ಅಲ್ಲಮನ ವಚನಗಳ ಓದು – 11ನೆಯ ಕಂತು

– ಸಿ.ಪಿ.ನಾಗರಾಜ.

 

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ
ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ
ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ ಗುಹೇಶ್ವರ.

ಒಳ್ಳೆಯ ನಡೆನುಡಿಗಳಿಂದ ತನಗೆ ಮತ್ತು ಸಹಮಾನವರಿಗೆ ಒಳಿತನ್ನು ಮಾಡಬೇಕಾದ ಹೊಣೆಯನ್ನು ಹೊತ್ತಿರುವ ವ್ಯಕ್ತಿಗಳೇ ಕೆಟ್ಟಹಾದಿಯನ್ನು ಹಿಡಿದು, ಸಮಾಜವನ್ನು ಹಾಳು ಮಾಡತೊಡಗಿದಾಗ, ಅವರನ್ನು ತಡೆಯಲು/ತಿದ್ದಿ ಸರಿಪಡಿಸಲು ಯಾರಿಂದಲೂ ಆಗುವುದಿಲ್ಲವೆಂಬ ಸಂಗತಿಯನ್ನು  ಎರಡು ರೂಪಕ/ಶಬ್ದಚಿತ್ರಗಳ ಮೂಲಕ ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.

(ಚಳಿ+ಆದಡೆ ; ಆದಡೆ=ಆದರೆ ; ಏನ=ಏನನ್ನು/ಯಾವುದನ್ನು ; ಹೊದಿಸುವರ‍್+ಅಯ್ಯ ; ಹೊದಿಸು=ಮುಚ್ಚು/ಮೇಲೆ ಹಾಕು ; ಬಯಲು=ಸಮತಟ್ಟಾಗಿರುವ ನೆಲ/ಪ್ರದೇಶ ; ಬತ್ತಲೆ+ಆದಡೆ ; ಬತ್ತಲೆ=ಬರಿದಾಗಿರುವುದು/ತೆರೆದುಕೊಂಡಿರುವುದು ; ಏನ್+ಅನ್+ಉಡಿಸುವರ‍್+ಅಯ್ಯ ; ಅನ್=ಅನ್ನು ; ಏನನ್=ಏನನ್ನು/ಯಾವುದನ್ನು ; ಉಡಿಸು=ಮಯ್/ವಸ್ತು/ಜಾಗವನ್ನು ಮರೆಮಾಡುವಂತೆ ಬಟ್ಟೆಯಿಂದ ಸುತ್ತುವುದು ; “ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ ಮತ್ತು ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ” ಎಂಬ ಈ ಎರಡು ರೂಪಕಗಳು “ಈ ಬಗೆಯ ಕೆಲಸಗಳನ್ನು ಮಾಡಲು ಆಗುವುದಿಲ್ಲ” ಎಂಬ ತಿರುಳನ್ನು ಸೂಚಿಸುತ್ತವೆ ;  ಭಕ್ತ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು ; ಭವಿ+ಆದಡೆ ; ಭವಿ=ದುರಾಸೆ, ನೀಚತನ, ವಂಚನೆ ಮತ್ತು ಕ್ರೂರತನದ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವವನು ; ಏನ್+ಅನ್+ಉಪಮಿಸುವೆನ್+ಅಯ್ಯ ; ಉಪಮೆ=ಒಂದು ವಸ್ತು/ಜೀವಿ/ಸಂಗತಿಯನ್ನು ಮತ್ತೊಂದರ ಜತೆ ಹೋಲಿಸಿ ಬಣ್ಣಿಸುವುದು ; ಏನನುಪಮಿಸುವೆನ್=ಏನೆಂದು ತಾನೆ ಹೇಳಲಿ ; ಅಯ್ಯ=ವ್ಯಕ್ತಿಯೊಬ್ಬರೊಡನೆ ಮಾತನಾಡುವಾಗ ಬಳಸುವ ಪದ ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು)

ಕ್ರಿಯಾಮಥನವಿಲ್ಲದೆ ಕಾಣಬಂದುದೇ ಇಕ್ಷುವಿನೊಳಗಣ ಮಧುರ
ಕ್ರಿಯಾಮಥನವಿಲ್ಲದೆ ಕಾಣಬಂದುದೇ ತಿಲದೊಳಗಣ ತೈಲ
ಕ್ರಿಯಾಮಥನವಿಲ್ಲದೆ ಕಾಣಬಂದುದೇ ಕ್ಷೀರದೊಳಗಣ ಘೃತ
ಕ್ರಿಯಾಮಥನವಿಲ್ಲದೆ ಕಾಣಬಂದುದೇ ಕಾಷ್ಠದೊಳಗಣ ಅಗ್ನಿ
ಇದು ಕಾರಣ ಗೊಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆಲ್ಲಡೆ
ಸತ್ಕ್ರಿಯಾಚರಣೆಯೇ ಸಾಧನ ಕಾಣಿ ಭೋ.

ಕಬ್ಬಿನ ಜಲ್ಲೆಯನ್ನು ಗಾಣಕ್ಕೆ ಕೊಟ್ಟು ಅರೆದಾಗ ಸಿಹಿಯಾದ ಕಬ್ಬಿನ ಹಾಲು ದೊರಕುತ್ತದೆ ; ಎಳ್ಳಿನ ಕಾಳುಗಳನ್ನು ಗಾಣದಿಂದ ಅರೆದಾಗ ಎಣ್ಣೆಯು ದೊರಕುತ್ತದೆ ; ಹಾಲಿಗೆ ಹೆಪ್ಪನ್ನು ಹಾಕಿ ತಯಾರಿಸಿದ ಮೊಸರನ್ನು ಕಡೆದಾಗ ಬರುವ ಬೆಣ್ಣೆಯನ್ನು ಕಾಯಿಸಿದರೆ ತುಪ್ಪ ದೊರೆಯುತ್ತದೆ ; ಒಣಗಿದ ಮರದ ತುಂಡಿಗೆ ಸುಡುವ ಕಿಡಿಗಳನ್ನು ಇಲ್ಲವೇ ಉರಿಯನ್ನು ಮುಟ್ಟಿಸಿದಾಗ ಒಣಗಿದ ಮರದ ತುಂಡು ಬೆಂಕಿಯನ್ನು ಕಾರತೊಡಗುತ್ತದೆ ; ಇಲ್ಲೆಲ್ಲಾ ಅರೆಯುವ/ಕಡೆಯುವ/ಮುಟ್ಟಿಸುವ ಕ್ರಿಯೆಯು ನಡೆಯದಿದ್ದರೆ ಏನನ್ನೂ ಪಡೆಯಲಾಗುತ್ತಿರಲಿಲ್ಲ. ಈ ಸಂಗತಿಗಳ ಮೂಲಕ ಅಲ್ಲಮನು ಯಾವುದೇ ಒಬ್ಬ ವ್ಯಕ್ತಿಯು ತಾನು ಪಡೆದ ಅರಿವನ್ನು ತನ್ನ ದಿನನಿತ್ಯದ ನಡೆನುಡಿಗಳಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಬದುಕು ಹಸನಾಗುತ್ತದೆಯೇ ಹೊರತು, ಅದು ಕೇವಲ ಮಾತಿನ ರೂಪದಲ್ಲಿದ್ದರೆ, ಅಂತಹ ಅರಿವಿನಿಂದ ಯಾವುದೇ ಪ್ರಯೋಜನವಿಲ್ಲವೆಂಬ ನಿಲುವನ್ನು ವ್ಯಕ್ತಪಡಿಸಿದ್ದಾನೆ.

( ಕ್ರಿಯಾ+ಮಥನ+ಇಲ್ಲದೆ ; ಕ್ರಿಯಾ=ಕೆಲಸ/ಕಾರ‍್ಯ/ಕ್ರಿಯೆ ; ಮಥನ=ಹಿಂಡುವಿಕೆ/ತೀಡುವಿಕೆ/ಉಜ್ಜುವಿಕೆ ; ಕ್ರಿಯಾಮಥನ=ಹಿಂಡುವ/ತೀಡುವ/ಉಜ್ಜುವ ಕೆಲಸಗಳಲ್ಲಿ ತೊಡಗುವುದು ; ಕಾಣಬಂದುದೇ=ನೋಡಲು ಬರುವುದೇ/ಕಾಣಲು ಆಗುವುದೇ  ; ಇಕ್ಷುವಿನ್+ಒಳಗಣ ; ಇಕ್ಷು=ಕಬ್ಬು ; ಇಕ್ಷುವಿನ್=ಕಬ್ಬಿನ ; ಒಳಗಣ=ಒಳಗೆ ಇರುವ ; ಮಧುರ=ಸಿಹಿ/ಸವಿ ; ಇಕ್ಷುವಿನೊಳಗಣ ಮಧುರ=ಕಬ್ಬಿನ ಜಲ್ಲೆಯೊಳಗಿರುವ ಸಿಹಿಯಾದ ರಸ ; ತಿಲದ+ಒಳಗಣ ; ತಿಲ=ಎಳ್ಳು/ಎಳ್ಳಿನ ಕಾಳು ; ತೈಲ=ಎಣ್ಣೆ/ಜಿಡ್ಡು ; ತಿಲದೊಳಗಿನ ತೈಲ=ಎಳ್ಳು ಕಾಳಿನ ಒಳಗಿರುವ ಜಿಡ್ಡು/ಎಣ್ಣೆ ; ಕ್ಷೀರದ+ಒಳಗಣ ; ಕ್ಷೀರ=ಹಾಲು ; ಘೃತ=ತುಪ್ಪ ; ಕ್ಷೀರದೊಳಗಣ ಘೃತ=ಹೆಪ್ಪುಗೊಂಡ ಹಾಲಿನಲ್ಲಿರುವ ತುಪ್ಪದ ಕಣ ; ಕಾಷ್ಠದ+ಒಳಗಣ ; ಕಾಷ್ಠ=ಮರದ ತುಂಡು/ಕಟ್ಟಿಗೆ/ಸವುದೆ ; ಅಗ್ನಿ=ಬೆಂಕಿ ; ಕಾಷ್ಠದೊಳಗಣ ಅಗ್ನಿ=ಮರದ ಕಟ್ಟಿಗೆಯಲ್ಲಿರುವ ಉರಿದು ಕಿಡಿಕಾರುವ ಬೆಂಕಿಯ ಕಣ ;  ಇದು ಕಾರಣ=ಆದುದರಿಂದ ; ಗೊಹೇಶ್ವರಲಿಂಗವ=ಗೊಹೇಶ್ವರ/ಗುಹೇಶ್ವರನೆಂಬ ದೇವರನ್ನು ; ತನ್ನ+ಒಳಗೆ+ಅರಿದೆನ್+ಎಂಬ ; ಅರಿ=ತಿಳಿ ; ಅರಿದೆನ್=ತಿಳಿದಿದ್ದೇನೆ ; ಎಂಬ=ಎನ್ನುವ ; ಮಹಂತಂಗೆ+ಎಲ್ಲಡೆ ; ಮಹಂತ=ಸಮಾಜದಲ್ಲಿ ಎಲ್ಲರ ಒಲವು ಆದರಗಳಿಗೆ ಪಾತ್ರನಾದ ವ್ಯಕ್ತಿ ; ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತ=ಒಳ್ಳೆಯ ನಡೆನುಡಿಗಳಿಂದ ಬಾಳುವುದನ್ನೇ ದೇವರೆಂದು/ಗುಹೇಶ್ವರಲಿಂಗವೆಂದು ತಿಳಿದಿರುವ ವ್ಯಕ್ತಿ ; ಎಲ್ಲೆಡೆ=ಜೀವನದ ಎಲ್ಲಾ ರಂಗಗಳಲ್ಲಿಯೂ ;  ಸತ್ಕ್ರಿಯಾ+ಆಚರಣೆಯೇ ; ಸತ್ಕ್ರಿಯಾ=ಒಳ್ಳೆಯ ಕೆಲಸ/ಕಾರ‍್ಯ/ಕ್ರಿಯೆ/ಗೇಮೆ ; ಆಚರಣೆ=ಕಾರ‍್ಯರೂಪಕ್ಕೆ ತರುವುದು/ಕೆಲಸವನ್ನು ಮಾಡಿತೋರಿಸುವುದು ; ಸಾಧನ=ಉಪಕರಣ/ಸಾಮಗ್ರಿ ; ” ಗೊಹೇಶ್ವರಲಿಂಗವ  ತನ್ನೊಳರಿದೆನೆಂಬ ಮಹಂತಂಗೆಲ್ಲಡೆ ಸತ್ಕ್ರಿಯಾಚರಣೆಯೇ ಸಾಧನ ” ಎಂಬ ವಾಕ್ಯವು ” ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ನಂಬಿರುವ ವ್ಯಕ್ತಿಗಳು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದನ್ನೇ ದೇವರ ಪೂಜಿಸಲು ಇರುವ ಒಂದು ಉಪಕರಣವೆಂದು ನಂಬಿರುತ್ತಾರೆ ” ಎಂಬ ತಿರುಳನ್ನು ಹೊಂದಿದೆ ; ಭೋ=ಇತರರನ್ನು ಒಲವುನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ ; ಕಾಣಿ ಭೋ=ಕಾಣಿರಿ/ನೋಡಿರಿ/ತಿಳಿಯಿರಿ)

ಮಠವೇಕೋ ಪರ್ವತವೇಕೋ ಜನವೇಕೋ
ನಿರ್ಜನವೇಕೋ ಚಿತ್ತಸಮಾಧಾನವುಳ್ಳ ಶರಣಂಗೆ
ಮತ್ತೆ ಹೊರಗಣ ಚಿಂತೆ ಧ್ಯಾನ ಮೌನ ಜಪ ತಪವೇಕೋ
ತನ್ನ ತಾನರಿದ ಶರಣಂಗೆ ಗುಹೇಶ್ವರ.

ತನ್ನ ಮಯ್ ಮನಗಳಲ್ಲಿ ಹುಟ್ಟಿ ನೂರೆಂಟು ಬಗೆಗಳಲ್ಲಿ ಕೆರಳುವ/ಕಾಡುವ ಒಳಮಿಡಿತಗಳನ್ನು ಒರೆಹಚ್ಚಿ ನೋಡಿ , ಕೆಟ್ಟ ಬಯಕೆಗಳನ್ನು ಹತ್ತಿಕ್ಕಿಕೊಂಡು , ಸಹಮಾನವರಿಗೆ ಮತ್ತು ಸಮಾಜಕ್ಕೆ ಸಮಚಿತ್ತದಿಂದ ಒಳಿತನ್ನು ಮಾಡುವ ವ್ಯಕ್ತಿಗೆ ದೇವರನ್ನು ಒಲಿಸಿಕೊಳ್ಳಲು ಮಾಡುವ ಆಚರಣೆಗಳ ಅಗತ್ಯವಿರುವುದಿಲ್ಲವೆಂಬ ಸಂಗತಿಯನ್ನು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.

( ಮಠ+ಏಕೋ ; ಮಠ=ದೇವರು/ಜಾತಿ/ಮತದ ಹೆಸರುಗಳಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟ ; ಏಕೋ=ಯಾತಕ್ಕೆ ಬೇಕು/ಅಗತ್ಯವಾದರೂ ಏನು ; ಪರ್ವತ+ಏಕೋ ; ಪರ್ವತ=ದೊಡ್ಡದಾಗಿರುವ ಬೆಟ್ಟ ಗುಡ್ಡ ಕಾಡು ಮೇಡುಗಳಿಂದ ಕೂಡಿರುವ ಜಾಗ  ; ಪರ್ವತವೇಕೋ=ನಾಡಿನಲ್ಲಿ ದೊರೆಯುವ ಎಲ್ಲಾ ಬಗೆಯ ಒಲವುನಲಿವಿನ ಬದುಕನ್ನು ತೊರೆದು , ಕಾಡಿಗೆ ಹೋಗಿ ಎಲೆವನೆಯನ್ನು ಕಟ್ಟಿಕೊಂಡು ದೇವರ ನೆನಪಿನಲ್ಲಿ ತೊಡಗುವ ಅಗತ್ಯವೇನು ? ; ಜನ+ಏಕೋ ; ಜನ=ವ್ಯಕ್ತಿಗಳ ಗುಂಪು/ಜಂಗುಳಿ ; ಜನವೇಕೋ=ಹೆಚ್ಚು ಮಂದಿಯ ಜತೆಗೂಡಿ ದೇವರ ಹೆಸರಿನಲ್ಲಿ ಬಹುಬಗೆಯ ಆಚರಣೆಯಲ್ಲಿ ತೊಡಗುವ ಅಗತ್ಯವಾದರೂ ಏಕೆ ? ; ನಿರ್ಜನ+ಏಕೋ ; ನಿರ್ಜನ=ಜನ ವಸತಿಯಿಲ್ಲದಿರುವಿಕೆ/ಯಾವೊಬ್ಬ ವ್ಯಕ್ತಿಯೂ ಇಲ್ಲದಿರುವ ತಾಣ ; ನಿರ್ಜನವೇಕೋ=ಒಬ್ಬಂಟಿಯಾಗಿದ್ದುಕೊಂಡು ದೇವರ ನೆನಪಿನಲ್ಲಿ ತೊಡಗಿರುವ ಅಗತ್ಯವೇನು ? ; ಚಿತ್ತ+ಸಮಾಧಾನ+ಉಳ್ಳ ; ಚಿತ್ತ=ಮನಸ್ಸು ; ಸಮಾಧಾನ=ಯಾವುದೇ ಬಗೆಯ ಕಳವಳ/ತಳಮಳ/ಒತ್ತಡವಿಲ್ಲದಿರುವಿಕೆ ; ಉಳ್ಳ=ಇರುವ/ಹೊಂದಿರುವ ; ಚಿತ್ತಸಮಾಧಾನವುಳ್ಳ=ಒಲವು ನಲಿವು ತಾಳ್ಮೆ ನೆಮ್ಮದಿಯಿಂದ ಕೂಡಿರುವ ಮನಸ್ಸು ;  ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು , ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಪೂಜಿಸುವವನು/ಶಿವನಿಗೆ ಒಲಿದವನು ; ಶರಣಂಗೆ=ಶರಣನಿಗೆ ; ಮತ್ತೆ=ಒಂದರ ಜತೆಗೆ ಇನ್ನೊಂದು/ಬಳಿಕ/ನಂತರ/ಮರಳಿ ; ಹೊರಗಣ=ಬಹಿರಂಗದಲ್ಲಿ/ಇತರರ ಕಣ್ಣಿಗೆ ಕಾಣುವಂತಹ ಬಗೆಯಲ್ಲಿ ; ಚಿಂತೆ=ಆಲೋಚನೆ/ದೇವರುದರ‍್ಮಗಳ ಬಗೆಗಿನ ಚರ‍್ಚೆ ; ಧ್ಯಾನ=ದೇವರ ಹೆಸರನ್ನು ಕುರಿತು ಮತ್ತೆ ಮತ್ತೆ ಉಚ್ಚರಿಸುತ್ತಿರುವುದು ; ಮೌನ=ಮಾತನಾಡದೆ ಸುಮ್ಮನಿರುವುದು ; ಜಪ=ತಾನು ಒಲಿದಿರುವ ದೇವರನ್ನು ಇಲ್ಲವೇ ಮೆಚ್ಚಿರುವ ಇನ್ನಿತರ ಸಂಗತಿಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುವುದು ; ತಪ= ಉಪವಾಸ ಮತ್ತು ಇನ್ನಿತರ ದಂಡನೆಗಳಿಗೆ ಮಯ್ಯನ್ನು ಒಳಗುಮಾಡಿ ದೇವರನ್ನು ನೆನಪಿಸಿಕೊಳ್ಳುವುದು ; ಹೊರಗಣ ಚಿಂತೆ ಧ್ಯಾನ ಮೌನ ಜಪ ತಪವೇಕೋ=ಈ ಬಗೆಯ ಆಚರಣೆಗಳ ಅಗತ್ಯವೇನು? ; ತನ್ನ=ತನ್ನನ್ನು ; ತಾನ್+ಅರಿದ ; ತಾನ್=ತಾನು ; ಅರಿ=ತಿಳಿ ; “ತನ್ನನ್ನು ತಾನು ಅರಿಯುವುದು” ಎಂದರೆ ಪ್ರತಿಯೊಬ್ಬ ಮಾನವನು ತಾನು ಹುಟ್ಟಿ ಬೆಳೆದು ಬಾಳುವ ಪರಿಸರದಲ್ಲಿರುವ ನಿಸರ‍್ಗದಲ್ಲಿನ ಏರಿಳಿತಗಳಿಗೆ ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟು ವ್ಯವಹರಿಸುತ್ತಿರುತ್ತಾನೆ. ಇದರಿಂದಾಗಿ ಮಾನವ ಜೀವಿಯ ಮಯ್-ಮನಗಳು ಸದಾಕಾಲ ಒಳಿತು ಕೆಡುಕಿನ ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುತ್ತವೆ ಎಂಬ ವಾಸ್ತವವನ್ನು ಅರಿತುಕೊಂಡು , ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿ , ಒಳ್ಳೆಯ ನಡೆನುಡಿಗಳಿಂದ ತನಗೆ ಒಳಿತನ್ನು ಬಯಸುವಂತೆಯೇ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಎಚ್ಚರವನ್ನು ಹೊಂದಿರುವುದು ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

%d bloggers like this: