ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು

– ನಾಗರಾಜ್ ಬದ್ರಾ.

sharanaಮಹಾ ದಾಸೋಹಿ, ಜ್ನಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಲಕಪ್ಪಾ ಹಾಗೂ ತಾಯಿ ಸಂಗಮ್ಮ. 18 – 19 ನೇ ಶತಮಾನಗಳು ಇಂದಿನ ಬಾರತದ ಪಾಲಿಗೆ ಕರಾಳ ಅದ್ಯಾಯಗಳು. ಅಂದಿನ ಪ್ರತಿಶ್ಟಿತ ಸಂಸ್ತಾನಗಳು ಬ್ರಿಟಿಶರ ದೌರ‍್ಜನ್ಯಕ್ಕೆ ನಲುಗಿ, ಬ್ರಿಟಿಶರ ಆಳ್ವಿಕೆಯನ್ನು ಒಪ್ಪಿಕೊಂಡ ಕಾಲವದು. ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರು ಇಂತಹ ಸಂದಿಗ್ದ ಕಾಲದಲ್ಲಿಯೇ ಕಾಯಕ, ದಾಸೋಹ, ಲಿಂಗಾಯತ ತತ್ವಗಳ ಬೋದನೆ ಮಾಡುತ್ತಾ ಜಿಲ್ಲೆಯ ಸುತ್ತಲೂ ಸಂಚರಿಸಿದರು. ಇನ್ನೊಬ್ಬರಿಗೆ ಗುಲಾಮರಾಗುವ ನಡವಳಿಕೆಯ ವಿರುದ್ದ ಹೋರಾಟ ಮಾಡಲು ಹಾಗೂ ಹೊಸ ಬದುಕನ್ನು ಕಟ್ಟಿಕೊಳ್ಳಲು ಮಂದಿಗೆ ದೈರ‍್ಯ ಮತ್ತು ವಿಶ್ವಾಸವನ್ನು ತುಂಬಿದರು.

ಶರಣಬಸವೇಶ್ವರರು ಕಲಿಕೆಯ ದಿನಗಳಲ್ಲಿ ಆದ್ಯಾತ್ಮದ ಕಡೆಗೆ ಹೆಚ್ಚಿನ ಒಲವನ್ನು ತೋರಿದರು. ಕಲಿಕೆಗೆ ಸೇರಿದ ಕೆಲವು ದಿನಗಳಲ್ಲಿಯೇ ಓಂ ಕಾರದ ಮಹಾ ಅರ‍್ತವನ್ನು ಗುರುಗಳಿಗೆ ಪ್ರಶ್ನಿಸಿದರು. ಪ್ರಶ್ನೆ ಮಾಡುವ ಮತ್ತು ಉತ್ತರವನ್ನು ಹುಡುಕುವ ಅವರ ನಡವಳಿಕೆ ಚಿಕ್ಕಂದಿನಿಂದಲೇ ಬೆಳೆದು ಬಂದಿತ್ತು. ಗುರುಗಳು ಕಲಿಸಿದ ಎಲ್ಲಾ ವಿದ್ಯೆಗಳನ್ನು ನಿಶ್ಟೆಯಿಂದ ಕಲಿತು, ಗುರುವಿನಲ್ಲಿಯೇ ದೇವರನ್ನು ಕಂಡರು. ವಿಬೂತಿ, ರುದ್ರಾಕ್ಶಿ, ಗುರು, ಲಿಂಗ, ಜಂಗಮ, ದಾಸೋಹ ಹಾಗೂ ಕಾಯಕ ಎಲ್ಲವುದರ ಹಿರಿಮೆಯನ್ನು ಅರಿತುಕೊಂಡು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರು.

ಶರಣಬಸವೇಶ್ವರರು ಮಹಾದೇವಿ ಎಂಬುವವರನ್ನು ಮದುವೆಯಾದರು. ಸಾಂಸಾರಿಕ ಜೀವನದಲ್ಲಿಯೂ ದಾಸೋಹ, ಲಿಂಗ ಪೂಜೆ, ಶಿವಾನುಬವ ಗೊಶ್ಟಿ, ಬಡವರಿಗೆ – ರೋಗಿಗಳಿಗೆ ಸೇವೆ ಮಾಡಿ ಎಲ್ಲರಿಗೂ ಮಾದರಿಯಾದರು. ಅವರ ಮಡದಿಯೂ ಇವಕ್ಕೆ ಬೇಕಾದ ನೆರವನ್ನು ನೀಡುತ್ತಾ ಶರಣರ ಕೆಲಸದಲ್ಲಿ ಕೈಜೋಡಿಸಿದರು. ಶರಣಬಸವೇಶ್ವರದ್ದು ಒಂದು ಅವಿಬಕ್ತ ಕುಟುಂಬ, ಅಣ್ಣತಮ್ಮಂದಿರೆಲ್ಲಾ ಒಟ್ಟಾಗಿ ಬಾಳುವೆ ಮಾಡುತ್ತಿದ್ದರು. ಆದರೆ ಶರಣಬಸವೇಶ್ವರರ ದಾಸೋಹ ಕಾಯಕ ಅವರ ಒಡಹುಟ್ಟಿದವರಿಗೆ ಇಶ್ಟವಾಗಲಿಲ್ಲ. ಇದನ್ನು ಗಮನಿಸಿದ ಶರಣಬಸವೇಶ್ವರರು ಆಸ್ತಿಯಲ್ಲಿ ತಮ್ಮ ಪಾಲಿಗೆ ಬಂದಿದ್ದನ್ನು ಪಡೆದು ಅವರಿಂದ ದೂರವಾಗಿ ಮತ್ತೆ ದಾಸೋಹ ನಡೆಸಿದರು.

ಅವರ ದಾಸೋಹ ಕಾಯಕ ಬರೀ ಮನುಜರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಇತರ ಪ್ರಾಣಿ ಹಾಗೂ ಹಕ್ಕಿಗಳಿಗೂ ನಡೆಯುತ್ತಿತ್ತು. ಅವರು ಕ್ರುಶಿಯನ್ನು ತಮ್ಮ ಕಾಯಕವನ್ನಾಗಿಸಿ ಕೊಂಡಿದ್ದರು. ಹೊಲದಲ್ಲಿ ಹಕ್ಕಿಗಳ ಕಾಟದಿಂದ ಎಲ್ಲರೂ ಹಕ್ಕಿಗಳನ್ನು ಓಡಿಸುತ್ತಿದ್ದರು. ಹಕ್ಕಿಗಳು ಬೆಳೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು ತಿನ್ನುವುದರಿಂದ ಬೆಳೆಗಳು ಹಾಳಾಗುವುದು ಕಡಿಮೆಯಾಗುತ್ತದೆ ಎಂದರಿತ ಇವರು, ಹಕ್ಕಿಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಹೊಲಕ್ಕೆ ಬರುವ ಹಕ್ಕಿಗಳಿಗೆ ಕುಡಿಯುವ ನೀರಿನ ವ್ಯವಸ್ತೆಯನ್ನು ಮಾಡಿದರು. ಇವರು ಜೋಳದ ಬೆಳೆಯನ್ನು ಬಿತ್ತಿದ್ದರು. ಹಕ್ಕಿಗಳು ಸಾಮಾನ್ಯ ಆಹಾರವಾದ ಕ್ರಿಮಿಕೀಟಗಳನ್ನು ತಿಂದದ್ದರಿಂದ ಒಳ್ಳೆಯ ಜೋಳದ ಬೆಳೆ ಬೆಳೆಯಿತು. ಇವರ ಜೋಳದ ಇಳುವರಿ ಊರಿನ ಮಂದಿಯನ್ನು ಬೆರಗಾಗಿಸಿತ್ತು. ಪರಿಸರದಲ್ಲಿನ ಜೀವ ವೈವಿದ್ಯಗಳ ನೆರವಿನಿಂದ ಕ್ರುಶಿಯನ್ನು ಮಾಡಿ ಎಲ್ಲರಿಗೂ ಮಾದರಿಯಾದರು.

ಹೂವಿನ ಹಾರವನ್ನು ಮಾಡಲು ಹೊಸ ಹೂವುಗಳನ್ನು ಹಾಗೂ ಎಲೆಗಳನ್ನು ಉಪಯೋಗಿಸದೇ, ಗಿಡದಿಂದ ಉದುರಿ ಬಿದ್ದ ಹೂವುಗಳು ಹಾಗೂ ಎಲೆಗಳನ್ನು ಉಪಯೋಗಿಸಿ, ಅವುಗಳ ಮಹತ್ವವನ್ನು ಮಂದಿಗೆ ಸಾರಿ ಹೇಳಿದರು. ಶರಣಬಸವೇಶ್ವರರ ಒಳ್ಳೆಯ ಆಚಾರಗಳಿಂದ ಹಾಗೂ ಬೋದನೆಯಿಂದ ಪ್ರಬಾವಿತರಾಗಿ ಕಳ್ಳತನ, ಮೋಸ ಹಾಗೂ ವಂಚನೆ ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಹಲವಾರು ಮಂದಿ ಅವರಿಂದ ಲಿಂಗ ದೀಕ್ಶೆಯನ್ನು ಪಡೆದು ಶರಣರಾಗಿ ಮಾರ‍್ಪಾಟಾದರು.

ಹೀಗಿರುವಾಗ, ಶರಣಬಸವೇಶ್ವರರ ಮಡದಿ ಹಾಗೂ ಮಗನು ಅಕಾಲಿಕ ಸಾವನ್ನಪ್ಪಿದರು. ಬಳಿಕ ಅರಳಗುಂಡಗಿ ಗ್ರಾಮದ ರುಣವು ತೀರಿತೆಂದು ಊರಿನ ಜನರಿಗೆ ತಿಳಿಸಿ ಹಣೆಯ ಮೇಲೆ ವಿಬೂತಿ, ಹೆಗಲ ಮೇಲೆ ಒಂದು ಕಂಬಳಿ, ಕೊರಳಲ್ಲಿ ರುದ್ರಾಕ್ಶಿ, ತಲೆಯ ಮೇಲೆ ಶಿವಾನುಬವದ ಹೊತ್ತಿಗೆಗಳನ್ನು ಹಾಗೂ ಶಿವನ ಮಂತ್ರವನ್ನು ಜಪಿಸುತ್ತಾ ಕಲಬುರಗಿಯ ಕಡೆಗೆ ಪಯಣವನ್ನು ಬೆಳೆಸಿದರು. ಇವರ ಕುಟುಂಬದವರು ಇಂದಿಗೂ ಅರಳಗುಂಡಗಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಶರಣಬಸವೇಶ್ವರರು ಬೀಮಾ ನದಿಯನ್ನು ದಾಟಿ ಅವರಾದ ಹಳ್ಳಿಯನ್ನು ತಲುಪಿದರು. ಅವರಾದ ಊರಿನ ಗೌಡ ದಂಡರಾಯರು ಇವರ ದಾಸೋಹ ಕಾಯಕಕ್ಕೆ ಕೈಜೋಡಿಸಿದರು. ಇವರ ದಾಸೋಹದ ಅಡುಗೆಗೆ ಮಳೆಯು ಅಡಿಪಡಿಸಿದ್ದಾಗ ಗೌಡ ದಂಡರಾಯರರು ತಮ್ಮ ಮನೆಯ ಚಾವಣೆಯಲ್ಲಿನ ಕಟ್ಟಿಗೆಗಳನ್ನು ಉರಿಸಿ ಅಡಿಗೆ ಮಾಡಿ ಬಡಿಸಿ, ಶರಣಬಸವೇಶ್ವರ ಪ್ರೀತಿಗೆ ಪಾತ್ರರಾದರು.

ಒಂದು ದಿನ ಹೈದ್ರಬಾದಿನ ರಾಜನು ತನ್ನ ಸೈನಿಕರೊಂದಿಗೆ ಕಂದಾಯದ ಕರವನ್ನು ಕೇಳಲು ಬಂದನು. ಆದರೆ ಶರಣಬಸವೇಶ್ವರರ ದಾಸೋಹವನ್ನು ಕಂಡು ಬೆರಗಾಗಿ ಅವರ ಪಾದಗಳಿಗೆ ನಮಿಸಿ ಬರಿಗೈಯಲ್ಲಿ ಹೊರಟುಹೋದನು. ಜನರಿಗೆ ಶಿವಾನುಬವದ ಗೋಶ್ಟಿಯನ್ನು ಹಾಗೂ ಹಸಿವಿನಿಂದ ಬಂದವರಿಗೆ ಅನ್ನ ದಾಸೋಹವನ್ನು ಮಾಡುತ್ತಾ ಇವರು ಸಾಗಿದ್ದರು. ಈ ಕಾಯಕದಿಂದ ಅವರ ಹೆಸರು ಎಲ್ಲೆಡೆ ಹರಡಿತು. ಇದನ್ನು ಗಮನಿಸಿದ ಕಲಬುರಗಿಯ ದೊಡ್ಡಪ್ಪಗೌಡರು ಶರಣಬಸವೇಶ್ವರರಿಗೆ ಕಲಬುರಗಿಗೆ ಬರಲು ಬೇಡಿಕೊಂಡರು. ಅದನ್ನೊಪ್ಪಿಕೊಂಡು ಕಲಬುರಗಿಯ ಕಡೆಗೆ ಇವರು ಹೊರಟರು. ದಾರಿಯ ಮದ್ಯದಲ್ಲಿ ಬರುವ ಪರತಾಬಾದ್ ಹಳ್ಳಿಯ ಮಂದಿ ಆ ಹೊತ್ತಿಗೆ ಬರದಿಂದ ಕಂಗೆಟ್ಟಿದ್ದರು. ಇದನ್ನು ಗಮನಿಸಿ ಅವರ ಹಸಿವಿನ ದಾಹವನ್ನು ನೀಗಿಸಲು ಅಂಬಲಿ ಮಾಡಿ ಕುಡಿಸಿ, ನಂತರ ಅಲ್ಲಿಂದ ಅವರು ತಮ್ಮ ಪಯಣವನ್ನು ಮುಂದುವರೆಸಿ ಕಲಬುರಗಿಗೆ ಬಂದು ತಲುಪಿದರು.

ದೊಡ್ಡಪ್ಪಗೌಡರರು ಶರಣಬಸವೇಶ್ವರರಿಗೆ ನೆಲೆಸಲು ಆಶ್ರಯವನ್ನು ನೀಡಿದರು. ದೊಡ್ಡಪ್ಪಗೌಡರ ಸಹಕಾರದಿಂದ ನಿತ್ಯವು ಅನ್ನ ದಾಸೋಹ ಹಾಗೂ ಶಿವಾನುಬವ ಗೋಶ್ಟಿಗಳು ನಡೆಯುತ್ತಿತ್ತು. ರೋಗದಿಂದ ಹಾಗೂ ಮಕ್ಕಳಿಲ್ಲದೆ ನರಳುತ್ತಿದ್ದ ದೇಸಾಯಿಯವರ ರೋಗವನ್ನು ಗುಣಪಡಿಸಿ, ಮಗನನ್ನು ಪಡೆವಂತೆ ಹರಿಸಿದರು. ಇದರಿಂದ ಸಂತೋಶಗೊಂಡ ದೇಸಾಯಿಯ ತಾಯಿಯವರು ಶರಣಬಸವೇಶ್ವರರಿಗೆ ದಾಸೋಹ ನಡೆಸಲು ಹಾಗೂ ಅವರು ನೆಲೆಸಲು ಅಗತ್ಯವಾದ ಜಾಗವನ್ನು ನೀಡಿದರು. ಒಂದು ದಿನ ಒಬ್ಬ ಬಕ್ತನು ತಕ್ಶಣವೇ ಮಗನು ಬೇಕೆಂದು ಬಂದನು. ಅವನಿಗೆ ದೊಡ್ಡಪ್ಪ ಗೌಡರರ ಮಗನನ್ನೇ ದಾನ ಮಾಡಿದರು. ಇದು ಶರಣಬಸವೇಶ್ವರ ಹಾಗೂ ದೊಡ್ಡಪ್ಪಗೌಡರ ನಡುವೆ ಗುರು ಶಿಶ್ಯರ ನಂಟು ಎಶ್ಟು ಗಾಡವಾಗಿತ್ತು ಎಂದು ತೋರಿಸುತ್ತದೆ. ದೊಡ್ಡಪ್ಪ ಗೌಡರು ಶರಣಬಸವೇಶ್ವರರ ನೆರಳಿನಲ್ಲಿ ಬದುಕಿದರು.

ಶರಣಬಸವೇಶ್ವರರ ಅವಳಿ ಬಿಂಬ

ಶರಣಬಸವೇಶ್ವರರ ಅವಳಿ ದಿವ್ಯಬಿಂಬ

ಶರಣಬಸವೇಶ್ವರರು ಕಾಯಕದಿಂದ ಸಂಪಾದಿಸಿದ್ದನ್ನು ಅನ್ನ ಹಾಗೂ ಜ್ನಾನ ದಾಸೋಹದಲ್ಲಿ ತೊಡಗಿಸಿ, ಸಮಾಜಸೇವೆಯನ್ನು ಮಾಡುತ್ತಾ ಬದುಕ ಬೇಕೆಂದು ಸಂದೇಶವನ್ನು ಸಾರಿ, ಅವರೂ ಅದೇ ರೀತಿಯಲ್ಲಿ ಬದುಕಿ ತೋರಿಸಿ ಎಲ್ಲರಿಗೂ ಮಾದರಿಯಾದರು. ಬದುಕಿನಲ್ಲಿ ಶಿವನನ್ನು ಹೇಗೆ ಕಂಡುಕೊಳ್ಳಬಹುದು ಎಂದು ತಿಳಿಸಿದ ಅವರೇ ಒಂದು ಜ್ನಾನದ ವಿಶ್ವವಿದ್ಯಾಲಯವಾಗಿದ್ದರು. ಅದರಲ್ಲಿ ಶುದ್ದ ಹಾಗೂ ನಿಸ್ವಾರ‍್ತ ಜೀವನವನ್ನು ನಡೆಸಲು ಬೇಕಾದ ಎಲ್ಲವೂ ಇದ್ದವು. ಯಾವುದೇ ರೀತಿಯ ಹೊಸ ತತ್ವಗಳನ್ನು ಹೇಳದೇ, ಮೌನವಾಗಿಯೇ ಎಲ್ಲವನ್ನೂ ತಾವೇ ಅನುಸರಿಸಿ ತೋರಿಸಿದರು. ಹಸಿವಿನಿಂದ ಬಂದವರಿಗೆ ಅನ್ನ ದಾಸೋಹ, ರೋಗದಿಂದ ಬಳಲುತ್ತಿರುವವರ ರೋಗಗಳ ನಿವಾರಣೆ, ಲಿಂಗಾಯತ ತತ್ವಗಳನ್ನು ಅನುಸರಿಸಿ ಬದುಕಲು ಬಯಸಿ ಬಂದವರಿಗೆ ಲಿಂಗ ದೀಕ್ಶೆ ನೀಡುತ್ತಾ ಬದುಕು ನಡೆಸಿದರು.

ಒಮ್ಮೆ, ಶರಣಬಸವೇಶ್ವರರು ತತ್ವಜ್ನಾನಿ ಕಡಕೊಳ್ಳ ಮಡಿವಾಳಪ್ಪನರಿಗೆ ಸಹಾಯ ಮಾಡಲು ಮುಂದಾದರು ಇದನ್ನು ಗಮನಿಸಿದ ವಿರೋದಿ ದಂಗೆಕೋರರ ಗುಂಪು ಅವರ ಮೇಲೆ ಆಕ್ರಮಣ ಮಾಡಲು ಬಂದಿತು. ಆದರೆ ಶರಣಬಸವೇಶ್ವರರು ಮಾತ್ರ ತಮ್ಮ ಪ್ರೀತಿಯಿಂದಲೇ ಅವರನ್ನು ಗೆದ್ದರು. ದಂಗೆಕೋರರ ಗುಂಪು ಇವರಿಗೆ ಶರಣಾಗಿ ಪಾದಗಳಿಗೆ ನಮಿಸಿ ಹೊರಟಿತು. ಪ್ರಸಿದ್ದ ತತ್ವಜ್ನಾನಿ ಕಡಕೋಳ ಮಡಿವಾಳಪ್ಪನವರಿಗೂ ಲಿಂಗ ದೀಕ್ಶೆಯನ್ನು ನೀಡಿದರು. ಶರಣಬಸವೇಶ್ವರ ದಾಸೋಹದಿಂದ ಪ್ರೇರಣೆಗೊಂಡು ಕಲಬುರಗಿಯ ಪ್ರತಿ ಮನೆಯಲ್ಲಿ ದಾಸೋಹ ಕಾರ‍್ಯ ಆರಂಬಗೊಂಡಿತು. ಕಲಬುರಗಿಯ ಪ್ರತಿ ಮನೆಯು ದಾಸೋಹದ ಮಹಾಮನೆಯಾಗಿ ಪರಿವರ‍್ತನೆಗೊಂಡಿತ್ತು.

ಶರಣಬಸವೇಶ್ವರ ರತೋತ್ಸವ

ಶರಣಬಸವೇಶ್ವರ ರತೋತ್ಸವ

ಶರಣಬಸವೇಶ್ವರರು 11-03-1822, ಸೋಮವಾರದಂದು ಅನಾರೋಗ್ಯದಿಂದ ಲಿಂಗೈಕ್ಯರಾದರು. ನಂತರ ಅವರ ಸಮಾದಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ತಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ‍್ಶವು ರತೋತ್ಸವವನ್ನು ನಡೆಸಲಾಗುತ್ತದೆ. ದೇವಸ್ತಾನದ ಗರ‍್ಬಗುಡಿಯಲ್ಲಿ ಶರಣಬಸವೇಶ್ವರ ಸಮಾದಿಯಿದ್ದು, ಅಲ್ಲಿ ಶರಣಬಸವೇಶ್ವರರ ಅವಳಿ ದಿವ್ಯಬಿಂಬಗಳಿರುವ ವಿಗ್ರಹವಿದೆ. ಅವುಗಳಲ್ಲಿ ಒಂದು ಅವರ ಬಿಂಬ, ಇನ್ನೊಂದು ಅವರ ಪರಮ ಆತ್ಮೀಯ ಶಿಶ್ಯ ದೊಡ್ಡಪ್ಪಗೌಡರ ಬಿಂಬ. ಗುರು-ಶಿಶ್ಯರ ಮದ್ಯೆ ಒಂದು ಅವಿನಾಬಾವದ ಸಂಬಂದವಿತ್ತು, ಶಿಶ್ಯರು ಗುರುವಿನ ಪ್ರತಿಬಿಂಬವಾಗಿರಬೇಕೆಂದು ಹೇಳುತ್ತಾರೆ. ಅದರಂತೆ ದೊಡ್ಡಪ್ಪಗೌಡರು ಶರಣಬಸವೇಶ್ವರರ ಪ್ರತಿಬಿಂಬವಾಗಿ ಬದುಕಿ ತೋರಿಸಿದರು. ಶರಣಬಸವೇಶ್ವರರು ಹುಟ್ಟಿದ ಅರಳಗುಂಡಗಿ ಹಳ್ಳಿಯಲ್ಲಿಯೂ ಅವರ ಪವಿತ್ರವಾದ ದೇವಸ್ತಾನವಿದೆ. ಇಂದಿಗೂ ಅಲ್ಲಿ ಶರಣಬಸವೇಶ್ವರರ ದಾಸೋಹ ಕಾಯಕವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಶರಣಬಸವೇಶ್ವರರ ಹೊಲದಲ್ಲಿ ಬೆಳೆದ ಬೆಳೆಗಳಲ್ಲಿ ಒಂದು ಬಾಗವನ್ನು ದಾಸೋಹಕ್ಕೆ ಉಪಯೋಗಿಸುತ್ತಾರೆ. ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ‍್ಶವು ಅರಳಗುಂಡಗಿ ಹಳ್ಳಿಯಲ್ಲಿಯೂ ರತೋತ್ಸವವನ್ನು ಸಂಬ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಶರಣಬಸವೇಶ್ವರರು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಂಡರು. ಮಹಾದಾಸೋಹಿ, ಕಲಬುರಗಿಯ ಕಣ್ಣು, ಶ್ರೀ ಶರಣಬಸವೇಶ್ವರರು ಕಲಬುರಗಿ ಜನತೆಯ ಮನದಲ್ಲಿ ಅಮರರಾಗಿ ಉಳಿದಿದ್ದಾರೆ.

(ಮಾಹಿತಿ ಸೆಲೆ: wikipedianammagulbarga.com, nammagulbarga.com\sharanabasaveshwara)
(ಚಿತ್ರಸೆಲೆ: thehindu.com, youtube.com, klear.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಸಿದ್ದಲಿಂಗ ಪಾಟೀಲ್ says:

    “ದೇವಸ್ತಾನದ ಗರ‍್ಬಗುಡಿಯಲ್ಲಿ ಶರಣಬಸವೇಶ್ವರ ಸಮಾದಿಯಿದ್ದು, ಅಲ್ಲಿ ಶರಣಬಸವೇಶ್ವರರ ಅವಳಿ ದಿವ್ಯಬಿಂಬಗಳಿರುವ ವಿಗ್ರಹವಿದೆ. ಅವುಗಳಲ್ಲಿ ಒಂದು ಅವರ ಬಿಂಬ, ಇನ್ನೊಂದು ಅವರ ಪರಮ ಆತ್ಮೀಯ ಶಿಶ್ಯ ದೊಡ್ಡಪ್ಪಗೌಡರ ಬಿಂಬ.” ಎಂದು ತಿಳಿಸಿರುತ್ತಿರಿ. ಆದರೆ, ಏರಡು ಬಿಂಬಗಳಲ್ಲಿ ಒಂದು ಶರಣಬಸವೇಶ್ವರರ ಬಿಂಬ ಇನ್ನೊಂದು ಅವರ ಗುರುಗಳಾದ ಮರುಳ ಸಿದ್ದರ ಬಿಂಬವಾಗಿದೆ.

  1. 19/02/2016

    […] ಶ್ರೀ ಶರಣಬಸವೇಶ್ವರರ ಬಗ್ಗೆ ಈಗಾಗಲೇ ಹಿಂದಿನ ಬರಹ ಒಂದರಲ್ಲಿ ತಿಳಿಸಲಾಗಿದೆ. ಶರಣಬಸವೇಶ್ವರರು […]

ಅನಿಸಿಕೆ ಬರೆಯಿರಿ:

%d bloggers like this: