ರಾಯಚೂರಿನಲ್ಲಿ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ

– ನಾಗರಾಜ್ ಬದ್ರಾ.

raichurukannadasaathiyasammelana-30-1480483987

ಇದು ಮೂರು ದಿನಗಳ ಕಾಲ ನಡೆಯುವ ಕನ್ನಡ ನುಡಿ ಹಬ್ಬ. ಕನ್ನಡದ ಬರಹಗಾರರು, ಕವಿಗಳು ಹಾಗೂ ಕನ್ನಡಿಗರ ಒಂದು ಅರಿದಾದ ಕೂಟವಾಗಿದೆ. ಕನ್ನಡ ನುಡಿಯನ್ನು ಕಾಪಾಡುವುದು, ನುಡಿ, ಸಾಹಿತ್ಯ, ಕಲೆ, ಸಂಗೀತ ಹಾಗೂ ಸಂಸ್ಕ್ರುತಿಯನ್ನು ಬೆಳೆಸುವುದು ಇದರ ಮುಕ್ಯ ಉದ್ದೇಶ. ಮೊಟ್ಟಮೊದಲ ಬಾರಿಗೆ 1915 ರಲ್ಲಿ ಎಚ್.ವಿ ನಂಜುಡಯ್ಯ ಅವರು ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವನ್ನು ಆರಂಬಿಸಿದರು. 1915 ರಿಂದ 1948 ವರೆಗೆ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತಿಗಳು ಉದ್ಗಾಟಿಸುತ್ತಿದ್ದರು. ಬಳಿಕ ಕರ‍್ನಾಟಕದ ಮುಕ್ಯಮಂತ್ರಿಗಳಿಂದ ಉದ್ಗಾಟನೆ ಮಾಡಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಶತ್ತು ಪ್ರತಿ ವರ‍್ಶವು ನುಡಿಜಾತ್ರೆಯನ್ನು ಹಮ್ಮಿಕೊಳ್ಳುತ್ತದೆ. ಕನ್ನಡ ನುಡಿ ಹಾಗೂ ಸಾಹಿತ್ಯಕ್ಕೆ ದುಡಿದ ಗಣ್ಯರಲ್ಲಿ ಒಬ್ಬರನ್ನು ಗುರುತಿಸಿ ಸಮ್ಮೇಳನದ ಅದ್ಯಕ್ಶತೆಯನ್ನು ವಹಿಸಲು ಮನವಿ ಮಾಡಿ ಅವರನ್ನು ಗೌರವಿಸಲಾಗುತ್ತದೆ.

1915 ರಿಂದ ಇಲ್ಲಿಯವರೆಗೆ ಒಟ್ಟು 81 ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದ್ದು 82 ನೇ ಅಕಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2016 ರ ಡಿಸೆಂಬರ್ 2, 3 ಮತ್ತು 4 ರಂದು ರಾಯಚೂರು ನಗರದ ಕ್ರುಶಿ ವಿಶ್ವವಿದ್ಯಾಲದ ಆವರಣದಲ್ಲಿ ನಡೆಸಲಾಗುತ್ತಿದೆ. ಇದು ರಾಯಚೂರು ನಗರದಲ್ಲಿ ನಡೆಯುತ್ತಿರುವ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ.

ರಾಯಚೂರಿನ ಸಾಹಿತ್ಯ ಸಮ್ಮೇಳನಗಳು

– ಮೊಟ್ಟಮೊದಲ ಬಾರಿಗೆ 1934 ರಲ್ಲಿ 20 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪಂಜೆ ಮಂಗೇಶರಾಯರ ಅದ್ಯಕ್ಶತೆಯಲ್ಲಿ ನಡೆದಿತ್ತು.
– ಎರಡನೆಯ ಬಾರಿಗೆ 1956 ರಲ್ಲಿ 38 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶ್ರೀರಂಗರ (ಆದ್ಯ ರಂಗಾಚಾರ‍್) ಅದ್ಯಕ್ಶತೆಯಲ್ಲಿ ನಡೆದಿತ್ತು.
– ಈ ಬಾರಿ ಅಂದರೆ 2016 ರಲ್ಲಿ 82 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಬರಗೂರು ರಾಮಚಂದ್ರಪ್ಪನವರ ಅದ್ಯಕ್ಶತೆಯಲ್ಲಿ ನಡೆಯಲಿದೆ.

ರಾಯಚೂರು ಜಿಲ್ಲೆಯ ಕನ್ನಡ ಸಾಹಿತ್ಯದ ನಂಟು

logoಕನ್ನಡ ಸಾಹಿತ್ಯಕ್ಕೆ ಈ ಜಿಲ್ಲೆಯು ಸುಮಾರು 11 ನೇ ಶತಮಾನದಿಂದ ಇಲ್ಲಿಯವರೆಗೆ ಅಪಾರ ಕೊಡುಗೆ ನೀಡಿದೆ. 11 ನೇ ಶತಮಾನದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಪ್ರಸಿದ್ದ ವಚನಕಾರ ಲಿಂಗಸೂಗುರ ತಾಲೂಕಿನ ಶ್ರೀ ಬಸವೇಶ್ವರ ನೋಲಿಯವರು ಕನ್ನಡ ವಚನ ಸಾಹಿತ್ಯಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಬಳಿಕ 12 ನೇ ಶತಮಾನದಲ್ಲಿ ಈ ವಚನ ಸಾಹಿತ್ಯವನ್ನು ಅದೇ ಲಿಂಗಸೂಗುರ ತಾಲೂಕಿನ ಅಮರೇಶ್ವರ ಗ್ರಾಮದ ಐದಕ್ಕಿ ಮಾರಯ್ಯ ಮತ್ತು ಅವರ ಹೆಂಡತಿ ಐದಕ್ಕಿ ಲಕ್ಕಮ್ಮ ಅವರು ಮುಂದುವರೆಸಿಕೊಂಡು ಹೋಗಿ ಅದರಲ್ಲಿ ಗಮನಾರ‍್ಹ ಸಾದನೆ ಮಾಡಿದ್ದಾರೆ. 17 ಮತ್ತು 18 ನೇ ಶತಮಾನದಲ್ಲಿ ವಿಜಯದಾಸ, ಗೋಪಾಲದಾಸ ಹಾಗೂ ಜಗನ್ನಾತದಾಸರು ಶ್ರೇಶ್ಟ ಹರಿದಾಸರ ಸಂಪ್ರದಾಯವನ್ನು ಇಡೀ ಜಿಲ್ಲಾದ್ಯಂತ ಹರಡಿದ್ದಾರೆ. ಇನ್ನು 18 ನೇ ಶತಮಾನದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಕೆಲವು ಪ್ರಸಿದ್ದ ಸಾಹಿತಿಗಳೆಂದರೆ ಗಣೆಕಲ್ಲಿನ ಸಂಗವಿಬು, ಗಣಮಟದಾರ‍್ಯ, ಬಸವಲಿಂಗ ಶರ‍್ಮ, ದೇವದುರ‍್ಗದ ಚನ್ನಮಲ್ಲ ಕವಿ ಮುಂತಾದವರು.

19 ನೇ ಶತಮಾನದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಕೆಲವು ಪ್ರಸಿದ್ದ ಸಾಹಿತಿಗಳೆಂದರೆ ವೀರಬದ್ರ ಕವಿ, ಗೂಗಲ ಪರಪ್ಪಯ್ಯ, ಮರಿಸ್ವಾಮಿ, ಕವಿರತ್ನ ಚನ್ನಕವಿ, ಮಸ್ಕಿ ಬಸಪ್ಪ ಶಾಸ್ತ್ರಿ, ದಾಸ ಸಾಹಿತಿ ಲಿಂಗಸೂಗುರಿನ ಗೊರೆಬಾಳ ಹನುಮಂತ ರಾವ್ ಹಾಗೂ ಕ್ಯಾತ ಚಿಂತಕರು, ನುಡಿ ವಿಜ್ನಾನಿ, ಸಾಮಾಜಿಕ ಕಾರ‍್ಯಕರ‍್ತರಾದ ಪಂಡಿತ ತಾರಾನಾತ, ಕಾಳಿನಾತ ಶಾಸ್ತ್ರಿ ಪುರಾಣಿಕ, ನಿಜಾಮನ ಆಡಳಿತದಲ್ಲಿ ಕನ್ನಡ ಸಾಹಿತ್ಯ ಮಂದಿರ ಮತ್ತು ನಿಜಾಮ ಕರ‍್ನಾಟಕ ಸಾಹಿತ್ಯ ಪರಿಶತ್ತನ್ನು ಹುಟ್ಟುಹಾಕಿ ಅದರ ಮೂಲಕ ಕನ್ನಡ ಚಳುವಳಿಯನ್ನು ಆರಂಬಿಸಿದ ಮಾನ್ವಿ ತಾಲೂಕಿನ ಡಿ.ಕೆ ಬೀಮಸೇನ ರಾವ್ ಮತ್ತು ನರಸಿಂಗ ರಾವ್ ಮುಂತಾದವರು.

20 ನೇ ಶತಮಾನದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಪ್ರಸಿದ್ದ ಸಾಹಿತಿ ಎಂದರೆ ಶಾಂತರಸ ಹೆಂಬೆರಳು, ಇವರಿಗೆ ನಾಡಿನ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಿಕ್ಕಿವೆ. ಶಾಂತರಸ ಹೆಂಬೆರಳು ಅವರು 2006 ರಲ್ಲಿ ಬೀದರನಲ್ಲಿ ನಡೆದ 72 ನೇ ಸಮ್ಮೇಳನದ ಅದ್ಯಕ್ಶತೆ ವಹಿಸಿದ್ದರು. ಇವರೊಂದಿಗೆ 20 ನೇ ಶತಮಾನದಲ್ಲಿ ಜಿಲ್ಲೆಯಲ್ಲಿ ಹೆಸರುವಾಸಿಯಾದ ಸಾಹಿತಿಗಳೆಂದರೆ ಡಾ|| ಡಿ.ಎಮ್. ಶರ‍್ಮ, ಶ್ರೀ ಜಯತೀರ‍್ತ, ವಿದ್ವಾಂಸ ಶ್ರೀ ವೀರಶೈವ ಶಾಸ್ತ್ರಿ, ಗದ್ವಾಲ ಶಂಕರಪ್ಪ, ಪ್ರೋ.ಟಿ ಶ್ರೀಕಾಂತಯ್ಯ, ಚನ್ನಬಸವ ಸ್ವಾಮಿಗಳು, ದಾಸ ಸಾಹಿತಿ ಶ್ರೀ ಕುಶ್ಟಗಿ ರಾಗವೇಂದ್ರ ರಾವ್, ದೇವೆಂದ್ರ ಕುಮಾರ ಹಕರಿ, ಶ್ರೀ ಪಂಚಾಕ್ಶರಿ ಹಿರೇಮಟ, ಸುಗವೀರ ಶರ‍್ಮ, ಮಾಣಿಕ್ಯ ರಾವ್, ಜಿ. ಕ್ರುಶ್ಣರಾವ್, ಜಂಬಣ, ವಸಂತ ಕುಶ್ಟಗಿ, ವಾಸುದೇವ ಬಟ್ಟ, ಸೀತಾರಾಮ ಜಾಗೀರದಾರ, ಅಮರನಂದ, ಹನುಮಂತ ಆಚಾರ‍್ಯ ಉಪದ್ಯಾಯ, ಕಾಂತಣ್ಣನವರ್ ಮುಂತಾದವರು.

ಕನ್ನಡ ಸಾಹಿತ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ರಾಯಚೂರಿನಲ್ಲಿ ಈ ಬಾರಿಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನವು ಯಶಸ್ವಿಯಾಗಲಿ ಎಂದು ಬಯಸೋಣ.

(ಮಾಹಿತಿ ಸೆಲೆ: raichur.nic.in, wiki/kannada_sahitya_sammelana, wiki1, wiki2)

(ಚಿತ್ರ ಸೆಲೆ: oneindia.com, sahithya sammelana)

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಶಿವಶಂಕರ ಕಡದಿನ್ನಿ says:

    ನಿಜಕು ಅಕ್ಷರ-ನುಡಿ ಜಾತ್ರೆ ರಾಯಚೂರಿನಲ್ಲಿ ನಡೆದಿರುವುದಕ್ಕೆ ನನಗು ತುಂಬಾನೆ ಸಂತೋಷವಿದೆ

    ಶಿವಶಂಕರ ಕಡದಿನ್ನಿ

ಅನಿಸಿಕೆ ಬರೆಯಿರಿ:

%d bloggers like this: