ಯಾವುದು ಕನ್ನಡದ ಸೊಗಡು?

ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 5

nudi_inukuಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದ ಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.

ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.

ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.

ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.

ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.

ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.

ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.

ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.

ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.

ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.

ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.

ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.

ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.

ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.

ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.

ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 4

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 04/09/2013

    […] << ನುಡಿಯರಿಮೆ ಇಣುಕುನೋಟ – 5 […]

  2. 07/09/2013

    […] << ನುಡಿಯರಿಮೆಯ ಇಣುಕುನೋಟ – 5 […]

ಅನಿಸಿಕೆ ಬರೆಯಿರಿ:

%d bloggers like this: