ತಾಯ್ನುಡಿಯಲ್ಲಿನ ಕಲಿಕೆ ಮತ್ತು ಸುಪ್ರೀಂ ಕೋರ‍್ಟ್ ತೀರ‍್ಪು

– ಅನ್ನದಾನೇಶ ಶಿ. ಸಂಕದಾಳ.

gavel scale book

 

ಕರ‍್ನಾಟಕದ ಶಾಲೆಗಳಲ್ಲಿ ಕಲಿಕೆಯ ನುಡಿಯಾಗಿ ತಾಯ್ನುಡಿಯನ್ನು ಬಳಸುವುದರ ಕುರಿತು ಮೇರು ತೀರ‍್ಪುಮನೆ(ಸುಪ್ರಿಂ ಕೋರ‍್ಟ್)ಯ ತೀರ‍್ಪು ಮೊನ್ನೆಯಶ್ಟೆ ಹೊರಬಿದ್ದಿದೆ. ಒಂದರಿಂದ ನಾಲ್ಕನೇ ತರಗತಿವರೆಗೂ ಎಲ್ಲಾ ( ಸರಕಾರೀ-ಕಾಸಗಿ) ಶಾಲೆಗಳಲ್ಲಿ ಕನ್ನಡದಲ್ಲಿ(ಪರಿಸರದ ನುಡಿ) ಅತವ ತಾಯ್ನುಡಿಯಲ್ಲಿ(ಕನ್ನಡೇತರ ನುಡಿಯನ್ನು ತಾಯ್ನುಡಿಯಾಗಿ ಹೊಂದಿರುವವರಿಗೆ ಅವರ ನುಡಿಯಲ್ಲೇ) ಕಲಿಸಬೇಕು ಎಂಬುದನ್ನು ಕಡ್ಡಾಯ ಮಾಡಲು ಕರ‍್ನಾಟಕ ಸರಕಾರ ಆದೇಶವೊಂದನ್ನು 1994 ರಲ್ಲಿ ಹೊರಡಿಸಿತ್ತು. ಆ ಆದೇಶವು, ತಮ್ಮ ಮಕ್ಕಳಿಗೆ ಬೇಕಾದ ಕಲಿಕೆ ನುಡಿಯನ್ನು ಆಯ್ಕೆ ಮಾಡಿಕೊಳ್ಳುವ ತಂದೆ-ತಾಯಿಯರ ಹಕ್ಕನ್ನು ಕಸಿದುಕೊಳ್ಳುತ್ತದೆ ಮತ್ತು ಸಂವಿದಾನದ ಆಶಯಕ್ಕೆ ವಿರೋದವಾಗಿದೆ ಎಂಬ ತೀರ‍್ಮಾನಕ್ಕೆ ಬಂದ ತೀರ‍್ಪುಗಾರರು, ಕಲಿಕೆ ನುಡಿಯಾಗಿ ಕನ್ನಡವೇ ಆಗಬೇಕೆಂಬುದು ಸರಿಯಲ್ಲ ಮತ್ತು ಕಡ್ಡಾಯವಲ್ಲ ಎಂಬ ತೀರ‍್ಪನಿತ್ತಿದೆ.

ಜಾಗತೀಕರಣದ ಈ ಹೊತ್ತಿನಲ್ಲಿ ಅದರ ಅನುಕೂಲ ಪಡೆಯಲು ಇಂಗ್ಲೀಶ್ ಬೇಕೇ ಬೇಕು ಎಂಬ (ತಪ್ಪು) ತಿಳುವಳಿಕೆ ಮನೆ ಮಾಡಿದ್ದು ಇಂಗ್ಲೀಶ್ ಮಾದ್ಯಮದ ಕಲಿಕೆಯ ಪರವಾಗಿ ಈ ತೀರ‍್ಪಿದೆ. ಕಲಿಕೆ ಎಂಬುದು ಸರಕಾರದ ಜವಾಬ್ದಾರಿಯಾಗಿದ್ದರೂ ಕೂಡ, ಒಂದು ನಾಡಿನ ಜನರ ಕಲಿಕೆ ಏರ‍್ಪಾಡಿನ ಬಗ್ಗೆ ರೀತಿ-ನೀತಿ ಮಾಡುವ ಅದಿಕಾರ, ಆ ನಾಡಿನ ಆಡಳಿತ ನಡೆಸುವ ಸರಕಾರಕ್ಕಿಲ್ಲ ಎಂದು ಈ ತೀರ‍್ಪು ತೋರಿಸಿಕೊಟ್ಟಿದೆ. ಇದು ಎಂತಾ ಅಣಕಾಟ ಅಲ್ಲವೇ?

ಈ ತೀರ‍್ಪಿನ ಹಿಂದೆ ಕಾಸಗಿ ಶಾಲೆ ನಡೆಸುವುವರ ಕಯ್ವಾಡ ಇದೆ, ಇದು ಕಾಸಗಿಯವರ ಮೇಲೆ ಸರಕಾರದ ಹಿಡಿತ ತಪ್ಪಿಸಿ ಅವರಿಗೆ ಅನುಕೂಲ ಮಾಡಿಕೊಡುತ್ತದೆ, ಕನ್ನಡಕ್ಕೆ ಇದರಿಂದ ಹಿನ್ನಡೆಯಾಗುತ್ತದೆ, ತೀರ‍್ಪು ಸರಿಯಿಲ್ಲ ಎಂಬ ಅನಿಸಿಕೆಗಳನ್ನು ಸುದ್ದಿಹಾಳೆಗಳಲ್ಲಿ ಟಿ ವಿ ಗಳಲ್ಲಿ ನೋಡುತ್ತಿದ್ದೇವೆ. ಇಂತ ಅನಿಸಿಕೆಗಳು ಸರಿಯಿವೆ ಅಂತ ಅನಿಸಿದರೂ, ನಮ್ಮ ಮುಂದಿರುವ ಸಮಸ್ಯೆ ಕೇವಲ ಅನಿಸಿಕೆಗಳಿಂದ ಬಗೆಹರಿಯುವುದೇ? ಸರಕಾರದವರೂ ಕೂಡ, ಈ ತೀರ‍್ಪನ್ನು ಪೂರ‍್ತಿಯಾಗಿ ಓದಿ, ಸರಿಯಾಗಿ ಯೋಚಿಸಿ ಮುಂದೆ ಏನು ಮಾಡಬಹುದು ಎಂದು ನೋಡುವೆವು ಎಂದು ಹೇಳುತ್ತಿದ್ದಾರೆ. ಹಾಗಾದರೆ ಸರಕಾರಕ್ಕೆ, ನಿಜಕ್ಕೂ ಕನ್ನಡಿಗರ ಏಳಿಗೆ ಬಗ್ಗೆ ಕಾಳಜಿ ಇದ್ದರೆ ಏನು ಮಾಡಬೇಕು?ಅವರ ಮುಂದಿನ ಹೆಜ್ಜೆ ಏನಿರಬೇಕು? ಎಂಬ ಕೇಳ್ವಿಗಳಿಗೆ ಉತ್ತರಗಳು ಹೀಗೆ ಕಂಡು ಬರುತ್ತವೆ.

ಮೊದಲಿಗೆ “ತಾಯ್ನುಡಿಯಲ್ಲಿನ ಕಲಿಕೆ ಇರಲಿ” ಎಂಬುವುದನ್ನು ಕನ್ನಡದ ಮೇಲಿನ ಅಬಿಮಾನದಿಂದ ಹೇಳುವರು ಎಂದೇ ತಿಳಿದುಕೊಳ್ಳಲಾಗುತ್ತದೆ. ಇದು ತಪ್ಪು ತಿಳುವಳಿಕೆ ಆಗಿದ್ದು ತಾಯ್ನುಡಿಯಲ್ಲಿನ ಕಲಿಕೆ ಯಾಕೆ ಸರಿ ಎಂದು ತಿಳಿದುಕೊಳ್ಳಬೇಕು. ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲದಿರುವ ನುಡಿಯಲ್ಲಿನ ಕಲಿಕೆಯಿಂದ ವಿಶಯಗಳನ್ನು ಸರಿಯಾಗಿ ತಿಳಿಯಲು ತೊಡಕಾಗುವುದು ಎಂದೂ, ತಾಯ್ನುಡಿಯನ್ನು ಸರಿಯಾಗಿ ಕಲಿತರೆ ಅದರ ಮೂಲಕ ಬೇರೆ ನುಡಿಗಳನ್ನೂ, ವಿಶಯಗಳನ್ನೂ ಸರಿಯಾಗಿ ಕಲಿಯಬಹುದಾಗಿದೆ ಎಂದು ಕಲಿಕೆಯರಿಮೆಯ ಅರಕೆಗಳು(ಸಂಶೋದನೆಗಳು) ತೋರಿಸಿಕೊಟ್ಟಿವೆ. ಇದಕ್ಕೆ ಇಂಬು ಕೊಡುವಂತೆ ”ಮುಂದುವರೆದ ನಾಡುಗಳು(ಜಪಾನ್, ಜರ‍್ಮನಿ, ಇಸ್ರೇಲ್ ಇತ್ಯಾದಿ) ” ಎಂಬ ಹಣೆಪಟ್ಟಿ ಹೊಂದಿರುವ ನಾಡುಗಳ ಮೇಲೆ ಕಣ್ಣಾಯಿಸಿದಾಗ ಅವುಗಳು ಆಶ್ಟು ಮುಂದುವರೆಯಲು ಕಾರಣ, ಅಲ್ಲಿನ ಕಲಿಕೆ ಏರ‍್ಪಾಟು ಆ ನಾಡಿನ ನುಡಿಯಲ್ಲಿದೆ ಮತ್ತು ಒಳ್ಳೆಯ ಗುಣಮಟ್ಟದ್ದಾಗಿದೆ ಎನ್ನುವುದು ಗೊತ್ತಾಗುತ್ತದೆ.

ಜಾಗತೀಕರಣವನ್ನು ಎದುರಿಸಲು ಇಂಗ್ಲೀಶ್ ಮೊರೆ ಹೋಗದೆ ತಮ್ಮ ನುಡಿಯನ್ನೇ ಆ ದಿಕ್ಕಿನಲ್ಲಿ ಗಟ್ಟಿಯಾಗಿ ಅಣಿಗೊಳಿಸಿದ್ದಾರೆ. ಆ ನಾಡುಗಳಲ್ಲಿ ಮೊದಲ ಹಂತದಿಂದ ಹಿಡಿದು ದೊಡ್ಡ ಹಂತದವರೆಗಿನ ಕಲಿಕೆಯು ಅವರ ನುಡಿಗಳಲ್ಲೇ ಇದೆ. ಅದರಿಂದಲೇ ಆ ನಾಡುಗಳಲ್ಲಿ ತಾಯ್ನುಡಿಯಲ್ಲಿನ ಕಲಿಕೆ ಬಗ್ಗೆ ಗೊಂದಲ, ದಿಗಿಲು , ಅಪನಂಬಿಕೆ ಎಂಬುದಿಲ್ಲ. ಆದರೆ ಕರ‍್ನಾಟಕದಲ್ಲಿ ಇಂಜಿನಿಯರಿಂಗ್ ಮೆಡಿಕಲ್, ಮ್ಯಾನೇಜ್ಮೆಂಟ್, ಡಿಗ್ರೀ – ಇಂತ ಯಾವ ವಿಶಯಗಳ ಕಲಿಕೆಯೂ ಕನ್ನಡದಲ್ಲಿಲ್ಲ. ಪಯ್ಪೋಟಿಯಲ್ಲಿ ಗೆಲ್ಲಲು ಅಣಿ ಮಾಡುವಂತ ಅತವ ಒಳ್ಳೆಯ ಮುಮ್ಬೊತ್ತನ್ನು(ಬವಿಶ್ಯ) ಕಾತರಿ ಪಡಿಸುವ ಸರಕು ಕನ್ನಡದಲ್ಲಿದಿದ್ದಾಗ, ಕನ್ನಡದಲ್ಲಿ ಕಲಿಯಿರಿ ಎಂದು ಹೇಳಿದರೆ ಯಾರು ತಾನೇ ಒಪ್ಪಿಯಾರು? ಎಂಬುವುದು ದಿಟವೇ ಆಗಿದೆ . ಆದರಿಂದ ಸರಕಾರ ತಾಯ್ನುಡಿಯಲ್ಲಿ ಕಲಿಕೆ ಕಡ್ಡಾಯ ಮಾಡಿದ್ದುದು ವಯ್ಗ್ನಾನಿಕವಾಗಿ ಸರಿ ಇದ್ದರೂ ನಮ್ಮ ನಾಡಿನಲ್ಲಿ ಕಲಿಕೆಯ ವಿಶಯದಲ್ಲಿನ ಮೇಲೆ ತಿಳಿಸಿದ ಕಾರಣಗಳನ್ನು ಮುಂದು ಮಾಡಿ, ಸರಕಾರವನ್ನು ತಪ್ಪಿತಸ್ತನನ್ನಾಗಿ ಮಾಡಿರುವುದು ಒಂದು ಸಂಚಾಗಿಯೇ ಕಾಣುತ್ತದೆ.

ಜನರಿಗೆ ಏನು ಬೇಕೋ ಅದನ್ನು ನೀಡಿದರೆ ಸಾಕು ಅನ್ನೋ ಮನಸ್ತಿತಿಯನ್ನು ಸರ‍್ಕಾರವು ಮೊದಲು ಬದಲಿಸಿಕೊಬೇಕು. ಕನ್ನಡದ ಕಲಿಕೆಯಲ್ಲಿ ಈಗಿರುವ ತೊಡಕುಗಳೇನು? ಕನ್ನಡದ ಮಕ್ಕಳಿಗೆ ಕಲಿಕೆಯಲ್ಲಾಗುತ್ತಿರುವ ತೊಂದರೆಗಳೇನು? ಹೊಸ ಹೊಸ ವಿಶಯಗಳ ಕಲಿಕೆಯನ್ನು ಕನ್ನಡಕ್ಕೆ ತರಬೇಕೆಂದರೆ ಆಗಬೇಕಿರುವ ಕೆಲಸವೇನು? ಹೊಸ ವಿಶಯಗಳನ್ನು ತಿಳಿಸಲು ಕನ್ನಡದಲ್ಲಿ ಪದಗಳನ್ನು ಹೇಗೆ ಹುಟ್ಟು ಹಾಕುವುದು ಅತವ ಕಟ್ಟುವುದು? – ಹೀಗೆ ಕಲಿಕೆ ಸುತ್ತ ಇರುವ ಹಲವಾರು ಕೆಲಸಗಳ ಬಗ್ಗೆ ಗಂಬೀರ ಯೋಚನೆ ಮಾಡಿ ದೂರಗಾಮಿ ಹಮ್ಮುಗೆಗಳನ್ನು ಹಾಕಿಕೊಳ್ಳಬೇಕಿದೆ. ಕನ್ನಡದಲ್ಲಿ ಗುಣಮಟ್ಟದ ಕಲಿಕೆಯನ್ನು ನೀಡುವುವರನ್ನೂ ಹುರಿದುಮ್ಬಿಸುವ ಕೆಲಸ ಸರಕಾರ ಮಾಡಬೇಕಾಗುತ್ತದೆ. ಕೊನೆಗೆ ಒಳ್ಳೆಯ ಗುಣಮಟ್ಟವೊಂದೇ ಮಂದಿಯನ್ನು ಒಪ್ಪಿಸುವ ದಾರಿ ಎಂಬುದನ್ನು ಸರಕಾರ ಮನಗಾಣಬೇಕು.

ಇದಶ್ಟೆ ಅಲ್ಲದೆ ರಾಜಕೀಯವಾಗಿಯೂ ಕೆಲವು ಕೆಲಸಗಳನ್ನು ಮಾಡಲು ಸರಕಾರವು ಮುಂದಾಗಬೇಕಿದೆ. ಬಿಡುಗಡೆ(ಸ್ವಾತಂತ್ರ) ಸಿಕ್ಕ ನಂತರ ಆಳ್ವಿಕೆಯಲ್ಲಿ “ಒಕ್ಕೂಟ ವ್ಯವಸ್ತೆಯ” ಸೊಗಡು ಕೊಡಲು, ಆಡಳಿತ ವಿಶಯಗಳನ್ನು – ಕೇಂದ್ರ, ರಾಜ್ಯ ಮತ್ತು ಜಂಟಿ ಎಂಬ 3 ಪಟ್ಟಿಗಳಾಗಿ ವಿಂಗಡಿಸಿ ಕೇಂದ್ರ ಮತ್ತು ರಾಜ್ಯಗಳ ಅದಿಕಾರದ ಮಿತಿಯನ್ನು ತೀರ‍್ಮಾನಿಸಲಾಯಿತು. ರಾಜ್ಯ ಪಟ್ಟಿಗಳಲ್ಲಿರುವ ವಿಶಯಗಳ ಬಗ್ಗೆ ಕಾನೂನು ನಿಯಮ ಮಾಡಲು ರಾಜ್ಯಗಳಿಗೆ ಪೂರ‍್ತಿ ಸ್ವಾತಂತ್ರ್ಯವಿರುತ್ತದೆ ಮತ್ತು ಆ ವಿಶಯಗಳಲ್ಲಿ ಕೇಂದ್ರಕ್ಕೆ ಯಾವ ಅದಿಕಾರವೂ ಇರುವುದಿಲ್ಲ(ಕೆಲವು ಸಂದರ‍್ಬ ಹೊರತು ಪಡಿಸಿ). ಹಾಗೆ ಕೇಂದ್ರದ ಪಟ್ಟಿಯಲ್ಲಿರುವ ವಿಶಯಗಳ ಮೇಲೆರಾಜ್ಯಗಳಿಗೆ ಯಾವ ಅದಿಕಾರವೂ ಇರುವುದಿಲ್ಲ. ಜಂಟಿ ಪಟ್ಟಿಯಲ್ಲಿರುವ ವಿಶಯಗಳ ಮೇಲೆ ರಾಜ್ಯಸರ‍್ಕಾರಗಳು ಅದಿಕಾರ ಚಲಾಯಿಸುವಂತಿದ್ದರೂ, ಆ ವಿಶಯಗಳ ಬಗ್ಗೆ ಕೇಂದ್ರ ತಾಳುವ ತೀರ‍್ಮಾನವೇ ಕೊನೆಯದು. ಅಂದರೆ ಜಂಟಿಪಟ್ಟಿಯೂ ಕೇಂದ್ರ ಪಟ್ಟಿಯೇ ಆಗಿದೆ!

ಕಲಿಕೆ ವಿಶಯವು ಮೊದಲಿಗೆ ರಾಜ್ಯ ಪಟ್ಟಿಯಲ್ಲಿತ್ತು ಮತ್ತು ಆಯಾ ರಾಜ್ಯದ ಕಲಿಕಾ ವ್ಯವಸ್ತೆಯನ್ನು ಆಯಾ ರಾಜ್ಯಗಳೇ ರೂಪಿಸುವುದು ಸರಿಯಾದ ಕಟ್ಟುಪಾಡಾಗಿದೆ. ಆದರೆ 1976 ರ ತುರ‍್ತು ಪರಿಸ್ತಿತಿಯಲ್ಲಿ ‘ಕಲಿಕೆ’ ವಿಶಯವನ್ನು ಜಂಟಿಪಟ್ಟಿಗೆ ಸೇರಿಸಿ ರಾಜ್ಯಗಳ ಅದಿಕಾರವನ್ನು ಮೊಟಕುಗೊಳಿಸಲಾಯಿತು. ಅಂದರೆ ರಾಜ್ಯವು ಕಲಿಕೆ ವಿಚಾರದಲ್ಲಿ ತನ್ನ ಇಚ್ಚೆಯಂತೆ ರೀತಿ ನೀತಿಗಳನ್ನು ರೂಪಿಸಿದರೂ, ಕೇಂದ್ರ ಮಾಡುವ ಕಟ್ಟಳೆಗಳೇ ಅಂತಿಮ. ಇದರಿಂದಾಗಿ ರಾಜ್ಯಗಳು ತನ್ನ ನಾಡಿನ ಪ್ರಜೆಗಳಿಗೆ ಏನು ಕಲಿಸಬೇಕು ಎನ್ನುವುದನ್ನು ಕೇಂದ್ರ ತೀರ‍್ಮಾನಿಸುತ್ತದೆ. ನಾಡಿನ ಏಳಿಗೆ ಮತ್ತು ಮುಂದಿನ ತಲೆಮಾರುಗಳನ್ನು ದ್ರುಶ್ಟಿಯಲ್ಲಿಟ್ಟುಕೊಂಡು ನಾಳಿನ ನಾಳೆಗಳನ್ನು ಕಟ್ಟಬೇಕೆಂದರೆ ಕಲಿಕೆ ಮರಳಿ ರಾಜ್ಯಪಟ್ಟಿಗೆ ಬರುವಂತೆ ಮಾಡುವುದೂ ಕೂಡ ಆಗಲೇಬೇಕಾದ ಕೆಲಸ.

ಹಾಗೆಯೇ, ಕಲಿಕೆಯಲ್ಲಿ ತಾಯ್ನುಡಿಯನ್ನು ಕಡ್ಡಾಯ ಮಾಡದೆ ಇರುವುದು, ಕಲಿಕೆಗೆ ತನ್ನ ನುಡಿ ತಕ್ಕುದಲ್ಲ ಎಂಬ ಅನಿಸಿಕೆ ಮೂಡಿಸಿ ಕಲಿಯುವವರಲ್ಲಿ ಕೀಳರಿಮೆ ಉಂಟು ಮಾಡುತ್ತದೆ. ಹೀಗಾದಾಗ ಆ ನುಡಿಯಾಡುವ ಜನರಿಂದ ಅವರ ನುಡಿಯನ್ನು ಎಳವೆಯಲ್ಲೇ ಬೇರೆ ಮಾಡಿದರೆ, ಕೆಲವೇ ಪೀಳಿಗೆಗಳ ನಂತರ ಆ ಬಾಶಿಕ ಸಮುದಾಯವೂ ಸಾಯುತ್ತದೆ ಎನ್ನವುದು ಸರಕಾರಕ್ಕೆ ಮನದಟ್ಟಾಗಬೇಕಿದೆ. ಸರಕಾರದ ತೀರ‍್ಮಾನ ವಯ್ಗ್ನಾನಿಕವಾಗಿ ಸರಿ ಇದ್ದರೂ ಸಂವಿದಾನದ ಕೆಲವು ಅಂಶಗಳು ಅದಕ್ಕೆ ಎಡೆ ಮಾಡಿಕೊಡುತ್ತಿಲ್ಲವೆಂದರೆ, ಸಂವಿದಾನಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡಬೇಕಿದೆ.

(ಚಿತ್ರ ಸೆಲೆ: falmouth)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. nanagantuu meelu tiirpu-maneya tiirpina bagge idirmaatilla.
    meelmane taaynudiyalli kalike iruva kuritaaddalla. budada shaalegalalli kalikeya oyyugeyannu state yaara meeleyuu heeruva haagilla embudu tiirpu.
    oyyuge taaynudi aagabaaradu endalla tiirpu. heeruva baggeyadu tiirpu. state ellariguu avaravara taaynudiyalli koduvudaadare meeltiirpu manege idirmaatilla.

ಅನಿಸಿಕೆ ಬರೆಯಿರಿ:

%d bloggers like this: