“ಮಾನವ ಮ್ರುಗಾಲಯ”

– ಅಜಯ್ ರಾಜ್.

“ಮಾನವ ಮ್ರುಗಾಲಯ” – ಇದು ಜಗತ್ತಿನ ಸರ‍್ವಶ್ರೇಶ್ಟ ರಾಶ್ಟ್ರಗಳ ದುರಂತ ಕತೆ!

ಒಮ್ಮೆ ಬಾರತದ ರಾಶ್ಟ್ರಪತಿ ಸರ‍್ವೇಪಲ್ಲಿ ರಾದಾಕ್ರಿಶ್ಣರು ರಶ್ಯಾದ ಅದ್ಯಕ್ಶ ಸ್ಟಾಲಿನ್ ರನ್ನು ಬೇಟಿಯಾದಾಗ, ಸ್ಟಾಲಿನ್ ರಾದಾಕ್ರಿಶ್ಣರನ್ನು “ನನ್ನನ್ನು ಬೇಟಿಯಾಗಲು ಎಲ್ಲರೂ ಬಯ ಪಡುತ್ತಾರೆ ಆದರೆ ನೀವು ಮಾತ್ರ ನನ್ನ ಜೊತೆ ಯಾವುದೇ ಅಂಜಿಕೆಯಿಲ್ಲದೆ ನಿರ‍್ಬಯವಾಗಿ ಮಾತನಾಡುವಿರಿ ಹೇಗೆ”? ಎಂದು ಕೇಳಿದರಂತೆ. ಆಗ ರಾದಾಕ್ರಿಶ್ಣರು ಸ್ಟಾಲಿನ್ ರಿಗೆ “ಎಲ್ಲರೊಳಗೂ ಒಬ್ಬ ಮನುಶ್ಯನಿರುತ್ತಾನೆ. ಆ ಮನುಶ್ಯನೊಡನೆ ಮಾತಾಡಲು ಏಕೆ ಬಯ ಪಡಬೇಕು”ಎಂದು ತನಗೆಸೆದ ಪ್ರಶ್ನೆಯನ್ನೇ ಉತ್ತರವಾಗಿಸಿದರಂತೆ.

ಒಮ್ಮೊಮ್ಮೆ ಮನುಶ್ಯನೊಳಗಿರುವ ಮನುಶ್ಯನೂ ಸಾಯುತ್ತಾನೆ. ಅವನ ಆ ಒಳಗಿನ ಮನುಶ್ಯತ್ವ ಅತಿ ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಆಗುಹೋಗುಗಳ ನಡುವೆ ನೆಲಕಚ್ಚಿ ಬಿಡುತ್ತದೆ. ಅಗ ಅವನು ಪರ‍್ಯಾಯವೆಂಬಂತೆ ತನಗೇ ಅರಿವಿಲ್ಲದಂತೆ ಕೆಲವೊಂದು ಹೀನ ಸಂಪ್ರದಾಯಗಳನ್ನು ಸ್ರುಶ್ಟಿಸಿ ಬಿಡುತ್ತಾನೆ. ಅಂತಹದ್ದೊಂದು ಹೀನ ಮನಸ್ತಿತಿಯ ಪಲಿತಾಂಶವೇ ಈ ಮಾನವ ಮ್ರುಗಾಲಯ.

ಮಾನವ ಮ್ರುಗಾಲಯಗಳು ಬೆಳಕಿಗೆ ಬಂದದ್ದು 19ನೇ ಶತಮಾನದಲ್ಲಿ. ಯೂರೋಪ್ ಸಮಾಜದ ಅಲ್ಪಸಂಕ್ಯಾತರನ್ನು, ಅದರಲ್ಲೂ ವಿಶೇಶವಾಗಿ ಕಪ್ಪುಬಣ್ಣದವರನ್ನು ಕಬ್ಬಿಣದ ಬೋನುಗಳಲ್ಲಿ ಹಾಕಿ ಸಬಿಕರಿಗೆ ಮನರಂಜನೆಯನ್ನು ನೀಡುತ್ತಿದ್ದ ಈ ವಿಚಿತ್ರ, ಅಮಾನವೀಯ ಅಚರಣೆ 21ನೇ ಶತಮಾನದವರೆಗೂ ರೂಡಿಯಲ್ಲಿತ್ತು. ಆಪ್ರಿಕಾದ ಕಪ್ಪುಬಣ್ಣದವರನ್ನು ವಿಶೇಶವಾಗಿ ಪಿಗ್ಮಿ ಬುಡಕಟ್ಟಿನ ಕಪ್ಪುಬಣ್ಣದವರನ್ನು ಈ ಗೋರ ಕ್ರುತ್ಯಗಳಲ್ಲಿ ಬಳಸಿಕೊಳ್ಳಲಾಯಿತು. ವರ‍್ಣಬೇದ ನೀತಿಯೇ ಮಾನವೀಯತೆ ಎಂಬ ಶ್ವೇತ ಕಾಗದದ ಮೇಲಣ ಕಪ್ಪು ಚುಕ್ಕೆಯಾದರೆ, ಮಾನವ ಮ್ರುಗಾಲಯಗಳು ಇಂತಹ ಹಲವು ಕಪ್ಪು ಚುಕ್ಕೆಗಳ ದೊಡ್ದ ಮೊತ್ತ.

ಕ್ರಿ.ಶ.1850 ರಲ್ಲಿ ಜರ‍್ಮನಿಯಲ್ಲಿ ಆರಂಬಗೊಂಡ ಈ ಮಾನವ ಮ್ರುಗಾಲಯಗಳಲ್ಲಿ ಆಪ್ರಿಕಾದ ಕಪ್ಪುಬಣ್ಣದವರನ್ನು ತಂದು ಪ್ರಾಣಿಗಳ ಮದ್ಯೆ ಬಿಡಲಾಗುತ್ತಿತ್ತು. ಅಲ್ಲಿರುವ ಪ್ರಾಣಿಗಳ ಜೊತೆ ಆಟವಾಡುವಂತೆ, ಚಿಂಪಾಂಜಿಗಳನ್ನು ಎತ್ತಿಕೊಳ್ಳುವಂತೆ ಬಲವಂತವಾಗಿ ಪೀಡಿಸಲಾಗುತ್ತಿತ್ತು. “ಪೀಪಲ್ಸ್ ಶೋ” ಎಂದೇ ಹೆಸರುವಾಸಿಯಾಗಿದ್ದ ಈ ಕ್ರೂರ ಕ್ರುತ್ಯವನ್ನು ವೀಕ್ಶಿಸಲು ಸುಮಾರು ನಾಲ್ಕು ಲಕ್ಶ ಜನರು ಬರುತ್ತಿದ್ದರೆಂಬುದು ಅಂದಿನ ವರ‍್ಣಬೇದ ನೀತಿಯ ಕರಾಳತೆ ಹಾಗು ಆ ವಿದ್ಯಾವಂತ ಜನರ ಹೀನ ಮನಸ್ತಿತಿಗೆ ಹಿಡಿದ ಕನ್ನಡಿಯಾಗಿದೆ.

ಗಮನಿಸಬೇಕಾದ, ಅಚ್ಚರಿಯ ಮತ್ತೊಂದು ಸಂಗತಿಯೆಂದರೆ, ಜರ‍್ಮನಿಯಲ್ಲಿ ಚಾಲ್ತಿಯಲ್ಲಿದ್ದ ಈ ಕ್ರೂರ ಆಚರಣೆಯನ್ನು, ಇಂದು ಈ ಜಗತ್ತು ಯಾರನ್ನು ಮಹಾನ್ ಕ್ರೂರಿ ಮತ್ತು ನಿರ‍್ದಯಿ ಸರ‍್ವಾದಿಕಾರಿ ಎಂದು ಜರೆಯುತ್ತಾರೋ ಅದೇ ಅಡಾಲ್ಪ್ ಹಿಟ್ಲರ್ ಈ ಅತಿ ಕ್ರೂರ ಆಚರಣೆಯನ್ನು ನಿಶೇದಿಸಿದ್ದು. ಜರ‍್ಮನಿ ಮಾತ್ರವಲ್ಲದೆ, ಈ ಮಾನವ ಮ್ರುಗಾಲಯಗಳು ಇಂದು ಜಗತ್ತಿನ ಸರ‍್ವಶ್ರೇಶ್ಟ ರಾಶ್ಟ್ರಗಳೆನಿಸಿಕೊಂಡ ಅಮೇರಿಕಾ, ಪ್ರಾನ್ಸ್ ಮತ್ತು ಇತರೆ ಮುಂದುವರೆದ ರಾಶ್ಟ್ರಗಳಲ್ಲಿಯೂ ರೂಡಿಯಲ್ಲಿತ್ತೆಂಬುದು ವಿಶಾದನೀಯ. ಮನುಶ್ಯರನ್ನು ಪ್ರಾಣಿಗಳಾಗಿ ಮಾಡಿ, ಅವರನ್ನು ಅಕ್ಶರಶಹ ಕಸಾಯಿಕಾನೆಗಳಂತಹ ಮ್ರುಗಾಲಯಗಳಲ್ಲಿ ಕೆಡವಿದ್ದರು. ಇದಕ್ಕೆ ಸ್ಪಶ್ಟ ಹಾಗು ಪೂರಕ ನಿದರ‍್ಶನವೆಂದರೆ ನ್ಯೂಯಾರ‍್ಕಿನ ಮಾನವ ಮ್ರುಗಾಲಯದಲ್ಲಿ ಪಿಗ್ಮಿ ಬುಡಕಟ್ಟಿಗೆ ಸೇರಿದ “ಒಟ ಬೆಂಗಾ” ಎಂಬ ಕಪ್ಪುಬಣ್ಣದವನನ್ನು ಪ್ರಾಣಿಗಳಿರುವ ದೊಡ್ಡ ಪಂಜರದೊಳಗೆ ಹಾಕಿ, ಚಿಂಪಾಂಜಿಗಳು ಮತ್ತು ಇತರ ಪ್ರಾಣಿಗಳನ್ನು ಎತ್ತಿಕೊಳ್ಳುವಂತೆ ಬಲವಂತಿಸಲಾಯಿತು. ಅಶ್ಟೇ ಅಲ್ಲದೆ ಮರಗಳಿಗೆ ಬಾಣಗಳನ್ನು ಗುರಿಯಿಟ್ಟು ಹೊಡೆಸುವುದು, ಗೊರಿಲ್ಲಾಗಳ ಜೊತೆ ಜಗಳವಾಡಿಸುವುದು – ಹೀಗೆ ಹತ್ತು ಹಲವು ಬಲವಂತಿಕೆಗಳು ಒಂದು ನಿರಂತರ ಕಿರುಕುಳಕ್ಕೆ ಸಾಕ್ಶಿಯಾಗಿತ್ತು.

ಈ ಅಮಾನವೀಯ ಆಚರಣೆಯ ವಿರುದ್ದ ಕಪ್ಪುಬಣ್ಣದ ದಾರ‍್ಮಿಕ ಮುಂದಾಳುಗಳು ( Black Clergymen ) ದನಿಯೆತ್ತಿದರಾದರೂ, ಈ ಮಾನವ ಮ್ರುಗಾಲಯಗಳನ್ನು ವೀಕ್ಶಿಸಲು ಬರುತ್ತಿದ್ದ ಲಕ್ಶಾಂತರ ಜನರ ವಿಕ್ರುತ ಹುಮ್ಮಸ್ಸುಗಳ ಮುಂದೆ ಈ ಪಾದ್ರಿಗಳ ಸೊಲ್ಲಡಗಿಬಿಟ್ಟಿತು. ಈ ಮಾನವ ಮ್ರುಗಾಲಯಗಳು ಯೂರೋಪಿನ ಅತ್ಯಂತ ಅವಮಾನಕಾರಿ ಇತಿಹಾಸದ ತುಣುಕುಗಳು. ವಿಪರ‍್ಯಾಸವೆಂದರೆ ಇಂದು ಯೂರೋಪಿನ ಇತಿಹಾಸವನ್ನು ಬಿಡುವಿಲ್ಲದೆ ಹೊಗಳುವ ಹೊಗಳು ಬಟ್ಟರು, ಅದರ ಈ ಕರಾಳತೆಯನ್ನು ವ್ಯವಸ್ತಿತವಾಗಿ ಮುಚ್ಚಿ ಹಾಕಿದ್ದಾರೆ.

ಏನೇ ಆಗಲಿ, ಈ ಮಾನವ ಮ್ರುಗಾಲಯಗಳು ನಿಸ್ಸಂದೇಹವಾಗಿ ಮನುಕುಲದ ಅಕ್ಶಮ್ಯ ಅಪರಾದವೂ ಹೌದು ಮತ್ತು ಅಲ್ಪಸಂಕ್ಯಾತರ ಮೇಲೆ ನಡೆಸಿದ ಹಿಂದೆಂದೂ ಕಾಣದ ಗೋರ ದೌರ‍್ಜನ್ಯವೂ ಹೌದು. ಕ್ರಮೇಣ ಈ ಮಾನವ ಮ್ರುಗಾಲಯಗಳು ನಿಶೇದಗೊಂಡು, ಇಂದು ಬೌತಿಕವಾಗಿ ಇಲ್ಲವಾದರೂ ಅದರ ಕಪ್ಪು ಚಾಯೆಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿದೆ. ಸ್ಪ್ರುಶ್ಯ-ಅಸ್ಪ್ರುಶ್ಯ, ಮೇಲು-ಕೀಳು ಎಂಬ ಮನದ ಬಾವನೆಗಳೇ ಸಾಕಲ್ಲವೆ ಅಂದಿನ ಮಾನವ ಮ್ರುಗಾಲಯಗಳನ್ನು ಇಂದಿಗೂ ಜೀವಂತವಾಗಿರಿಸಲು?

ಯೂರೋಪಿನಲ್ಲೇ ಅಲ್ಲ, ನಮ್ಮ ಬಾರತದಲ್ಲೂ, ನಮ್ಮ ರಾಜ್ಯದಲ್ಲೂ, ಇನ್ನೂ ಹತ್ತಿರವೆಂದರೆ ನಮ್ಮ ಮನೆ ಮನಗಳಲ್ಲಿ, “ಎಲ್ಲಿಯವರೆಗೂ ನಾವೆಲ್ಲರೂ ಒಂದೇ. ಎಲ್ಲರೊಳಗೆ ಹರಿಯುತಿಹುದೊಂದೇ ನೆತ್ತರು” ಎಂಬ ಬ್ರಾತ್ರುತ್ವದ ಬಾವನೆಗಳು ಮೂಡುವುದಿಲ್ಲವೋ, ಅಲ್ಲಿಯವರೆಗೆ ನಾವೆಲ್ಲರೂ ವರ‍್ಣಬೇದತೆ, ಅಸಮಾನತೆ ಮತ್ತು ಕೋಮುವಾದಗಳೆಂಬ ಪಂಜರದೊಳಗಿನ ಬಂದಿಗಳೇ. ಪ್ರಸಕ್ತ ಸಮಯದ ಅವಶ್ಯಕತೆಯೆಂದರೆ ಪ್ರಬುದ್ದತೆ. ಈ ಎಲ್ಲಾ ಸಂಕೋಲೆಗಳಿಂದ ಬಿಡುಗಡೆಯಾಗಬೇಕಾದರೆ, ಪ್ರಬುದ್ದತೆಯೆಂಬ ಶಾಂತಿದೂತನನ್ನು ನಮ್ಮ ಯುದ್ದನಿರತ ಮನಸ್ಸುಗಳಿಗೆ ಆಹ್ವಾನಿಸ ಬೇಕು. ಹೀಗಾದಾಗ ಮಾತ್ರ ಮನಸ್ಸು ವಿಶ್ವಮಾನವತೆಯ ಸಂಕೇತವಾಗಿ, ಈ ನಿರಂತರ ದಾಸ್ಯದಿಂದ ಬಿಡುಗಡೆ ಹೊಂದುತ್ತಾ ಸಮಾನತೆ ಎಂಬ ಸ್ವಚ್ಚಂದ ಆಕಾಶದಲ್ಲಿ ತೇಲಾಡುವುದು.

( ಚಿತ್ರಸೆಲೆ: atlantablackstar.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: