ಕವಿತೆ: ಅಂತ್ಯ ಎಂದಿಗೋ ಅರಿತವರಿಲ್ಲ

– ಶ್ಯಾಮಲಶ್ರೀ.ಕೆ.ಎಸ್.

ಎತ್ತ ಸಾಗಿದೆಯೋ ಬದುಕು
ಅರಿಯದೇ ಬರುವ ಜನನ
ನಡುವೆ ಕದನ
ಕಟ್ಟ-ಕಡೆಗೆ ಮರಣ
ಕಾಣದ ಪ್ರಾಣ
ನೆನ್ನೆ ಇದ್ದವರೂ ಇಂದಿಲ್ಲ
ಮುಂದೆ ಯಾರ ಅಂತ್ಯವೋ ಅರಿತವರಿಲ್ಲ

ಆದರೂ ಹೋರಾಡಬೇಕಿದೆ
ಬಾಳಿನ ಬಂಡಿಯ ಎಳೆಯುತಾ
ಅನ್ನ ನೀರು ಸೇವಿಸುತಾ
ನೆನಪುಗಳ ಮೆಲುಕುತಾ
ಬೇಕು ಬೇಡಗಳ ಚಡಪಡಿಸುತಾ
ಹೋದವರು ಹೋದರೆಲ್ಲಾ
ಎಲ್ಲಿಗೆ ಹೋದರೆಂದು ಅರಿತವರಿಲ್ಲ

ದಿನಕ್ಕೊಂದು ಪ್ರಶ್ನೆಪತ್ರಿಕೆ
ಉತ್ತರಕ್ಕಾಗಿ ಶೋದನೆ
ಏತಕೋ ರೋದನೆ
ಯಾರಿಗೋ ಶೋಶಣೆ
ಕೇಳುವವರಿಲ್ಲ ಪ್ರೀತಿಯ ನಿವೇದನೆ
ಎಲ್ಲರ ಬದುಕಿಗೂ ಇರುವುದೊಂದು ಕೊನೆ
ಯಾರ ಅಂತ್ಯ ಎಂದಿಗೋ ಅರಿತವರಿಲ್ಲ

ಸಾವಿನ ಸುಳಿವು ಕಂಡಾಗ
ಹೆದರಿತೇ ಮನ
ಕೆದರಿತೇ ಚಲನವಲನ
ಕಮರಿತೇ ಬದುಕಿನ ಆಶಾಕಿರಣ
ಸ್ತಬ್ದವಾಯಿತೇ ಬಾಳಪಯಣ
ಏನಾಯಿತೋ ಎಂತಾಯಿತೋ ಅರಿಯದು
ಆದರೂ ದೇಹಾಂತ್ಯ ನಿಲ್ಲದು

(ಚಿತ್ರ ಸೆಲೆ: scienceve.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: