಯರ ಚರಣಾರವಿಂದ ವಂದನಮ್ ಗೆಯ್ದು… ದೇವರ ಮನಃ ಕ್ಷತಮನ್ ಆರಿಸಲ್ವೇಳ್ಪುದು… ಬೀಡಿಂಗೆ ಬಿಜಯಂಗೆಯ್ವುದು.
(ಎನೆ…)
ದುರ್ಯೋಧನ: ಸವಳದೆ ಯುವರಾಜನುಮ್ ಅಂಗರಾಜನುಮ್ ಬೆರಸು ಗುರುಜನದಲ್ಲಿಗೆ ರಣೋತ್ಸವದಿಮ್ ಪೋಗಲ್… ಅವರ್ ಇರ್ವರುಮ್ ಇಲ್ಲದೆ… ಈಗಳ್ ಅಲ್ಲಿಗೆ ಪೋಗಲ್ ನಾಣ್ಚುವೆನ್… ಸಂಜಯ, ಪತಿಶೋಕವಿಕಳ ಪಾರ್ಥಿವ ನಿತಂಬಿನೀಜನಮನ್… ಎನ್ನ ಇರ್ಪ ಇರವಿಂದೆ ಈಕ್ಷಿಸಲ್ ಲಜ್ಜಿತನೆನ್… ಏಕೆ ತೋರ್ಪೆನ್ ಆನ್ ಮೊಗಮಮ್ … ಅತಿದುಃಖಿತನೆನ್.
(ಎಂಬನ್ನೆಗಮ್ ಸಕಲ ಚತುರಂಗಬಲ ವಿಕಳನಾಗಿ ಸಪ್ತಾಂಗರಾಜ್ಯ ಸಮಾಲಿಂಗಿತನಾಗಿ ಸಂಗ್ರಾಮರಂಗದೊಳ್ ಇರ್ದನ್ ಎಂಬುದಮ್ ಆಪ್ತಚರರ್ ಅರಿಪೆ ಕೇಳ್ದು ಗಾಂಧಾರಿಯುಮ್ ಧೃತರಾಷ್ಟ್ರನುಮ್ ಶೋಕಾಕುಲೀಕೃತಚಿತ್ತರಾಗಿ ತಮ್ಮ ಮಗನನ್ ಆರಯ್ಯಲುಮ್ ಮನಃಕ್ಷತಮನ್ ಆರಿಸಲುಮ್ ಎಂದು ಅರಸುತ್ತುಮ್ ಬಂದು…)
ಧೃತರಾಷ್ಟ್ರ/ಗಾಂಧಾರಿ: ಪಡೆ ಪನ್ನೊಂದಕ್ಷೋಹಿಣಿಗೆ ಒಡೆಯನೆ… ಮೂರ್ಧಾಭಿಷಕ್ತನಯ್… ಮೂರುಮ್ ಬೆಳ್ಗೊಡೆಯ ನಡುವಿರ್ಪ ನೀನ್ ಇರ್ದ ಎಡೆಯುಮ್… ಅದು ಎಮಗೆ ಅರಿಯದಂತುಟಾದುದೆ ಮಗನೇ…
(ಎಂದು ಪಳಿಯಿಸುತ್ತುಮ್ ಬರ್ಪ… ಗುರುಜನದ ಸರಮಮ್ ಸಂಜಯನ್ಅ ರಿದು… ಕರಕಮಲ ಮುಕುಳಿತ ಅಂಜಲಿಯಾಗಿ…)
ಸಂಜಯ: ದೇವಾ, ನಿನ್ನಲ್ಲಿಗೆ ನಿಜಜನನೀಜನಕರ್ ಅರಸುತ್ತುಮ್ ಬಂದರ್.
(ಎಂಬುದುಮ್… ಉದ್ಧೃತ ಗೋತ್ರಾಭಿಮುಖನ್… ವಜ್ರಾಘಾತಮ್ ಆದಂತೆ ಸಿಗ್ಗಾಗಿ… ತಲೆಯಮ್ ಬಾಗಿ..)
ದುರ್ಯೋಧನ: ಅರಿಭೂಪಾಲರನ್ ಇಕ್ಕಿ ಗೆಲ್ದ ಒಸಗೆಯಿಮ್ ತೂರ್ಯತ್ರಯಮ್ ಪೊಣ್ಮೆ… ಸೋದರರುಮ್ ಮಕ್ಕಳುಮ್ ಆಪ್ತರುಮ್ ಬೆರಸು ಬಂದು… ಆನಂದದಿಮ್ ಮದ್ಗುರುಗಳಮ್ ಕಾಣ್ಬೆನ್ ಎಂದಿರಲ್… ವಿಧಾತ್ರ, ದುಃಖಾತ್ಮರಮ್ … ಶೋಕತತ್ಪರರಮ್… ಮೆಯ್ಯೊಳೆ ಬೀಳ್ವ ಉದಶ್ರುಮುಖರಮ್ ಕಾಣ್ಬಂತುಟಮ್ ಮಾಡಿದಯ್… ಕಂದ, ನಿಜಾನುಜರ್ ಎಲ್ಲಿದರ್ ಎಂದು… ಎನ್ನನ್ ಜನನಿ ಬಂದು ಬೆಸಗೊಂಡೊಡೆ… ಅದೇನೆಂದು ಮರುಮಾತು ಕುಡುವೆನ್… ಕೌಂತೇಯರ್ ಕೊಂದರ್ ಎಂದು ಬಿನ್ನೈಸುವೆನೋ…
(ಶೋಕಮ್ ಮಿಗೆ… ವಿಗಳಿತ ವಿವೇಕನ್… ಅವಿರಳ ಬಾಷ್ಪೋದ್ರೇಕನ್… ಫಣಿರಾಜಪತಾಕನ್…)
ದುರ್ಯೋಧನ: ಹಾ ದುಶ್ಶಾಸನ… ಹಾ ಕರ್ಣ…
(ಎನುತಮ್ ಅಂತೆ ಮೂರ್ಛೆಗೆ ಸಂದನ್.)
ತಿರುಳು: ದುರ್ಯೋದನನ ಸಂಕಟ
ಸಂಜಯನ ನುಡಿಗೆ ದುರ್ಯೋಧನನ್ ಇಂತು ಎಂದನ್=ಬಲರಾಮ, ಅಶ್ವತ್ತಾಮ, ಕ್ರುಪ ಮತ್ತು ಕ್ರುತವರ್ಮರಲ್ಲಿ ಒಬ್ಬರಿಗೆ ಸೇನಾದಿಪತಿ ಪಟ್ಟವನ್ನು ಕಟ್ಟಿ ಪಾಂಡವರ ಎದುರು ಯುದ್ದಕ್ಕೆ ಹೋಗುವುದು ಎಂದು ಸಂಜಯನು ದುರ್ಯೋದನನಿಗೆ ಸಲಹೆಯನ್ನು ನೀಡಿದಾಗ, ದುರ್ಯೋದನನು >ಈ ರೀತಿ ಪ್ರತಿಕ್ರಿಯಿಸಿದನು;
ತ್ರಿದಶ=ದೇವತೆ; ತ್ರಿದಶನದೀಸುತ=ಗಂಗಾದೇವಿಯ ಮಗನಾದ ಗಾಂಗೇಯ/ಬೀಶ್ಮ; ಕಜ್ಜ=ಕೆಲಸ / ರಾಜ್ಯದ ಒಡೆತನದಲ್ಲಿ ಪಾಲನ್ನು ಪಡೆಯಲೆಂದು ಯುದ್ದಕ್ಕೆ ಬಂದಿರುವ ಪಾಂಡವರನ್ನು ಕೊಲ್ಲುವ ಇಲ್ಲವೇ ಸೋಲಿಸುವ ಕೆಲಸ; ತೀರದ ಕಜ್ಜ=ಈಡೇರದ ಕೆಲಸ / ಪಾಂಡವರನ್ನು ಕೊಲ್ಲಲಾಗದಿರುವುದು ಇಲ್ಲವೇ ಸೋಲಿಸಲಾಗದಿರುವುದು;
ಮುನ್ನೆ ತ್ರಿದಶನದೀಸುತನಿಮ್ ತೀರದ ಕಜ್ಜಮ್=ಈ ಮೊದಲು ಗಾಂಗೇಯನಿಂದ ಈಡೇರದ ಕೆಲಸ/ಪಾಂಡವರನ್ನು ಕೊಲ್ಲಲಾಗದಿರುವುದು; ಕಳಶಸಂಭವ=ದ್ರೋಣ;
ಕಳಶಸಂಭವನಿಮ್ ತೀರದ ಕಜ್ಜಮ್=ದ್ರೋಣನಿಂದ ಈಡೇರದ ಕೆಲಸ; ಇನ=ಸೂರ್ಯ ; ಇನಜ=ಕರ್ಣ;
ಇನಜನಿಮ್ ತೀರದ ಕಜ್ಜಮ್=ಕರ್ಣನಿಂದ ಈಡೇರದ ಕೆಲಸ;
ದ್ರೋಣಪುತ್ರನಿಮ್ ತೀರ್ದಪುದೇ=ದ್ರೋಣನ ಮಗನಾದ ಅಶ್ವತ್ತಾಮನಿಂದ ಈಡೇರುವುದೇ/ ಪಾಂಡವರನ್ನು ಕೊಲ್ಲುವ ಇಲ್ಲವೇ ಸೋಲಿಸುವ ಕೆಲಸ ಅಶ್ವತ್ತಾಮನಿಂದ ಆಗುತ್ತದೆಯೇ;
ಒಳ್ಳಿತು+ಕೆಯ್ದನ್=ಒಳ್ಳೆಯದನ್ನು ಮಾಡಿದನು; ಈ ಸನ್ನಿವೇಶದಲ್ಲಿ “ಒಳ್ಳಿತು” ಎಂಬ ಪದ ಚುಚ್ಚುಮಾತಿನ ನೆಲೆಯಲ್ಲಿ “ಕೇಡನ್ನು ಬಗೆದರು” ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ. ದ್ರೋಣ ಮತ್ತು ಅಶ್ವತ್ತಾಮ-ಈ ಇಬ್ಬರೂ ಕಾಳೆಗದ ಕಣದಲ್ಲಿಯೇ ಆಯುದಗಳನ್ನು ತೊರೆದರು; ಕುರುಕ್ಶೇತ್ರ ಯುದ್ದ ನಡೆಯುತ್ತಿರುವಾಗ ಕೌರವರ ಪಡೆಯಲ್ಲಿದ್ದ ‘ಅಶ್ವತ್ತಾಮ’ ಎಂಬ ಹೆಸರಿನ ಆನೆಯು ಸಾವನ್ನಪ್ಪದ್ದನ್ನು ದರ್ಮರಾಯನು ದ್ರೋಣಾಚಾರ್ಯರಿಗೆ ಕೇಳಿಸುವಂತೆ “ಅಶ್ವತ್ತಾಮ ಹತಹ” ಎಂದು ಕಿರುಚುತ್ತಾನೆ. ಇದನ್ನು ಕೇಳಿದ ಕೂಡಲೇ ದ್ರೋಣಾಚಾರ್ಯರು ತಮ್ಮ ಮಗ ಅಶ್ವತ್ತಾಮನೇ ಸತ್ತನೆಂದು ತಿಳಿದು, ಪುತ್ರಶೋಕದಿಂದ ಪರಿತಪಿಸುತ್ತ, ಬಿಲ್ಲುಬಾಣಗಳನ್ನು ಕೆಳಕ್ಕಿಡುತ್ತಾರೆ. ಅನಂತರ ದ್ರುಪದನ ಮಗನಿಂದ ಹತರಾಗುತ್ತಾರೆ. ದುರ್ಯೋದನನಿಗೆ ಆಪ್ತನಾಗಿದ್ದ ಕರ್ಣನ ಮೇಲೆ ಆಗಾಗ್ಗೆ ತನ್ನ ಅಸೂಯೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ತಾಮನು ಕುರುಕ್ಶೇತ್ರ ಯುದ್ದದ ಸಂದರ್ಬಲ್ಲಿ ಕೆಲವೊಮ್ಮೆ ಹೋರಾಡದೆ ಆಯುದವನ್ನು ತ್ಯಜಿಸಿ ಸುಮ್ಮನಿರುತ್ತಿದ್ದ; ಹೀಗೆ ಅಪ್ಪ ಮಕ್ಕಳಿಬ್ಬರೂ ಯುದ್ದದ ಸಂದರ್ಬದಲ್ಲಿ ಅಯುದವನ್ನು ತ್ಯಜಿಸಿದ್ದರು;
ದ್ರೋಣನ್ ಎಮಗೆ ಒಳ್ಳಿಕೆಯ್ದನ್=ದ್ರೋಣನು ನಮಗೆ ಒಳ್ಳೆಯದನ್ನು ಮಾಡಿದನು;
ದ್ರೋಣನ ಸುತನ್ ಒಳ್ಳಿಕೆಯ್ಯದಿರ್ಕುಮೆ=ದ್ರೋಣನ ಮಗನಾದ ಅಶ್ವತ್ತಾಮನು ಒಳ್ಳೆಯದನ್ನು ಮಾಡದೆ ಇರುತ್ತಾನೆಯೇ;
ಕ್ಷೋಣಿ=ನೆಲ/ಬೂಮಿ;
ಸಮರ ಕ್ಷೋಣಿಯೊಳ್ ಇನ್ನವನ ಆಸೆಯೆ=ಕುರುಕ್ಶೇತ್ರ ರಣರಂಗದಲ್ಲಿ ಅಶ್ವತ್ತಾಮನಿಂದ ನನಗೆ ಗೆಲುವು ಬರುತ್ತದೆ ಎಂಬ ಆಸೆಯನ್ನು ಇನ್ನು ನಾನು ಇಟ್ಟುಕೊಳ್ಳಬೇಕೆ; ಅಶ್ವತ್ತಾಮನ ನೆರವನ್ನು ಪಡೆದು ಯುದ್ದಕ್ಕೆ ಹೋಗಬೇಕೆಂಬ ಸಂಜಯನ ಸಲಹೆಯನ್ನು ಸಕಾರಣವಾಗಿಯೇ ದುರ್ಯೋದನನು ನಿರಾಕರಿಸುತ್ತಿದ್ದಾನೆ;
ಮಾಣೆ ಅಣಮ್=ಅಶ್ವತ್ತಾಮನಿಂದ ಕಿಂಚಿತ್ತಾದರೂ ನೆರವನ್ನು ನಾನು ಬಯಸುವುದಿಲ್ಲ;
ಕಯ್ಪೆ ಸೊರೆಯ ಕುಡಿಯೇಮ್ ಮಿಡಿಯೇಮ್=ಕಹಿಯಾದ ಸೋರೆಯ ಬಳ್ಳಿಯ ಚಿಗುರಾದರೇನು ಹೀಚಾದರೇನು… ಎರಡೂ ಕಹಿಯಲ್ಲವೇ. ಅಂತೆಯೇ ಅಪ್ಪ ಮಗ ಇಬ್ಬರೂ ಒಂದೇ. ಅವರಿಂದ ಕುರುಕ್ಶೇತ್ರ ರಣರಂಗದಲ್ಲಿ ನನಗೆ ಯಾವುದೇ ಒಳಿತಾಗಿಲ್ಲ… ಹಗೆಗಳಾದ ಪಾಂಡವರಿಗೆ ಕೇಡಾಗಿಲ್ಲ;
ಹಲಿ=ಬಲರಾಮ; ಕ್ರಿಶ್ಣನ ಅಣ್ಣನಾದ ಬಲರಾಮನು ಮಹಾಬಲಶಾಲಿಯಾಗಿದ್ದು ಚಿಕ್ಕಂದಿನಿಂದಲೂ ದುರ್ಯೋದನನ ಬಗ್ಗೆ ಒಲವು ಉಳ್ಳವನಾಗಿದ್ದ. ಕುರುಕ್ಶೇತ್ರ ಯುದ್ದದ ಸಂದರ್ಬದಲ್ಲಿ ಕ್ರಿಶ್ಣನು ಪಾಂಡವರನ್ನು ಮತ್ತು ಬಲರಾಮನು ದುರ್ಯೋದನನ್ನು ಬೆಂಬಲಿಸಿದ್ದರು. ಕ್ರಿಶ್ಣನು ಅರ್ಜುನನ ಸಾರತಿಯಾಗಲು ಸಿದ್ದನಿದ್ದರೆ, ಬಲರಾಮನು ಯುದ್ದರಂಗದಲ್ಲಿ ದುರ್ಯೋದನನ ಕಡೆ ನಿಂತು ಹೋರಾಡಲು ಸಿದ್ದನಾಗಿದ್ದನು. ಆದರೆ ಯುದ್ದ ಪ್ರಾರಂಬವಾಗುವುದಕ್ಕೆ ಮುನ್ನಿನ ದಿನಗಳಲ್ಲಿ ಹಸುವೊಂದರ ಸಾವಿಗೆ ತಾನು ಕಾರಣನಾದುದರಿಂದ, ಅದರ ಪಾಪ ಪರಿಹಾರಕ್ಕೆಂದು ಬಲರಾಮನು ಯುದ್ದದಲ್ಲಿ ಪಾಲ್ಗೊಳ್ಳದೆ ಪುಣ್ಯಕ್ಶೇತ್ರಗಳ ದರ್ಶನಕ್ಕಾಗಿ ಹೊರಟುಹೋಗಿದ್ದಾನೆ. ಬಲರಾಮನ ಇಂತಹ ವರ್ತನೆಯಿಂದ ನಿರಾಶೆಗೊಂಡಿರುವ ದುರ್ಯೋದನನು ಅದನ್ನು ನೇರವಾಗಿ ವ್ಯಕ್ತಪಡಿಸಲಾಗದೆ “ಯಾರನ್ನು ಬಹಳವಾಗಿ ನಂಬಿಕೊಂಡಿದ್ದನೋ ಆತನೇ ಯುದ್ದದಲ್ಲಿ ಪಾಲ್ಗೊಳ್ಳದೆ ದೂರಸರಿದ” ಎಂದು ಹೇಳುತ್ತಿದ್ದಾನೆ;
ರಣಕೇಳಿ ಕುತೂಹಲಿಯಮ್ ಹಲಿಯನ್ ನಚ್ಚಿರ್ದೆನ್=ಕಾಳೆಗದ ಹೋರಾಟದಲ್ಲಿ ಉತ್ಸಾಹಿಯಾಗಿದ್ದ ಬಲರಾಮನ್ನು ನಂಬಿಕೊಂಡಿದ್ದೆನು;
ಅವನುಮ್ ಆಹವಕೋಲಾಹಲದಲ್ಲಿ ತೀರ್ಥಯಾತ್ರಾಚ್ಛಲದಿಂದಮ್ ಅಗಲ್ದು ಪೋದನ್=ಅವನು ಕೂಡ ದೊಡ್ಡ ಕಾಳೆಗದ ಅಬ್ಬರದ ಹೋರಾಟದ ಸಮಯದಲ್ಲಿಯೇ ತೀರ್ತಯಾತ್ರೆಯ ನೆಪದಲ್ಲಿ ನನ್ನಿಂದ ಅಗಲಿ ದೂರಹೋದನು;
ಇನ್ನುಮ್ ಬಾರನ್=ಇನ್ನೂ ಬಂದಿಲ್ಲ;
ಪಗೆ ಮಡಿವೊಡೆ ರವಿಸುತನಿಮ್ ಮಡಿಗುಮ್=ಹಗೆಯು ಸಾಯಬೇಕಾದರೆ ಕರ್ಣನಿಂದ ಸಾಯಬೇಕು;
ಮೇಣ್=ಇಲ್ಲವೇ;
ಶೌರ್ಯಶಾಳಿ ದುಶ್ಶಾಸನನಿಮ್ ಮಡಿಗುಮ್… ಮೇಣ್… ಎನ್ನಿಂದಮ್ ಮಡಿಗುಮ್=ಇಲ್ಲವೇ ಮಹಾಪರಾಕ್ರಮಿಯಾದ ದುಶ್ಶಾಸನನಿಂದ ಸಾಯಬೇಕು ಇಲ್ಲವೇ ನನ್ನಿಂದ ಸಾಯಬೇಕು;
ಪೆರಪೆರರಿನ್ ಎನ್ನ ಪಗೆ ಮಡಿದಪುದೇ=ಬೇರೆ ಯಾರು ಯಾರಿಂದಲೋ ನನ್ನ ಹಗೆಯು ನಾಶವಾಗುತ್ತದೆಯೇ;
ಉಕ್ಕಿನೊಳ್ ಒಡಗೂಡಿದ ಪಚ್ಚೆ ಕಡುಗೂರಿತಕ್ಕುಮ್=ಬೆಂಕಿಯಲ್ಲಿ ಚೆನ್ನಾಗಿ ಕಾಯಿಸಿದಾಗ ಮೆದುವಾದ ಕಬ್ಬಿಣವು ಉಕ್ಕಿನೊಂದಿಗೆ ಬೆರೆತಾಗ ಹದಗೊಂಡು ತಾನೂ ಹರಿತಗೊಳ್ಳುತ್ತದೆ;
ಬೇರೆ ಕೂರ್ಪಿಲ್ಲ=ಕಬ್ಬಿಣ ಮತ್ತು ಉಕ್ಕು ಜತೆಗೂಡಿದ ಆಯುದ ಹರಿತವಾಗುವ ಹಾಗೆ ಬೇರೆ ಯಾವೊಂದು ಲೋಹದ ಆಯುದವೂ ಹರಿತವಾಗಲಾರದು;
ಅರ್ಕನಂದನನ್ ಒಡನಿಲ್ಲದೆ ಆರುಮ್ ತೊಡರ್ದು ಇರಿವರ್=ಕರ್ಣನು ಜತೆಗಿಲ್ಲದೆ ಯಾರು ತಾನೆ ನನ್ನ ಹಗೆಗಳ ಎದುರು ಹೋರಾಡಿ, ಪಾಂಡವರನ್ನು ಕೊಲ್ಲಬಲ್ಲರು. ಕಬ್ಬಿಣ ಮತ್ತು ಉಕ್ಕು ಜತೆಗೂಡಿದ ಆಯುದವು ಹರಿತವಾಗಿರುವಂತೆ ಕರ್ಣನ ಜತೆಗೂಡಿದವರು ಮಾತ್ರ ಹಗೆಗಳನ್ನು ಕೊಲ್ಲಬಲ್ಲರು;
ತಾಮೆ ಬೇರೆ ಕೂರಿದರ್ ಒಳರೇ=ಪಾಂಡವರನ್ನು ಕೊಲ್ಲುವಂತಹ ಬೇರೆ ಶೂರರು ಯಾರಿದ್ದಾರೆ;
ಕಾನೀನನ್… ದ್ರೋಣ ನದೀಸೂನುಗಳ್ ಅಳಿದಿಮ್ ಬಳಿಕ್ಕೆ… ಪೆರರ್ ಎನಗಿಲ್ಲ ಎಂದು… ಆನೆ ಗಳಿತಾಶ್ರುಜಲದಿಮ್ ಸೇನಾಪತ್ಯಾಭಿಷೇಕಮಮ್ ಮಾಡಿದಪೆನ್=ಬೀಶ್ಮರು ಸೋತು ಸರಳ ಮಂಚದ ಮೇಲೆ ಮಲಗಿದ ನಂತರ… ಸೇನಾದಿಪತಿಗಳಾದ ದ್ರೋಣ ಮತ್ತು ಕರ್ಣ ಸತ್ತ ನಂತರ, ನನ್ನ ಪಾಲಿಗೆ ಬೇರೆಯವರು ಯಾರು ಇಲ್ಲವೆಂಬುದನ್ನು ಅರಿತುಕೊಂಡು, ಸುರಿಯುತ್ತಿರುವ ನನ್ನ ಕಣ್ಣೀರಿನಿಂದ ಸೇನಾಪತಿಯನ್ನು ಪಟ್ಟವನ್ನು ನನಗೆ ನಾನೇ ಕಟ್ಟಿಕೊಳ್ಳುವೆನು;
ಯುವರಾಜನುಮ್ ಅಂಗರಾಜನುಮ್ ಇರ್ವರುಮ್ ಎನಗೆ ಎರಡುಮ್ ತೋಳ್ ಎರಡು ಕಣ್ಗಳ್=ಯುವರಾಜ ದುಶ್ಶಾಸನ ಮತ್ತು ಅಂಗರಾಜ ಕರ್ಣ-ಇಬ್ಬರೂ ನನ್ನ ಎರಡು ತೋಳುಗಳು… ಎರಡು ಕಣ್ಣುಗಳು;
ಅನ್ನರೆ ಪೋರೆನೆ=ಅಂತಹವರೇ ಸಾವನ್ನಪ್ಪಿ ಇಲ್ಲವಾಗಿರುವಾಗ;
ಸಂಜಯ ಮತ್ತಮ್ ಎನಗೆ ಮಾನಸವಾಳೇ=ಸಂಜಯನೇ, ಮತ್ತೆ ನಾನು ಬದುಕಿ ಬಾಳಬೇಕೆ;
ದಿನಕರತನಯನ್ ಕಳಿದನ್=ಸೂರ್ಯಪುತ್ರನಾದ ಕರ್ಣನು ಸಾವನ್ನಪ್ಪಿದನು;
ಯುವರಾಜನಪ್ಪ ದುಶ್ಶಾಸನನುಮ್ ಕಳಿದನ್=ಯುವರಾಜನಾಗಿದ್ದ ದುಶ್ಶಾಸನನು ಇನ್ನಿಲ್ಲವಾದನು;
ತುಳಿಲಾಳ್=ಶೂರ/ವೀರ;
ತುಳಿಲಾಳ್ಗಳನ್ ಇರ್ವರುಮನ್ ಕಳಿಪಿ=ಶೂರರಾಗಿದ್ದ ಅವರಿಬ್ಬರನ್ನು ಕಳೆದುಕೊಂಡು;
ಸುಯೋಧನನ ಬಾಳ್ವುದಮ್ ನಂಬಿದಿರೇ=ಸುಯೋದನನು ಬಾಳುತ್ತಾನೆ ಎಂಬುದನ್ನು ನಂಬುತ್ತೀರಾ/ಅವರಿಬ್ಬರಿಲ್ಲದ ಲೋಕದಲ್ಲಿ ನಾನು ಒಲವು ನಲಿವು ನೆಮ್ಮದಿಯಿಂದ ಬಾಳಲಾರೆ;
ಎನಗೆ ಮನಮಿಂದು ಶೂನ್ಯಮ್=ನನ್ನ ಮನಸ್ಸು ಇಂದು ಬರಿದಾಗಿದೆ. ನನ್ನ ಮನದಲ್ಲಿ ಯಾವೊಂದು ಆಸೆ, ಒಲವು ನಲಿವು ನೆಮ್ಮದಿ ಇಲ್ಲವಾಗಿದೆ. ಬಾವನೆಗಳೇ ಸತ್ತುಹೋಗಿವೆ;
ಮನೆ ಶೂನ್ಯಮ್=ಜತೆಯಲ್ಲಿ ಹುಟ್ಟಿದ ತಮ್ಮಂದಿರನ್ನು ಮತ್ತು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಕಳೆದುಕೊಂಡು ಮನೆಯು ಬರಿದಾಗಿದೆ;
ಬೀಡು ಶೂನ್ಯಮಾದುದು=ಹನ್ನೊಂದು ಅಕ್ಶೋಹಿಣಿ ಸೇನೆಯಿಂದ ಕೂಡಿದ್ದ ರಣರಂಗದ ಶಿಬಿರವೆಲ್ಲವೂ ಬರಿದಾಗಿದೆ; ಸೇನೆಯಲ್ಲಿದ್ದ ಕಾದಾಳುಗಳೆಲ್ಲರೂ ಸಾವನ್ನಪ್ಪಿದ್ದಾರೆ;
ಸಕಲ ಅವನಿ ಶೂನ್ಯಮಾಯ್ತು=ನನ್ನ ಬಂದುಬಾಂದವರು, ತಮ್ಮಂದಿರು, ಮಕ್ಕಳು ಮತ್ತು ಪರಿಜನರೆಲ್ಲರೂ ಅಳಿದು ನನ್ನ ಪಾಲಿಗೆ ಈ ಬೂಮಂಡಲವೆಲ್ಲವೂ ಬರಿದಾಗಿದೆ;
ದುಶ್ಶಾಸನನಿಲ್ಲದೆ… ಕರ್ಣನಿಲ್ಲದೆ… ಆನ್ ಎಂತು ಇರ್ಪೆನ್=ದುಶ್ಶಾಸನನಿಲ್ಲದೆ… ಕರ್ಣನಿಲ್ಲದೆ… ಈ ಲೋಕದಲ್ಲಿ ನಾನು ಹೇಗೆ ತಾನೆ ಬಾಳಲಿ;
ಸರಸಿಜ=ಕಮಲ; ಸರಸಿಜಬಾಂಧವ=ಸೂರ್ಯ; ಸರಸಿಜಬಾಂಧವತನಯ=ಸೂರ್ಯಪುತ್ರನಾದ ಕರ್ಣ;
ಬಾಂಧವರಮ್… ಸರಸಿಜಬಾಂಧವತನಯನುಮನ್… ಎನ್ನ ತಮ್ಮನುಮನ್ ಇರಿಸಿ=ಬಂದು ಜನರನ್ನು… ಕರ್ಣನನ್ನು… ನನ್ನ ತಮ್ಮನಾದ ದುಶ್ಶಾಸನನ್ನು ರಣರಂಗದಲ್ಲಿ ಬಲಿಕೊಟ್ಟಿರುವ ನಾನು ಈಗ;
ನಮ್ಮ ಅಂಧ ನರೇಂದ್ರನ ಮೊಗಮನ್… ಗಾಂಧಾರಿಯ ಮೊಗಮನ್… ಆವ ಮೊಗದೊಳೆ ನೋಳ್ಪೆನ್ ಎನೆ=ಕುರುಡ ರಾಜನಾದ ನಮ್ಮ ತಂದೆ ದ್ರುತರಾಶ್ಟ್ರನ ಮೊಗವನ್ನು… ತಾಯಿ ಗಾಂದಾರಿಯ ಮೊಗವನ್ನು… ಅದಾವ ಮೊಗದಲ್ಲಿ ನೋಡಲಿ ಎಂದು ದುರ್ಯೋದನನು ತನ್ನ ಮನದ ಹಿಂಜರಿಕೆಯನ್ನು ತೋಡಿಕೊಂಡಾಗ;
ಸಂಜಯನ್ ಆ ಪ್ರಸ್ತಾವದೊಳ್=ಸಂಜಯನು ಆ ಸಮಯದಲ್ಲಿ;
ಭೀಷ್ಮ ದ್ರೋಣ ಕರ್ಣ ದುಶ್ಶಾಸನ ಶಲ್ಯ ಶಕುನಿ ಸೈಂಧವ ಭೂರಿಶ್ರವ ಸೋಮದತ್ತ ಭಗದತ್ತ ಸೌಬಲ ಬೃಹದ್ಬಲ ಬಾಹ್ಲೀಕ ವಿಂದಾನುವಿಂದಾದಿಗಳ ಸಾವಿನೊಳ್=ಬೀಶ್ಮ ದ್ರೋಣ ಕರ್ಣ ದುಶ್ಶಾಸನ ಶಲ್ಯ ಶಕುನಿ ಸೈಂದವ ಬೂರಿಶ್ರವ ಸೋಮದತ್ತ ಬಗದತ್ತ ಸೌಬಲ ಬೃಹದ್ಬಲ ಬಾಹ್ಲೀಕ ವಿಂದಾನುವಿಂದಾದಿಗಳ ಸಾವಿನಿಂದಾಗಿ;
ಸರ್ವಾಂಗವಿಕಳರಾಗಿರ್ದ ಧೃತರಾಷ್ಟ್ರ ಗಾಂಧಾರಿಯರ ಚರಣಾರವಿಂದ ವಂದನಮ್ ಗೆಯ್ದು=ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಗಾಸಿಗೊಂಡಿರುವ ದ್ರುತರಾಶ್ಟ್ರ ಮತ್ತು ಗಾಂದಾರಿಯರು ಪಾದಕಮಲಗಳಿಗೆ ನಮಿಸಿ;
ದೇವರ ಮನಃ ಕ್ಷತಮನ್ ಆರಿಸಲ್ವೇಳ್ಪುದು=ದೇವರ ಸ್ವರೂಪರಾಗಿರುವ ನಿನ್ನ ತಾಯಿತಂದೆಯ ಮನಸ್ಸಿನ ಯಾತನೆಯನ್ನು ಹೋಗಲಾಡಿಸಬೇಕು;
ಬೀಡಿಂಗೆ ಬಿಜಯಂಗೆಯ್ವುದು ಎನೆ=ಅದಕ್ಕಾಗಿ ಈಗ ನೀನು ಹಸ್ತಿನಾವತಿಯತ್ತ ತೆರಳುವುದು ಎಂದು ಸಂಜಯನು ದುರ್ಯೋದನನಿಗೆ ಹೇಳಲು; ಸವಳದೆ=ಬೆಳಗಿನ ಹೊತ್ತು;
ಸವಳದೆ ಯುವರಾಜನುಮ್ ಅಂಗರಾಜನುಮ್ ಬೆರಸು ಗುರುಜನದಲ್ಲಿಗೆ ರಣೋತ್ಸವದಿಮ್ ಪೋಗಲ್=ಪ್ರತಿದಿನ ಬೆಳಗ್ಗೆ ಯುವರಾಜ ದುಶ್ಶಾಸನ ಮತ್ತು ಅಂಗರಾಜ ಕರ್ಣನ ಜತೆಗೂಡಿ ತಾಯ್ತಂದೆಯರ ಮತ್ತು ಗುರುಹಿರಿಯರ ಬಳಿಗೆ ಅತ್ಯಂತ ಉತ್ಸಾಹದಿಂದ ಆಶೀರ್ವಾದವನ್ನು ಪಡೆಯಲು ಹೋಗುತ್ತಿದ್ದವನು;
ಅವರ್ ಇರ್ವರುಮ್ ಇಲ್ಲದೆ=ಅವರಿಬ್ಬರೂ ಇಲ್ಲದೆ;
ಈಗಳ್ ಅಲ್ಲಿಗೆ ಪೋಗಲ್ ನಾಣ್ಚುವೆನ್=ಈಗ ಒಬ್ಬಂಟಿಯಾಗಿ ಗುರುಹಿರಿಯರ ಬಳಿಗೆ ಹೋಗಲು ನಾಚಿಕೆಯಾಗುತ್ತಿದೆ;
ಸಂಜಯ, ಪತಿಶೋಕವಿಕಳ ಪಾರ್ಥಿವ ನಿತಂಬಿನೀಜನಮನ್=ಸಂಜಯ, ತಮ್ಮ ಗಂಡಂದಿರನ್ನು ಕಳೆದುಕೊಂಡು ಅತಿಸಂಕಟದಿಂದ ಗೋಳಾಡುತ್ತಿರುವ ರಾಜರ ಹೆಂಡತಿಯರನ್ನು;
ಎನ್ನ ಇರ್ಪ ಇರವಿಂದೆ ಈಕ್ಷಿಸಲ್ ಲಜ್ಜಿತನೆನ್=ಈಗ ನಾನು ಇರುವ ಸ್ತಿತಿಯಲ್ಲಿ ಅವರೆಲ್ಲರನ್ನು ನೋಡಲು ನಾಚಿಕೆಯಿಂದ ಕುಗ್ಗಿಹೋಗಿದ್ದೇನೆ;
ಏಕೆ ತೋರ್ಪೆನ್ ಆನ್ ಮೊಗಮಮ್=ನಾನು ಹೇಗೆ ತಾನೆ ಅವರಿಗೆ ನನ್ನ ಮೊಗವನ್ನು ತೋರಲಿ
ಅತಿದುಃಖಿತನೆನ್ ಎಂಬನ್ನೆಗಮ್=ಬಂದುಬಾಂದವರೆಲ್ಲರ ಸಾವುನೋವುಗಳಿಗೆ ಕಾರಣನಾಗಿ ಅತಿಸಂಕಟದಿಂದ ಬಳಲುತ್ತಿದ್ದೇನೆ ಎಂದು ದುರ್ಯೋದನನು ಸಂಜಯನೊಡನೆ ಹೇಳಿಕೊಂಡಾಗ;
ಚತುರಂಗಬಲ= ಆನೆ/ ಕುದುರೆ/ ತೇರು/ಕಾಲ್ದಳದಿಂದ ಕೂಡಿದ ಸೇನೆ;
ಸಕಲ ಚತುರಂಗಬಲ ವಿಕಳನಾಗಿ=ಚತುರಂಗಬಲವೆಲ್ಲವನ್ನೂ ಕಳೆದುಕೊಂಡು; ಸಪ್ತಾಂಗ=ಏಳು ಬಗೆಗಳು; ಸಪ್ತಾಂಗರಾಜ್ಯ=ರಾಜ-ಮಂತ್ರಿ-ಮಿತ್ರ-ಬೊಕ್ಕಸ-ನಾಡು-ದುರ್ಗ-ಸೇನೆ ಎಂಬ ಏಳು ಬಗೆಯ ಸಂಪತ್ತಿನಿಂದ ಕೂಡಿದ ರಾಜ್ಯ; ಸಮಾಲಿಂಗಿತ= ಎಲ್ಲವನ್ನು ಒಳಗೊಂಡ;
ಸಪ್ತಾಂಗರಾಜ್ಯ ಸಮಾಲಿಂಗಿತನಾಗಿ=ರಾಜ್ಯದ ಏಳು ಬಗೆಯ ಸಂಪತ್ತೆಲ್ಲವನ್ನೂ ತಾನೊಬ್ಬನೇ ಒಳಗೊಂಡು; ಏಳು ಬಗೆಯ ಸಂಪತ್ತಿನಲ್ಲಿ ದುರ್ಯೋದನನೊಬ್ಬನನ್ನು ಬಿಟ್ಟು ಉಳಿದುದೆಲ್ಲವನ್ನೂ ಕಳೆದುಹೋಗಿದೆ;
ಸಂಗ್ರಾಮರಂಗದೊಳ್ ಇರ್ದನ್ ಎಂಬುದಮ್ ಆಪ್ತಚರರ್ ಅರಿಪೆ ಕೇಳ್ದು ಗಾಂಧಾರಿಯುಮ್ ಧೃತರಾಷ್ಟ್ರನುಮ್ ಶೋಕಾಕುಲೀಕೃತಚಿತ್ತರಾಗಿ=ರಣರಂಗದಲ್ಲಿ ದುರ್ಯೋದನನು ಇದ್ದಾನೆ ಎಂಬ ಸುದ್ದಿಯನ್ನು ಆಪ್ತಸೇವಕರು ಹೇಳಲು, ಅದನ್ನು ಕೇಳಿದ ಗಾಂದಾರಿ ಮತ್ತು ದ್ರುತರಾಶ್ಟ್ರ ದಂಪತಿಗಳು ಮನದಲ್ಲಿ ಸಂಕಟದ ಬೇಗುದಿಯಿಂದ ಬೇಯುತ್ತ;
ತಮ್ಮ ಮಗನನ್ ಆರಯ್ಯಲುಮ್ ಮನಃಕ್ಷತಮನ್ ಆರಿಸಲುಮ್ ಎಂದು ಅರಸುತ್ತುಮ್ ಬಂದು=ತಮ್ಮ ಮಗನ ಕಶ್ಟನಶ್ಟವನ್ನು ವಿಚಾರಿಸಿ, ಅವನ ಮನಸ್ಸಿನ ಸಂಕಟವನ್ನು ನಿವಾರಿಸಲೆಂದು ರಣರಂಗದಲ್ಲಿ ಹುಡುಕುತ್ತ ಬರುತ್ತ;
ಪಡೆ ಪನ್ನೊಂದಕ್ಷೋಹಿಣಿಗೆ ಒಡೆಯನೆ=ಹನ್ನೊಂದು ಅಕ್ಶೋಹಿಣಿ ಸೇನೆಗೆ ಒಡೆಯನಾಗಿರುವವನೇ;
ಮೂರ್ಧಾಭಿಷಕ್ತನಯ್=ಪಟ್ಟಾಬಿಶಕ್ತನಾಗಿರುವ ದೊರೆಯೇ; ಬೆಳ್ಗೊಡೆ=ರಾಜತನದ ಸಂಕೇತವಾಗಿರುವ ರಾಜಲಾಂಚನವಾದ ದೊಡ್ಡ ಆಕಾರದ ಬಿಳಿಯ ಕೊಡೆ;
ಮೂರುಮ್ ಬೆಳ್ಗೊಡೆಯ ನಡುವಿರ್ಪ=ಮೂರು ಬೆಳ್ಗೊಡೆಗಳ ನಡುವೆ ಇರುವ ಮಹಾರಾಜನೇ;
ನೀನ್ ಇರ್ದ ಎಡೆಯುಮ್… ಅದು ಎಮಗೆ ಅರಿಯದಂತುಟಾದುದೆ ಮಗನೇ ಎಂದು ಪಳಿಯಿಸುತ್ತುಮ್ ಬರ್ಪ=ನೀನು ಇರುವ ಜಾಗ ಯಾವುದೆಂಬುದು ನಮಗೆ ತಿಳಿಯದಂತಾಯಿತೇ ಮಗನೇ ಎಂದು ಗೋಳಾಡುತ್ತ ಬರುತ್ತಿರುವ; ಕುರುಕ್ಶೇತ್ರ ಯುದ್ದಕ್ಕೆ ಮೊದಲು ದುರ್ಯೋದನನ ಮುಂದೆ… ಹಿಂದೆ… ಅಕ್ಕಪಕ್ಕದಲ್ಲಿ ಬೆಳ್ಗೊಡೆಗಳಿಂದ ಕಂಗೊಳಿಸುತ್ತಿದ್ದ ದೊಡ್ಡ ಸೇನಾಬಲದ ರಾಜಪರಿವಾರವಿರುತ್ತಿತ್ತು. ಆದರೆ ಈಗ ಅವೆಲ್ಲವನ್ನೂ ಕಳೆದುಕೊಂಡು ಒಬ್ಬಂಟಿಯಾಗಿರುವ ರಾಜ ದುರ್ಯೋದನನ್ನು ಅವನ ರಾಜ್ಯದಲ್ಲಿಯೇ ಹುಡುಕಬೇಕಾದ ದುರಂತ ಒದಗಿ ಬಂದಿದೆ;
ಗುರುಜನದ ಸರಮಮ್ ಸಂಜಯನ್ ಅರಿದು=ಹಿರಿಯರಾದ ಗಾಂದಾರಿ ಮತ್ತು ದ್ರುತರಾಶ್ಟ್ರನ ಗೋಳಿನ ದನಿಯನ್ನು ಸಂಜಯನು ಆಲಿಸಿ;
ಕರಕಮಲ ಮುಕುಳಿತ ಅಂಜಲಿಯಾಗಿ=ತಾವರೆ ಮೊಗ್ಗಿನಂತೆ ಮುಚ್ಚಿಕೊಂಡಿರುವ ತನ್ನ ಬೊಗಸೆ ಕಯ್ಯಿಂದ ಸಂಜಯನು ದುರ್ಯೋದನನಿಗೆ ನಮಿಸುತ್ತ;
ದೇವಾ, ನಿನ್ನಲ್ಲಿಗೆ ನಿಜ ಜನನೀ ಜನಕರ್ ಅರಸುತ್ತುಮ್ ಬಂದರ್ ಎಂಬುದುಮ್=ದೇವಾ, ನಿನ್ನ ಬಳಿಗೆ ನಿನ್ನ ತಾಯಿ ತಂದೆ ಹುಡುಕಿಕೊಂಡು ಬಂದರು ಎಂದು ಹೇಳಲು;
ಉದ್ಧೃತ ಗೋತ್ರಾಭಿಮುಖನ್… ವಜ್ರಾಘಾತಮ್ ಆದಂತೆ ಸಿಗ್ಗಾಗಿ… ತಲೆಯಮ್ ಬಾಗಿ=ತಲೆಯೆತ್ತಿ ನಿಂತಿದ್ದ ದುರ್ಯೋದನನು ಎತ್ತರವಾಗಿದ್ದ ಬೆಟ್ಟಕ್ಕೆ ಸಿಡಿಲು ಬಡಿದಂತಾಗಿ ಗಾಸಿಕೊಂಡು, ಅಪಮಾನದಿಂದ ತಲೆಯನ್ನು ತಗ್ಗಿಸಿ;
ಅರಿಭೂಪಾಲರನ್ ಇಕ್ಕಿ ಗೆಲ್ದ ಒಸಗೆಯಿಮ್ ತೂರ್ಯತ್ರಯಮ್ ಪೊಣ್ಮೆ=ಹಗೆಗಳಾದ ರಾಜರನ್ನು ಕೊಂದು ಜಯದ ಉತ್ಸವದ ವಾದ್ಯಗಳ ದನಿಯು ಹೊರಹೊಮ್ಮುತ್ತಿರಲು;
ಸೋದರರುಮ್ ಮಕ್ಕಳುಮ್ ಆಪ್ತರುಮ್ ಬೆರಸು ಬಂದು=ತಮ್ಮಂದಿರು, ಮಕ್ಕಳು ಮತ್ತು ಆತ್ಮೀಯರ ಜತೆಗೂಡಿ ಬಂದು;
ಆನಂದದಿಮ್ ಮದ್ಗುರುಗಳಮ್ ಕಾಣ್ಬೆನ್ ಎಂದಿರಲ್=ಆನಂದದಿಂದ ನನ್ನ ಗುರುಹಿರಿಯರನ್ನು ನೋಡುತ್ತೇನೆ ಎಂದು ಕೊಂಡಿರಲು; ವಿಧಾತ್ರ=ಬ್ರಹ್ಮನೆಂಬ ದೇವರು; ಉದಶ್ರು=ಉಕ್ಕಿ ಹರಿಯುತ್ತಿರುವ ಕಣ್ಣೀರು; ಉದಶ್ರುಮುಖರ್=ಕಣ್ಣೀರಿನ ಕೋಡಿಯಿಂದ ಕೂಡಿದ ಮೊಗವನ್ನುಳ್ಳವರು;
ವಿಧಾತ್ರ, ದುಃಖಾತ್ಮರಮ್… ಶೋಕತತ್ಪರರಮ್… ಮೆಯ್ಯೊಳೆ ಬೀಳ್ವ ಉದಶ್ರುಮುಖರಮ್ ಕಾಣ್ಬಂತುಟಮ್ ಮಾಡಿದಯ್=ಎಲೆ ಬ್ರಹ್ಮನೇ… ಸಂಕಟಕ್ಕೆ ಒಳಗಾದವರನ್ನು… ಬಂದುಬಾಂದವರನ್ನು ಕಳೆದುಕೊಂಡು ಅಗಲಿಕೆಯ ತಾಪದಿಂದ ಗೋಳಾಡುವವರನ್ನು… ಸಂಕಟವನ್ನು ತಡೆಯಲಾರದೆ ಕಣ್ಣೀರಿನ ಕೋಡಿಯಿಂದ ಕೂಡಿದ ಗುರುಹಿರಿಯರ ಮೊಗವನ್ನು ಕಾಣುವಂತೆ ಮಾಡಿದೆ;
ಕಂದ, ನಿಜಾನುಜರ್ ಎಲ್ಲಿದರ್ ಎಂದು… ಎನ್ನನ್ ಜನನಿ ಬಂದು ಬೆಸಗೊಂಡೊಡೆ=“ಮಗನೇ, ನಿನ್ನ ಒಡಹುಟ್ಟಿದವರು ಎಲ್ಲಿದ್ದಾರೆ” ಎಂದು ತಾಯಿಯು ಬಂದು ಕೇಳಿದರೆ;
ಅದೇನೆಂದು ಮರುಮಾತು ಕುಡುವೆನ್=ಅದೇನೆಂದು ಉತ್ತರವನ್ನು ಕೊಡಲಿ;
ಕೌಂತೇಯರ್ ಕೊಂದರ್ ಎಂದು ಬಿನ್ನೈಸುವೆನೋ=ಪಾಂಡವರು ಕೊಂದರು ಎಂದು ಹೇಳಲೇನು;
ಶೋಕಮ್ ಮಿಗೆ=ಎಂದು ಹೇಳುತ್ತಿದ್ದಂತೆಯೇ ಶೋಕವು ಹೆಚ್ಚಾಗಲು;
ವಿಗಳಿತ ವಿವೇಕನ್… ಅವಿರಳ ಬಾಷ್ಪೋದ್ರೇಕನ್ ಫಣಿರಾಜಪತಾಕನ್=ಸಂಕಟದ ತೀವ್ರತೆಯಲ್ಲಿ ಅರಿವನ್ನು ಕಳೆದುಕೊಂಡವನು… ಒಂದೇ ಸಮನೆ ಅಳುತ್ತಿರುವವನು ಆದ ದುರ್ಯೋದನನು;
ಹಾ ದುಶ್ಶಾಸನ… ಹಾ ಕರ್ಣ… ಎನುತಮ್ ಅಂತೆ ಮೂರ್ಛೆಗೆ ಸಂದನ್=ಹಾ ದುಶ್ಶಾಸನ… ಹಾ ಕರ್ಣ… ಎಂದು ಪ್ರಲಾಪಿಸುತ್ತ… ಪ್ರಜ್ನೆಯನ್ನು ಕಳೆದುಕೊಂಡು ಕೆಳಕ್ಕೆ ಬಿದ್ದನು;
(ಚಿತ್ರ ಸೆಲೆ: jainheritagecentres.com)
ಇತ್ತೀಚಿನ ಅನಿಸಿಕೆಗಳು