ಕನ್ನಡದ ಕೀಳರಿಮೆಯನ್ನು ಅಳಿಸಲು ಹೋರಾಡುತ್ತಿರುವ ನುಡಿಯರಿಗ

ಮೇಟಿ ಮಲ್ಲಿಕಾರ್‍ಜುನ.

dns

ಹೊಸಗನ್ನಡ ನುಡಿಯರಿಮೆಗೆ ಹೊಸ ತಿರುವು ಕೊಟ್ಟವರಲ್ಲಿ ಡಿ.ಎನ್. ಶಂಕರಬಟ್ ಅವರೊಬ್ಬರೆ ಮೊದಲಿಗರು ಅಲ್ಲವಾದರೂ, ಅದರ ಗತಿಯನ್ನು ಹೆಚ್ಚು ತೀವ್ರಗೊಳಿಸಿದವರಲ್ಲಿ ಇವರು ಮೊದಲಿಗರು. ಇವರು ಏನು? ಯಾವ? ಬಗೆಯ ಚಿಂತನೆಗಳನ್ನು ಬೆಳೆಸುತ್ತಿದ್ದಾರೆ, ಅವುಗಳ ಮಹತ್ವ ಮತ್ತು ಸ್ವರೂಪ ಎಂತಹದು? ಎಂಬ ಸಂಗತಿಗಳನ್ನು ಕುರಿತು ಇಲ್ಲಿ ಚರ್‍ಚೆಗಳನ್ನು ಹುಟ್ಟು ಹಾಕುವುದಿಲ್ಲ. ಏಕೆಂದರೆ ಈ ಬಗೆಯ ಚರ್‍ಚೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಹಾಗಾಗಿ ಈ ನುಡಿಯರಿಗ ಕಟ್ಟುತ್ತಿರುವ ತಿಳಿವಿನ ಮಾದರಿಗಳು ನಮಗೆ ಯಾಕೆ ಬೇಕು? ಅವುಗಳಿಂದ ಕನ್ನಡದ ಸಮುದಾಯಗಳ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ? ಈ ಪರಿಣಾಮಗಳು ಈ ನಾಡಿನ ಸಮುದಾಯಗಳ ಬದುಕಿಗೆ ಹೇಗೆ ಒತ್ತಾಸೆಯಾಗುತ್ತವೆ? ಕನ್ನಡದ ಮೂಲಕವೇ ಚಿಂತನೆಯನ್ನು ಕಟ್ಟಿ ಬೆಳೆಸಲು ಇವುಗಳು ಹೇಗೆ ದಾರಿಯಾಗಬಲ್ಲವು? ಎಂಬಿತ್ಯಾದಿ ವಿಶಯಗಳನ್ನು ಮಾತ್ರ ಇಲ್ಲಿ ಚರ್‍ಚಿಸಲು ಬಯಸುತ್ತೇನೆ.

ಕನ್ನಡವನ್ನು ಕುರಿತಾಗಿ ಚಿಂತಿಸುವುದೆಂದರೆ, ಅದು ಕೇವಲ ಲಿಪಿ ಮತ್ತು ಕಾಗುಣಿತಗಳ ಸ್ವರೂಪವನ್ನು ಯಾವ ಕಾಲಕ್ಕೂ ಬದಲಿಸದೆ ಹಾಗೇ ಮುಂದುವರಿಸಿಕೊಂಡು ನಡೆಯುವುದಲ್ಲ. ಆಯಾ ಕಾಲದ ಬದುಕಿನ ದಾರಿಗಳನ್ನು ಹೇಗೆ ರೂಪಿಸಿಕೊಳ್ಳಬೇಕು? ಇದಕ್ಕೆ ಒತ್ತಾಸೆಯಾಗಿ ಆ ಸಮೂಹಗಳ ನುಡಿಯನ್ನು ಹೇಗೆ ಸಜ್ಜುಗೊಳಿಸಬೇಕು? ನುಡಿಯೆಂಬುದು ಕೇವಲ ಮಾತಲ್ಲ, ಅದು ಬದುಕೂ ಆಗಿರುತ್ತೆ. ಈ ಬದುಕಿಗೆ ಬೇಕಾದ ಮೂಲತತ್ವಗಳು ಆಯಾ ನುಡಿಗಳಲ್ಲಿಯೆ ಹೇಗೆ ಹುದುಗಿರುತ್ತವೆ ಎಂಬ ದಿಟವನ್ನು ಅರಿಯದೇ, ನುಡಿಯೊಂದನ್ನು ಕುರಿತು ಚಿಂತಿಸುವುದು ಅಗತ್ಯವಿಲ್ಲವೆಂದು ತೋರುತ್ತದೆ. ಆದರೆ ಡಿ.ಎನ್.ಎಸ್. ಬಟ್ ಮತ್ತು ಈ ಆಲೋಚನೆಯ ಕ್ರಮವನ್ನು ನಂಬಿದವರ ಮೊದಲ ಗುರಿಯೇ, ಸಮೂಹಗಳ ಬದುಕಿನ ವಿನ್ಯಾಸಗಳನ್ನು ಅರಿಯುವ ಮತ್ತು ಆಯಾ ಬದುಕಿಗೆ ತಕ್ಕುದಾದ ದಾರಿಗಳನ್ನು ಅವರವರ ನುಡಿಗಳ ಮೂಲಕವೇ ಕಾಣುವುದಾಗಿದೆ.

ಎತ್ತುಗೆಗಾಗಿ ಕರ್‍ನಾಟಕದಲ್ಲಿ ಆಡಳಿತ ನುಡಿಯಾಗಿ ಕನ್ನಡವೇ ಇರಬೇಕು ಎಂದು ಅರೆ ಶತಮಾನಕ್ಕಿಂತಲೂ ಹೆಚ್ಚುಕಾಲ, ನಮ್ಮ ಸರಕಾರಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಪರಿಣಾಮ ಏನಾಗಿದೆಯೆಂದರೆ ಸೊನ್ನೆ. ಆಡಳಿತ ಇಲ್ಲವೇ ಸರಕಾರ ಎಂಬುದು ಜನರ ಬದುಕಿಗೆ ಹೊಣೆಯಾಗದೇ, ಕೇವಲ ಬದುಕಿನ ಸನ್ನಿವೇಶಗಳಲ್ಲಿ ಕನ್ನಡನುಡಿಯನ್ನು ಬಳಕೆಗೆ ಒತ್ತಾಯಿಸುವ ಮೂಲಕ ಏನನ್ನೂ ಗೆಲ್ಲಲು ಆಗುವುದಿಲ್ಲ. ಆಡಳಿತವು ಜನರಿಗೆ ಉತ್ತರದಾಯಿತ್ವವಾಗದೇ, ಕನ್ನಡ ಯಾವತ್ತಿಗೂ ನೆಲೆಗೊಳ್ಳಲಾರದು.

ಹಾಗೊಂದು ಕನ್ನಡ ನೆಲೆಗೊಂಡರೆ, ಅದೊಂದು ಚಹರೆಯನ್ನು ಕಳೆದುಕೊಂಡ ಕನ್ನಡವಾಗುತ್ತದೆ. ಕನ್ನಡದ ಚಹರೆಗಳಿರುವುದು, ಈ ನುಡಿಯನ್ನೇ ನೆಮ್ಮಿಕೊಂಡು ಬದುಕುವ ಸಮುದಾಯಗಳಲ್ಲಿಯೇ ಹೊರತು ಕೇವಲ ನುಡಿಯಲ್ಲಿ ಅಲ್ಲ. ಗುರುತುಗಳು ಬದುಕಿನ ವಿನ್ಯಾಸಗಳಲ್ಲಿ ಹುದುಗಿರುತ್ತವೆ ಎಂಬ ವಾಸ್ತವನ್ನು ಈ ಮಾತುಗಳು ಹೇಳುತ್ತವೆ. ಆದರೆ ಇಂತಹ ಗುರುತುಗಳನ್ನು ಕಡೆಗಣಿಸುವ ಇಲ್ಲವೇ ಅಮಾನ್ಯಮಾಡುವ ಹುನ್ನಾರಗಳು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿವೆ. ಕನ್ನಡ ನುಡಿಯು ಕೀಳಿರಿಮೆಯಿಂದ ಬಳಲುತ್ತಿರಲೂ ಕಾರಣವೇ ಈ ಚಾರಿತ್ರಿಕ ನಡೆಗಳು. ಹಾಗಾಗಿ ಕನ್ನಡಕ್ಕೆ ಅಂಟಿರುವ ಇಂತಹ ಕೀಳಿರಿಮೆಯ ಸೋಂಕನ್ನು ತೊಲಗಿಸುವ ಕ್ರಮಗಳನ್ನು ಶಂಕರಬಟ್‍ರ ಆಲೋಚನೆಯ ಕ್ರಮದಲ್ಲಿ ಕಾಣುತ್ತೇವೆ.

ಬೇರೆ ನುಡಿಗಳಿಂದ ಮಾತ್ರ ತಿಳಿವು ತೆಗೆದುಕೊಳ್ಳುವ ನುಡಿಯನ್ನಾಗಿ ಕನ್ನಡವನ್ನು ರೂಪಿಸಲಾಗಿದೆ. ಅಂದರೆ ಕನ್ನಡವೂ ಕೂಡ ಕೊಡುವ ನುಡಿಯಾಗಿ ಬೆಳೆದು ನಿಲ್ಲಬೇಕಿದೆ. ಯಾರಿಗೆ? ಏನನ್ನು? ಕನ್ನಡ ಕೊಡಬೇಕಿದೆ ಎಂದು ಕೇಳಿದರೆ, ಕರ್‍ನಾಟಕದ ಸಮೂಹಗಳಿಗೆ ಬದುಕಲು ಬೇಕಿರುವ ತಿಳಿವು, ವಿಚಾರ, ಕಲಿಕೆ, ಅನ್ನ, ಕೆಲಸವನ್ನು ಕನ್ನಡದ ಮೂಲಕವೇ ಪಡೆಯಬೇಕು ಎಂಬುದೇ ಈ ಮಾತಿನ ತಿರುಳು. ಏಕೆಂದರೆ ತಿಳುವಳಿಕೆ ಇರುವುದು ಕೇವಲ ತಿಳುವಳಿಕೆಗಾಗಿ ಮಾತ್ರವಲ್ಲ, ಅದು ಬದುಕಿಗಾಗಿ ಮತ್ತು ಬದುಕಿನ ಏಳ್ಗೆ ಹಾಗೂ ಬದಲಾಣೆಗಾಗಿ ನೆಲೆಗೊಳ್ಳಬೇಕು. ಯಾವುದೇ ನುಡಿ ತಿಳುವಳಿಕೆ ಸಮೂಹಗಳ ತಿಳುವಳಿಕೆಯಾಗದೇ ಅದರಿಂದ ಯಾರಿಗೂ ಏನು ಪ್ರಯೋಜವಿರುವುದಿಲ್ಲ. ಈ ದಿಟವನ್ನು ಸರಿಯಾಗಿ ಅರಿತುಕೊಂಡ ಶಂಕರಬಟ್‍ರು ಕನ್ನಡ ಮತ್ತು ಕನ್ನಡಿಗರಪರವಾಗಿ ಚಿಂತಿಸುತ್ತಿದ್ದಾರೆ.

ಶಂಕರಬಟ್‍ರು ಈಗಾಗಲೇ ಕಯ್ಗೊಂಡಿರುವ ನುಡಿ ಮತ್ತು ನುಡಿಯರಿಮೆ ಕುರಿತಾದ ಎಲ್ಲ ಬಗೆಯ ಬರಹಗಳಲ್ಲಿಯೂ, ಕರ್‍ನಾಟಕ ಸಮೂಹಗಳ ಬದುಕಿಗೆ ಬೇಕಾಗಿರುವ ತಿಳಿವಿನ ಮಾದರಿಗಳು ಅಡಕವಾಗಿವೆ. ಎತ್ತುಗೆಗಾಗಿ ಈ ಮಾತುಗಳನ್ನು ನೋಡಿ; “ಕನ್ನಡ ಬರಹ ಮೇಲ್ವರ್‍ಗದದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಮೂಲಕ ಇವತ್ತು ಮೇಲ್ವರ್‍ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್‍ಗದ ಕನ್ನಡಿಗರಿಗೂ ಸಮಾನವಾಗಿ ಪಡೆಯುವ ಹಾಗಾಗಬೇಕು” – ಕನ್ನಡ ಬರಹವನ್ನು ಸರಿಪಡಿಸೋಣ! ಎಂಬೀ ಹೊತ್ತಿಗೆಯ ಮಾತುಗಳನ್ನು ನಿಗಾಯಿಟ್ಟು ನೋಡಿದರೆ, ಶಂಕರಬಟ್ಟರ ಕನ್ನಡ ಪರವಾದ ಕಾಳಜಿಗಳು ಎಂತಹವು ಅನ್ನುವುದು ನಮ್ಮರಿವಿಗೆ ಬರುತ್ತವೆ.

ದಲಿತ ಮತ್ತು ತಳಸಮುದಯಗಳ ಪರವಾಗಿ ಹೋರಾಟ ನಡೆಸುವವರು ಬಟ್‍ರ ಈ ಚಿಂತನೆಗಳನ್ನು ಲೆಕ್ಕಿಸದೆ ಇರುವುದು ಕೇವಲ ಅಚ್ಚರಿಯ ಸಂಗತಿ ಮಾತ್ರವಲ್ಲ, ಅದೊಂದು ಚಾರಿತ್ರಿಕ ವ್ಯಂಗ್ಯವೂ ಹವ್ದು. ಈ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಿಗೆ ಬೇಕಾಗಿರುವ ಪ್ರಣಾಳಿಕೆಯೊಂದನ್ನು ಶಂಕರಬಟ್‍ರು ತಮ್ಮೀ ಬರಹಗಳ ಮೂಲಕ ರೂಪಿಸಿ ಕೊಟ್ಟಿದ್ದಾರೆ. ಬಟ್‍ರು ಬೀದಿಗಿಳಿಯದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿದ್ದಾರೆ. ಇದು ಕೂಡ ಹೋರಾಟದ ಒಂದು ಮಾದರಿ. ಇದುವೇ ಕನ್ನಡದ ಮಾದರಿ. ಅಂದರೆ ಕುವೆಂಪು, ಕೆ.ಎಸ್.ನ, ಬೇಂದ್ರೆ, ಶಂಬಾ, ಕೆ.ವಿ.ಎನ್ ಮೊದಲಾದವರು ಯಾವತ್ತಿಗೂ ಬೀದಿಗಿಳಿಯದೇನೆ ಕನ್ನಡ ಪರವಾಗಿ ಹೋರಾಡುತ್ತಲೇ ಬಂದಿದ್ದಾರೆ.

ದಲಿತ ಮತ್ತು ತಳಸಮುದಾಯಗಳನ್ನೇ ನೆಲೆಯಾಗಿಸಿಕೊಂಡು ಇಡೀ ಬಾರತದಲ್ಲಿಯೇ ನುಡಿಯರಿಮೆಯ ಚಿಂತನೆಗಳು ಬೆಳೆದು ಬಂದಿರುವುದು ಅತ್ಯಂತ ಕಡಿಮೆಯೆಂದೇ ಹೇಳಬೇಕು. ಇಂತಹವೊಂದು ಆಲೋಚನೆಯ ಕ್ರಮವನ್ನು ಕನ್ನಡದಲ್ಲಿ ಶಂಕರಬಟ್ ಮೊದಲಾದವರು ಹುಟ್ಟು ಹಾಕಿರುತ್ತಾರೆ. ಕರ್‍ನಾಟಕ ಇಲ್ಲವೇ ಬಾರತದಲ್ಲಿ ನುಡಿ ಬಗೆಗಿನ ಯಾವುದೇ ತೀರ್‍ಮಾನವು ಇಡೀ ಸಮುದಾಯವನ್ನೇ ನೆಚ್ಚಿಕೊಂಡು ರೂಪುಗೊಳ್ಳುವದಿಲ್ಲ. ಬದಲಾಗಿ ಮೇಲು ಜಾತಿಯ ಇಲ್ಲವೇ ಅದಿಕಾರ ನಂಟು ಹೊಂದಿರುವ ಜನ ಸಮೂಹಗಳ ನುಡಿ ಬಗೆಗಳು ಮಾತ್ರ ಶಿಕ್ಶಣ, ಸಾಹಿತ್ಯ, ಮಾದ್ಯಮ ಹಾಗೂ ಇತರೆ ತಿಳಿವಿನ ವಲಯಗಳಲ್ಲಿ ಮುಂಚೂಣೆಗೆ ಬರುತ್ತವೆ.

ಈ ಬೆಳವಣಿಗೆಗಳು ದಲಿತ. ಹಿಂದುಳಿದ, ತಳಸಮುದಾಯಗಳ ನುಡಿ ಚಹರೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಮೇಲುಜಾತಿಗಳು ನುಡಿಯುವ ಮಾತಿನ ಪ್ರಕಾರಗಳು ಮೇಲುಹಿರಿಮೆಯನ್ನು ಪಡೆದರೆ, ದಲಿತ ಮುಂತಾದವರ ಮಾತುಗಳು ಕೀಳುಹಿರಿಮೆಗೆ ಒಳಗಾಗುತ್ತವೆ. ಈ ಸಾಂಕೇತಿಕ ಹಿಂಸೆಯನ್ನು ಹೋಗಲಾಡಿಸುವ ದಾರಿಗಳು ನುಡಿಯೊಳಗೇ ಹುದುಗಿರುತ್ತವೆ ಎಂಬ ದಿಟವನ್ನು ಕೂಡ ಶಂಕರಬಟ್‍ರು ತಮ್ಮ ಬರಹಗಳ ಮೂಲಕ ನಮ್ಮುಂದೆ ಮಂಡಿಸಿಡುತ್ತಿದ್ದಾರೆ. ಹಾಗಾಗಿ ಮಾತು ಮತ್ತು ಬರಹದ ನುಡುವಣ ಅಂತರಗಳನ್ನು ಯಾಕೆ ಇಲ್ಲವಾಗಿಸಬೇಕು ಎಂಬಿವರ ಚಿಂತನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ.

ಯಾಕೆ ಕಲಿಕೆಯ ವಲಯದಿಂದ ಕೆಲವೇ ಸಮೂಹಗಳ ಮಕ್ಕಳು ಹೊರಗುಳಿಯುತ್ತಾರೆ ಎಂಬ ಅನುಮಾನಕ್ಕೂ ಬಟ್‍ರ ಚಿಂತನೆಗಳಲ್ಲಿ ಸುಳಿವುಗಳು ಸಿಗುತ್ತವೆ. ಅಂದರೆ ಯಾವುದೇ ಸಾಮಾಜಿಕ ಮುಂಚಲನೆಗೂ ಮತ್ತು ಆಯಾ ಸಮೂಹಗಳು ನೆಚ್ಚಿಕೊಂಡಿರುವ ಒಳನುಡಿಗಳಿಗೂ ನೇರವಾದ ನಂಟಿರುತ್ತದೆ. ಒಳನುಡಿಯ ಸ್ವರೂಪ, ಕನ್ನಡ ನುಡಿಯ ಸ್ವರೂಪ ಮತ್ತು ಕಲಿಕೆಯ ಸಮಸ್ಯೆಗಳ ನಡುವಿನ ತೊಡಕುಗಳೆಂತಹವು, ಈ ತೊಡಕುಗಳೇ ತಳಸಮುದಾಯಗಳ ಮಕ್ಕಳ ನುಡಿ ಕಲಿಕೆಯ ಮೇಲೆ ಹೇಗೆಲ್ಲ ಸವಾರಿ ನಡೆಸುತ್ತಿವೆ ಅನ್ನುವ ಇಕ್ಕಟ್ಟುಗಳನ್ನು ಇವರ ನುಡಿಯರಿಮೆಯ ಚಿಂತನೆಗಳು ತೋರಿಸುತ್ತವೆ.

ಯಾವ ನುಡಿಯನ್ನು ಕಲಿಯಬೇಕು ಮತ್ತು ಯಾವ ನುಡಿಯ ಮೂಲಕ ಕಲಿಯಬೇಕು ಎಂಬ ನಿಲುವಿಗೆ ಈ ಚಿಂತನೆಗಳಲ್ಲಿ ದಾರಿಗಳಿವೆ. ಏಕೆಂದರೆ ನುಡಿಯೆಂಬ ವಿದ್ಯಮಾನವು ವ್ಯಕ್ತಿ, ಸಮೂಹ ಮತ್ತು ಪರಂಪರೆ ಎಂಬ ಮೂರು ಬಗೆಯಲ್ಲಿ ಸಂಪನ್ಮೂಲವಾಗಿ ನೆಲೆಗೊಂಡಿರುತ್ತದೆ. ಈ ಮೂರು ನುಡಿ ಬಗೆಗಳ ನಡುವೆ ಸಮಾನ ಚಹರೆಗಳನ್ನು ರೂಪಿಸಿಕೊಳ್ಳುವ ಮೂಲಕ ನುಡಿಯೊಳಗೆಯೇ ಹುದಿಗಿರುವ ಸಾಮಾಜಿಕ ಅಸಮಾನತೆಯ ನೆಲೆಗಳನ್ನು ಹೋಗಲಾಡಿಸಲು ಅನುವಾಗುತ್ತದೆ. ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಅಳಿಸಿ ಇಲ್ಲವೇ ಒರಸಿ ಹಾಕುವ ಹುನ್ನಾರಕ್ಕೆ ಕಡಿವಾಣ ಹಾಕಲೂ ಈ ಚಿಂತನೆಗಳಿಂದ ಬೆಂಬಲ ಸಿಗುತ್ತದೆ. ನುಡಿ ವ್ಯತ್ಯಾಸಗಳನ್ನು ಕುರಿತಾಗಿ ತಾಳಿಕೆಯ ಗುಣವನ್ನು ಬೆಳೆಸಿಕೊಳ್ಳುವ ದಾರಿಗಳು ಕೂಡ ಈ ಮೂಲಕ ನಮಗೆ ದೊರೆಯುತ್ತವೆ.

ಕನ್ನಡ, ಸಂಸ್ಕ್ರುತ ಮತ್ತು ಇಂಗ್ಲಿಶು ನುಡಿಗಳ ನಡುವಣ ನಂಟು ಯಾವ ಬಗೆಯದು? ಆ ನಂಟಸ್ತಿಕೆಯ ಮರುಹೊಂದಾಣಿಕೆಯ ಸ್ವರೂಪ ಹೇಗಿರಬೇಕು? ಕನ್ನಡನುಡಿ ಓದನ್ನು ಬೆಳಸುವವರಿಗೆ ಕನ್ನಡ ನುಡಿ ರಚನೆಯೇ ಯಾಕೆ ಮಹತ್ವದ ಸಂಗತಿಯಾಗುತ್ತದೆ? ಎಂಬಿತ್ಯಾದಿ ಕೇಳ್ವಿಗಳಿಗೆ ತಕ್ಕುದಾದ ಬದಲುಗಳು ಶಂಕರಬಟ್ ಮತ್ತು ಅದೇ ಬಗೆಯ ಆಲೋಚನೆಯನ್ನು ಕಟ್ಟಿ ಬೆಳೆಸುವವರ ಚಿಂತನೆಗಳಲ್ಲಿ ಸಿಗುತ್ತವೆ. ಕೇವಲ ಮೇಲ್ನೋಟದ ವಿವರಗಳಿಂದ, ಕನ್ನಡ ಪರವಾಗಿ ಮತ್ತು ಕನ್ನಡದ್ದೇ ತಿಳಿವಿನ ಮಾದರಿಗಳನ್ನು ರೂಪಿಸುವವರಿಗೆ, ಸಂಸ್ಕ್ರುತ, ಇಂಗ್ಲಿಶು ಇಲ್ಲವೇ ಕನ್ನಡದ ವಿರೋದಿಗಳೆಂದು ಹಣೆಪಟ್ಟಿಯನ್ನು ಲಗತ್ತಿಸುವುದು ಎಶ್ಟರಮಟ್ಟಿಗೆ ತಕ್ಕುದಾದ ನಿಲುವು? ಇಲ್ಲಿ ಯಾರೂ ಕೂಡ ಯಾವುದೇ ನುಡಿಯನ್ನು ವಿರೋದಿಸುವ ಮತ್ತು ಕಡೆಗಣಿಸುವ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ನಮ್ಮ ಸಮೂಹಗಳಿಗೆ ಈ ಹೊತ್ತು ಜರೂರು ಅನ್ನಿಸಿರುವ ತಿಳಿವಿನ ದಾರಿಗಳನ್ನು ಹುಡುಕುವುದಾಗಿದೆ. ಹಾಗಾಗಿ ಕನ್ನಡ ನುಡಿಯರಿಮೆ ಇಲ್ಲವೇ ಕನ್ನಡ ಬಾಶಾಶಾಸ್ತ್ರವೆಂದರೆ, ಅದು ಕೇವಲ ಕನ್ನಡದಲ್ಲಿ ನುಡಿಗಳ ಕುರಿತಾಗಿ ತಿಳುವಳಿಕೆಯನ್ನು ಬೆಳೆಸುವ ಕ್ರಮವಲ್ಲ. ಬದಲಾಗಿ ಕನ್ನಡದ್ದೇ ಮತ್ತು ಕನ್ನಡವನ್ನೇ ಕುರಿತಾದ ಅರಿಮೆ ಇಲ್ಲವೇ ಶಾಸ್ತ್ರವನ್ನು ರೂಪಿಸುವ ಬಗೆಯಾಗಿರುತ್ತದೆ. ಕನ್ನಡ ನುಡಿಯರಿಮೆಯ ಸರಿಯಾದ ಮತ್ತು ಹೊಸದಾದ ಚವ್ಕಟ್ಟನ್ನು ಕಟ್ಟಿಕೊಳ್ಳುವ ದಾರಿಯಾಗಿ ಡಿ.ಎನ್. ಶಂಕರಬಟ್ ಅವರು ನಮ್ಮ ನುಡಿ ಸಮುದಾಯಕ್ಕೆ ಈಗ ಸಿಕ್ಕಿರುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. shankaara bhattara kaalajigalu daalitarge mattu itarariguu heccu
    meccigeyagadiruvudu cakitada sangatiyee!
    janariguu sarakarakkuu arta aaguva haage ondu janaandoolana aagabeeku anisuttade!

    kannada ellara kannada aagabeeku embudaralli eradu maatilla. aadare idannu saamaajika aayaamadinda bidisi noodidaruu idu aagabeekaadde:
    kannada, kannadada vyaakarana beere hera nudige yaake adiyaalaagirabeeku?
    idakke yaava kannadagittiyalluu uttara illa!

Giridhara Mysore ಗೆ ಅನಿಸಿಕೆ ನೀಡಿ Cancel reply

%d bloggers like this: