ಸರ‍್ವಜ್ನನ ವಚನಗಳ ಹುರುಳು – 3ನೆಯ ಕಂತು

– ಸಿ.ಪಿ.ನಾಗರಾಜ.

 

 

21)   ಸತ್ತು ಹೋದರೆ ನಿನಗದೆತ್ತಣದು ಮೋಕ್ಷವೈ
ಸತ್ತು ಹೋಗದತಿಜೀವವಿರಲು – ಮೋಕ್ಷದ
ಗೊತ್ತು ತಿಳಿಯೆಂದ ಸರ್ವಜ್ಞ

ಜೀವವಿರುವ ತನಕ ಒಲವು ನಲಿವಿನಿಂದ ಕೂಡಿ ಸಮಾಜಕ್ಕೆ ಒಳಿತನ್ನು ಮಾಡುವ ದುಡಿಮೆಯಿಂದ ಬದುಕನ್ನು ನಡೆಸುವುದೇ ನಿಜವಾದ ಮುಕ್ತಿ ಎಂಬುದನ್ನು ಹೇಳಲಾಗಿದೆ.

(ನಿನಗೆ+ಅದು+ಎತ್ತಣದು ; ಎತ್ತಣ=ಯಾವ ಕಡೆ/ಎಡೆ ; ಎತ್ತಣದು=ಯಾವ ರೀತಿಯಲ್ಲಿ ; ಮೋಕ್ಷವೈ=ಮುಕ್ತಿಯು ದೊರೆಯುತ್ತದೆ ; ಮೋಕ್ಷ= ಹುಟ್ಟುಬದುಕುಸಾವುಗಳ ಸರಪಣಿಯಿಂದ ಜೀವವು ಬಿಡುಗಡೆಯನ್ನು/ಮುಕ್ತಿಯನ್ನು ಹೊಂದುತ್ತದೆ ಎಂಬ ನಂಬಿಕೆ ; ಸತ್ತುಹೋಗದೆ+ಅತಿಜೀವವು+ಇರಲು ; ಸತ್ತುಹೋಗದೆ=ನೀನಾಗಿಯೇ ಸಾವನ್ನು ತಂದುಕೊಳ್ಳದೆ ; ಅತಿ=ದೊಡ್ಡದಾದ/ಹಿರಿದಾದ ; ಜೀವವು+ಇರಲು=ಜೀವವು ಇರುವಾಗ ; ಗೊತ್ತು=ನೆಲೆ/ಜಾಗ ; ಮೋಕ್ಷದ ಗೊತ್ತು=ಮುಕ್ತಿಯ ನೆಲೆಯಿರುವುದು ಸಾವಿನಲ್ಲಲ್ಲ ; ಬದುಕಿನ ಕ್ರಿಯಾಶೀಲತೆಯಲ್ಲಿ ; ತಿಳಿ+ಎಂದ)

22)   ಓದಿ ಬೂದಿಯ ಪೂಸಿ ತೇದು ಕಾವಿಯ ಹೊದೆದು
ಹೋದಾತ ಯೋಗಿಯೆನಬೇಡ – ಇಂದ್ರಿಯವ
ಕಾದಾತ ಯೋಗಿ ಸರ್ವಜ್ಞ

ಉಟ್ಟಿರುವ ಉಡುಗೆ ಇಲ್ಲವೇ ತೊಟ್ಟಿರುವ ತೊಡುಗೆಗಳಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ‍್ಣಯಿಸಬಾರದೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಓದಿ=ಅಕ್ಕರವನ್ನು ಕಲಿತು ; ಬೂದಿಯ ಪೂಸಿ =ಹಣೆ-ಎದೆ-ಮಯ್ ತುಂಬಾ ವಿಬೂತಿಯನ್ನು ಲೇಪಿಸಿಕೊಂಡು ; ಪೂಸಿ=ಬಳಿದುಕೊಂಡು ; ಕಾವಿಯ ಹೊದೆದು=ಕಾವಿ ಬಟ್ಟೆಯನ್ನು ತೊಟ್ಟು ; ತೇದು=ಗಂದದ ಕೊರಡನ್ನು ತುಸು ನೀರಿನೊಡನೆ ಉಜ್ಜಿದಾಗ ಬರುವ ವಸ್ತುವನ್ನು ತಿಲಕವಾಗಿ ಹಚ್ಚಿಕೊಂಡು ; ಹೋದ+ಆತ=ಹೋದವನನ್ನು/ಸಿಂಗಾರಗೊಂಡವನನ್ನು ; ಆತ=ಅವನು ; ಯೋಗಿ+ಎನಬೇಡ ; ಯೋಗಿ=ಆಸೆಗಳನ್ನು/ಬಯಕೆಗಳನ್ನು ತೊರೆದವನು ; ಇಂದ್ರಿಯ=ನೋಟ-ಶಬ್ದ-ಕಂಪು-ರುಚಿ-ಮುಟ್ಟುವಿಕೆಯಿಂದ ಉಂಟಾಗುವ ಅರಿವನ್ನು ಪಡೆಯಲು ನೆರವಾಗುವ ಅಂಗಗಳು ; ಇಂದ್ರಿಯವ ಕಾದಾತ=ಕಣ್ಣು-ಕಿವಿ-ಮೂಗು-ನಾಲಗೆ-ತೊಗಲಿನಿಂದ ಉಂಟಾಗುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುವವನು ; ಕಾದ+ಆತ ; ಕಾದ=ಕಾಯ್ದುಕೊಂಡ/ಎಚ್ಚರದಿಂದ ಕಾಪಾಡಿಕೊಂಡ)

23)     ಬತ್ತಿಯೆಣ್ಣೆಗಳೆರಡು ಹೊತ್ತಿ ಬೆಳಗುವ ತೆರದಿ
ಸತ್ಯ ನೀತಿಗಳು ಬೆಳಗಿಹವು – ಜೋಡಗಲೆ
ಕತ್ತಲೀ ಜಗವು ಸರ್ವಜ್ಞ

ಮಾನವ ಸಮುದಾಯದ ಜೀವನವು ಚೆನ್ನಾಗಿರಬೇಕಾದರೆ ಜನರ ನಡೆನುಡಿಗಳಲ್ಲಿ ಸತ್ಯ ಮತ್ತು ನೀತಿ ಜತೆಗೂಡಿರಬೇಕಾದ ಅಗತ್ಯವನ್ನು ಬೆಳಗುತ್ತಿರುವ ದೀಪವೊಂದರ ರೂಪಕದ ಮೂಲಕ ಹೇಳಲಾಗಿದೆ.

(ಬತ್ತಿ+ಎಣ್ಣೆಗಳು+ಎರಡು ; ಬೆಳಗಿ+ಇಹವು ; ಬೆಳಗು=ನಲಿವು-ಒಲವು-ಚಟುವಟಿಕೆಗಳಿಂದ ಕೂಡಿದ ಬದುಕಿಗೆ ಸಂಕೇತ ; ಇಹವು=ಇರುವುವು ; ಜೋಡಿ+ಅಗಲೆ ; ಜೋಡಿ=ಜೊತೆ/ಎರಡರ ಕೂಡುವಿಕೆ ; ಅಗಲೆ=ದೂರವಾದರೆ/ಬೇರೆಬೇರೆಯಾದರೆ ; ಕತ್ತಲು ಈ ಜಗವು=ಜಗದ ಜೀವನವು ಕೊಲೆ ಸುಲಿಗೆ ಹಿಂಸೆಯಿಂದ ನರಳುತ್ತದೆ ; ಕತ್ತಲೆ=ಬಡತನ-ಅಪಮಾನ-ನೋವಿನಿಂದ ಕೂಡಿದ ಬದುಕಿಗೆ ಸಂಕೇತ)

24)     ಹೊಲಬನರಿಯದ ಗುರುವು ತಿಳಿಯಲರಿಯದ ಶಿಷ್ಯ
ನೆಲೆಯನಾರಯ್ಯದುಪದೇಶ – ಅಂಧಕನು
ಕಳನ ಹೊಕ್ಕಂತೆ ಸರ್ವಜ್ಞ

ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರದ ಗುರುಶಿಶ್ಯರಿಗೆ ಉಂಟಾಗುವ ಪಾಡನ್ನು ” ಕುರುಡನೊಬ್ಬ ರಣರಂಗವನ್ನು ಹೊಕ್ಕಾಗ ತೊಳಲಾಡುವ ” ರೂಪಕದ ಮೂಲಕ ಹೇಳಲಾಗಿದೆ.

(ಹೊಲಬನು+ಅರಿಯದ ; ಹೊಲಬು=ದಾರಿ/ಹಾದಿ ; ಅರಿಯದ=ಗೊತ್ತಿಲ್ಲದ ; ಹೊಲಬನರಿಯದ=ಜೀವನದಲ್ಲಿ ಯಾವುದು ಒಳಿತು/ಕೆಡಕು ಮತ್ತು ಯಾವುದು ಸರಿ/ತಪ್ಪು ಎಂಬುದು ಗೊತ್ತಿಲ್ಲದ ; ತಿಳಿಯಲು+ಅರಿಯದ ; ನೆಲೆಯನು+ಆರಯ್ಯದ+ಉಪದೇಶ ; ನೆಲೆಯನು=ಒಳ್ಳೆಯ ಸಂಗತಿಗಳನ್ನು/ವಿಚಾರಗಳನ್ನು ; ಆರಯ್=ಹುಡುಕು/ಯೋಚಿಸು/ಒರೆಹಚ್ಚಿನೋಡು ; ಆರಯ್ಯದ=ಹುಡುಕಿ ತಿಳಿಯಲು ಪ್ರಯತ್ನಿಸದಿರುವ ; ಉಪದೇಶ=ವಿದ್ಯೆ/ತಿಳುವಳಿಕೆ ; ಅಂಧಕ=ಕುರುಡ ; ಕಳನ=ರಣರಂಗವನ್ನು ; ಕಳ= ರಣರಂಗ/ಕದನ ನಡೆಯುವ ಜಾಗ ; ಹೊಕ್ಕ+ಅಂತೆ ; ಹೊಕ್ಕ=ಒಳನುಗ್ಗಿದ ; ಅಂತೆ=ಹಾಗೆ)

25)     ಸತ್ಯರು ಹುಸಿದಡೆ ಒತ್ತಿ ಬಂದಡೆ ಶರಧಿ
ಉತ್ತಮರು ತಪ್ಪಿ ನಡೆದಡೆ-ಲೋಕವಿ
ನ್ನೆತ್ತ ಸಾರುವುದು ಸರ್ವಜ್ಞ

ಸಮಾಜದ ಒಳಿತಿಗಾಗಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾದ ವ್ಯಕ್ತಿಗಳೇ ಕೆಟ್ಟ ನಡೆನುಡಿಗಳಿಂದ ವರ‍್ತಿಸತೊಡಗಿದಾಗ , ಅಂತಹ ಸಮಾಜಕ್ಕೆ ಕೇಡು ಕಟ್ಟಿಟ್ಟ ಬುತ್ತಿ ಎಂಬುದನ್ನು ಹೇಳಲಾಗಿದೆ.

(ಸತ್ಯರು=ನಡೆನುಡಿಗಳಲ್ಲಿ ಒಂದಾಗಿ ಬಾಳುತ್ತಿರುವವರು/ಸತ್ಯವಂತರು ; ಹುಸಿದಡೆ=ಸುಳ್ಳನ್ನು ಹೇಳಿದರೆ ; ಹುಸಿ=ಸುಳ್ಳು ; ಒತ್ತಿ ಬಂದಡೆ=ದಡವನ್ನೇ ಕೊಚ್ಚುವಂತೆ ಅಲೆಗಳು ಉಕ್ಕೆದ್ದು ಅಪ್ಪಳಿಸಿದರೆ ; ಬಂದಡೆ=ಬಂದರೆ ; ಶರಧಿ=ಸಮುದ್ರ/ಕಡಲು/ಸಾಗರ ; ತಪ್ಪಿ ನಡೆದಡೆ=ನೀತಿನಿಯಮಗಳನ್ನು ಕಡೆಗಣಿಸಿ ನಡೆದುಕೊಂಡರೆ ; ಲೋಕವು+ಇನ್ನು+ಎತ್ತ ; ಲೋಕ=ಜಗತ್ತಿನ/ಸಮಾಜದ ಬದುಕು ; ಎತ್ತ=ಯಾವ ಕಡೆಗೆ ; ಸಾರುವುದು=ಹೋಗುವುದು)

26)     ಆಡದೆ ಮಾಡುವವ ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು – ಅಧಮ ತಾ
ನಾಡಿಯೂ ಮಾಡ ಸರ್ವಜ್ಞ

ವ್ಯಕ್ತಿಯೊಬ್ಬನು ಆಡುವ ಮಾತು ಮತ್ತು ಮಾಡುವ ಕೆಲಸದ ರೀತಿಯು , ಅವನ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಹೇಳಲಾಗಿದೆ.

(ಆಡದೆ= ತಾನು ಮಾಡುವ ಕೆಲಸಗಳನ್ನು ಮೊದಲೇ ಹೆಮ್ಮೆಯಿಂದ ಹೇಳಿಕೊಳ್ಳದೆ ;  ಮಾಡುವವ=ಮಾಡುವವನು ; ರೂಢಿ=ಲೋಕದ ಜನಸಮುದಾಯ/ಸಮಾಜದಲ್ಲಿರುವ ಜನರು ; ರೂಢಿಯೊಳಗೆ+ಉತ್ತಮನು=ಲೋಕ/ಸಮಾಜದ ಜನರ ಗುಂಪಿನಲ್ಲಿ ಒಳ್ಳೆಯವನು ; ಆಡಿ ಮಾಡುವನು=ತಾನು ಮಾಡಲಿರುವ ಕೆಲಸವನ್ನು ತಾನೇ ಜಂಬದಿಂದ ಹೊಗಳಿಕೊಂಡು , ಅನಂತರ ಹೇಳಿದಂತೆ ಮಾಡುವವನು ; ಮಧ್ಯಮನು=ಒಳ್ಳೆಯ/ಕೆಟ್ಟ ಎರಡು ಗುಣಗಳನ್ನು ಹೊಂದಿರುವವನು ; ಅಧಮ=ನೀಚ/ಕೆಟ್ಟವನು ; ತಾನು+ಆಡಿಯೂ=ಮೊದಲು ಹೇಳಿಕೊಂಡಿದ್ದರೂ ; ಮಾಡ=ಯಾವ ಕೆಲಸವನ್ನು ಮಾಡುವುದಿಲ್ಲ)

27)       ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು – ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ

ಕಲಿತ ವಿದ್ಯೆಯಿಂದ ಜನರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಬದಲು , ಕೇಡನ್ನು ಬಗೆಯುವವರ ನೀಚತನವನ್ನು ಹೇಳಲಾಗಿದೆ.

(ಅಕ್ಕರವ=ಓದುಬರಹವನ್ನು  ; ಕಲಿತ+ಆತ=ಕಲಿತವನು ; ಒಕ್ಕಲನು=ಸಮಾಜದಲ್ಲಿರುವ ಜನಸಮುದಾಯವನ್ನು  ; ತಿನ+ಕಲಿತ=ನಾನಾ ಬಗೆಗಳಲ್ಲಿ ಜನರನ್ನು ವಂಚಿಸಿ , ಸುಲಿಗೆ ಮಾಡಿ , ನಾಡಿನ ಸಂಪತ್ತನ್ನು ಲೂಟಿ ಮಾಡುವುದರಲ್ಲಿ ನುರಿತವನಾದ ;ತಿನ=ತಿನ್ನಲು ;  ಲೆಕ್ಕವ ಕಲಿತ=ಊರಿನ ಬೂಮಿ ಹಾಗೂ ಇನ್ನಿತರ ವ್ಯವಹಾರದ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಕುಶಲತೆ ಹಾಗೂ ಹೊಣೆಗಾರಿಕೆಯುಳ್ಳ  ; ಕರಣಿಕ=ಶಾನುಬೋಗ/ಕುಲಕರ‍್ಣಿ ; ನರಕ=ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಪಾಪದ ಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದಲ್ಲಿರುವ ಜಾಗ. ಜನರಿಗೆ ಕೇಡನ್ನು ಬಗೆದವರು ಸಂಕಟದ ನೆಲೆಯಾದ ನರಕಕ್ಕೆ , ಒಳಿತನ್ನು ಮಾಡಿದವರು ಆನಂದದ ನೆಲೆಯಾದ ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಸಮುದಾಯದ ಮನದಲ್ಲಿದೆ ; ನರಕದಲಿ+ಹೊಕ್ಕಿ+ಇರಲು=ನರಕದಲ್ಲಿ ಹೋಗಿ ನೆಲಸಲು ; ಕಲಿತ=ಸುಳ್ಳು/ಕಪಟ/ಸುಲಿಗೆಗಳಲ್ಲಿ ನಿಪುಣನಾದ)

28)         ಬಲ್ಲಿದ ನುಡಿದರೆ ಬೆಲ್ಲವ ಮೆದ್ದಂತೆ
ಇಲ್ಲದ ಬಡವ ನುಡಿದರೆ-ಬಾಯೊಳಗೆ
ಜಳ್ಳು ಬಿದ್ದಂತೆ ಸರ್ವಜ್ಞ

ಸಮಾಜದಲ್ಲಿ ಸಿರಿವಂತರ ಮಾತಿಗೆ ಮೆಚ್ಚುಗೆಯನ್ನು/ಬಡವರ ಮಾತಿಗೆ ತಿರಸ್ಕಾರವನ್ನು ತೋರಿಸುವ ಬಗೆಯನ್ನು ರೂಪಕಗಳ ಮೂಲಕ ಹೇಳಲಾಗಿದೆ.

(ಬಲ್ಲಿದ=ಹಣ ಆಸ್ತಿ ಗದ್ದುಗೆಯಿಂದ ಸಾಮಾಜಿಕವಾಗಿ ದೊಡ್ಡ ಅಂತಸ್ತನ್ನು ಪಡೆದವನು/ಉಳ್ಳವನು ; ನುಡಿದರೆ=ಮಾತನಾಡಿದರೆ/ಏನನ್ನೂ ಹೇಳಿದರೂ ; ಮೆದ್ದ+ಅಂತೆ=ತಿಂದ ಹಾಗೆ ; ಮೆದ್ದ=ತಿಂದ ; ಮೆಲ್ಲು=ತಿನ್ನು ; ಇಲ್ಲದ=ಯಾವುದೇ ಸಂಪತ್ತನ್ನು ಹೊಂದಿರದ/ಗತಿಗೇಡಿಯಾದ ; ಜಳ್ಳು=ಒಳಗೆ ತಿರುಳಿಲ್ಲದ ಕಾಳು ; ಬಿದ್ದ+ಅಂತೆ=ಬಿದ್ದ ಹಾಗೆ)

29)        ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ಬಳಲುವಗೆ-ಬುದ್ಧಿಯನು
ಹೇಳುವನೆಗ್ಗ ಸರ್ವಜ್ಞ

ನಮ್ಮ ಮಾತುಗಳನ್ನು ಮನವಿಟ್ಟು ಆಲಿಸುವವರಿಗೆ ತಿಳುವಳಿಕೆಯನ್ನು ಹೇಳಬೇಕೆ ಹೊರತು , ಎಲ್ಲರಿಗೂ ಹೇಳಲು ಹೋಗುವುದು ಸರಿಯಲ್ಲವೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಕೇಳುವವರು+ಇದ್ದು+ಇಹರೆ=ನಾವು ಆಡಿದ ಮಾತುಗಳಿಗೆ ಬೆಲೆ ಕೊಟ್ಟು ತಮ್ಮ ತಪ್ಪನ್ನು ತಿದ್ದಿ ಸರಿಪಡಿಸಿಕೊಂಡು ನಡೆಯುವವರು ಇದ್ದರೆ ; ಇಹರೆ=ಇದ್ದರೆ ; ಬುದ್ಧಿ=ತಿಳುವಳಿಕೆ/ಅರಿವು ; ಕೋಳ=ಬೇಡಿ/ಸಂಕೋಲೆ ; ಬಳಲು=ಸಂಕಟಪಡು/ದಣಿ/ಆಯಾಸಗೊಳ್ಳು ; ಕೋಳದಲಿ ಬಿದ್ದು ಬಳಲುವಗೆ=ಕಳ್ಳತನ ಕೊಲೆ ಸುಲಿಗೆ ಮುಂತಾದ ತಪ್ಪುಗಳನ್ನು ಮಾಡಿ ಸೆರೆವಾಸದಲ್ಲಿ ನರಳುತ್ತಿರುವವನಿಗೆ ; ಹೇಳುವನು+ಎಗ್ಗ ; ಎಗ್ಗ=ದಡ್ಡ/ತಿಳಿಗೇಡಿ/ಅರಿವಿಲ್ಲದವನು)

30)      ದಂತಪಂಕ್ತಿಗಳೊಳಗೆ ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು – ಬಾಳುವು
ದಂತೆ ಕಂಡಯ್ಯ ಸರ್ವಜ್ಞ

ಕೆಟ್ಟವರ ನಡುವೆ ಇರುವಾಗ ಅಪಾಯಕ್ಕೆ ಸಿಲುಕದೆ ಬಾಳುವ ಜಾಣತನದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ.

(ದಂತಪಂಕ್ತಿಗಳ+ಒಳಗೆ ; ದಂತ=ಹಲ್ಲು ; ಪಂಕ್ತಿ=ಸಾಲು ; ಎಂತು+ಇಕ್ಕು=ಹೇಗೆ ಇರುವುದು ; ಸಂತತ=ಯಾವಾಗಲೂ/ಸದಾಕಾಲ ; ಖಳ=ನೀಚ/ಕೇಡಿ/ಮೋಸಗಾರ ; ಒಡನೆ+ಇರ‍್ದು=ಜತೆಯಲ್ಲಿದ್ದು ; ಬಾಳುವುದು+ಅಂತೆ ; ಅಂತೆ=ಹಾಗೆ ; ಕಂಡ+ಅಯ್ಯ=ತಿಳಿದುನೋಡಯ್ಯ)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 30 ನೆಯ ವಚನದ ವಿವರಣೆಯು ಬಿಟ್ಟುಹೋಗಿದೆ . ಅದರ ವಿವರಣೆಯು ಈ ಕೆಳಕಂಡಂತೆ ಇದೆ .
    ” ಕೆಟ್ಟವರ ನಡುವೆ ಇರುವಾಗ ಅಪಾಯಕ್ಕೆ ಸಿಲುಕದೆ ಬಾಳುವ ಜಾಣತನದ ನಡೆನುಡಿಗಳನ್ನು ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ ”
    ಸಿ ಪಿ ನಾಗರಾಜ

    • ತಪ್ಪನ್ನು ಗಮನಕ್ಕೆ ತಂದಿದಕ್ಕೆ ನನ್ನಿ ಸಿ ಪಿ ನಾಗರಾಜ್ ಅವರೇ, 30 ನೆಯ ವಚನದ ವಿವರಣೆಯನ್ನು ಈಗ ಸೇರಿಸಲಾಗಿದೆ.

Annadanesh Sankadal ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *