ಕೊರೊನಾ: ಮುನ್ನೆಚ್ಚರಿಕೆಯೇ ಮದ್ದು

– ವೆಂಕಟೇಶ ಚಾಗಿ.

ಕೊರೊನಾ ವೈರಸ್, Corona Virus

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಶಯ ಎಂದರೆ ಕೊರೊನಾ. ಕೊರೊನಾ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಹಬ್ಬುತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ ವೈರಸ್, ತುಂಬಾ ಅಪಾಯಕಾರಿಯಾಗಿ ಕಂಡದ್ದು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಸಂಕ್ಯೆಯಿಂದಲೇ. ಹಿಂದೆ ಅನೇಕ ವೈರಸ್ ಗಳನ್ನು ಕಂಡಿದ್ದ ಚೀನಾ ಕೊರೊನಾದ ವಿಶಯದಲ್ಲಿ ಜಾಗ್ರುತಿ ಹಾಗೂ ಅದರ ತೀವ್ರತೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ವಿಳಂಬ ದೋರಣೆ ಅನುಸರಿಸಿದೆ ಎಂಬುದು ಸ್ಪಶ್ಟ. ಚೀನಾದಲ್ಲಿ ಸಾವಿನ ಸಂಕ್ಯೆ ಏರುತ್ತಿರುವಾಗ ಅಮೇರಿಕಾ ಈ ಕೊರೊನಾವನ್ನು ತಡೆಯಲು ತನ್ನ ನುರಿತ ವೈದ್ಯರು ಹಾಗೂ ವೈದ್ಯಕೀಯ ಸೇವೆಯನ್ನು ನೀಡುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿತ್ತು. ಆದರೆ ಇತ್ತೀಚೆಗೆ ಪರಿಸ್ತಿತಿ ಕೈಮೀರಿದ್ದು ಅಮೆರಿಕಕ್ಕೂ ಕೊರೊನಾವನ್ನು ಮಟ್ಟಹಾಕುವಂತಹ ಸಾಮರ‍್ತ್ಯ ಕುಂದಿಹೋಗಿದೆ. ಇಟಲಿ, ಸ್ಪೇನ್, ಯುಕೆ ಮುಂತಾದ ಯುರೋಪ್ ನಾಡುಗಳಲ್ಲಿ ಕೊರೊನಾ ಮರಣಮ್ರುದಂಗವನ್ನೇ ಬಾರಿಸುತ್ತಿದ್ದು ಅದರ ತೀವ್ರತೆಯನ್ನು ನಾವು ಮನಗಾಣಬಹುದು.

ಕೊರೊನಾ ವೈರಸ್ನ ಸೋಂಕಿನ ವಿರುದ್ದ ವಿಶ್ವಸಂಸ್ತೆ ಅಲ್ಲದೇ ಹಲವಾರು ದೇಶಗಳು ಎಚ್ಚರಿಕೆ ನೀಡುತ್ತಾ ಬಂದಿವೆ. ಹಲವಾರು ನಗರಗಳು ಸ್ತಬ್ದವಾಗಿದ್ದು ಸೋಂಕಿನ ಹರಡುವಿಕೆಯನ್ನು ತಡೆಯಲು ಹಲವಾರು ಕಸರತ್ತುಗಳನ್ನು ನಡೆಸುತ್ತಿವೆ. ಮುಂದುವರಿದ ರಾಶ್ಟ್ರಗಳೇ ಸೋಂಕು ತಡೆಯಲು ಕಶ್ಟಪಡುತ್ತಿರುವಾಗ ಬಡರಾಶ್ಟ್ರಗಳ ಗತಿಯೇನು? ಎಂಬ ವಿಶಯವನ್ನು ನಾವಿಲ್ಲಿ ಗಮನಿಸಲೇಬೇಕು . ಅನೇಕ ವೈದ್ಯಕೀಯ ಸೌಲಬ್ಯಗಳನ್ನು ಹೊಂದಿರುವ ಮುಂದುವರಿದ ರಾಶ್ಟ್ರಗಳು ಬೇರೆ ವೈರಸ್ ಗಳಿಗೆ ನೀಡಬಹುದಾದ ಚಿಕಿತ್ಸೆ ನೀಡಿ ಕೊರೊನಾ ವಿರುದ್ದ ಹೋರಾಟಕ್ಕೆ ನಿಂತಿವೆ . ಆದರೂ ಸೋಂಕಿತರ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಶ್ಟ್ರಗಳಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುವುದು ಕಶ್ಟವಾಗುತ್ತಿದೆ. ಅಂತೆಯೇ ಸಾವಿಗೀಡಾದವರ ಅಂತ್ಯಸಂಸ್ಕಾರವೇ ಒಂದು ಸಮಸ್ಯೆಯಾಗಿ ಕಂಡುಬರುತ್ತಿರುವುದು ಶೋಚನೀಯ. ಪ್ರತಿದಿನ ಸಾಯುವವರಿಗೆ ಅಳುವವರಾರು ಎಂಬ ಪರಿಸ್ತಿತಿ ಇಂದಿನದು.

ಜಾಗತಿಕವಾಗಿ ಸವಾಲನ್ನೆಸೆದ ಕೊರೋನಾ ವೈರಸ್ ಅತವಾ ಕೋವಿಡ್-19 ರೋಗದ ವಿರುದ್ದ ಎಚ್ಚೆತ್ತ ಅನೇಕ ರಾಶ್ಟ್ರಗಳು ಕಟಿಣ ನಿರ‍್ದಾರಗಳನ್ನು ತೆಗೆದುಕೊಳ್ಳುತ್ತಿರುವುದು ಅವಶ್ಯಕ ಎಂಬಂತೆ ತೋರುತ್ತಿದೆ. ಜನಜಂಗುಳಿಯಲ್ಲಿ ಕೇವಲ ಒಬ್ಬ ವೈರಸ್ ಸೋಂಕಿತ ವ್ಯಕ್ತಿ ಇದ್ದರೆ ಸಾಕು ಕೊರೊನಾ ವೈರಸ್ ಹರಡಲು. ಇದರ ಲಕ್ಶಣಗಳು ವಿಶಿಶ್ಟ. ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರ ಎಲ್ಲರಿಗೂ ಎಲ್ಲಾ ದಿನಗಳನ್ನು ಬರುವುದು ಗೊತ್ತು. ಆದರೆ ಕೊರೊನಾ ಇದೇ ಲಕ್ಶಣಗಳಿಂದ ಅಂದರೆ ಕೆಮ್ಮು-ಜ್ವರದಿಂದ ಪ್ರಾರಂಬವಾದರೂ ಮೊದಲಿಗೆ ಬಹುತೇಕ ಜನ ಅಂದುಕೊಳ್ಳುವುದು ಸಾಮಾನ್ಯ ಜ್ವರ-ಕೆಮ್ಮು ಇರಬಹುದೆಂದು. ಸಾಮಾನ್ಯ ಜ್ವರ ಕೆಮ್ಮಿಗೆ ತೆಗೆದುಕೊಳ್ಳುವ ಚಿಕಿತ್ಸೆಯನ್ನು ಪಡೆದು ತಮ್ಮ ಕೆಲಸಕಾರ‍್ಯಗಳಲ್ಲಿ ತೊಡಗುವವರು ಇದ್ದಾರೆ. ಇಶ್ಟೇ ಸಾಕು ವೈರಸ್ ಸೋಂಕು ಹರಡಲು. ಇದು ಒಂದು ಚೈನ್ ಸಿಸ್ಟಮ್ ಇದ್ದ ಹಾಗೆ. ಸೂಕ್ತ ಲಸಿಕೆ ಸಿಗದೇ ಹೋದಲ್ಲಿ ಜಗತ್ತಿನಲ್ಲಿ ಸಂಬವಿಸುವ ಅನಾಹುತವನ್ನು ಊಹಿಸಲು ಅಸಾದ್ಯ. ಇದಕ್ಕೆ ಮುನ್ನೆಚ್ಚರಿಕೆಯೊಂದೇ ಮದ್ದು ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಿರುವ ವಿಶಯವಾಗಿದೆ.

ಬಾರತದಂತಹ ಹೆಚ್ಚು ಜನಸಂಕ್ಯೆಯುಳ್ಳ ರಾಶ್ಟ್ರದಲ್ಲಿ ಮುನ್ನೆಚ್ಚರಿಕೆ ಎಂಬುದು ಅತ್ಯಗತ್ಯವಾಗಿ ಬೇಕು. ಹೆಚ್ಚು ಜನಸಾಂದ್ರತೆಯ ಬಾರತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ವೈರಸ್ ಹರಡುವಿಕೆ ಅತಿ ತೀವ್ರ. ಹೆಚ್ಚು ಜನಸಂಕ್ಯೆ ಹೊಂದಿರುವ ಬಾರತದಂತ ದೇಶದಲ್ಲಿ ಜನರಲ್ಲಿ ಜಾಗ್ರುತಿ ಮೂಡಿಸುವುದೇ ಒಂದು ಸವಾಲು. ಎಶ್ಟೇ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ಸೋಂಕಿತರ ಸಂಕ್ಯೆ ನಾಲ್ಕು ನೂರರ ಗಡಿ ದಾಟಿದೆ. ಸರಕಾರ ಹಲವಾರು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ. ಮಾದ್ಯಮಗಳು ಎಚ್ಚರಿಕೆಯ ಸಂದೇಶವನ್ನು ಸಾರುತ್ತಿವೆ. ಆದರೂ ಸೋಂಕಿತ ವ್ಯಕ್ತಿಗಳು ಓಡಾಡುತ್ತಿರುವುದು ಹಾಗೂ ಗಂಬೀರ ಮಟ್ಟವನ್ನು ತಲುಪಿದಾಗಲೇ ಆಸ್ಪತ್ರೆಗೆ ದಾಕಲಾಗುವುದು ಎಶ್ಟು ಸರಿ? ಮೊದಲು ಜನರು ಜಾಗ್ರುತರಾಗುವುದು ಮುಕ್ಯ ಅಲ್ಲವೇ? ಸರಕಾರ ವೈರಸ್ ಸೋಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ತೀವ್ರಗೊಳಿಸಬೇಕಿದೆ. ಪ್ರತಿ ಜಿಲ್ಲೆಗಳಲ್ಲಿ ವೈರಸ್ ಪತ್ತೆ ಹಚ್ಚುವ ಪ್ರಯೋಗಾಲಯಗಳನ್ನು ತುರ‍್ತಾಗಿ ಸ್ತಾಪಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ. ಸರ‍್ಕಾರ ಹಲವಾರು ಕಟಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಮೆಚ್ಚಬೇಕಾದದ್ದೇ. ಕೆಲ ನಿರ‍್ದಾರಗಳಿಂದ ಬಡ ಕಾರ‍್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೆಯೇ ಎಲ್ಲಾ ವರ‍್ಗದವರ ಜೀವನ ನಿರ‍್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದು ಇಂದು ಅನಿವಾರ‍್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಸದ್ಯಕ್ಕೆ ಈ ಸೋಂಕಿಗೆ ಯಾವುದೇ ಲಸಿಕೆ ಇಲ್ಲ ಎಂಬುದಂತೂ ಸತ್ಯ.”ರೋಗ ಬಂದಾಗ ತಡೆಗಟ್ಟುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಮದ್ದು” ಎನ್ನುವಂತೆ ಮುಂಜಾಗ್ರತೆ ಕ್ರಮಗಳಿಂದ ನಮ್ಮನ್ನು ನಾವು ರಕ್ಶಿಸಿಕೊಳ್ಳುವುದು ಉತ್ತಮ.

ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಬಳಿ ಇದ್ದು ಸೂಕ್ತ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಒಂದು ತ್ಯಾಂಕ್ಸ್ ಹೇಳಲೇಬೇಕು. ಸೋಂಕಿತ ವ್ಯಕ್ತಿ ಎನ್ನುತ್ತಲೇ ಮಾರುದ್ದ ಓಡುತ್ತೇವೆ ನಾವು. ಅದೇ ವ್ಯಕ್ತಿಯ ಬಳಿ ಇದ್ದು ಚಿಕಿತ್ಸೆ ನೀಡುವ ವೈದ್ಯರು, ನರ‍್ಸುಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿ ನಿಜವಾಗಿಯೂ ದೇವರ ರೂಪವೇ ಸರಿ. ಇಂತವರಿಗೆ ನಮ್ಮ ಕ್ರುತಜ್ನತೆ ಸಲ್ಲಲೇಬೇಕು. ವೈದ್ಯಕೀಯ ಸಿಬ್ಬಂದಿಗೆ ಬೇಕಾಗಿರುವುದು ಅತ್ಯಾದುನಿಕ ವೈದ್ಯಕೀಯ ಸಲಕರಣೆಗಳು ಹಾಗೂ ಸಿಬ್ಬಂದಿ.ಇದರ ಬಗ್ಗೆ ಸರಕಾರ ಗಮನ ಹರಿಸುತ್ತಿದೆ. ಎಲ್ಲರೂ ಸಂಗಟಿತವಾಗಿ ಕೊರೊನಾ ಸೋಂಕಿನ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ದರ‍್ಮಾಂದತೆ ಹಾಗೂ ಅಗ್ನಾನವನ್ನು ದೂರ ಮಾಡಿ, ಕೊರೊನಾ ವಿರುದ್ದದ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಮಹಾಮಾರಿಯಿಂದ ದೂರವಾಗಲು ಸಾದ್ಯ. ಇಲ್ಲವಾದಲ್ಲಿ ಮನುಕುಲದ ಬಹುಪಾಲು ನಾಶ ಕಂಡಿತ. ಈ ಮಾತು ಬಯ ಹುಟ್ಟಿಸುವಂತಹದಲ್ಲ. ಇದೊಂದು ಎಚ್ಚರಿಕೆ ಗಂಟೆಯ ದನಿ.

(ಮಾಹಿತಿ ಸೆಲೆ : wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: